Advertisement

ಕರಾವಳಿ ಹೈನುಗಾರರಿಗೆ 1 ಲೀ. ಹಾಲಿಗೆ 5 ರೂ. ಏರಿಕೆ “ಸೂತ್ರ’!

11:51 PM May 21, 2024 | Team Udayavani |

ಮಂಗಳೂರು: ರಾಜ್ಯದಲ್ಲಿಯೇ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿರುವ ಕಾರಣದಿಂದ ಹೈನುಗಾರರ ಪ್ರೋತ್ಸಾಹಕ್ಕಾಗಿ ಹಾಲಿನ “ಮಾರಾಟ ದರ’ವನ್ನು ಕರಾವಳಿಗೆ ಸೀಮಿತಗೊಳಿಸಿ ಏರಿಕೆ ಮಾಡುವ ಚಿಂತನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಸರಕಾರ ಮತ್ತು ಕೆಎಂಎಫ್‌ನ ಮುಂದಿಟ್ಟಿದೆ.

Advertisement

ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಸುಮಾರು 55 ಸಾವಿರ ಹೈನುಗಾರರಿದ್ದಾರೆ. ಈಗ ರೈತರಿಗೆ 1 ಲೀ. ಹಾಲಿಗೆ (ಹಾಲಿನ ಗುಣಮಟ್ಟ ಏರಿಕೆ ಇದ್ದ ಹಾಗೆ ದರ ವ್ಯತ್ಯಾಸ) 40 ರೂ. ಸಿಗುತ್ತದೆ. ಇದರಲ್ಲಿ ಸರಕಾರದ 5 ರೂ. ಸಹಾಯಧನ ಸೇರಿದೆ. ಮುಂದೆ ಮಾರಾಟ ದರ ಏರಿಸಲು ಅವಕಾಶ ಕಲ್ಪಿಸಿ ಆ ಮೊತ್ತವನ್ನು ಹೈನುಗಾರರಿಗೆ ನೇರವಾಗಿ ವರ್ಗಾಯಿಸುವ ಬಗ್ಗೆ ಕೋರಿಕೆ ಸಲ್ಲಿಕೆಯಾಗಲಿದೆ.

5 ಲಕ್ಷ ಲೀ. ಹಾಲು ಉತ್ಪಾದನೆ ಆಗುತ್ತಿದ್ದ 2 ಜಿಲ್ಲೆಗಳಲ್ಲಿ ಈಗ 3.5 ಲಕ್ಷ ಲೀ.ಗೆ ಇಳಿದಿದೆ. ಕರಾವಳಿಯಲ್ಲಿ ಹಸುರು ಮೇವಿನ ಕೊರತೆ, ಹೈನುಗಾರಿಕೆ ಬಗ್ಗೆ ನಿರಾಸಕ್ತಿ, ಹಿಂಡಿ ಸಹಿತ ಇತರ ವೆಚ್ಚ ದುಪ್ಪಟ್ಟು, ವಾತಾವರಣ ಸಮಸ್ಯೆ ಸಹಿತ ವಿವಿಧ ಕಾರಣದಿಂದ ಹಾಲು ಉತ್ಪಾದನೆ ಕಡಿಮೆ ಎಂಬುದು ಸದ್ಯದ ಕಾರಣ.

ಹಿಂದೆ 2 ರೂ. ಸಿಕ್ಕಿತ್ತು!
ಹಲವು ವರ್ಷದ ಹಿಂದೆ ಹಾಲಿನ ಪ್ರಮಾಣ ಕರಾವಳಿ ಭಾಗದಲ್ಲಿ ಕಡಿಮೆ ಆದ ಕಾರಣ ಇಲ್ಲಿಗೆ ಸೀಮಿತಗೊಳಿಸಿ ಮಾರಾಟ ದರ ಏರಿಕೆ ಮಾಡಲು ಕೆಎಂಎಫ್‌ ಅವಕಾಶ ನೀಡಿತ್ತು. ಇದರಂತೆ ಕೆಲವು ಸಮಯ 2 ರೂ. ಮಾರಾಟ ದರ ಏರಿಕೆ ಮಾಡಿ ಆ ಹಣವನ್ನು ಹೈನುಗಾರರಿಗೆ ನೀಡಲಾಗಿತ್ತು. ಆ ನಂತರ ಹಾಲಿನ ಉತ್ಪಾದನೆ ಏರಿಕೆಯಾಗಿದ್ದು ಹಾಗೂ ರಾಜ್ಯದಲ್ಲಿ ಹಾಲಿನ ಮಾರಾಟ ದರ ಏಕರೂಪದಲ್ಲಿಯೇ ಇರಬೇಕು ಎಂಬ ಕೆಎಂಎಫ್‌ ತೀರ್ಮಾನದಿಂದಾಗಿ ಮಾರಾಟ ದರ ರಾಜ್ಯವ್ಯಾಪಿ ಏಕರೂಪದಲ್ಲಿ ಇದೆ.

ಹೈನುಗಾರಿಕೆಗೆ ಅಪಾಯ
“ಒಂದೊಮ್ಮೆ ನಿಗದಿಗಿಂತ 1 ಲಕ್ಷ ಲೀ.ಗೂ ಅಧಿಕ ಹಾಲು ನಾವು ಉತ್ಪಾದನೆ ಮಾಡಿ ಹಾಲಿನ ಹುಡಿ ಸಹಿತ ವಿವಿಧ ಉತ್ಪನ್ನ ಮಾಡುತ್ತಿದ್ದೆವು. ಈಗ 2 ಲಕ್ಷ ಲೀ.ನಷ್ಟು ಹಾಲು ಬೇರೆ ಜಿಲ್ಲೆಯಿಂದ ತರಿಸುತ್ತಿದ್ದೇವೆ. ರಾಜ್ಯದ ಇತರ ಒಕ್ಕೂಟಗಳಲ್ಲಿ ಉತ್ಪಾದನೆ ಜಾಸ್ತಿ ಇದೆ; ನಮ್ಮಲ್ಲಿಯೇ ಕಡಿಮೆ. ಹೀಗೆ ಮುಂದುವರಿದರೆ ಕರಾವಳಿಯಲ್ಲಿ ಹೈನುಗಾರಿಕೆ ಸಂಪೂರ್ಣ ನೆಲಕಚ್ಚುವ ಅಪಾಯವಿದೆ. ಇದಕ್ಕಾಗಿ ನಮ್ಮಲ್ಲಿ ಮಾರಾಟ ದರ ಏರಿಕೆ ಅತೀ ಅಗತ್ಯ’ ಎನ್ನುತ್ತಾರೆ ದ.ಕ. ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ರವಿರಾಜ ಹೆಗ್ಡೆ ಕೊಡವೂರು ಮತ್ತು ಒಕ್ಕೂಟದ ಉಪಾಧ್ಯಕ್ಷ ಎಸ್‌.ಬಿ. ಜಯರಾಮ ರೈ.

Advertisement

ಸಹಕಾರಿ ಸಂಘಕ್ಕೆ
ಆದಾಯ ಕುಸಿತ
ಹಾಲಿನ ಸಂಗ್ರಹ ಕುಂಠಿತವಾದ ಕಾರಣ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಆರ್ಥಿಕ ಮೂಲಕ್ಕೆ ಹೊಡೆತ ಬಿದ್ದಿದೆ. ಪ್ರತೀ ಸಂಘಗಳಿಗೆ ಹಾಲಿನ ಸಂಗ್ರಹಣೆ ಮೇಲೆ “ಪರ್ಸಂಟೇಜ್‌’ ನೀಡಲಾಗುತ್ತದೆ. ಈ ಮೊದಲು ಬರುತ್ತಿದ್ದ ಹಾಲಿನ ಪ್ರಮಾಣಕ್ಕಿಂತ ಈಗ ಶೇ. 30ರಷ್ಟು ಕಡಿಮೆ ಆಗಿದ್ದು ಅಷ್ಟು ಆದಾಯ ಕೂಡ ಕಡಿಮೆ ಆಗುತ್ತಿದೆ. ಹೀಗಾಗಿ ಸಿಬಂದಿ ವೇತನ, ಕಚೇರಿ ನಿರ್ವಹಣೆ ಸಮಸ್ಯೆಯೂ ಎದುರಾಗುತ್ತದೆ.

ಕರಾವಳಿಗೆ 32 ಕೋ.ರೂ ಬಾಕಿ
ಸರಕಾರದಿಂದ 5 ರೂ. ಹಾಲಿನ ಪ್ರೋತ್ಸಾಹಧನ ಮೊತ್ತ ದಕ್ಷಿಣ ಕನ್ನಡ ಒಕ್ಕೂಟದ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಕಳೆದ ವರ್ಷ ಅಕ್ಟೋಬರ್‌ನಿಂದ ನೀಡಲು ಬಾಕಿ ಇದೆ. ಅಕ್ಟೋಬರ್‌ನ 5.49 ಕೋ.ರೂ., ನವೆಂಬರ್‌ನ 5.39 ಕೋ.ರೂ., ಡಿಸೆಂಬರ್‌ನ 5.50 ಕೋ.ರೂ., ಜನವರಿಯ 5.44 ಕೋ.ರೂ., ಫೆಬ್ರವರಿಯ 4.96 ಕೋ.ರೂ., ಮಾರ್ಚ್‌ನ 5.10 ಕೋ.ರೂ ಸೇರಿ ಸುಮಾರು 32 ಕೋ.ರೂ. ಬರಲು ಬಾಕಿ ಇದೆ.ನಿರ್ದೇಶಕ ಕಾಪು ದಿವಾಕರ ಶೆಟ್ಟಿ “ಉದಯವಾಣಿ’ ಜತೆಗೆ ಮಾತನಾಡಿ, “ಹಾಲಿನ ಉತ್ಪಾದನೆ ಕರಾವಳಿಯಲ್ಲಿ ಕುಸಿದಿದೆ. ಇದನ್ನು ಸರಕಾರದ ಗಮನಕ್ಕೆ ತರಲಾಗುತ್ತಿದೆ. ಬಾಕಿ ಇರುವ ಪ್ರೋತ್ಸಾಹಧನ ಬಿಡುಗಡೆ ಮಾಡುವ ಮೂಲಕ ಹೈನುಗಾರರಿಗೆ ದೊಡ್ಡ ಶಕ್ತಿ ನೀಡುವಕೆಲಸ ಆಗಲಿದೆ’ ಎನ್ನುತ್ತಾರೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಹೈನುಗಾರಿಕೆಯ ಭವಿಷ್ಯದ ದೃಷ್ಟಿಯಿಂದ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗಿದೆ. ಉಭಯ ಜಿಲ್ಲೆಯಲ್ಲಿ ಹಾಲಿನ ಮಾರಾಟ ದರ ಕನಿಷ್ಠ 5 ರೂ. ಆದರೂ ಏರಿಕೆ ಮಾಡುವ ಮೂಲಕ ಇಲ್ಲಿನ ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಮಹತ್ವದ ನಿರ್ಧಾರ ವನ್ನು ಸರಕಾರ-ಕೆಎಂಎಫ್‌ ಕೈಗೊಳ್ಳುವಂತೆ ಆಗ್ರಹಿಸಿ ದ.ಕ. ಹಾಲು ಉತ್ಪಾದಕರ ಒಕ್ಕೂಟದಿಂದ ಮನವಿ ಸಲ್ಲಿಸಲು ನಿರ್ಣಯಿ ಸಲಾಗಿದೆ. ಅಥವಾ ಇತರ ಮೂಲದಿಂದ 5 ರೂ. ಹೆಚ್ಚುವರಿಯಾಗಿ ಕರಾವಳಿ ಭಾಗದ ರೈತರಿಗೆ ಸಿಗುವಂತೆ ಮಾಡಲು ಸರಕಾರ-ಕೆಎಂಎಫ್‌ ಗಮನಹರಿಸುವಂತೆ ಕೋರಲಾಗುವುದು.
– ಸುಚರಿತ ಶೆಟ್ಟಿ, ಅಧ್ಯಕ್ಷರು,
ದ.ಕ. ಜಿಲ್ಲಾ ಸಹಕಾರಿರಿ ಹಾಲು ಉತ್ಪಾದಕರ ಒಕ್ಕೂಟ

Advertisement

Udayavani is now on Telegram. Click here to join our channel and stay updated with the latest news.

Next