Advertisement

ಕೃಷ್ಣೆಗೆ 1.6 ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆ

04:59 PM Aug 09, 2022 | Team Udayavani |

ನಾರಾಯಣಪುರ: ನಿರಂತರ ಒಳಹರಿವು ಬರುತ್ತಿರುವ ಹಿನ್ನೆಲೆಯಲ್ಲಿ ಬಸವಸಾಗರ ಜಲಾಶಯದಿಂದ 1.6 ಲಕ್ಷ ಸಾವಿರ ಕ್ಯೂಸೆಕ್‌ ನೀರು ಕೃಷ್ಣಾ ನದಿಗೆ ಹರಿಸಲಾಗುತ್ತಿದ್ದು, ಕೃಷ್ಣಾ ತೀರದ ಗ್ರಾಮಗಳ ಜನತೆಗೆ ಮತ್ತೆ ಪ್ರವಾಹ ಭೀತಿ ಶುರುವಾಗಿದೆ. ಕೆಳ ಹಂತದ ಸೇತುವೆಗಳು ಜಲಾವೃತವಾಗುವ ಸಾಧ್ಯತೆಗಳಿದ್ದು, ನದಿ ತೀರದ ಜನ ಮುಂಜಾಗ್ರತೆ ವಹಿಸುವಂತೆ ಅಣೆಕಟ್ಟು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಒಂದು ವಾರದಿಂದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ ಹಾಗೂ ಆಲಮಟ್ಟಿ ಸಾಗರದಿಂದ ಬಸವಸಾಗರಕ್ಕೆ ಬರುವ ಒಳಹರಿವು ರವಿವಾರ ಬೆಳಗ್ಗೆ 10 ಸಾವಿರ ಕ್ಯೂಸೆಕ್‌ನಷ್ಟಿತ್ತು. ಸೋಮವಾರ ಬೆ.11ಕ್ಕೆ ಒಳಹರಿವು 25 ಸಾವಿರ ಕ್ಯೂಸೆಕ್‌ ತಲುಪಿತು. ರಾತ್ರಿ ವೇಳೆಗೆ ಒಳಹರಿವು 1 ಲಕ್ಷ ಕ್ಯೂಸೆಕ್‌ಗೆ ಏರಿಕೆಯಾದ ಹಿನ್ನೆಲೆಯಲ್ಲಿ ಜಲಾಶಯದ 14 ಕ್ರಸ್ಟ್‌ಗೇಟ್‌ ಹಾಗೂ ಮುರುಡೇಶ್ವರ ಜಲವಿದ್ಯುತ್‌ ಸ್ಥಾವರದ ಮೂಲಕ ಒಟ್ಟು 1.6 ಲಕ್ಷ ಕ್ಯೂಸೆಕ್‌ನಷ್ಟು ನೀರು ಹರಿಸಲಾಗುತ್ತಿದೆ. ಕೆಲ ದಿನಗಳಿಂದ ನದಿಯಲ್ಲಿ ನೀರಿನ ಹರಿವು ಕ್ಷೀಣಿಸಿತ್ತು. ಸದ್ಯ ಅಪಾರ ನೀರು ಕೃಷ್ಣಾ ನದಿಗೆ ಹರಿಬಿಟ್ಟ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಹರಿವು ಪ್ರವಾಹ ಸ್ವರೂಪ ಪಡೆದಿದೆ. ಪ್ರಸ್ತುತ ಆಲಮಟ್ಟಿ ಶಾಸ್ತ್ರಿ ಜಲಾಶಯದಿಂದ ಬಸವಸಾಗರಕ್ಕೆ ಬರುವ ಒಳಹರಿವು ಗಮನಿಸಿ ಕೃಷ್ಣಾ ನದಿಗೆ ನೀರು ಹರಿಸಲಾಗುತ್ತಿದೆ. ಒಂದೊಮ್ಮೆ ಜಲಾಶಯಕ್ಕೆ ಬರುವ ಒಳಹರಿವು ಇನ್ನೂ ಹೆಚ್ಚಾದರೆ ನದಿಗೆ ನೀರು ಹರಿಸುವ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಲಾಶಯದ ಇಂದಿನ ಮಟ್ಟ: ಜಲಾಶಯದ ಗರಿಷ್ಠ ಮಟ್ಟ 492.25 ಮೀ.ನಲ್ಲಿ ಇಂದು 491.76 ಮೀ. ನೀರಿದೆ. ಗರಿಷ್ಠ ಸಂಗ್ರಹ 33.31 ಟಿಎಂಸಿ ಅಡಿಗಳಲ್ಲಿ 31.05 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಒಳಹರಿವು 1 ಲಕ್ಷ, ಹೊರ ಹರಿವು 1.6 ಲಕ್ಷ ಸಾವಿರ ಕ್ಯೂಸೆಕ್‌ ಇದೆ.

Advertisement

Udayavani is now on Telegram. Click here to join our channel and stay updated with the latest news.

Next