Advertisement

ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಜಿಪಂ ಅಧ್ಯಕ್ಷ ಗರಂ

09:52 AM Jul 24, 2019 | Team Udayavani |

ಬೆಂಗಳೂರು: ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯಾವುದೇ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪ ಬೆಂಗಳೂರು ನಗರ ಜಿಪಂ ಸ್ಥಾಯಿ ಸಮಿತಿ ಸಭೆಯಲ್ಲಿ ಮಂಗಳವಾರ ಕೇಳಿ ಬಂತು. ನಿರ್ಲಕ್ಷ್ಯ ವಹಿಸಿದ ಇಲಾಖಾವಾರು ಅಧಿಕಾರಿಗಳನ್ನು ಸಭೆಯಲ್ಲಿ ಸ್ಥಾಯಿ ಸಮಿತಿಯ ಸದಸ್ಯರುಗಳು ತರಾಟೆ ತೆಗೆದುಕೊಂಡ ಪ್ರಸಂಗ ಕೂಡ ನಡೆಯಿತು. ಬನಶಂಕರಿಯಲ್ಲಿರುವ ಬೆಂಗಳೂರು ನಗರ ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಿಕ್ಷಣ, ಸಹಕಾರ, ಆರೋಗ್ಯ, ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕ್ರೀಡೆ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

ಟೈಲರಿಂಗ್‌ ತರಬೇತಿ ಕೇಂದ್ರಗಳ ಬಗ್ಗೆ ನಿರ್ಲಕ್ಷ್ಯ: ಈ ಹಿಂದೆ ನಗರ ಜಿಲ್ಲಾ ವ್ಯಾಪ್ತಿಯಲ್ಲಿರುವ ಬಡ ಹೆಣ್ಣು ಮಕ್ಕಳು ಸ್ವ ಉದ್ಯೋಗ ಕೈಗೊಳ್ಳಲಿ ಎಂಬ ಕಾರಣಕ್ಕಾಗಿ ಜಿಪಂ ಹಲವು ಕಡೆಗಳಲ್ಲಿ ‘ಟೈಲರಿಂಗ್‌ ಕೇಂದ್ರಗಳನ್ನು ತೆರೆದಿದೆ. ಆದರೆ ಕೆಲವು ಕಡೆಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತರಬೇತಿ ಶಿಕ್ಷಕರೆ ಇಲ್ಲ ಎಂದು ಬೆಂಗಳೂರು ನಗರ ಜಿಪಂ ಅಧ್ಯಕ್ಷ ಮುನಿರಾಜು ದೂರಿದರು.

ಈ ಸಮಸ್ಯೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಅನೇಕಲ್ ಸೇರಿದಂತೆ ವಿವಿಧ ಕಡೆಗಳಲ್ಲಿರುವ ತರಬೇತಿ ಕೇಂದ್ರಗಳಿಗೆ ಅಧಿಕಾರಿಗಳು ಇನ್ನೂ ಭೇಟಿ ನೀಡಿಲ್ಲ. ಹೀಗಾದರೆ ಬಡಮಕ್ಕಳ ಕಲ್ಯಾಣ ಹೇಗೆ ಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಇಂತಹ ಪ್ರಸಂಗಗಳು ಮುಂದುವರಿದರೆ ಸಹಿಸಿಕೊಳ್ಳಲಾಗದು ಎಂದು ಎಚ್ಚರಿಸಿದರು.

ವಯಸ್ಕರ ಶಿಕ್ಷಣ ಅಗತ್ಯವಿದೆಯಾ?: ಕೆಲವು ಅಧಿಕಾರಿಗಳು ವಯಸ್ಕರ ಶಿಕ್ಷಣ ವಿಚಾರದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಹೇಳುತ್ತಾರೆ. ಬೆಂಗಳೂರು ನಗರ ಜಿಲ್ಲೆಗೆ ವಯಸ್ಕರ ಶಿಕ್ಷಣ ಅಗತ್ಯವಿದೆಯಾ ಎಂದು ಪ್ರಶ್ನಿಸಿದ ಅವರು, ಹಾಗಾದರೆ ಮೂರು ವರ್ಷದಲ್ಲಿ ಎಷ್ಟು ವಯಸ್ಕರರಿಗೆ ಶಿಕ್ಷಣ ನೀಡಲಾಗಿದೆ ಎಂಬುವುದನ್ನು ಅಧಿಕಾರಿಗಳು ಅಂಕೆ-ಸಂಖ್ಯೆ ಸಹಿತ ವರದಿ ನೀಡುವಂತೆ ಸೂಚಿಸಿದರು.

ಒಳಾಂಗಣ ಕ್ರೀಡಾಂಗಣ ನಿರ್ಮಿಸಿ: ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೆಸರಿಗೆ ಮಾತ್ರ ಇದೆ. ಆ ಇಲಾಖೆಯಿಂದ ಯಾವುದೇ ಕ್ರೀಡಾಂಗಣದ ಅಭಿವೃದ್ಧಿಯಾಗಿರುವ ಬಗ್ಗೆ ಮಾಹಿತಿಯಿಲ್ಲ. ನಗರ ಜಿಪಂ ವ್ಯಾಪ್ತಿಯಲ್ಲಿ ಕ್ರೀಡಾಪಟುಗಳಿಗೆ ಅನುಕೂಲವಾಗಲು ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಿಸಿ ಕೊಡಿ ಎಂದು ಹಿರಿಯ ಅಧಿಕಾರಿಗಳನ್ನು ಕೇಳಿದರೆ 8 ಎಕರೆ ಜಮೀನು ನೀಡಿ, ಅದನ್ನು ಇಲಾಖೆಗೆ ಒಪ್ಪಿಸಿ ಎಂಬ ಉತ್ತರ ಕೇಳಿ ಬಂದಿದೆ. ಅಷ್ಟೊಂದು ಜಾಗವನ್ನು ನಗರ ವ್ಯಾಪ್ತಿಯಲ್ಲಿ ನೀಡಲು ಸಾಧ್ಯವೇ ಎಂದು ಅಧ್ಯಕ್ಷ ಮುನಿರಾಜು ಹೇಳಿದರು.

Advertisement

ಇದೇ ವೇಳೆ ಮಾತನಾಡಿದ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಜಿಲ್ಲಾಡಳಿತಕ್ಕೆ ಅಷ್ಟೊಂದು ಎಕರೆ ಭೂಮಿ ನೀಡಲಾಗದಿದ್ದರೆ ಒಳಾಂಗಣ ಕ್ರೀಡಾಂಗಣಗಳನ್ನು ನಿರ್ಮಿಸಲು ಭೂಮಿ ನೀಡಲಿ ಎಂದು ಮನವಿ ಮಾಡಿದರು.

ನಗರ ಸಭೆ ಸದಸ್ಯ ನಾಗೇಶ್‌, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಶಾಲಾ- ಕಾಲೇಜುಗಳಲ್ಲಿ ರಂಗಮಂದಿರಗಳ ಅಗತ್ಯವಿದೆ. ರಂಗಮಂದಿರ ನಿರ್ಮಾಣ ಕಾರ್ಯಕ್ಕೆ ಅನುದಾನ ನೀಡಬೇಕು ಎಂದು ಹೇಳಿದರು. ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ತೆಂಗಿನ ಗಿಡ ವಿತರಿಸಲು ಸೂಚನೆ ನೀಡಿದೆ. ಆದರೆ ಆ ಕಾರ್ಯ ನಡೆದಿಲ್ಲ. ಜೇನುಸಾಕಾಣಿಕೆ ಬಗ್ಗೆಯೂ ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದರು. ಬೆಂಗಳೂರು ನಗರ ಜಿಪಂನ ಯೋಜನಾ ನಿರ್ದೇಶಕ ಮುನಿರಾಜು, ನಗರ ಜಿಪಂ ಉಪಕಾರ್ಯದರ್ಶಿ ಡಾ.ಸಿದ್ಧರಾಮಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next