Advertisement

“ಗೆಣ್ಗ್ ಬೇಸೂಕ್‌ಬಂದದ್ದಾ?’: ಜಿ.ಪಂ. ಸಭೆಯಲ್ಲಿ ಆಕ್ರೋಶ

02:30 AM Apr 06, 2021 | Team Udayavani |

ಉಡುಪಿ: ಸಿದ್ದಾಪುರ ಜಿ.ಪಂ. ಕ್ಷೇತ್ರ ವ್ಯಾಪ್ತಿಯ ಕೊರಗ ಸಮುದಾಯದವರ ಕಾಲನಿಯ ಬಾವಿ ನಿರ್ಮಾಣಕ್ಕೆ ಸಂಬಂಧಿಸಿ ಗುತ್ತಿಗೆದಾರರಿಗೆ ಹಣ ಪಾವತಿ ಮಾಡದ ವಿಷಯ ಚರ್ಚೆಗೆ ಬಂದಾಗ ಸಂಬಂಧಪಟ್ಟ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆಯವರು ತನಿಖೆಗೆ ಬಂದುದನ್ನು ಉಲ್ಲೇಖೀಸಿ, “ಅವರು ವರದಿ ನೀಡಲಿಲ್ಲ’ ಎಂದರು. ಹಾಗಿದ್ದರೆ “ಅವರು ಗೆಣ್ಗ್ ಬೇಸೂಕ್‌ ಬಂದದ್ದಾ?’ (ಕುಂದಾಪುರ ಕನ್ನಡದಲ್ಲಿ ಗೆಣಗು, ಗೆಣ್ಗ್= ಗೆಣಸು) ಎಂದು ಸದಸ್ಯ ರೋಹಿತ್‌ಕುಮಾರ್‌ ಶೆಟ್ಟಿ ಪ್ರಶ್ನಿಸಿದರು.

Advertisement

“ಹಾಗೆಲ್ಲ ಮಾತನಾಡುವುದು ಸರಿಯಲ್ಲ’ ಎಂದು ಸಿಇಒ ಡಾ| ನವೀನ್‌ ಭಟ್‌ ಕಿವಿಮಾತು ಹೇಳಿದರು.
ಸೋಮವಾರ ಜಿ.ಪಂ. ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅವರ ಅಧ್ಯಕ್ಷತೆಯಲ್ಲಿ ಈ ಅವಧಿಯ ಕೊನೆಯ ಸಾಮಾನ್ಯ ಸಭೆ ನಡೆದಾಗ, ಬಿಸಿ ಬಿಸಿ ಚರ್ಚೆ ನಡೆಯಿತು.

ನೀರಿನ ಪ್ರಮಾಣ ಕಡಿಮೆ ಇದ್ದರೆ ಗುತ್ತಿಗೆದಾರರು ಹೊಣೆಯೆ?
ಬೇಸಗೆಯಲ್ಲಿ ನೀರು ಕಡಿಮೆಯಾಗುವುದು ಸಹಜ. ಕೆಲಸ ಆಗದೆ ಇದ್ದರೆ, ಕಳಪೆ ಕಾಮಗಾರಿಯಾಗಿದ್ದರೆ ಪಾವತಿಸುವುದು ಬೇಡ. ಬಂದ ಸಿಮೆಂಟ್‌ನ್ನು ಮಾರುವು ದಿಲ್ವಾ ಎಂದು ಸ್ಥಾಯೀ ಸಮಿತಿ ಅಧ್ಯಕ್ಷ ಪ್ರತಾಪ ಹೆಗ್ಡೆ ಮಾರಾಳಿ ಪ್ರಶ್ನಿಸಿದರು.

ಅಧಿಕಾರಿಗಳಿಗೆ ತರಾಟೆ
ಕೆಆರ್‌ಡಿಎಲ್‌, ಸಣ್ಣ ನೀರಾವರಿ ಇಲಾಖೆಯಿಂದ ಆಗುವ ಕಾಮಗಾರಿ ವೈಖರಿಗೆ ಬಾಬು ಶೆಟ್ಟಿ, ಉದಯ ಕೋಟ್ಯಾನ್‌ ಮತ್ತಿತರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಣ್ಣ ನೀರಾವರಿ ಇಲಾಖೆ ಯಿಂದ ಹೊಗೆ ತೆಗೆದು ಮಾರಾಟ ಮಾಡಲಾಗುತ್ತಿದೆ ವಿನಾ ಏಲಂ ಹಾಕಿ ಮಾರುವ ಕ್ರಮವಿಲ್ಲ. ಟೆಂಡರ್‌ಗಳು ಬೆಂಗಳೂರಿನಲ್ಲಿ ಆಗುತ್ತದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಆದ ಕಾಮಗಾರಿಗಳಿಗೆ ಪಿಡಿಒ ಪ್ರಮಾಣಪತ್ರ ಬೇಕಾಗಿಲ್ಲ. ಕಾಮಗಾರಿಹಸ್ತಾಂತರವೂ ಆಗುವುದಿಲ್ಲ ಎಂದು ಬಾಬು ಶೆಟ್ಟಿ, ಉದಯ ಕೋಟ್ಯಾನ್‌ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಹತ್ತು ದಿನಗಳಲ್ಲಿ ನನಗೆ ಎಲ್ಲ ಕಾಮಗಾರಿಗಳ ಪಟ್ಟಿ ಬರಬೇಕು, ಗ್ರಾ.ಪಂ. ಪಿಡಿಒಗಳ ಪ್ರಮಾಣ
ಪತ್ರ ಬೇಕು ಎಂದು ಸಿಇಒ ತಿಳಿಸಿದರು.

ಕಡಿಮೆ ಮೊತ್ತ-ಕಳಪೆ ಕೆಲಸ
ಶೇ.40ಕ್ಕಿಂತ ಕಡಿಮೆ ಹಣವನ್ನು ತೋರಿಸಿ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ. ಇಂತಹವರನ್ನು ಕಪ್ಪು ಪಟ್ಟಿಗೆ ಸೇರಿಸುವುದು ಅಷ್ಟಕ್ಕಷ್ಟೆ. ಆದರೆ ಇವರಿಗೆ ಹಣ ಪಾವತಿಸಿದರೆ ಎಂಜಿನಿಯರರೇ ಹೊಣೆ ಹೊರಬೇಕು. ಉಪ್ಪೂರು, ಹಾವಂಜೆಯಲ್ಲಿ ಹೀಗೆ ಆಗಿದೆ ಎಂದು ಸದಸ್ಯ ಜನಾರ್ದನ ತೋನ್ಸೆ ಎಚ್ಚರಿಸಿದರು. ಇಂತಹವರು ಮತ್ತೆ ಕಾಮಗಾರಿ ಕ್ಷೇತ್ರಕ್ಕೆ ಬರುವುದೇ ಬೇಡ ಎಂದು ಪ್ರತಾಪ್‌ ಹೆಗ್ಡೆ ಆಗ್ರಹಿಸಿದರು. “ಮೇಲೆ ರಿಂಗ್‌ ತೋರುತ್ತದೆ. ಆಳವಿರುವುದಿಲ್ಲ. ಇಂತಹ ಕಾಮಗಾರಿ ಕಂಡಾಗ ತಡೆ ಹಿಡಿದಿದ್ದೇನೆ. ಇದನ್ನೂ ತನಿಖೆ ನಡೆಸಿ ತಪ್ಪಿದ್ದರೆ ಟೆಂಡರ್‌ ರದ್ದುಪಡಿಸಿ ಕಪ್ಪು ಪಟ್ಟಿಗೆ ಸೇರಿಸಲು ಶಿಫಾರಸು ಮಾಡುತ್ತೇನೆ’ ಎಂದು ಸಿಇಒ ಭರವಸೆ ನೀಡಿದರು.

Advertisement

ಪರಿಹಾರ ಪಾವತಿಗೆ ಅದಾಲತ್‌
ಕಲ್ಯಾಣಪುರ, ಕೆಮ್ಮಣ್ಣಿನಲ್ಲಿ ತಾಂತ್ರಿಕ ಸಮಸ್ಯೆಯಿಂದ ಪ್ರವಾಹಪೀಡಿತರಿಗೆ ಹಣ ಪಾವತಿ ಆಗಲಿಲ್ಲ ಎಂದು ಜನಾರ್ದನ ತೋನ್ಸೆ ಹೇಳಿದರು. 38 ಮಂದಿಗೆ ಇಂತಹ ಸಮಸ್ಯೆಯಾಗಿದ್ದು ವಾರದೊಳಗೆ ಸರಿ ಪಡಿಸುವುದಾಗಿ ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌ ತಿಳಿಸಿದರು. ಮುಂದಿನ ವಾರ ಲೀಡ್‌ ಡಿಸ್ಟ್ರಿಕ್ಟ್ ಮ್ಯಾನೇಜರ್‌ ಸಹಕಾರದಲ್ಲಿ ಅದಾಲತ್‌ ಏರ್ಪಡಿಸಿ ಸಮಸ್ಯೆ ಸರಿಪಡಿಸಲು ಸಿಇಒ ಸೂಚಿಸಿದರು.

ವನ್ಯಜೀವಿಗಳಿಂದ ತೊಂದರೆ
ಹಾವಂಜೆ, ಉಪ್ಪೂರಿನಲ್ಲಿ ಮಂಗಗಳು, ಚಿರತೆ, ಕಾಡು ಹಂದಿ ಸಮಸ್ಯೆಯಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಜನಾರ್ದನ ತೋನ್ಸೆ ಹೇಳಿದಾಗ, ಹಣ್ಣಿನ ಗಿಡಗಳನ್ನು ಕಾಡಿನಲ್ಲಿ ಬೆಳೆಸುತ್ತಿದ್ದೇವೆ. ಇದರಿಂದ ಮಂಗಗಳ ಸಮಸ್ಯೆ ಬಗೆಹರಿಯ ಬಹುದು. ಉಳಿದಂತೆ ಐದು ವರ್ಷಗಳಲ್ಲಿ ಚಿರತೆಯೂ ಸೇರಿದಂತೆ ವನ್ಯಪ್ರಾಣಿಗಳ ಸಂಖ್ಯೆ ಹೆಚ್ಚಿದೆ. ಬೆಳೆ ಹಾನಿ ಉಂಟಾದವರಿಗೆ 25 ಲ.ರೂ. ಪರಿಹಾರ ನೀಡಲಾಗಿದೆ ಎಂದು ಅರಣ್ಯ ಇಲಾಖೆಯ ಡಿಎಫ್ಒ ಆಶೀಶ್‌ ರೆಡ್ಡಿ ಹೇಳಿದರು.

ತಪ್ಪಿತಸ್ಥರ ವಿರುದ್ಧ ಕ್ರಮ
ಕೊಕ್ಕರ್ಣೆ ಸಮೀಪದ ಕೋಟಂಬೈಲಿ ನಲ್ಲಿ ಕಳಪೆ ಕಾಮಗಾರಿ ಮಾಡಿದವರ ಮೇಲೆ ಕ್ರಮ ಕೈಗೊಂಡಿಲ್ಲ. ಇದು ಲೋಕಾಯುಕ್ತರಿಂದ ತನಿಖೆ ನಡೆಸ ಬೇಕಾದ ಪ್ರಕರಣ ಎಂದು ಜನಾರ್ದನ ತೋನ್ಸೆ ಗಮನ ಸೆಳೆದರು. “ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರಕ್ಕೆ ಬರೆದುಕೊಳ್ಳಲಾಗಿದೆ. ಅವರ ವಿರುದ್ಧ ಕ್ರಮ ನಡೆಯುತ್ತದೆ ಎಂಬ ವಿಶ್ವಾಸವಿದೆ’ ಎಂದು ಅಧ್ಯಕ್ಷರು ಉತ್ತರಿಸಿದರು. “ಜಿ.ಪಂ. ಅಧ್ಯಕ್ಷರು, ಸಿಇಒ ಅವರಿಗೆ ತನಿಖೆ ನಡೆಸುವ ಅಧಿಕಾರವಿದೆ, ಕ್ರಮ ಕೈಗೊಳ್ಳುವುದು ಸರಕಾರದಿಂದ ಆಗಬೇಕಾಗಿದೆ. ವಾರಾಹಿ ನೀರಾವರಿ ನಿಗಮದಿಂದ ಆದ ಕಾಮಗಾರಿ ಇದಾಗಿದ್ದು ತನಿಖೆಗೆ ಸರಕಾರದಿಂದ ಸೂಚನೆ ಬಂದಿದೆ’ ಎಂದು ಸಿಇಒ ಹೇಳಿದರು.

ಪರದಾಟ
ಪರವಾನಿಗೆದಾರ ಸರ್ವೆಯರ್‌ಗಳು ಮುಷ್ಕರ ಹೂಡಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಸ್ಥಾಯೀ ಸಮಿತಿ ಅಧ್ಯಕ್ಷ ಸುಮಿತ್‌ ಶೆಟ್ಟಿ ಕಳವಳ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಜ. 16ರಿಂದ 51 ಲೈಸನ್ಸ್‌ ಸರ್ವೆಯರುಗಳು ವಿವಿಧ ಬೇಡಿಕೆ ಮುಂದಿಟ್ಟು ಮುಷ್ಕರ ಹೂಡಿದ್ದಾರೆ. 3,426 ಅರ್ಜಿಗಳಲ್ಲಿ 1,220 ಅರ್ಜಿ ವಿಲೇವಾರಿ ಆಗಿದೆ.
ಒಟ್ಟು 10,000 ಅರ್ಜಿಗಳು ಬಾಕಿ ಇದೆ. ಸರಕಾರಿ ಸರ್ವೆಯರ್‌ ಗಳು 33 ಮಂದಿ ಇದ್ದಾರೆ. ಎ. 7ರಿಂದ ಕೆಲಸಕ್ಕೆ ಹಾಜ ರಾಗುವುದಾಗಿ ಮುಷ್ಕರನಿರತರು ಹೇಳಿದ್ದಾರೆ. ರಾಜ್ಯದಲ್ಲಿ 2,000 ಹೊಸ ಸರ್ವೆಯರುಗಳ ನೇಮಕ ಆಗುತ್ತಿದೆ. ಇವರಿಗೆ ಕಡಿಮೆ ಸಮಯದ ಅಗತ್ಯ ತರಬೇತಿ ಕೊಟ್ಟು ನೇಮಕಾತಿ ಮಾಡುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next