Advertisement

ಝೀಕಾ ವೈರಸ್‌ ಬಗ್ಗೆ ಎಚ್ಚರವಹಿಸಿ : ಸಾರ್ವಜನಿಕರಲ್ಲಿ ಉಡುಪಿ ಜಿಲ್ಲಾಧಿಕಾರಿ ಮನವಿ

08:13 PM Jul 12, 2021 | Team Udayavani |

ಉಡುಪಿ : ಕೊರೊನಾ ನಡುವೆಯೇ ಇದೀಗ ಝೀಕಾ ವೈರಸ್‌ ತಲ್ಲಣ ಸೃಷ್ಟಿಸುತ್ತಿದೆ. ಈಗಾಗಲೇ ಕೇರಳದಲ್ಲಿ ಝೀಕಾ ವೈರಸ್‌ ಖಚಿತ ಪ್ರಕರಣಗಳು ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಯಾದ ಉಡುಪಿ ಜಿಲ್ಲೆಯಲ್ಲೂ ಕೂಡ ಕಟ್ಟೆಚ್ಚರ ವಹಿಸುವಂತೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Advertisement

ಸಾರ್ವಜನಿಕರು ಯಾವುದೇ ಜ್ವರವಿರಲಿ ತತ್‌ಕ್ಷಣವೇ ಹತ್ತಿರದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳುವುದರೊಂದಿಗೆ ಝೀಕಾ ವೈರಸ್‌ ಹರಡುವ ವಿಧಾನ, ರೋಗಲಕ್ಷಣಗಳ ಬಗ್ಗೆ ಜಿಲ್ಲಾಧಿಕಾರಿ ಜಿ.ಜಗದೀಶ್‌ ಮಾಹಿತಿ ನೀಡಿದ್ದು ಹಾಗೂ ಇದನ್ನು ತಡೆಯುವ ನಿಟ್ಟನಲ್ಲಿ ಈ ಕೆಳಗಿನ ಎಲ್ಲ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ತಿಳಿಸಿದ್ದಾರೆ.

ರೋಗ ಹರಡುವ ವಿಧಾನ
ಡೆಂಗ್ಯೂ/ಚಿಕುನ್‌ ಗುನ್ಯಾ, ವೆಸ್ಟ ನೈಲ್‌ ಹಾಗೂ ಹಳದಿ ಜ್ವರವನ್ನು ಹರಡುವಂತಹ ಸೊಳ್ಳೆಗಳಾದ ಈಡೀಸ್‌ ಜಾತಿಯ ಹೆಣ್ಣು ಸೊಳ್ಳೆಗಳು ಕಚ್ಚುವುದರಿಂದ ಝೀಕಾ ವೈರಸ್‌ ಖಾಯಿಲೆಯು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.

ಝೀಕಾ ವೈರಸ್‌ ಕೇವಲ ಸೊಳ್ಳೆಗಳ ಕಡಿತದಿಂದ ಹರಡುವುದಲ್ಲದೇ ರಕ್ತದ ವರ್ಗಾವಣೆ, ಅಸುರಕ್ಷಿತ ಲೈಂಗಿಕತೆ ಮುಂತಾದ ದೇಹದ ದ್ರವಗಳ ವಿನಿಮಯದ ಮೂಲಕವೂ ಹರಡುತ್ತದೆ.

ಇದನ್ನೂ ಓದಿ : ಅಫ್ಘನ್ ಗೆ ಅಮೆರಿಕದ ಪ್ರಮುಖ ಕಮಾಂಡರ್‌ ವಿದಾಯ : ಅಧಿಕಾರ ಹಸ್ತಾಂತರಿಸಿದ ಜ.ಸ್ಕಾಟ್ ಮಿಲ್ಲರ್‌

Advertisement

ಸದ್ಯ ಮಳೆಗಾಲ ಈ ವೈರಸ್‌ ಹರಡಲು ಅನುಕೂಲವಾದ ವಾತಾವರಣ ಸೃಷ್ಟಿಯಾಗಿದೆ. ಮಳೆಗಾಲದಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳ ಸಾಂದ್ರತೆ ಜಾಸ್ತಿ ಇರುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುತ್ತವೆ.

ರೋಗ ಲಕ್ಷಣಗಳು
ತೀವ್ರತರವಾದ ಜ್ವರ, ಮೈ-ಕೈ ನೋವು, ಕೀಲುಗಳಲ್ಲಿ ನೋವು, ದೇಹದ ಮೇಲೆ ಕೆಂಪು ರಕ್ತ ಮಿಶ್ರಿತ ಗುಳ್ಳೆಗಳು ಕಾಣಿಸಿಕೊಳ್ಳುವುದು ಪ್ರಮುಖ ಲಕ್ಷಣವಾಗಿದೆ. ರಕ್ತ ಹಾಗೂ ಮೂತ್ರವನ್ನು ಪರೀಕ್ಷಿಸಿದಾಗ ಈ ರೋಗದ ಸೋಂಕು ಇರುವುದು ಕಂಡುಬರುತ್ತದೆ.

ಸಂಭವಿಸಬಹುದಾದಂತಹ ಅಪಾಯ
– ಗರ್ಭಿಣಿಯರು ಝೀಕಾ ವೈರಸ್‌ ಸೋಂಕಿಗೆ ಒಳಗಾಗಿದ್ದರೆ ಗರ್ಭಪಾತವಾಗುವ ಸಾಧ್ಯತೆ ಇದೆ ಹಾಗೂ ಹುಟ್ಟಲಿರುವ ಮಗುವಿಗೂ ಕೂಡ ಸೋಂಕು ರವಾನೆಯಾಗಬಹುದಾಗಿದೆ.

– ಹುಟ್ಟುವ ಮಕ್ಕಳಲ್ಲಿ ಅಂಗಾಗ ನ್ಯೂನತೆ (ಮೈಕ್ರೋಸೆಫ‌ಲಿ -ಅಂದರೆ ಮಗುವಿನ ಮೆದುಳಿನ ಬೆಳವಣಿಗೆ ಕುಂಠಿತವಾಗುವುದು) ಕಾಣಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚಾಗಿದೆ.

– ವಯಸ್ಕರಲ್ಲಿ ತೀವ್ರತರವಾದ ನರಗಳ ದೌರ್ಬಲ್ಯ (Guillain-barre syndrome) ವಿರಳವಾಗಿ ಕಾಣಿಸಿಕೊಳ್ಳಬಹುದು.

ರೋಗ ಲಕ್ಷಣಗಳು ಕಂಡು ಬಂದರೆ ಏನು ಮಾಡಬೇಕು
– ಇದುವರೆಗೆ ಈ ಖಾಯಿಲೆಗೆ ಯಾವುದೇ ಲಸಿಕೆ ಕಂಡುಹಿಡಿದಿಲ್ಲ.
– ಸಾಕಷ್ಟು ದ್ರವ ಆಹಾರಗಳನ್ನು ಸೇವಿಸುವುದರ ಮೂಲಕ ನಿರ್ಜಲೀಕರಣವನ್ನು ತಡೆಯಬೇಕು.
– ಸಾಕಷ್ಟು ವಿಶ್ರಾಂತಿ ಪಡೆಯಬೇಕು.
– ಯಾವುದೇ ಜ್ವರವಿರಲಿ ತತ್‌ಕ್ಷಣವೇ ಹತ್ತಿರದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳುವುದು.

ಸೊಳ್ಳೆಗಳ ಉತ್ಪತ್ತಿ ತಾಣಗಳು
ಈ ಸೊಳ್ಳೆಗಳು ಹಗಲು ಹೊತ್ತು ಕಚ್ಚುತ್ತದೆ. ಡ್ರಮ್‌, ಬ್ಯಾರೆಲ್‌, ನೀರಿನ ತೊಟ್ಟಿ, ಏರ್‌ ಕೂಲರ್‌, ಅನುಪಯುಕ್ತ ಟೈರ್‌, ಒಡೆದ ಮಡಕೆ, ತೆಂಗಿನ ಚಿಪ್ಪು, ತಾರಸಿ ಮನೆಗಳ ಮೇಲ್ಚಾವಣಿ, ಘನತ್ಯಾಜ್ಯ ವಸ್ತುಗಳು, ಅಡಿಕೆ ತೋಟಗಳಲ್ಲಿ ಬಿದ್ದಿರುವ ಹಾಳೆಗಳು, ರಬ್ಬರ ತೋಟಗಳಲ್ಲಿ ರಬ್ಬರ ಸಂಗ್ರಹಿಸುವ ಕಫ್, ಹೂವಿನ ಕುಂಡ, ಇತ್ಯಾದಿಗಳಲ್ಲಿ ನೀರು ನಿಂತು ಈಡಿಸ್‌ ಸೊಳ್ಳೆ ಉತ್ಪತ್ತಿಯಾಗುತ್ತದೆ.

ಸಾರ್ವಜನಿಕರ ಪಾತ್ರ
– ಮನೆ ಪರಿಸರ, ಅಂಗಡಿ ಮುಂಗಟ್ಟುಗಳಲ್ಲಿ ಎಲ್ಲಿಯೂ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗದಂತೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು.
– ಸೊಳ್ಳೆಗಳು ಪ್ರವೇಶಿಸದಂತೆ ಮನೆಯ ಕಿಟಕಿ ಬಾಗಿಲುಗಳಿಗೆ ಜಾಲರಿ ಅಳವಡಿಸುವುದು.
– ಹೊರಾಂಗಣದಲ್ಲಿ ಮಲಗುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಹಾಗೂ ವಿಶ್ರಾಂತಿ ಪಡೆಯುವಾಗ ಮತ್ತು ಮಲಗುವಾಗ  ವಿಶೇಷವಾಗಿ ಗರ್ಭಿಣಿಯರು/ವಯಸ್ಕರು ಮತ್ತು ಮಕ್ಕಳು ಕೀಟನಾಶಕ ಲೇಪಿತ ಸೊಳ್ಳೆ ಪರದೆಗಳನ್ನು ಉಪಯೋಗಿಸುವುದು.
– ನೀರಿನ ತೊಟ್ಟಿ/ಟ್ಯಾಂಕ್‌ನ್ನು ಕನಿಷ್ಟ ಪಕ್ಷ ವಾರಕ್ಕೊಮ್ಮೆಯಾದರೂ ಪೂರ್ತಿ ಖಾಲಿ ಮಾಡಿ ತಿಕ್ಕಿ ತೀಡಿ ತೊಳೆಯುವುದು.
– ಬಯಲಿನಲ್ಲಿ ತ್ಯಾಜ್ಯ ವಸ್ತುಗಳಾದ ಟೈರ್‌, ಎಳೆನೀರಿನಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರವಹಿಸಿವುದು ಅಥವಾ ಸೂಕ್ತ ವಿಲೇವಾರಿ ಮಾಡುವುದು.
– ಸಾಧ್ಯವಾದಷ್ಟು ಮೈ ಮುಚ್ಚುವಂತೆ ಬಟ್ಟೆಯನ್ನು ಧರಿಸುವುದು.
– ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳುವುದು. ಸೊಳ್ಳೆ ಕಚ್ಚದಂತೆ ಎಲ್ಲ ರೀತಿಯ ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸುವುದು.

Advertisement

Udayavani is now on Telegram. Click here to join our channel and stay updated with the latest news.

Next