Advertisement

Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್

02:16 PM Jul 02, 2024 | Team Udayavani |

ಮುಂಬಯಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಐವರು ಆರೋಪಿಗಳ ವಿರುದ್ಧ ದಾಖಲಾಗಿರುವ ಹೊಸ ಚಾರ್ಜ್ ಶೀಟ್ ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸಿದೆ.

Advertisement

ನವಿ ಮುಂಬೈ ಪೊಲೀಸರ ಪ್ರಕಾರ, ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿರುವ ಆರೋಪಿಗಳ ಮೇಲೆ ಕೊಲೆಗೆ ಸಂಚು ಮತ್ತು ಇತರ ಗಂಭೀರ ಅಪರಾಧಗಳ ಆರೋಪ ಹೊರಿಸಲಾಗಿದೆ.

ಚಾರ್ಜ್ ಶೀಟ್ ಪ್ರಕಾರ, ನಟನನ್ನು ಹತ್ಯೆ ಮಾಡಲು ಬಿಷ್ಣೋಯ್ ಗ್ಯಾಂಗ್ 25 ಲಕ್ಷ ಮೊತ್ತದ ಗುತ್ತಿಗೆ ನೀಡಿತ್ತು. 2023ರ ಆಗಸ್ಟ್‌ನಿಂದ 2024ರ ಏಪ್ರಿಲ್‌ವರೆಗೆ ಹಲವು ತಿಂಗಳುಗಳ ಕಾಲ ಈ ಯೋಜನೆ ರೂಪಿಸಲಾಗಿತ್ತು. ಆರೋಪಿಗಳು ಎಕೆ 47, ಎಕೆ 92 ಮತ್ತು ಎಂ 16 ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನದಿಂದ ಖರೀದಿಸಲು ಸಿದ್ಧತೆ ನಡೆಸಿದ್ದರು. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಹತ್ಯೆ ಮಾಡಲಾದ ಟರ್ಕಿ ನಿರ್ಮಿತ ಜಿಗ್ನಾ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಬಯಸಿದ್ದರು. ಈ ಆಯುಧಗಳನ್ನು ಬಳಸಿ ಆರೋಪಿಗಳು ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ತನಿಖಾ ಸಂಸ್ಥೆ ಬಹಿರಂಗಪಡಿಸಿದೆ.

60ರಿಂದ 70 ಮಂದಿಯಿಂದ ಸಲ್ಮಾನ್‌ ಮೇಲೆ ನಿಗಾ:
ಆಗಸ್ಟ್ 2023 ಮತ್ತು ಏಪ್ರಿಲ್ 2024 ರ ನಡುವೆ ಸಲ್ಮಾನ್ ಖಾನ್ ಹತ್ಯೆಯ ಯೋಜನೆ ರೂಪಿಸಲಾಗಿತ್ತು ಎಂದು ನವಿ ಮುಂಬೈ ಪೊಲೀಸರ ಚಾರ್ಜ್ ಶೀಟ್‌ನಲ್ಲಿ ಹೇಳಲಾಗಿದೆ. ಇದಕ್ಕಾಗಿ ಸುಮಾರು 60 ರಿಂದ 70 ಮಂದಿ ನಟ ಸಲ್ಮಾನ್ ಖಾನ್ ಅವರ ಚಲನವಲನದ ಮೇಲೆ ನಿಗಾ ಇಡುತ್ತಿದ್ದರು. ತನಿಖೆಯ ವೇಳೆ ಸಲ್ಮಾನ್ ಖಾನ್ ಅವರ ಮುಂಬೈನ ಮನೆ, ಪನ್ವೇಲ್‌ನಲ್ಲಿರುವ ಫಾರ್ಮ್ ಹೌಸ್ ಮತ್ತು ಗೋರೆಗಾಂವ್‌ನ ಫಿಲ್ಮ್ ಸಿಟಿಯಲ್ಲಿನ ಪ್ರತಿಯೊಂದು ಚಲನವಲನವನ್ನು ಗಮನಿಸುತ್ತಿದ್ದರು ಎನ್ನಲಾಗಿದೆ. ಅಷ್ಟು ಮಾತ್ರವಲ್ಲದೆ ಆರೋಪಿಗಳು ಸಲ್ಮಾನ್ ಖಾನ್ ಅವರನ್ನು ಕೊಲ್ಲಲು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗರನ್ನು ನೇಮಿಸಿಕೊಂಡಿದ್ದರು ಎಂದು ಪೊಲೀಸರು ಚಾರ್ಜ್ ಶೀಟ್‌ನಲ್ಲಿ ತಿಳಿಸಿದ್ದಾರೆ.

ಗೋಲ್ಡಿ ಬ್ರಾರ್ ಮತ್ತು ಅನ್ಮೋಲ್ ಬಿಷ್ಣೋಯ್ ಆದೇಶಕ್ಕೆ ಕಾಯುತಿದ್ದರು:
ಎಲ್ಲಾ ಶೂಟರ್‌ಗಳು ಗೋಲ್ಡಿ ಬ್ರಾರ್ ಮತ್ತು ಅನ್ಮೋಲ್ ಬಿಷ್ಣೋಯ್ ಅವರ ಆದೇಶಕ್ಕಾಗಿ ಕಾಯುತ್ತಿದ್ದರು ಎಂದು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಆದೇಶ ಬಂದ ತಕ್ಷಣ ಪಾಕಿಸ್ತಾನದಿಂದ ತಂದ ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಸಲ್ಮಾನ್ ಖಾನ್ ಮೇಲೆ ದಾಳಿ ನಡೆಸಲು ತಯಾರಿ ನಡೆಸಲಾಗಿತ್ತು. ಈ ಎಲ್ಲಾ ಶೂಟರ್‌ಗಳು ಪುಣೆ, ರಾಯಗಢ, ನವಿ ಮುಂಬೈ, ಥಾಣೆ ಮತ್ತು ಗುಜರಾತ್‌ನಲ್ಲಿ ನೆಲೆಸಿದ್ದರು ಎನ್ನಲಾಗಿದ್ದು ಬಳಿಕ ಸಲ್ಮಾನ್ ಖಾನ್ ಹತ್ಯೆ ನಡೆಸಿ ಇವರೆಲ್ಲರೂ ಕನ್ಯಾಕುಮಾರಿಗೆ ತೆರಳಿ ಅಲ್ಲಿ ಒಟ್ಟಾಗಿ ಬಳಿಕ ಅಲ್ಲಿಂದ ಬೋಟ್ ಮೂಲಕ ಶ್ರೀಲಂಕಾ ಕಡೆಗೆ ತೆರಳಿ ಅಲ್ಲಿಂದ ಯಾವ ಯಾವ ದೇಶಕ್ಕೆ ಹೋಗಬೇಕು ಎಂದು ಪ್ಲಾನ್ ಮಾಡಲಾಗಿತ್ತು.

Advertisement

ಇದನ್ನೂ ಓದಿ: Tragedy: ಯುವಕನಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸ… ಆರನೇ ಮಹಡಿಯಿಂದ ಬಿದ್ದು ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next