Advertisement

ಶೂನ್ಯ ಬಂಡವಾಳ ಸಹಜ ಕೃಷಿ, ಮುಂದೇನು?

10:10 PM Aug 11, 2019 | Sriram |

ಸಮೀಕ್ಷೆಯೊಂದರ ಪ್ರಕಾರ, 1,000 ಗ್ರಾಮಗಳಲ್ಲಿ ಸರಕಾರದ ಬೆಂಬಲದಿಂದ ಸುಮಾರು 1.6 ಲಕ್ಷ ರೈತರು ಶೂನ್ಯ ಬಂಡವಾಳದ ಸಹಜ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಈ ಕೃಷಿ ಪದ್ಧತಿಯನ್ನು ಆಂದೋಲನದ ರೂಪದಲ್ಲಿ ಮೊದಲು ಮುನ್ನಲೆಗೆ ತಂದಿದ್ದು ಕರ್ನಾಟಕ ರಾಜ್ಯ ರೈತ ಸಂಘ.

Advertisement

ಜುಲೈ 2019ರಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಬಜೆಟ್ ಭಾಷಣದಲ್ಲಿ, ಶೂನ್ಯ ಬಂಡವಾಳದ ಸಹಜ ಕೃಷಿ ವಿಧಾನವನ್ನು ಎಲ್ಲ ರಾಜ್ಯಗಳಿಗೂ ವಿಸ್ತರಿಸಬೇಕಾದ ಅಗತ್ಯವನ್ನು ಪ್ರಸ್ತಾಪಿಸಿದರು. ಇಂತಹ ಕ್ರಮಗಳಿಂದ ಭಾರತದ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರೈತರ ಆದಾಯ ಇಮ್ಮಡಿಗೊಳಿಸಲು ಸಹಾಯವಾದೀತು ಎಂದು ಘೋಷಿಸಿದರು.

ಶೂನ್ಯ ಬಂಡವಾಳದ ಸಹಜ ಕೃಷಿ- ನಮ್ಮ ಪಾರಂಪರಿಕ ಕೃಷಿ ವಿಧಾನಗಳನ್ನು ಆಧರಿಸಿದ ರಾಸಾಯನಿಕ ಮುಕ್ತ ಕೃಷಿ ಪದ್ಧತಿ. 1990ರ ದಶಕದಲ್ಲಿ ಇದನ್ನು ಪ್ರತಿಪಾದಿಸಿದವರು ಮಹಾರಾಷ್ಟ್ರದ ಕೃಷಿಕ ಸುಭಾಷ್‌ ಪಾಳೇಕರ್‌. ರಾಸಾಯನಿಕ ಗೊಬ್ಬರಗಳು, ಪೀಡೆನಾಶಕಗಳು ಹಾಗೂ ಅಧಿಕ ನೀರಾವರಿ ಆಧರಿಸಿದ ಹಸಿರುಕ್ರಾಂತಿಯ ಕೃಷಿ ವಿಧಾನಗಳಿಗೆ ಇದು ಬದಲಿ ಎಂಬುವವರ ಪ್ರತಿಪಾದನೆ. ಈ ಒಳಸುರಿಗಳಿಗಾಗಿ ಹಣ ವೆಚ್ಚ ಮಾಡಬೇಕಾಗಿಲ್ಲದ (ಅಥವಾ ಸಾಲ ಪಡೆಯಬೇಕಾಗಿಲ್ಲದ) ಕಾರಣ, ಇದು ಶೂನ್ಯ ಬಂಡವಾಳದ ಕೃಷಿ ಪದ್ಧತಿ.

ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಕಚೇರಿ ಪ್ರಕಟಿಸಿರುವ ಅಂಕೆಸಂಖ್ಯೆಗಳ ಪ್ರಕಾರ, ಭಾರತದ ಶೇ.70ರಷ್ಟು ಕೃಷಿಕುಟುಂಬಗಳು ತಮ್ಮ ಆದಾಯಕ್ಕಿಂತ ಜಾಸ್ತಿ ವೆಚ್ಚ ಮಾಡುತ್ತಿವೆ. ಅದಲ್ಲದೆ, ಶೇ.50ಕ್ಕಿಂತ ಅಧಿಕ ಕೃಷಿಕುಟುಂಬಗಳು ಸಾಲ ಪಡೆದಿವೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಶೇ.90ರಷ್ಟು ಕೃಷಿಕುಟುಂಬಗಳು ಸಾಲದಲ್ಲಿ ಮುಳುಗಿದ್ದು, ಅವುಗಳ ಸರಾಸರಿ ಸಾಲ ಒಂದು ಲಕ್ಷ ರೂಪಾಯಿ! ಇಂಥ ಸನ್ನಿವೇಶದಲ್ಲಿ, ಶೂನ್ಯ ಬಂಡವಾಳದ ಸಹಜ ಕೃಷಿ ಪದ್ಧತಿ ಸೂಕ್ತ.

ದೀರ್ಘಾವಧಿಯಲ್ಲಿ ಸೂಕ್ತವೇ?
ಆಂಧ್ರಪ್ರದೇಶದಲ್ಲಿ 2017ರಲ್ಲಿ ನಡೆಸಲಾದ ಒಂದು ಅಧ್ಯಯನದ ಅನುಸಾರ, ಈ ಕೃಷಿ ಪದ್ಧತಿಯಿಂದಾಗಿ ಒಳಸುರಿಗಳ ವೆಚ್ಚ ಕಡಿಮೆಯಾಯಿತು ಮತ್ತು ಇಳುವರಿ ಹೆಚ್ಚಾಯಿತು. ಅದೇನಿದ್ದರೂ, ಈ ಪದ್ಧತಿ ಅನುಸರಿಸಿದ ರೈತರು ಕೆಲವು ವರ್ಷಗಳ ನಂತರ ರಾಸಾಯನಿಕಗಳ ಬಳಕೆಯ ಕೃಷಿ ಪದ್ಧತಿಗೆ ಹಿಂತಿರುಗುತ್ತಿದ್ದಾರೆ ಎಂಬ ವರದಿಗಳೂ ಪ್ರಕಟವಾಗಿವೆ.

Advertisement

ಇದರಿಂದಾಗಿ, ಈ ಕೃಷಿಪದ್ಧತಿಯ ಪರಿಣಾಮಗಳ ಬಗ್ಗೆ ಅನುಮಾನಗಳೂ ಹುಟ್ಟಿಕೊಂಡಿವೆ. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಹಸಿರು ಕ್ರಾಂತಿ ಅಗತ್ಯವಾಗಿತ್ತು ಭಾರತಕ್ಕೆ. ಸಂಪೂರ್ಣ ಸಾವಯವ ರಾಜ್ಯವಾಗಿರುವ ಸಿಕ್ಕಿಂನಲ್ಲಿ ಕಳೆದ ವರ್ಷ ಇಳುವರಿ ಸ್ವಲ್ಪ ಕಡಿಮೆಯಾಗಿರುವುದನ್ನು ಉದಾಹರಿಸುತ್ತಾ, ಈ ಪದ್ಧತಿಯ ಟೀಕಾಕಾರರು ಹೀಗೆ ಎಚ್ಚರಿಸುತ್ತಾರೆ- ಇಳುವರಿ ಕಡಿಮೆ ಆಗುವುದಿಲ್ಲ ಎಂಬ ಬಗ್ಗೆ ಸಾಕಷ್ಟು ಪುರಾವೆಯಿಲ್ಲದೆ, ಈ ಪದ್ಧತಿಗೆ ಕೃಷಿಯನ್ನು ಸಾರಾಸಗಟಾಗಿ ಪರಿವರ್ತಿಸುವುದು ಅಪಾಯಕಾರಿ.

ಹಲವೆಡೆ ತರಬೇತಿ
ಸಮೀಕ್ಷೆಯೊಂದರ ಪ್ರಕಾರ, 1,000 ಗ್ರಾಮಗಳಲ್ಲಿ ಸರಕಾರದ ಬೆಂಬಲದಿಂದ ಸುಮಾರು 1.6 ಲಕ್ಷ ರೈತರು ಶೂನ್ಯ ಬಂಡವಾಳ ಸಹಜ ಕೃಷಿ ಪದ್ಧತಿ ಅನುಸರಿಸುತ್ತಿದ್ದಾರೆ. ಈ ಕೃಷಿ ಪದ್ಧತಿಯನ್ನು ಮೊದಲಿಗೆ ಆಂದೋಲನದ ರೂಪದಲ್ಲಿ ಪ್ರಚಾರ ಮಾಡಿದ್ದು ಕರ್ನಾಟಕ ರಾಜ್ಯ ರೈತ ಸಂಘ. ಕರ್ನಾಟಕದಲ್ಲಿ ನೂರಾರು ತರಬೇತಿ ಶಿಬಿರಗಳನ್ನು ನಡೆಸಿ ಸಾವಿರಾರು ರೈತರಿಗೆ ತರಬೇತಿ ನೀಡಲಾಗಿತ್ತು.

ಜೂನ್‌ 2018ರಲ್ಲಿ, ಆಂಧ್ರಪ್ರದೇಶವು ಮಹಾತ್ವಾಕಾಂಕ್ಷಿ ಯೋಜನೆಯೊಂದನ್ನು ಶುರು ಮಾಡಿತ್ತು. ಅದರ ಉದ್ದೇಶ, 2024ರಲ್ಲಿ ಇಡೀ ರಾಜ್ಯದ ಎಲ್ಲ 60 ಲಕ್ಷ ರೈತರೂ ಶೂನ್ಯ ಬಂಡವಾಳದ ಸಹಜ ಕೃಷಿ ಅನುಸರಿಸುವಂತೆ ಮಾಡುವುದು. ಅಂದರೆ, ಸುಮಾರು 80 ಲಕ್ಷ ಹೆಕ್ಟೇರಿನಲ್ಲಿ ಈ ಕೃಷಿ ಪದ್ಧತಿ ಅಳವಡಿಸುವುದು.

ಈ ವರ್ಷದ ಕೇಂದ್ರ ಬಜೆಟಿನಲ್ಲಿ ಈ ಕೃಷಿ ಪದ್ಧತಿಯ ಜಾರಿಗಾಗಿ ಹೆಚ್ಚುವರಿ ಅನುದಾನ ಒದಗಿಸಿಲ್ಲ. ಆದರೆ, ಕಳೆದ ವರ್ಷದ ಕೇಂದ್ರ ಬಜೆಟಿನಲ್ಲಿ ಈ ಎರಡು ಯೋಜನೆಗಳ ನಿಯಮಗಳನ್ನು ಬದಲಾಯಿಸಲಾಗಿದೆ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ – ಕೃಷಿ ಮತ್ತು ಕೃಷಿ ಸಂಬಂಧಿ ರಂಗಗಳ ಪುನರುತ್ಥಾನಕ್ಕಾಗಿ ಲಾಭದಾಯಕ ವಿಧಾನಗಳು (ಈ ವರ್ಷದ ಅನುದಾನ 3,745 ಕೋಟಿ ರು.) ಹಾಗೂ ಪರಂಪರಾಗತ ಕೃಷಿ ವಿಕಾಸ ಯೋಜನೆ (ಅನುದಾನ 325 ಕೋಟಿ ರು.). ಹೊಸ ನಿಯಮಗಳ ಅನುಸಾರ, ಈ ಎರಡೂ ಯೋಜನೆಗಳ ಅನುದಾನಗಳನ್ನು ಶೂನ್ಯ ಬಂಡವಾಳ ಸಹಜ ಕೃಷಿ, ವೇದಗಳ ಅನುಸಾರ ಕೃಷಿ, ಸಹಜ ಕೃಷಿ ಇತ್ಯಾದಿ ಪಾರಂಪರಿಕ ಕೃಷಿ ಪದ್ಧತಿಗಳ ಅನುಷ್ಠಾನಕ್ಕೆ ಬಳಸಬಹುದಾಗಿದೆ.

ಪರೀಕ್ಷೆಗೊಳಪಡಿಸುವ ಅಗತ್ಯ
ನೀತಿ ಆಯೋಗವು ಈ ಕೃಷಿ ಪದ್ಧತಿಯನ್ನು ಬೆಂಬಲಿಸುತ್ತಿದೆಯಾದರೂ, ವಿವಿಧ ಪ್ರದೇಶಗಳಲ್ಲಿ ಇದರ ಬಗ್ಗೆ ಅಧ್ಯಯನಗಳನ್ನು ನಡೆಸಿ, ಇದು ವೈಜ್ಞಾನಿಕವಾಗಿಯೂ ಸೂಕ್ತ ಎಂಬುದನ್ನು ದೃಢಪಡಿಸಬೇಕೆಂದು ಎಚ್ಚರಿಸಿದೆ. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು ಉತ್ತರಪ್ರದೇಶದ ಮೋದಿಪುರದಲ್ಲಿ ಬಾಸ್ಮತಿ ಮತ್ತು ಗೋಧಿ ಕೃಷಿಕರ ಹೊಲಗಳು, ಪಂಜಾಬಿನ ಲೂಧಿಯಾನ, ಉತ್ತರಖಂಡದ ಪಂತ್‌ನಗರ ಮತ್ತು ಹರಿಯಾಣದ ಕುರುಕ್ಷೇತ್ರಗಳಲ್ಲಿ ಶೂನ್ಯ ಬಂಡವಾಳ ಸಹಜ ಕೃಷಿ ಬಗ್ಗೆ ಅಧ್ಯಯನಗಳನ್ನು ನಡೆಸುತ್ತಿದೆ.

ಈ ಅಧ್ಯಯನಗಳಿಂದ, ಶೂನ್ಯ ಬಂಡವಾಳ ಸಹಜ ಕೃಷಿಯು ಯಶಸ್ವಿ ವಿಧಾನವೆಂದು ಸಾಬೀತಾದರೆ, ಅದನ್ನು ದೇಶವ್ಯಾಪಿ ಜಾರಿಗೊಳಿಸಲು ಯೋಜನೆ ಮಾಡಬಹುದು ಎನ್ನುತ್ತಾರೆ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌

-ಅಡ್ಡೂರು ಕೃಷ್ಣರಾವ್‌

Advertisement

Udayavani is now on Telegram. Click here to join our channel and stay updated with the latest news.

Next