Advertisement

ವಿಮಾನ ಅಪಹರಣ ರೂವಾರಿ ಯೂಸುಫ್ ಉಗ್ರ ಕೇಂದ್ರ ಚೀಫ್

12:30 AM Feb 27, 2019 | |

ಐಎಎಫ್ ನಡೆಸಿದ ದಾಳಿಯಿಂದ ಭಾರಿ ಪ್ರಮಾಣದಲ್ಲಿ ಪೆಟ್ಟು ತಿಂದದ್ದು ಬಾಲಕೋಟ್‌ನಲ್ಲಿರುವ ಜೈಶ್‌ ಉಗ್ರ ಸಂಘಟನೆಯ ಶಿಬಿರ. ಈ ಶಿಬಿರದ ನೇತೃತ್ವವನ್ನು ಜೈಶ್‌ ಸಂಘಟನೆ ಮುಖ್ಯಸ್ಥ, ಉಗ್ರ ಮಸೂದ್‌ ಅಜರ್‌ನ ಭಾಮೈದ ಯೂಸುಫ್ ಅಜರ್‌ ಅಲಿಯಾಸ್‌ ಮೊಹಮ್ಮದ್‌ ಸಲೀಂ ವಹಿಸಿದ್ದ. ಈತ 1999 ಡಿ.24ರಂದು ನಡೆದಿದ್ದ ಕಂದಹಾರ್‌ ವಿಮಾನ ಅಪಹರಣ ಪ್ರಕರಣದಲ್ಲಿ ಸಿಬಿಐಗೆ ಪ್ರಮುಖವಾಗಿ ಬೇಕಾಗಿದ್ದ. ಆತನ ವಿರುದ್ಧ ಸಿಬಿಐ ಕೋರಿಕೆ ಮೇರೆಗೆ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಕೂಡ ಹೊರಡಿಸಿತ್ತು. ಈತನಲ್ಲದೆ ಇಬ್ರಾಹಿಂ ಅತರ್‌, ಸುನ್ನಿ ಅಹ್ಮದ್‌ ಖ್ವಾಝಿ, ಝಹೂರ್‌ ಇಬ್ರಾಹಿಂ, ಶಾಹಿದ್‌ ಅಖ್ತರ್‌, ಸಯ್ಯದ್‌ ಶಾಕಿರ್‌ ಮತ್ತು ಅಬ್ದುಲ್‌ ರವೂಫ್ ಎಂಬುವರ ವಿರುದ್ಧವೂ ನೋಟಿಸ್‌ ಹೊರಡಿಸಲಾಗಿತ್ತು. 

Advertisement

ಕರಾಚಿಯಲ್ಲಿ ಜನಿಸಿರುವ ಯೂಸುಫ್ಗೆ ಉರ್ದು ಮತ್ತು ಹಿಂದಿ ಭಾಷೆಯಲ್ಲಿ ಹಿಡಿತವಿತ್ತು. ಆತ ಮಸೂದ್‌ ಅಜರ್‌ ಜತೆ ನಿಕಟ ಸಂಪರ್ಕ ಹೊಂದಿದ್ದ. ಉರಿಯ ಸೇನಾ ನೆಲೆ ಮೇಲೆ ನಡೆದಿದ್ದ ದಾಳಿಯಲ್ಲಿಯೂ ಇದೇ ಸಂಘಟನೆಯ ಪಾತ್ರವಿದೆ.
ಸಾರ್ಕ್‌ ಮತ್ತು ಹೇಗ್‌ ಒಪ್ಪಂದದ ಅನ್ವಯ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಬದಲಾಗಿ ಬಿಡುಗಡೆಗೊಂಡಿದ್ದ ಮಸೂದ್‌ ಅಜರ್‌, ಮುಶಾ¤ಕ್‌ ಅಹ್ಮದ್‌ ಝರ್ಗಾರ್‌ ಮತ್ತು ಅಹ್ಮದ್‌ ಒಮರ್‌ ಸಯ್ಯದ್‌ ಶೇಕ್‌ರನ್ನು ಗಡಿಪಾರು ಮಾಡುವಂತೆ ಭಾರತ ಪಾಕಿಸ್ತಾನಕ್ಕೆ ಒತ್ತಾಯಿಸಿದ್ದರೂ, ಪ್ರಯೋಜನವಾಗಿರಲಿಲ್ಲ.

ಗಡಿ ಮೀರಿ ಬಂದ ಡ್ರೋನ್‌ ಪತನ 
ಪಾಕಿಸ್ತಾನಕ್ಕೆ ಸೇರಿದ ಡ್ರೋನ್‌ವೊಂದನ್ನು ಗುಜರಾತ್‌ನ ಕಛ… ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಭಾಗದಲ್ಲಿ ಹೊಡೆದುರುಳಿಸಲಾಗಿದೆ. ಕಛ… ಜಿಲ್ಲೆಯ ಅಬ್ದಾಸಾ ತಾಲೂಕಿನ ನಂಘಾತದ್‌ ಹಳ್ಳಿಯಲ್ಲಿ ಭಾರೀ ಶಬ್ದದೊಂದಿಗೆ ಡ್ರೋನ್‌ ಪತನಗೊಂಡಿದೆ. ಬೆಳಗ್ಗೆ 6 ಗಂಟೆ ವೇಳೆಗೆ ಕೇಳಿಬಂದ ಭಯಂಕರ ಶಬ್ದದ ಕಾರಣ ಹಳ್ಳಿಗರೆಲ್ಲ ಮನೆಯಿಂದ ಹೊರಬಂದು ನೋಡಿದಾಗ, ಡ್ರೋನ್‌ನ ಅವಶೇಷಗಳು ಪತ್ತೆಯಾಗಿವೆ. ಯಾವ ಕಾರಣಕ್ಕೆ ಇದು ಭಾರತದ ಗಡಿದಾಟಿತ್ತು ಎನ್ನುವುದು ಇನ್ನೂ ಖಚಿತಗೊಂಡಿಲ್ಲ. ಮಧ್ಯರಾತ್ರಿ ಹೊತ್ತಿಗೆ ಪಾಕಿಸ್ತಾನದ ಗಡಿಯನ್ನು ದಾಟಿ, ಉಗ್ರರ ಶಿಬಿರವನ್ನು ಭಾರತದ ಸೇನೆ ಧ್ವಂಸಗೊಳಿಸಿರುವ ನಡುವೆಯೇ ಈ ಘಟನೆ ನಡೆದಿದೆ. ಪಾಕಿಸ್ತಾನದ ಡ್ರೋನ್‌ ಹೊಡೆದುರುಳಿಸಿ ರುವುದು ಹೌದು ಎಂದು ಸ್ಥಳೀಯ ಪೊಲೀಸ್‌ ಮೂಲಗಳೂ ಖಚಿತಪಡಿಸಿವೆ. ಆದರೆ ಹೆಚ್ಚಿನ ಮಾಹಿತಿ ನೀಡಿಲ್ಲ, ತನಿಖೆ ನಡೆಯುತ್ತಿದೆ ಎಂದಷ್ಟೇ ಉತ್ತರಿಸಿವೆ.

ಪ್ರತ್ಯೇಕತಾವಾದಿಗಳ ಮನೆ ಮೇಲೆ ಎನ್‌ಐಎ ದಾಳಿ
ಉಗ್ರರಿಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿರ್ವೇಜ್‌ ಉಮರ್‌ ಫಾರೂಖ್‌ ಸೇರಿದಂತೆ ಕಾಶ್ಮೀರ ಕಣಿವೆಯ ಹಲವು ಪ್ರತ್ಯೇಕತಾವಾದಿಗಳ ಮನೆಗಳ ಮೇಲೆ ಎನ್‌ಐಎ ಮಂಗಳವಾರ ದಾಳಿ ನಡೆಸಿ, ಪರಿಶೀಲನೆ ನಡೆಸಿದೆ. ಪಾಕಿಸ್ಥಾನಪರ ಪ್ರತ್ಯೇಕತಾವಾದಿ ಸಯೀದ್‌ ಅಲಿ ಶಾ ಗಿಲಾನಿಯ ಪುತ್ರ ನಯೀಮ್‌ ಗಿಲಾನಿ, ಯಾಸೀನ್‌ ಮಲಿಕ್‌, ಶಬ್ಬೀರ್‌ ಶಾ, ಅಶ್ರಫ್ ಸೆಹ್ರಾಯ್‌ ಮತ್ತು ಜಫ‌ರ್‌ ಭಟ್‌ಗೆ ಸೇರಿದ ಮನೆಗಳ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಲಾಗಿದೆ. ಎನ್‌ಐಎ ತಂಡಕ್ಕೆ ಸ್ಥಳೀಯ ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ನೆರವಾಗಿದ್ದಾರೆ.

ಜಿಹಾದ್‌ಗಾಗಿ ಜೈಶ್‌ನಿಂದ ನೇಮಕಾತಿ ಶಿಬಿರ!
ಕಾಶ್ಮೀರಕ್ಕೆ ಉಗ್ರರನ್ನು ಪೂರೈಸುತ್ತಿರುವುದು ಪಾಕಿಸ್ತಾನ ದಲ್ಲಿರುವ ಜೈಶ್‌ ಎ ಮೊಹಮ್ಮದ್‌ ಸಂಘಟನೆ. ಅದೂ ಬೃಹತ್‌ ಪ್ರಮಾಣದಲ್ಲಿ! ಈ ಮಾಹಿತಿ ಜೈಶ್‌ ಸಂಘಟನೆಯ ಅಲ್‌ ಖಲಮ್‌ ನಿಯತಕಾಲಿಕೆಯಲ್ಲೇ ಬಹಿರಂಗವಾಗಿದೆ. ಜೈಶ್‌ ಸಂಘಟನೆ, ಪಾಕ್‌ನಲ್ಲಿರುವ  ಪಂಜಾಬಿಗಳಿಗೆ ಕರೆ ನೀಡಿ, ಜಿಹಾದಿಗಳಿಗೆ ಆರ್ಥಿಕ ನೆರವು ನೀಡಿ ಎಂದು ಮನವಿ ಮಾಡಿದೆ. ಮಸೀದಿಗಳ ಮಟ್ಟದಲ್ಲಿ ನಡೆಯುವ ಸಭೆಗಳ ವಿವರ ನೀಡಿ, ಜಿಹಾದ್‌ಗೆ ಸಜ್ಜಾಗಿ ಎಂದಿದೆ. ಬಹವಾಲ್ಪುರದಲ್ಲಿ ಫೆಬ್ರವರಿ ತಿಂಗಳೊಂದರಲ್ಲೇ ಮೂರು ಬಾರಿ, ಜಿಹಾದಿ ನೇಮಕಾತಿ ನಡೆಯಲಿದೆ ಎಂದು ತನ್ನ ನಿಯತಕಾಲಿಕೆಯಲ್ಲಿ ಪ್ರಕಟಿಸಿತ್ತು!

Advertisement
Advertisement

Udayavani is now on Telegram. Click here to join our channel and stay updated with the latest news.

Next