Advertisement

ಯುಜಿಡಿ ವೈಫ‌ಲ್ಯ ಆರೋಪ: ಅಧಿಕಾರಿಗಳ ಅಮಾನತಿಗೆ ಒತ್ತಾಯ

02:03 PM Apr 14, 2017 | Team Udayavani |

ಮಡಿಕೇರಿ: ನಗರದಲ್ಲಿ ನಡೆಯುತ್ತಿರುವ ಯುಜಿಡಿ ಯೋಜನೆಯ ಕಾಮಗಾರಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು, ಕೇರಿಯನ್ನು ಕೊಳೆಗೇರಿಯನ್ನಾಗಿ ಪರಿವರ್ತಿಸಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿರುವ ಪೀಪಲ್ಸ್‌ ಮೂವ್‌ಮೆಂಟ್‌ ಫಾರ್‌ ಹ್ಯೂಮನ್‌ ರೈಟ್ಸ್‌ ಸಂಘಟನೆಯ ಜಿಲ್ಲಾಧ್ಯಕ್ಷ ರಾದ ಹರೀಶ್‌ ಜಿ. ಆಚಾರ್ಯ, ತಪ್ಪಿತಸ್ಥ ಅಧಿಕಾರಿಗಳನ್ನು ತತ್‌ಕ್ಷಣ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಲೆ ಬಾಳುವ ಎಲ್ಲ ರಸ್ತೆಗಳನ್ನು ಹಾಳು ಮಾಡಲಾಗಿದ್ದು, ವಾಹನ ಚಾಲಕರು ಹಾಗೂ ಪಾದಚಾರಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಬೆಟ್ಟಗುಡ್ಡಗಳ ಪ್ರದೇಶವಾಗಿರುವ ಮಡಿಕೇರಿ ನಗರಕ್ಕೆ ಶೌಚಾಲಯದ ತ್ಯಾಜ್ಯ ಹರಿಯುವ ಒಳಚರಂಡಿ ಯೋಜನೆ ಹೊಂದಿಕೊಳ್ಳದಿದ್ದರೂ ಯಾರಧ್ದೋ ಲಾಭಕ್ಕಾಗಿ ಕಾಮಗಾರಿಯನ್ನು ಮಾಡಲಾಗುತ್ತಿದೆ. ಇದರಿಂದ ನಗರದ ಜನರು ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸು ತ್ತಿದ್ದಾರೆ. ಹದಗೆಡಿಸಿದ ರಸ್ತೆಗೆ ಡಾಂಬರು ಹಾಕುವ ಕಾಮಗಾರಿ ಕಳಪೆ ಗುಣಮಟ್ಟದಿಂದ ನಡೆಯುತ್ತಿದ್ದು, ಯುಜಿಡಿ ಕಾಮಗಾರಿಯ ಮೂಲಕ ಅಲ್ಲಲ್ಲಿ ಅಳವಡಿಸಲಾಗಿರುವ ಸೆಪ್ಟಿಕ್‌ ಟ್ಯಾಂಕ್‌ನ ಮುಚ್ಚಳದ ಮೇಲೆಯೇ ಡಾಮರು ಹಾಕಿ ಯೋಜನೆಯನ್ನು ಅರ್ಥಹೀನಗೊಳಿಸಲಾಗುತ್ತಿದೆ. ಈ ಹಿಂದೆ ಯುಜಿಡಿ ವಿರುದ್ಧ ಧ್ವನಿ ಎತ್ತಿದವರು ಇದೀಗ ಮೌನಕ್ಕೆ ಶರಣಾಗಿದ್ದು, ಎಲ್ಲ ಕಷ್ಟ ನಷ್ಟಗಳಿಗೂ ನಗರಸಭಾ ಸದಸ್ಯರೇ ಹೊಣೆ ಎಂದು ಹರೀಶ್‌ ಆಚಾರ್ಯ ಆರೋಪಿಸಿದರು. 

ಯುಜಿಡಿಯ ಎಲ್ಲ ಕಾಮಗಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಯೋಜನೆಗೆ ಅನುಮೋದನೆ ನೀಡಿದವರ ವಿರುದ್ಧವೇ ಮೊದಲು ಕ್ರಮ ಕೈಗೊಳ್ಳಬೇಕು ಮತ್ತು ನಗರಸಭೆಗೆ ಆದ ನಷ್ಟವನ್ನು ಸಂಬಂಧಿಸಿ ದವರಿಂದಲೇ ಭರಿಸಬೇಕೆಂದು ಒತ್ತಾಯಿಸಿದರು. 

ಖಾಸಗಿ ಬಸ್‌ ನಿಲ್ದಾಣದ ಕಾಮಗಾರಿಯನ್ನು ಶೀಘ್ರ ಆರಂಭಿಸುವ ಮೂಲಕ ನಗರದ ಜನರ ಹಲವು ದಿನಗಳ ಬೇಡಿಕೆಯನ್ನು ಈಡೇರಿಸಬೇಕು. ಕಾಮಗಾರಿ ವಿಳಂಬಗೊಳಿಸುವ ಎಲ್ಲ ಷಡ್ಯಂತ್ರಗಳು ನಡೆಯುತ್ತಿದ್ದು, ಇದಕ್ಕೆ ಬೆಲೆ ನೀಡದೆ ಜನಪರ ಕಾಳಜಿ ವಹಿಸುವ ಅಗತ್ಯವಿದೆ. ಮಣ್ಣು ಪರೀಕ್ಷೆಯನ್ನು ವೈಜ್ಞಾನಿಕವಾಗಿ ಮೊದಲೇ ನಡೆಸದೆ ಮೂರು-ನಾಲ್ಕು ಬಾರಿ ಭೂಮಿ ಪೂಜೆ ಮಾಡಲಾಗಿದೆ. ಭೂಮಿ ಪೂಜೆ ಬದಲಿಗೆ ನಾಲ್ಕೆçದು ಬಾರಿ ಮಣ್ಣಿನ ಪರೀಕ್ಷೆ ನಡೆಸಿದ್ದರೆ ಸಾರ್ವಜನಿಕರ ಹಣ ಪೋಲಾಗುವುದು ತಪ್ಪುತ್ತಿತ್ತು ಎಂದು ಅಭಿಪ್ರಾಯಪಟ್ಟ ಅವರು  ನಗರಸಭೆಯ ಹಾದಿ ತಪ್ಪಿಸಿದ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. 

Advertisement

ಸಾರಿಗೆ ನಿಯಮ ಉಲ್ಲಂಘನೆ
ಸಾರಿಗೆ ಇಲಾಖೆ ನಿಯಮದ ಪ್ರಕಾರ ವಾಹನಗಳಲ್ಲಿ ಕಪ್ಪು ಗಾಜು ಗಳನ್ನು ಅಳವಡಿಸುವಂತ್ತಿಲ್ಲ. ಅಪರಾಧ ತಡೆಗಾಗಿ ಕೋರ್ಟ್‌ ಈ ಆದೇಶ ಮಾಡಿದ್ದು, ಕೊಡಗು ಜಿಲ್ಲೆಯಲ್ಲಿ ಇದು ಪಾಲನೆಯಾಗುತ್ತಿಲ್ಲ. ಕಪ್ಪು ಗಾಜನ್ನು ಅಳವಡಿಸಿರುವ ವಾಹನಗಳು ಓಡಾಡುತ್ತಿದ್ದರೂ ಸಾರಿಗೆ ಇಲಾಖೆಯಾಗಲಿ, ಪೊಲೀಸ್‌ ಇಲಾಖೆಯಾಗಲಿ ಯಾವುದೇ ಕ್ರಮ ಗಳನ್ನು ಕೈಗೊಳ್ಳುತ್ತಿಲ್ಲ. ಈ ರೀತಿ ನಿಯಮ ಉಲ್ಲಂ ಸಿ ಅಪರಾಧ ಪ್ರಕರಣಗಳನ್ನು ನಡೆಸುವ ಸಾಧ್ಯತೆಗಳಿದೆ ಎಂದು ಆರೋಪಿಸಿದರು. 

ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್‌ ಧರಿಸುವುದು ಕಡ್ಡಾಯವೆಂದು ಘೋಷಣೆಯಾಗಿದೆ. ಆದರೆ ಈ ನಿಯಮ ಕೊಡಗು ಜಿಲ್ಲೆಯಲ್ಲಿ ಜಾರಿಯಲ್ಲಿ ಇಲ್ಲ ಎಂಬಂತೆ ಇದೆ. ಹೆಲ್ಮೆಟ್‌ ಧರಿಸದೆ ವಾಹನ ಚಾಲನೆ ಮಾಡಿದರೂ ಪೊಲೀಸರು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಕಾಲೇಜು ಭಾಗಗಳಲ್ಲಿ ಹಾಗೂ ರೇಸ್‌ಕೋರ್ಸ್‌ ರಸ್ತೆಗಳಲ್ಲಿ ಕೆಲವು ಯುವ ಸಮೂಹ ಒಂದೇ ಬೈಕ್‌ ಹಾಗೂ ಸ್ಕೂಟರ್‌ನಲ್ಲಿ ಮೂರು, ನಾಲ್ಕು ಮಂದಿ ಓಡಾಡುತ್ತಿದ್ದಾರೆ. ಯಾರೂ ಕೂಡ ಹೆಲ್ಮೆಟ್‌ ಧರಿಸುತ್ತಿಲ್ಲ. ಅಲ್ಲದೆ 13 ರಿಂದ 17 ವರ್ಷದೊಳಗಿನ ಯುವಕರು ಪರವಾನಗಿ ಪಡೆಯದೆ ದ್ವಿಚಕ್ರ ವಾಹನಗಳನ್ನು ಚಲಾಯಿಸುತ್ತಿದ್ದು, ಪೊಲೀಸ್‌, ಕಾನೂನಿನ ಭಯ ಇಲ್ಲದಾಗಿದೆ. ಈ ರೀತಿಯ ನಿಯಮ ಉಲ್ಲಂಘನೆ ಯಿಂದ ಅಪಾಯಗಳು ಸಂಭವಿಸುವುದು ಖಚಿತವಾಗಿದೆ.

ಕೆಲವು ಆಟೋರಿûಾಗಳು ಕೂಡ ಸಾರಿಗೆ ನಿಯಮವನ್ನು ಉಲ್ಲಂ  ಸುತ್ತಿವೆ. ಕರ್ಕಷವಾದ ಸೌಂಡ್‌ ಸಿಸ್ಟಮ್‌ಗಳನ್ನು ಅಳವಡಿಸಿಕೊಂಡು ರಸ್ತೆಯುದ್ದಕ್ಕೂ ಶಬ್ದ ಮಾಲಿನ್ಯವನ್ನು ಮಾಡುತ್ತಿರುವುದಲ್ಲದೆ, ಶಾಲೆಗಳ ಆವರಣದಲ್ಲಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೂ ಕಷ್ಟವಾಗುತ್ತಿದೆ. ಕೆಲವು ಚಾಲಕರು ಧೂಮಪಾನ ಮಾಡಿಕೊಂಡು ಹಾಗೂ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಆಟೋರಿûಾಗಳನ್ನು ಚಲಾಯಿಸುವ ಮೂಲಕ ಅಪಾಯವನ್ನು ತಂದೊಡ್ಡುತ್ತಿದ್ದಾರೆ ಎಂದು ಹರೀಶ್‌ ಆಚಾರ್ಯ ಆರೋಪಿಸಿದರು. ಈ ಬಗ್ಗೆ ಸಾರಿಗೆ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಚೆಸ್ಕಾಂ ದುಬಾರಿ ಬಿಲ್‌ 
ಚೆಸ್ಕಾಂ ಇಲಾಖೆಯಲ್ಲಿ ಸಾಕಷ್ಟು ನ್ಯೂನತೆಗಳಿದ್ದು, ಮಾಸಿಕ ಬಿಲ್‌ ನೀಡುವ ಸಂದರ್ಭ ಗುತ್ತಿಗೆ ಆಧಾರದ ಬಿಲ್‌ಕಲೆಕ್ಟರ್‌ಗಳು ತಮಗಿಷ್ಟ ಬಂದಷ್ಟು ದರದ ಬಿಲ್‌ನ್ನು ನೀಡಿ ತೆರಳುತ್ತಿದ್ದಾರೆ. ಇದು ಗ್ರಾಹಕರಿಗೆ ಹೊರೆಯಾಗುತ್ತಿದೆ. ಮೀಟರ್‌ ರೀಡಿಂಗ್‌ನ್ನು ಸರಿಯಾಗಿ ನಮೂದಿಸದೆ ದುಬಾರಿ ಬಿಲ್‌ ನೀಡುವ ಮೂಲಕ ಗ್ರಾಹಕರಿಗೆ ಶಾಕ್‌ ನೀಡುತ್ತಿದ್ದಾರೆ. ಏನೂ ತಿಳಿಯದ ಗ್ರಾಹಕರು ಎರಡು-ಮೂರು ಪಟ್ಟು ಹೆಚ್ಚಿಗೆ ದರ ನೀಡಿ ಮೋಸ ಹೋಗುತ್ತಿದ್ದಾರೆ ಎಂದು ಆರೋಪಿಸಿದರು. ಇಲಾಖೆ ಸೂಕ್ತ ಕ್ರಮ ಕೈಗೊಂಡು ಚೆಸ್ಕಾಂ ನ ಖಾಯಂ ನೌಕರರ ಮೂಲಕ ಬಿಲ್‌ ನೀಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಅರಣ್ಯದಲ್ಲಿ ಆಹಾರದ ಕೊರತೆ 
ಕೊಡಗಿನಲ್ಲಿರುವ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳಿಗೆ ಆಹಾರದ ಕೊರತೆ ಉಂಟಾಗಿದ್ದು, ಅರಣ್ಯ ಇಲಾಖೆ ತಪ್ಪು ಹೆಜ್ಜೆಗಳನ್ನು ಇಡುವ ಮೂಲಕ ಕಾಡು ಪ್ರಾಣಿಗಳು ನಾಡಿಗೆ ಬರುವಂತೆ ಮಾಡುತ್ತಿದೆ. ತನ್ನ ಜವಾಬ್ದಾರಿಯನ್ನು ಅರಿಯದ ಇಲಾಖೆ ಪ್ರಾಣಿಗಳಿಗೆ ಕುಡಿಯುವ ನೀರು ಹಾಗೂ ಆಹಾರದ ಕೊರತೆಯನ್ನು ಸೃಷ್ಟಿಸಿದೆ. ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಅರಣ್ಯ ಇಲಾಖೆಗೆ ಕೋಟಿ-ಕೋಟಿ ಅನುದಾನ ಬಿಡುಗಡೆಯಾಗುತ್ತಿದ್ದರೂ ಅಧಿಕಾರಿಗಳ ಬಂಗ್ಲೆ ಐಶಾರಾಮಿಯಾ ಗುತ್ತಿದೆಯೇ ಹೊರತು ಅರಣ್ಯ ಹಾಗೂ ಅರಣ್ಯ ಜೀವಿಗಳ ಸಂರಕ್ಷಣೆಯಾಗುತ್ತಿಲ್ಲ ಎಂದರು.

ಪರಿಸರದ ಸಮತೋಲನಕ್ಕೆ ಅರಣ್ಯ ಹೇಗೆ ಮುಖ್ಯವೋ ಹಾಗೆ ವನ್ಯಜೀವಿಗಳು ಕೂಡ ಮುಖ್ಯ. ಈ ನಿಟ್ಟಿನಲ್ಲಿ ಪ್ರಾಣಿಗಳ ಆಹಾರಕ್ಕೆ ಪೂರಕವಾದ ಗಿಡ ಮರಗಳನ್ನು ಬೆಳೆಸಲು ಯೋಜನೆಯೊಂದನ್ನು ರೂಪಿಸುವ ಮೂಲಕ ಸರಕಾರ ವಿಶೇಷ ಅನುದಾನ ನೀಡಬೇಕೆಂದು ಹರೀಶ್‌ ಆಚಾರ್ಯ ಒತ್ತಾಯಿಸಿದರು. 

ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯನ್ನು ಹಾಗೂ ಜಿಲ್ಲೆಯ ಜನರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು ಕೊಡಗಿನ ಬಗ್ಗೆ ಸರಕಾರ ಅಸಡ್ಡೆ ತೋರಬಾರದೆಂದರು. ಯಾವುದೇ ಚುನಾವಣೆಗಳ ಸಂದರ್ಭ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದ್ದು, ಅಧಿಕಾರಕ್ಕೆ ಬಂದ ಆಡಳಿತ ವ್ಯವಸ್ಥೆ ಕೂಡ ಲಂಚಾವತಾರದಲ್ಲಿ ತೊಡಗುತ್ತಿವೆ ಎಂದು ಟೀಕಿಸಿದ ಅವರು ಭ್ರಷ್ಟ ಮತ್ತು ಲಂಚ ಮುಕ್ತ ವ್ಯವಸ್ಥೆಯ ಸೃಷ್ಟಿಗಾಗಿ ಮುಂದಿನ ದಿನಗಳಲ್ಲಿ ವೀರನಾಡು ರಕ್ಷಣಾ ವೇದಿಕೆಯನ್ನು ರಚಿಸಿ ಪ್ರತೀ ಚುನಾವಣೆಯಲ್ಲಿ ವೀರವೇ ಮೂಲಕ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹರೀಶ್‌ ಆಚಾರ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಕೋಳಿಬೈಲು ಜಯರಾಂ, ಬಷೀರ್‌ ಹಾಗೂ ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಗಣೇಶ್‌ ರೈ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next