Advertisement

ಯುವಶಕ್ತಿ ಭಾರತದ ದೊಡ್ಡಶಕ್ತಿ; ಡಾ|ಅಜಿತ ಪ್ರಸಾದ

05:48 PM Feb 23, 2023 | Team Udayavani |

ಧಾರವಾಡ: ಭಾರತದ ದೊಡ್ಡ ಶಕ್ತಿಯೇ ಯುವ ಶಕ್ತಿಯಾಗಿದ್ದು, ಇದರ ಸದ್ಬಳಕೆ ಆಗಬೇಕಾದರೆ ಯುವಕರಲ್ಲಿ ದೇಶ ಪ್ರೇಮ ಜಾಗೃತಿ, ದೇಶದ ಬಗ್ಗೆ ಗೌರವ ಮೂಡಿಸುವ ಕಾರ್ಯ ಆಗಬೇಕಿದೆ ಎಂದು ಜೆಎಸ್‌ಎಸ್‌ನ ಕಾರ್ಯದರ್ಶಿ ಡಾ|ಅಜಿತ ಪ್ರಸಾದ ಹೇಳಿದರು.

Advertisement

ಜೆಎಸ್‌ಎಸ್‌ ಕೆಹೆಚ್‌ಕೆ ಕಬ್ಬೂರ ತಾಂತ್ರಿಕ ಮಹಾವಿದ್ಯಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಸಹಯೋಗದಲ್ಲಿ ನಗರದ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿ  ಆವರಣದಲ್ಲಿ ಹಮ್ಮಿಕೊಂಡ ಎನ್ನೆಸ್ಸೆಸ್‌ನ ರಾಷ್ಟ್ರೀಯ ಭಾವೈಕ್ಯತಾ ಶಿಬಿರ-2023 ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ದೇಶ ರಾಷ್ಟ್ರೀಯ ಭಾವೈಕ್ಯತೆಗೆ ಅತ್ಯುತ್ತಮ ಉದಾಹರಣೆ. ಹಲವಾರು ಭಾಷೆ, ಆಚರಣೆ, ಆಹಾರ, ವೈವಿಧ್ಯತೆಯ ಮಧ್ಯೆಯೂ ನಾವು ಭಾರತೀಯರು ಎಂಬುದು ನಮ್ಮ ಭಾವೈಕ್ಯತೆಗೆ ಸಾಕ್ಷಿಯಾಗಿದೆ ಎಂದರು. ಭಾರತ ಒಂದು ಬಲಿಷ್ಠ ರಾಷ್ಟ್ರವಾಗಿ ಹೊರ ಹೊಮ್ಮಬೇಕು. ಈ ನಿಟ್ಟಿನಲ್ಲಿ ಇಂತಹ ಶಿಬಿರಗಳು ಅತ್ಯವಶ್ಯ. ಇಂದಿನ ಯುವಕರಲ್ಲಿ ಸ್ವಾತಂತ್ರ್ಯ ಹೋರಾಟದ ಚಿತ್ರಣ, ಸೈನಿಕರ ಬಲಿದಾನ, ರೈತರ ಕಷ್ಟ-ಕಾರ್ಪಣ್ಯಗಳ ಬಗ್ಗೆ ಮಾಹಿತಿ ದೊರೆಯಬೇಕು ಎಂದರು.

ಎನ್‌ಎಸ್‌ಎಸ್‌ ಪ್ರಾದೇಶಿಕ ನಿರ್ದೇಶಕ ಕೆ.ವಿ.ಖಾದ್ರಿ ನರಸಿಂಹಯ್ಯ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ 1969ರಲ್ಲಿ ಮಹಾತ್ಮ ಗಾಂಧೀಜಿ ಅವರ 100ನೇ ಜನ್ಮದಿನಾಚರಣೆ ಅಂಗವಾಗಿ ಯುವಕರಲ್ಲಿ ಸಾಮಾಜಿಕ ವ್ಯಕ್ತಿತ್ವ ವಿಕಸನವಾಗಲಿ ಎಂಬ ಸದುದ್ದೇಶದಿಂದ ಆರಂಭಿಸಲಾಯಿತು. ಜಾತಿ, ಮತ, ಪಂಥಗಳ ಭೇದವಿಲ್ಲದೆ ಸಾಮಾಜಿಕ ಕಾರ್ಯಗಳನ್ನು ಮಾಡುವ ಯುವ ಸಮುದಾಯದ ಗುಂಪೇ ಈ ಎನ್‌ಎಸ್‌ಎಸ್‌ ಎಂದರು.

ಕರ್ನಲ್‌ ವಿವೇಕ್‌ ಅಳಗವಾಡಿ ಮಾತನಾಡಿ, ನಾನು ಕನ್ನಡಿಗ, ತಮಿಳಿಗ, ಮರಾಠಿಗ ಎನ್ನುವ ಬದಲು ನಾನು ಭಾರತೀಯ ಎಂಬುದಾಗಿ ಹೆಮ್ಮೆಯಿಂದ ಹೇಳಿ. ರಾಷ್ಟ್ರೀಯ ಭಾವೈಕ್ಯತೆಗೆ ಅತ್ಯುತ್ತಮ ಉದಾಹರಣೆ ಎಂದರೆ ಭಾರತೀಯ ಸೇನೆ ಎಂದರು.

Advertisement

ಪ್ರಗತಿಪರ ರೈತ ಮಹಿಳೆ ದಾಕ್ಷಾಯಿಣಿ ರಾಮನಗೌಡ ಮಾತನಾಡಿ, ರೈತನಿಗೆ ಯಾವುದೇ ಜಾತಿ, ಭಾಷೆ, ಪಂಗಡಗಳಿಲ್ಲ. ಆತ ಬೆಳೆದ ಬೆಳೆಯ ಮೇಲೆ ಯಾವುದೇ ಧರ್ಮದ ಲೇಪನವಿರಲ್ಲ. ದೇಶ ಕಾಯುವ ಸೈನಿಕ, ಅನ್ನ ನೀಡುವ ರೈತನನ್ನು ಪೂಜ್ಯನೀಯ ಸ್ಥಾನದಲ್ಲಿ ನೋಡಬೇಕು ಎಂದರು. ಡಾ|ಗುರುಪ್ರಸಾದ ಹೂಗಾರ, ಡಾ|ಎಮ್‌.ಬಿ ದಳಪತಿ ಪ್ರಾಸ್ತಾವಿಕ ಮಾತನಾಡಿದರು. ವಸಂತ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಸೂರಜ್‌ ಜೈನ, ಮಹಾವೀರ ಉಪಾದ್ಯೆ, ವಿ.ಕೆ. ಭರಣಿ ಇದ್ದರು. ಈರಪ್ಪ ಪತ್ತಾರ್‌ ಸ್ವಾಗತಿಸಿದರು, ವಸಂತ್‌ ಐಹೊಳಿ ವಂದಿಸಿದರು.

ಇದಕ್ಕೂ ಮುನ್ನ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಪಾರಂಪರಿಕ ಉಡುಗೆಗಳೊಂದಿಗೆ ಮೆರವಣಿಗೆಯಲ್ಲಿ ತೆರಳಿದ್ದು ಆಕರ್ಷಕವಾಗಿತ್ತು. ದಕ್ಷಿಣ ಭಾರತದ 05 ರಾಜ್ಯಗಳಿಂದ 150 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next