Advertisement

ಸಂವಿಧಾನದ ಆಶಯಗಳಿಗೆ ಯುವಜನತೆ ಬದ್ಧರಾಗಿರಿ : ಡಾ|ನವೀನ್‌

09:41 PM Jan 27, 2020 | Sriram |

ಮಡಿಕೇರಿ :ನಗರದ ಫೀಲ್ಡ್‌ ಮಾರ್ಷಲ್‌ ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.ಪ್ರಜಾಸತ್ಯ ದಿನಪತ್ರಿಕೆಯ ಸಂಪಾದಕ ಡಾ.ನವೀನ್‌ ಧ್ವಜಾರೋಹಣ ನೆರವೇರಿಸಿ ಮುಖ್ಯ ಭಾಷಣಗಾರರಾಗಿ ಮಾತನಾಡಿ, ದೇಶದ ಭವಿಷ್ಯವಾಗಿರುವ ಯುವಜನತೆ ಸಂವಿಧಾನ ಆಶಯಗಳಿಗೆ ಬದ್ಧರಾಗಿರಬೇಕೆಂದು ಕರೆ ನೀಡಿದರು.

Advertisement

ಸಂವಿಧಾನವೆಂಬುದು ಭಾರತೀಯ ವ್ಯವಸ್ಥೆಯ ದಿಕ್ಸೂಚಿಯಾಗಿದೆ. ಜೀವಂತ ದಾಖಲೆಯಾಗಿ ಉಳಿದಿದೆ. ವಾಕ್‌ ಸ್ವಾತಂತ್ರ್ಯ, ಸಮಾನತೆ, ಹಕ್ಕುಗಳನ್ನು ಸಂವಿಧಾನ ನೀಡಿದ್ದು ಅದನ್ನು ಬಳಸಿಕೊಳ್ಳಬೇಕು. ಸರ್ಕಾರದ ಜವಾಬ್ದಾರಿ, ಪ್ರಜೆಗಳ ಹಕ್ಕಿನ ಬಗ್ಗೆ ಸಂವಿದಾನದಲ್ಲಿ ಉಲ್ಲೇಖೀಸಲಾಗಿದೆ. ಪ್ರಸ್ತುತ ಪ್ರಜೆಗಳು ಜವಾಬ್ದಾರಿ, ಹಕ್ಕನ್ನು ಮರೆಯುತ್ತಿದ್ದೇವೆ ಎಂದು ವಿಷಾದಿಸಿದರು.

ಡಾ.ಬಿ.ಆರ್‌ ಅಂಬೇಡ್ಕರ್‌ ಅವರು, ತಮ್ಮ ಅರ್ಹತೆ ಮತ್ತು ಪರಿಶ್ರಮದಿಂದ ಸಂವಿಧಾನ ರಚಿಸಿ ಪ್ರಪಂಚಕ್ಕೆ ಮಾದರಿಯಾಗಿದ್ದಾರೆ. ಇಂತಹ ವ್ಯಕ್ತಿ ಭಾರತದಲ್ಲಿ ಜನಿಸಿದ್ದು ಪುಣ್ಯ ಸಂವಿಧಾನ ಎಷ್ಟೆ ಉತ್ತಮವಾಗಿದ್ದರು ಅನುಷ್ಠಾನಗೊಳಿಸುವ ವ್ಯಕ್ತಿ ಮತ್ತು ಪಕ್ಷಗಳಿಂದ ಮಾತ್ರ ಪ್ರಜಾಪ್ರಭುತ್ವದ ಉಳಿವು ಸಾಧ್ಯ ಎಂದು ಹೇಳಿರುವ ಅಂಬೇಡ್ಕರ್‌ ಅವರ ಮಾತ್ರ ನಿಜಕ್ಕೂ ಸತ್ಯ.

ಪ್ರಜಾಪ್ರಭುತ್ವ ಉಳಿಯಬೇಕಾದರೆ ರಾಜಕೀಯ ಹಕ್ಕುಗಳ ಮೂಲಕ ಸಾಮಾಜಿಕ, ಆರ್ಥಿಕ ಬದಲಾವಣೆ ತರಬಹುದು. ಹಿಂಸೆೆ ಪ್ರತಿಪಾದಿಸುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ವ್ಯಕ್ತಿಪೂಜೆಗೆ ಸಂವಿದಾನ ಸೀಮಿತಗೊಂಡರೆ ಪ್ರಜಾಪ್ರಭುತ್ವ ಮಾಯವಾಗಿ ಸರ್ವಾಧಿಕಾರ ಬರುತ್ತದೆ. ರಾಜಕೀಯ ವ್ಯವಸ್ಥೆಯಿಂದ ಮಾತ್ರ ಆರ್ಥಿಕ, ಸಾಮಾಜಿಕ ಬದಲಾವಣೆ ಸಾಧ್ಯ ಎಂದರು.

ಸಂವಿದಾನ ಕರಡು ಸಮಿತಿಯಲ್ಲಿ ಡಾ.ಬಿ.ಆರ್‌ ಅಂಬೇಡ್ಕರ್‌ ಅವರಿಗೆ ನೇತೃತ್ವ ನೀಡುವ ಮೂಲಕ ಪ್ರತಿಬೆ, ಪರಿಶ್ರಮಕ್ಕೆ ಮನ್ನಣೆ ನೀಡಲಾಗಿದೆ.

Advertisement

2 ವರ್ಷ, 11 ತಿಂಗಳು 18 ದಿನಗಳ ಕಾಲ ಸಂವಿದಾನ ರಚನೆಗೆ ಸಮಯ ಮೀಸಲಿಡಲಾಗಿತ್ತು. 11 ಕಲಾಪ, 165 ದಿನಗಳ ಕಾಲ ನಡೆಯಿತು. 7635 ವಿಚಾರಗಳು ಚರ್ಚೆಗೊಂದು 2470 ವಿಷಯಗಳು ಅಂತಿಮಗೊಂಡು ಕಾಯ್ದೆಯಾಯಿತು.

ಇಂಗ್ಲೆಂಡ್‌ನಿಂದ ಸಂಸದೀಯ ವ್ಯವಹಾರ, ಅಮೇರಿಕದಿಂದ ಮೂಲಭೂತ ಹಕ್ಕು, ನ್ಯಾಯಾಂಗ ವ್ಯವಸ್ಥೆ, ಕೆನಡಾದಿಂದ ಒಕ್ಕೂಟದ ವ್ಯವಸ್ಥೆಯ ಬಗ್ಗೆ ಸಂವಿದಾನದಲ್ಲಿ ಬಳಸಿಕೊಳ್ಳಲಾಗಿದೆ. 300 ಸದಸ್ಯರನ್ನು ಒಳಗೊಂಡ ಸಮಿತಿ ಸಂವಿದಾನ ರಚಿಸಿತು. ಅದರಲ್ಲಿ 30 ಪರಿಶಿಷ್ಟ ಜಾತಿ, ಪಂಗಡ, 9 ಮಹಿಳೆಯರು ಇದ್ದರು. ಶಿಕ್ಷಿತರಿಗೆ ಮಾತ್ರ ಮತದಾನ ಹಕ್ಕು ಎಂದು ಚರ್ಚೆಯಾದರು ನಂತರ ಎಲ್ಲಾರಿಗೂ ಮತದಾನ ಹಕ್ಕು ನೀಡಿ ಸಮಾನತೆ ಪ್ರತಿಪಾದಿಸಿತು.

ಅಮೇರಿಕಾದಲ್ಲಿ 80 ವರ್ಷದ ನಂತರ ಕರಿಯರಿಗೆ, 133 ವರ್ಷದ ನಂತರ ಮಹಿಳೆಯರಿಗೆ ಮತದಾನ ಹಕ್ಕು ನೀಡಿತು. ಭಾರತದಲ್ಲಿ ಸಂವಿದಾನ ಅಂಗೀಕರಗೊಂಡ ನಂತರವೇ ಮತದಾನ ಹಕ್ಕು ದೊರಕಿತು ಎಂದು ಮಾಹಿತಿ ನಿಡಿದರು.
ಭಾರತ ದೇಶ ಸಮಾಜವಾದಿ, ಜಾತ್ಯತೀತ, ಪ್ರಜಾಪ್ರಭುತ್ವ, ಗಣತಂತ್ರ ವ್ಯವಸ್ಥೆಯಲ್ಲಿ ನಿಂತಿದ್ದು ಇದರ ಉಳಿವಿಗೆ ನಾವು ಕೈಜೋಡಿಬೇಕು ಎಂದರು.

ಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಜಗತ್‌ ತಿಮ್ಮಯ್ಯ, ನಮ್ಮ ದೇಶದ ಸಂವಿಧಾನ ಪುಸ್ತಕಕ್ಕೆ ಮಾತ್ರ ಸೀಮಿತವಾಗಬಾರದು, ಬದಲಾಗಿ ಅದು ಸಮರ್ಪಕವಾಗಿ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು ಎಂದರು. ಸಂವಿಧಾನ ಕೊಟ್ಟಿರುವ ಮತದಾನದ ಹಕ್ಕನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸಮಾಜದಲ್ಲಿ ಸಮಾನತೆ, ಸ್ವಾತಂತ್ರ್ಯವನ್ನು ಗಟ್ಟಿಗೊಳಿಸಿ ಬಲಿಷ್ಠ ರಾಷ್ಟ್ರವನ್ನು ಕಟ್ಟಬೇಕೆಂದು ಕರೆ ನೀಡಿದ ಅವರು, ಗಣರಾಜ್ಯೋತ್ಸವ ಆಚರಣೆ ದೇಶದ ಸಂಸ್ಕೃತಿ, ತ್ಯಾಗ, ಶಕ್ತಿಯನ್ನು ಬಿಂಬಿಸುವ ಸಂಕೇತವಾಗಿದೆ ಎಂದು ಅವರು ತಿಳಿಸಿದರು.

ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ.ಇ.ತಿಪ್ಪೇಸ್ವಾಮಿ, ಪದವಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ರೇಣುಶ್ರೀ, ಇಂಗ್ಲೀಷ್‌ ಪ್ರಾದ್ಯಾಪಕರಾದ ಅಲೋಕ್‌ ಬಿಜೈ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದಶ್ರೀ ರವಿಶಂಕರ್‌, ಬೋಧಕ ಬೋಧಕೇತರ ಸಿಬಂದಿ ಎನ್‌.ಸಿ.ಸಿ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next