Advertisement

ವರ್ಷ ಪೂರ್ತಿ ಇವರಿಗೆ ಇಳೆ ನೀರೇ

02:33 PM Oct 14, 2017 | |

ಬೆಳಗ್ಗೆ ನಲ್ಲಿಯಲ್ಲಿ ನೀರು ಬರಲಿಲ್ಲ ಅಂದರೆ ರಾತ್ರಿ ಪೂರ್ತಿ ನಿದ್ದೆ ಬರುವುದಿಲ್ಲ. ಏನಾಯ್ತು? ಏನು ಮಾಡೋದು ಅಂತೆ ಚಿಂತೆ ಮಾಡೋದು, ಕಂಪ್ಲೇಂಟು ಕೊಟ್ಟು ಒದ್ದಾಡೋದೇ ಹೆಚ್ಚು. ಆದರೆ ಇಲ್ಲಿ ನೋಡಿ.  ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕುದರಿಸಾಲವಾಡಗಿ ಗ್ರಾಮದ ಈ ಅಣ್ಣಾಸಾಹೇಬರು  ಮಾಳಿಗೆಯ ನೀರನ್ನೇ ವರ್ಷಪೂರ್ತಿ ಕುಡಿಯಲು ಹಾಗೂ ಅಡುಗೆಗೆ ಬಳಸುತ್ತಿದ್ದಾರೆ.  

Advertisement

ಯಾವತ್ತೂ, ಅಯ್ಯೋ ನೀರಿಲ್ಲಪ್ಪಾ ಅಂತ ಹೇಳಿದ್ದೇ ಇಲ್ಲ.  ಅವರ ತೋಟದಲ್ಲಿನ ಬಾವಿ ಹಾಗೂ ಕೊಳವೆ ಬಾವಿ ನೀರು ಕುಡಿಯಲು ಯೋಗ್ಯವಾಗಿಲ್ಲ. ಇದರಿಂದಾಗಿ ಅವರ ಕುಟುಂಬದವರು ಊರಿನ ನಳದಲ್ಲಿ ನೀರು ಹಿಡಿಯಬೇಕಿತ್ತು. ಮಳೆ ಕೊಯ್ಲಿನ ಬಗ್ಗೆ ತಿಳಿದಿದ್ದ ಅಣ್ಣಾ ಸಾಹೇಬರು ಕೊನೆಗೆ ಛಾವಣಿ ನೀರಿಗೆ ಬೊಗಸೆ ಒಡ್ಡಿದರು. 

ಅವರು ಮಾಡಿದ್ದೇನು?
ನೆಲದಲ್ಲಿ 12 ಅಡಿ ಉದ್ದ, 12 ಅಡಿ ಅಗಲ, 12 ಅಡಿ ಆಳದ ಟ್ಯಾಂಕ್‌ ನಿರ್ಮಿಸಿದರು. ಮನೆಯ ಮಾಳಿಗೆ ಮೇಲೆ ಬೀಳುವ ಮಳೆ ನೀರು ಫಿಲ್ಟರ್‌ ಆಗಿ ಟ್ಯಾಂಕ್‌ಗೆ ಬೀಳುವಂತೆ ಪೈಪ್‌ ಅಳವಡಿಸಿದರು.  ಇದಕ್ಕೆಲ್ಲ ಸುಮಾರು 1 ಲಕ್ಷ ರೂ ಖರ್ಚಾಗಿದೆ. ಮಳೆಗಾಲ ಆರಂಭವಾಗುವ ಮುನ್ನ ಮನೆಯ ಮಾಳಿಗೆಯನ್ನು ಸ್ವಚ್ಚಗೊಳಿಸುತ್ತಾರೆ. ಮೊದಲ ಮಳೆಯ ನೀರನ್ನು ಟ್ಯಾಂಕಿಗೆ ಬಿಡುವುದಿಲ್ಲ.

ನಂತರ ಬರುವ ಮಳೆಯ ನೀರು ಟ್ಯಾಂಕ್‌ಗೆ ಹೋಗುವ ಮುನ್ನ ಶುದ್ಧಿಕರಣದ ಬ್ಯಾರಲ್‌ ಮೂಲಕ ಹೋಗುತ್ತದೆ. ಈ ಬ್ಯಾರಲ್‌ನಲ್ಲಿ ಇದ್ದಿಲು, ಜಲ್ಲಿ ಕಲ್ಲು, ಮರಳು ಹಾಕಿರುವುದರಿಂದ ನೀರು ಸ್ವಚ್ಚಗೊಳ್ಳುತ್ತದೆ. ಕುಡಿಯಲು ತೊಂದರೆ ಇಲ್ಲ.  ಇದೇ ನೀರನ್ನು ಪ್ರತಿದಿನ ಕುಡಿಯಲು ಹಾಗೂ ಅಡುಗೆ ಮಾಡಲು ಬಳಕೆ ಮಾಡುತ್ತಿದ್ದಾರೆ. ಅಲ್ಲದೇ ಅಕ್ಕಪಕ್ಕದ ತೋಟಗಳಿಗೆ ಕೆಲಸಕ್ಕೆ ಬರುವವರು ಇವರ ಮನೆಯ ಸಿಹಿ ಮಳೆನೀರು ಕುಡಿದು ಹೋಗುತ್ತಾರೆ.

ಹೀಗಾಗಿ ಬೇಸಿಗೆ ಕಾಲದಲ್ಲೂ ನೀರಿನ ಕೊರತೆ ಉಂಟಾಗುವುದಿಲ್ಲ ಎನ್ನುತ್ತಾರೆ ಅಣ್ಣಾಸಾಹೇಬರು. ಮಳೆಗಾಲಕ್ಕೆ ಮುನ್ನ ಟ್ಯಾಂಕ್‌ ಸ್ವತ್ಛಗೊಳಿಸಿ, ಬ್ಯಾರಲ್‌ನಲ್ಲಿನ ಇದ್ದಿಲು, ಜಲ್ಲಿಕಲ್ಲು, ಮರಳನ್ನು ಪ್ರತಿವರ್ಷ ಬದಲಾಯಿಸಲಾಗುತ್ತದೆ. ಮಳೆ ಕೊಯ್ಲು ಮಾಡುವ ಆರಂಭದಲ್ಲಿ ಒಂದಷ್ಟು ಖರ್ಚು ಮಾಡಿದ್ದನ್ನು ಬಿಟ್ಟರೆ ನಂತರದಲ್ಲಿ ಯಾವುದೇ ರೀತಿಯ ಖರ್ಚು ಇಲ್ಲ.

Advertisement

ಟ್ಯಾಂಕ್‌ ನಲ್ಲಿನ ನೀರನ್ನು ಮನೆಗೆ ಬಳಸಿಕೊಳ್ಳಲು ವಿದ್ಯುತ್‌ ಸಂಪರ್ಕದ ಮೊರೆ ಹೋಗದೇ ಕೈ ಪಂಪ್‌ ಅಳವಡಿಸಿ ನೀರು ತೆಗೆದುಕೊಳ್ಳುತ್ತಾರೆ.  ಮಳೆ ಕೊಯ್ಲು ಪದ್ದತಿ ಅಳವಡಿಸುವ ಮುನ್ನ ಕುಡಿಯಲು ಹಾಗೂ ಅಡುಗೆ ನೀರಿಗಾಗಿ ಪರಿತಪಿಸ ಬೇಕಾಗಿತ್ತು. ತೋಟದ ಕೊಳವೆ ಬಾವಿ ನೀರಿನಿಂದ ಬೇಳೆ ಬೇಯುತ್ತಿರಲಿಲ್ಲ. ಮಳೆ ನೀರು ಸಂಗ್ರಹದಿಂದಾಗಿ ಕುಡಿಯುವ ನೀರಿನ ತೊಂದರೆ ಶಾಶ್ವತವಾಗಿ ನಿವಾರಣೆಯಾಗಿದೆ ಅನ್ನುತ್ತಾರೆ ಅಣ್ಣಾಸಾಹೇಬ. 

ಕೆರೆ ನಿರ್ಮಾಣ
ಆಣ್ಣಾಸಾಹೇಬ ತಮ್ಮ ತೋಟದಲ್ಲಿಯೇ ಕಳೆದ ನಾಲ್ಕು ವರ್ಷಗಳ ಹಿಂದೆ 11 ಲಕ್ಷ ರೂ.ಗಳನ್ನು ಖರ್ಚು ಮಾಡಿ,  ನೀರು ಸಂಗ್ರಹಕ್ಕಾಗಿ 140-140 ವಿಸ್ತೀರ್ಣದ 21 ಅಡಿ ಆಳದ ಕೆರೆಯನ್ನು ನಿರ್ಮಿಸಿದ್ದಾರೆ.  ಮುಂಗಾರಿನ ಒಂದೇ ಮಳೆಗೆ ಈ ಹೊಂಡ ತುಂಬುತ್ತದೆ. ಒಮ್ಮೆ ತುಂಬಿದರೆ ಆರು ತಿಂಗಳುಗಳ ಕಾಲ  ಬೆಳೆಗಳಿಗೆ ನೀರು ಹಾಯಿಸುತ್ತಾರೆ. ಈ ಕೆರೆಯಿಂದಾಗಿಯೇ ತೋಟದಲ್ಲಿರುವ ಬಾವಿಗೆ ಅಂತರ್ಜಲ ಮಟ್ಟ ಹೆಚ್ಚಿದೆಯಂತೆ. ಇವರ ತೋಟದ ಬೋರವೆಲ್‌ಗೆ ಇಂಗು ಹುಂಡಿ ನಿರ್ಮಿಸಿದ್ದಾರೆ.

ಅಂತರ್ಜಲಮಟ್ಟವನ್ನು ಮೇಲೆ ತರಲು ನೀರಿರುವ ಬೋರ್‌ನ ಸುತ್ತ 12 ಅಡಿ ಸುತ್ತಳತೆಯಾಗಿ ಹತ್ತು ಹತ್ತು ಅಡಿ ಆಳವಾಗಿ ಗುಂಡಿ ತೆಗೆದು, ಕೇಸಿಂಗ್‌ ಪೈಪ್‌ನ ಸುತ್ತ ಗುಂಡಿಯ ತಳದಿಂದ ಮುಕ್ಕಾಲು ಅಡಿಯಷ್ಟು ಬಿಟ್ಟು ರಂಧ್ರಗಳನ್ನು ಕೊರೆದಿದ್ದಾರೆ. ಗ್ರಾಮದಿಂದ ಸುಮಾರು ಒಂದೂವರೆ ಕಿಮೀ ದೂರದಿಂದ ನೀರು ಬಂದು ಇಲ್ಲಿಗೆ ಸೇರುವಂತೆ ಮಾಡಿದ್ದಾರೆ. ಇದಕ್ಕೆ 25 ಸಾವಿರ ರೂ. ಖರ್ಚಾಗಿದೆ. ಇದರಿಂದ ನೀರ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡಿದ್ದಾ ಸಾಹೇಬರು.

* ಗುರುರಾಜ.ಬ.ಕನ್ನೂರ.
-ಹೆಚ್ಚಿನ ಮಾಹಿತಿಗೆ: 9880855844, 9591200091.

Advertisement

Udayavani is now on Telegram. Click here to join our channel and stay updated with the latest news.

Next