Advertisement

Psychosis Recovery: ವ್ಯಕ್ತಿಯ ಮನೋರೋಗ ಚೇತರಿಕೆಯಲ್ಲಿ ನಮ್ಮ ನಿಮ್ಮ ಮತ್ತು ಸಮಾಜದ ಪಾತ್ರ ‌

03:47 PM Apr 06, 2024 | Team Udayavani |

ಮನೋರೋಗ ಮತ್ತು ಸಮಾಜದ ಪಾತ್ರದ ಬಗೆಗಿನ ಸಂಬಂಧದ ಬಗ್ಗೆ ಅರಿಯಬೇಕಾದರೆ ಬೆಲ್ಜಿಯಂ ದೇಶದಲ್ಲಿನ ಒಂದು ಪುಟ್ಟ ಊರಿನ ಬಗ್ಗೆ ತಿಳಿಯಲೇಬೇಕು. ಜಗತಿನಾದ್ಯಂತ ಮನೋಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯನ್ನು ಅಥವಾ ಅವರ ಕುಟುಂಬಸ್ಥರನ್ನು ಸಮಾಜವು ಅಗೌರವ ಅಥವಾ ತಾತ್ಸಾರ ಮನೋಭಾವದಿಂದ ನೋಡಿದರೆ, ಬೆಲ್ಜಿಯಂ ದೇಶದ ಗೀಲ್‌ ಎಂಬ ಊರಿನಲ್ಲಿ ಮಾನಸಿಕ ಅಸಾಮರ್ಥ್ಯ ಅಥವಾ ಅನಾರೋಗ್ಯ ಹೊಂದಿರುವ ಜನರನ್ನು ವಿಶೇಷ ವ್ಯಕ್ತಿಗಳನ್ನಾಗಿ ನೋಡುತ್ತಾರೆ.

Advertisement

ಈ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳನ್ನು ಮಾನಸಿಕ ಅಸ್ವಸ್ಥರು ಅಥವಾ ಹುಚ್ಚರು ಎಂಬ ಯಾವುದೇ ಪದಗಳನ್ನು ಬಳಸದೆ ಅವರನ್ನು ವಿಶೇಷ ಜನರು ಅಥವಾ ಅತಿಥಿಗಳು ಎಂಬ ಭಾವನೆಯಿಂದ ನೋಡುತ್ತಾರೆ. ಇಲ್ಲಿ ಬರುವ ವಿಶೇಷ ವ್ಯಕ್ತಿಗಳನ್ನು ಅಲ್ಲಿನ ಕುಟುಂಬದ ಸದಸ್ಯ ಎಂದು ಪರಿಗಣಿಸಲಾಗುತ್ತದೆ ಮತ್ತು ಮಾನಸಿಕ ಅಸ್ವಸ್ಥ ಜನರಿಗೆ ಕಾಳಜಿ ನೀಡುವ ಈ ಸಂಪ್ರದಾಯವನ್ನು ಗೀಲ್‌ನ ಜನತೆ ಹಲವಾರು ಶತಮಾನಗಳಿಂದ ಯಾವುದೇ ಅಪೇಕ್ಷೆಯಿಲ್ಲದೆ ನಡೆಸಿಕೊಂಡು ಬರುತ್ತಿದ್ದಾರೆ.

ಕುಟುಂಬವು ಅವರನ್ನು ತಮ್ಮ ದಿನನಿತ್ಯದ ಕೆಲಸದಲ್ಲಿ ತೊಡಗಿಕೊಳ್ಳುವುದರ ಜತೆಗೆ ಸಮಾಜದಲ್ಲಿ ಬದುಕಲು ಬೇಕಾಗುವ ಕೌಶಲಗಳನ್ನು ಕಲಿಸಿಕೊಡುತ್ತದೆ. ಈ ಆತಿಥ್ಯಕ್ಕೆ ದಿನಗಳ ಗಡುವುಗಳಿಲ್ಲದೆ ವಿಶೇಷ ವ್ಯಕ್ತಿಯು ಜೀವನ ಪರ್ಯಂತ ಗೀಲ್‌ ಕುಟುಂಬಸ್ಥರ ಜತೆಗೂ ಇರಬಹುದು ಅಥವಾ ತಾನು ಸಮಾಜದಲ್ಲಿ ಇತರರಂತೆ ಬದುಕಬಹುದು ಎನ್ನುವ ಧೈರ್ಯ ಬಂದಲ್ಲಿ ಸ್ವತಂತ್ರವಾಗಿ ಬದುಕಬಹುದು. ಇಂದಿಗೂ ಗೀಲ್‌ನ ಈ ಸಂಪ್ರದಾಯ ಶ್ಲಾಘನೀಯ ಹಾಗೂ ಇತರರಿಗೆ ಮಾದರಿಯಾಗಿದೆ.

ತೀವ್ರ ತರಹದ ಮನೋಕಾಯಿಲೆಯ ಚೇತರಿಕೆಗೆ ಸಹಕಾರಿಯಾಗುವ ಅಂಶಗಳಾದ ಮನೋವೈದ್ಯರ ಸೂಕ್ತ ಸಲಹೆಗಳನ್ನು ಪಾಲನೆ ಮಾಡುವುದು, ಔಷಧಗಳ ಸೇವನೆಗಳ ಪಾಲನೆ, ವೃತ್ತಿಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಿಕೆ, ಕುಟುಂಬಸ್ಥರ ಬೆಂಬಲದ ಜತೆಗೆ ಮನೋಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗೆ ಸಮಾಜದ ಸಹಕಾರವು ದೊರೆತರೆ ಆ ವ್ಯಕ್ತಿಯು ಬೇಗನೆ ಮನೋರೋಗದಿಂದ ಗುಣಮುಖನಾಗಬಹುದು ಎನ್ನುವುದು ಮನೋ ಅಧ್ಯಯನಗಳ ಅಭಿಪ್ರಾಯ.

ಹಾಗಾದರೆ ಸಮಾಜವು ಯಾವ ರೀತಿಯಿಂದ ಸಹಕಾರಿಯಾಗಬಲ್ಲುದು?

Advertisement

ಮನೋರೋಗದ ನಿರ್ವಹಣೆಗೆ ಪರಿಣಾಮಕಾರಿಯಾದ ಅನೇಕ ಆಯಾಮಗಳ ಚಿಕಿತ್ಸಾ ಆಯ್ಕೆಗಳಿವೆ. ಇವುಗಳಲ್ಲಿ ಔಷಧ, ಮನೋಶಿಕ್ಷಣ, ಕೌಟುಂಬಿಕ ಸಮಾಲೋಚನೆ, ಮತ್ತು ಮನೋಸಾಮಾಜಿಕ ಪುನರ್ವಸತಿ (ಉದಾ., ಜೀವನ ಕೌಶಲ ತರಬೇತಿ, ವೃತ್ತಿಪರ ತರಬೇತಿ) ಸೇರಿವೆ. ಇವೆಲ್ಲವುಗಳ ಜತೆಗೆ ರೋಗಿಗೆ ಸೂಕ್ತವಾದ ಬೆಂಬಲ ಮತ್ತು ಪ್ರೋತ್ಸಾಹವು ಸಮಾಜದಿಂದ ದೊರೆತಲ್ಲಿ ಆತ ಬೇಗನೆ ಗುಣಮುಕ್ತನಾಗಬಹುದು. ಸಮುದಾಯ ಅಥವಾ ಸಮಾಜವು ಯಾವರೀತಿಯಾಗಿ ಪ್ರೋತ್ಸಾಹವನ್ನು ನೀಡಬಹುದು ಎಂಬುದನ್ನು ಕೆಳಗೆ ತಿಳಿಸಲಾಗಿದೆ.

ಸಹಾನುಭೂತಿ ಮತ್ತು ಅನುಕಂಪ

ಸಮಾಜವು ಮಾಡಬೇಕಾದ ಮುಖ್ಯ ಕಾರ್ಯವೆಂದರೆ ಮನೋವ್ಯಾಧಿಯಿಂದ ಬಳಲುತ್ತಿರುವ ವ್ಯಕ್ತಿಗಳ ಮೇಲೆ ಸಹಾನುಭೂತಿಯನ್ನು ತೋರಿಸುವುದು. ಕಾರಣ ಇಷ್ಟೇ, ಬೇರೆ ಕಾಯಿಲೆಗಳಿಗೆ ಹೋಲಿಸಿದರೆ ಮನೋಕಾಯಿಲೆ ಸಮಾಜದ ಅವಗಣನೆಗೆ ಮತ್ತು ನಾನಾ ತರಹದ ಅಪನಂಬಿಕೆಗಳುಳ್ಳ ಕಾಯಿಲೆಯಾಗಿದೆ.

ಸಾಮಾಜಿಕ ಸಂವಹನವನ್ನು ಉತ್ತೇಜಿಸುವುದು

ಮನೋರೋಗದ ಕಾರಣದಿಂದಾಗಿ ಬಳಲುತ್ತಿರುವ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಸಂವಹನಕ್ಕೆ ಸಂಬಂದಿಸಿದ ಸಮಸ್ಯೆಗಳು ಸಹಜ. ಅಲ್ಲದೆ ಅವರು ಏಕಾಂಗಿತನವನ್ನು ಬಯಸುತ್ತಾರೆ. ಹಾಗಾಗಿ ವ್ಯಕ್ತಿಯ ಸಾಮಾಜಿಕ ಸಂವಹನವನ್ನು ಉತ್ತೇಜಿಸುವಲ್ಲಿ ಆಪ್ತರು ಅಥವಾ ಇತರರು ಮುಖ್ಯ ಪಾತ್ರವನ್ನು ವಹಿಸುತ್ತಾರೆ.

ಭಾವನಾತ್ಮಕ ಬೆಂಬಲ (Emotional Support)

ಮನೋರೋಗದ ಪರಿಣಾಮ ಮತ್ತು ಸಮಾಜದ ನಕಾರಾತ್ಮಕ ಮನೋಭಾವನೆಯು ರೋಗಿಯ ಚೇತರಿಕೆಗೆ ತೀವ್ರವಾಗಿ ಅಡ್ಡಿಯನ್ನುಂಟುಮಾಡುತ್ತದೆ. ಮನೋರೋಗದಿಂದ ರೋಗಿಯು ಗುಣಮುಖನಾಗಲು ಇತರರ, ಮುಖ್ಯವಾಗಿ ಸಮಾಜದ ಭಾವನಾತ್ಮಕ ಬೆಂಬಲದ ಆವಶ್ಯಕತೆಯಿರುತ್ತದೆ.

ವ್ಯಕ್ತಿಯನ್ನು ತೊಡಗಿಸಿಕೊಳ್ಳುವಿಕೆ

ಗೀಲ್‌ ಕುಟುಂಬಸ್ಥರು ನಡೆದುಕೊಂಡು ಬರುವಂತೆ, ಸಮಾಜವು ಮನೋರೋಗದಿಂದ ಬಳಲುತ್ತಿರುವ ವ್ಯಕ್ತಿಗಳನ್ನು ಸಮಾಜದ ಧಾರ್ಮಿಕ ಅಥವಾ ಊರಿನ ಇನ್ನಿತರ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವುದರಿಂದ ಅವರ ಸಾಮಾಜಿಕ ಜೀವನಕ್ಕೆ ಸಹಾಯವನ್ನು ಮಾಡಬಹುದು.

ಸೌಲಭ್ಯಗಳು ಮತ್ತು ಸೇವೆಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಪಡೆಯಲು ಅವಕಾಶಗಳನ್ನು ಒದಗಿಸಿಕೊಡುವುದು

ತೀವ್ರತರಹದ ಮನೋರೋಗದ ನಿರ್ವಹಣೆ ಸುಲಭದ ಮಾತಲ್ಲ. ರೋಗಿಗೆ ಅಥವಾ ಅವನ ಸಂಬಂಧಿಕರಿಗೆ ಆರ್ಥಿಕ ಮತ್ತು ಇತರ ಸೌಲಭ್ಯಗಳ ಅತಿಯಾದ ಆವಶ್ಯಕತೆಯಿರುತ್ತದೆ. ಇತರರು ತಮ್ಮ ಸಮಾಜದಲ್ಲಿರುವ ಸರಕಾರ ಅಥವಾ ಸರಕಾರೇತರ ಸೌಲಭ್ಯಗಳು ಮತ್ತು ಸೇವೆಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಪಡೆಯಲು ಅವಕಾಶಗಳನ್ನು ಮಾಡಿಕೊಡಬಹುದು. ಸಂಘಸಂಸ್ಥೆಗಳು ಸಂಪನ್ಮೂಲಗಳ ಕ್ರೋಡೀಕರಣ (Resource Mobilization) ಮಾಡಿ ರೋಗಿಗಳ ಚಿಕಿತ್ಸೆಗೆ ಸಹಾಯ ಮಾಡಿದ ಸಾಕಷ್ಟು ಉದಾಹರಣೆಗಳನ್ನು ನಮ್ಮ ಸಮಾಜದಲ್ಲಿ ಕಾಣಬಹುದು.

ಮಾನಸಿಕ ಆರೋಗ್ಯ-ಸಂಬಂಧಿತ ಕಾರ್ಯಕ್ರಮಗಳ ಆಯೋಜನೆ

ಮನೋಕಾಯಿಲೆಗೆ ತುತ್ತಾಗಿ, ಆತ್ಮಹತ್ಯೆಯಂತಹ ಪ್ರಯತ್ನಗಳನ್ನು ಮಾಡಿ ಸೂಕ್ತ ಮನೋವೈದ್ಯಕೀಯ ಚಿಕಿತ್ಸೆಯಿಂದಾಗಿ ಕಾಯಿಲೆಯಿಂದ ಹೊರಬಂದಂತಹ ಹಲವಾರು ನಿದರ್ಶನಗಳು ನಮ್ಮ ಸಮಾಜದಲ್ಲಿ ಇದ್ದರೂ ಜನರಲ್ಲಿ ಮನೋಕಾಯಿಲೆಗಳ ಬಗೆಗಿನ ಆತಂಕಗಳು ಇನ್ನೂ ಕಡಿಮೆ ಆಗಿಲ್ಲ. ಸಂಘ ಸಂಸ್ಥೆಗಳು, ಪಂಚಾಯತ್‌ ಅಥವಾ ಶಿಕ್ಷಣ ಸಂಸ್ಥೆಗಳು ಮಾನಸಿಕ ಆರೋಗ್ಯ-ಸಂಬಂಧಿತ ಕಾರ್ಯಕ್ರಮಗಳ ಆಯೋಜನೆ ಮಾಡಿದಲ್ಲಿ ಜನರಲ್ಲಿ ಹೆಚ್ಚಿನ ಮನೋಖಾಯಿಲೆಗೆ ಸಂಬಂಧಿಸಿದ ಅರಿವನ್ನು ಮೂಡಿಸಬಹುದು.

ವ್ಯಕ್ತಿಯ ಸಶಕ್ತೀಕರಣಕ್ಕೆ ಹೆಚ್ಚಿನ ಅವಕಾಶ

ಮನೋಕಾಯಿಲೆಯಿಂದ ಬಳಲುವ ಹಲವಾರು ಜನರು ಸೂಕ್ತ ಉದ್ಯೋಗದಿಂದ ವಂಚಿತರಾಗಿರುತ್ತಾರೆ. ರೋಗದಿಂದ ಚೇತರಿಸಿದ ವ್ಯಕ್ತಿಗಳು ಇತರರ ನೆರವು ಇದ್ದಲ್ಲಿ ತಮ್ಮ ಕೆಲಸವನ್ನು ನಿರ್ವಹಿಸಿಕೊಂಡು ಹೋಗಬಹುದು. ಆದರೆ ಅದಕ್ಕೆ ಸಮಾಜವು ಸೂಕ್ತ ಅವಕಾಶವನ್ನು ದೊರಕಿಸಿಕೊಡುವುದು ಅತಿಮುಖ್ಯ. ನಮ್ಮ ದೇಶದಲ್ಲಿರುವ ಕೆಲವು ನಿದರ್ಶನಗಳಂತೆ ಫ್ರಾನ್ಸ್ ದೇಶದ ಕೆಫೆ ಜೊಯೆಕ್ಸ್ ಎಂಬ ಹೊಟೇಲ್‌ ಒಂದು ಮನೋವೈಕಲ್ಯವುಳ್ಳ ಸುಮಾರು ನೂರಕ್ಕೂ ಅಧಿಕ ಮಂದಿಗೆ ಉದ್ಯೋಗದ ಅವಕಾಶವನ್ನು ನೀಡಿ ಸಮಾಜಕ್ಕೆ ಮಾದರಿಯಾಗಿದೆ.

ಕೊನೆಯದಾಗಿ ನಮ್ಮ ದೇಶದ ಜನರ ಮಾನಸಿಕ ಆರೋಗ್ಯ ಕಾಯಿದೆಯು ಮನೋರೋಗದಿಂದ ಬಳಲುತ್ತಿರುವ ವ್ಯಕ್ತಿಯ ಹಕ್ಕಿನ ರಕ್ಷಣೆಗಳ ಬಗೆಗಿನ ಜತೆಗೆ ಅವರಿಗೆ ಸಮಾಜದಲ್ಲಿ ಸೂಕ್ತ ಸೌಲಭ್ಯಗಳನ್ನು ಒದಗಿಸಿ ಇತರರಂತೆ ಬದುಕಲು ಅನುವು ಮಾಡಿಕೊಡುವುದಾಗಿದೆ. ಈ ಕಾಯ್ದೆಯಂತೆ ಮನೋರೋಗದಿಂದ ಬಳಲುತ್ತಿರುವ ವ್ಯಕ್ತಿಗಳ ಹಕ್ಕುಗಳಿಗೆ ಯಾವುದೇ ಚ್ಯುತಿಯಾಗದಂತೆ ನೋಡಿಕೊಳ್ಳುವುದರ ಜತೆಗೆ ಅವರ ಚೇತರಿಕೆಗೆ ಸೂಕ್ತ ಅವಕಾಶಗಳನ್ನು ದೊರಕಿಸಿಕೊಡುವುದು ಸಮಾಜದ ಪಾತ್ರವಾಗಿರುತ್ತದೆ. ‌

-ಪ್ರವೀಣ್‌ ಎ ಜೈನ್‌,

ಮನೋಸಾಮಾಜಿಕ ತಜ್ಞ

ಮನೋರೋಗ ಚಿಕಿತ್ಸಾ ವಿಭಾಗ ಮತ್ತು “ಹೊಂಬೆಳಕು’ ಪುನಶ್ಚೇತನ ಕೇಂದ್ರ,

ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸೈಕಿಯಾಟ್ರಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next