Advertisement

ಸಮರ್ಥ ಯುವಜನತೆಯಿಂದ ವಿಶ್ವ ಶ್ರೇಷ್ಠ ಭಾರತ 

11:19 PM Aug 19, 2021 | Team Udayavani |

ಜಗತ್ತಿನ ಯುವದೇಶ ಭಾರತ ದಾಸ್ಯದ ಸಂಕೋಲೆಯನ್ನು ಕಳಚಿ ಸ್ವತಂತ್ರವಾಗಿ ಇದೀಗ 74 ಸಂವತ್ಸರಗಳು ಸಂದಿವೆ. ಸುಮ್ಮನೆ ಬರಲಿಲ್ಲ ಈ ಸ್ವಾತಂತ್ರ್ಯ!! ಇದರ ಹಿಂದೆ ಅನೇಕ ಮಹನೀಯರ ತ್ಯಾಗ ಬಲಿದಾನಗಳಿವೆ. ಸರ್ವಸ್ವವನ್ನು ತೊರೆದು ತಮ್ಮ ಜೀವವನ್ನೇ ದೇಶದ ಸ್ವಾತಂತ್ರ್ಯಕ್ಕೆ ಮುಡಿಪಾಗಿಟ್ಟ ಶೂರವೀರರ ಕಥೆಯಿದೆ. ಸ್ವಾತಂತ್ರ್ಯವೆಂದರೆ ಸ್ವೇಚ್ಛೆಯಿಂದ ಬದುಕುವುದಲ್ಲ ಅದೊಂದು ಜವಾಬ್ದಾರಿ ಎಂದು ಅರಿತಾಗ ಮಾತ್ರ ನಮ್ಮ ಹಿರಿಯರು ಗಳಿಸಿಕೊಟ್ಟ ಈ ಸ್ವಾತಂತ್ರ್ಯಕ್ಕೆ ನೈಜ ಅರ್ಥ ಬರುತ್ತದೆ. ದೇಶ ಸ್ವತಂತ್ರವಾಗಿ ಅಮೃತ ಮಹೋತ್ಸವ ವರ್ಷಕ್ಕೆ ಕಾಲಿಟ್ಟರೂ ನಿರೀಕ್ಷಿತ ಮಟ್ಟದ ಸಾಧನೆ ಮರೀಚಿಕೆಯಾಗಿದೆ. ಐರೋಪ್ಯ ಮತ್ತು ಪಾಶ್ಚಾತ್ಯ ದೇಶಗಳಲ್ಲಿ ಕಾಣುವ ಗಣನೀಯ ಅಭಿವೃದ್ಧಿ ಭಾರತದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ವಿಮರ್ಶೆ ಮಾಡಲು ಇದು ಸಕಾಲ ಹಾಗೂ ಮುಂದಿನ 25 ವರ್ಷಗಳಲ್ಲಿ ನಮ್ಮ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗಾಗಿ ನಮ್ಮ ಕಾರ್ಯಪ್ರಣಾಳಿ, ಕಾರ್ಯಶೈಲಿ ಹೇಗಿರಬೇಕೆಂದು ನಿರ್ಧರಿಸುವ ಕಾಲವಿದು. ಈ ಜವಾಬ್ದಾರಿ ಇಂದಿನ ಭಾರತೀಯ ಯುವ ಜನತೆಯ ಮೇಲಿದೆ.

Advertisement

“ನನ್ನ ಭರವಸೆ ಇರುವುದು ಯುವಜನತೆಯಲ್ಲಿ, ಆಧುನಿಕ ಯುವಜನಾಂಗದಲ್ಲಿ, ಅಲ್ಲಿಂದ ಎದ್ದು  ಬರಲಿದ್ದಾರೆ ನನ್ನ ಯುವಕರು! ರಾಷ್ಟ್ರದ ಸಕಲ ಸಮಸ್ಯೆಗಳನ್ನು ಅವರು ಸಿಂಹ ಪರಾಕ್ರಮದಿಂದ ಪರಿಹರಿಸಲಿದ್ದಾರೆ’ ಇದು ಸ್ವಾಮಿ ವಿವೇಕಾನಂದರ ದೃಢ ಭರವಸೆ ಯಾಗಿತ್ತು. ರಾಷ್ಟ್ರವೊಂದು ಸಮರ್ಥವಾಗಬೇಕೆಂದರೆ ಅಲ್ಲಿಯ ಜನತೆ, ವಿಶೇಷತಃ ಯುವಜನತೆಯ ಗುಣಮಟ್ಟ ಶ್ರೇಷ್ಠವಾಗಿರಬೇಕು. ಮೊದಲು ನಾವು ಸಶಕ್ತ, ಸಮರ್ಥ, ಸುದೃಢ, ಸುಶೀಲ ವ್ಯಕ್ತಿಗಳ ನಿರ್ಮಾಣದತ್ತ ಗಮನವೀಯಬೇಕಿದೆ. ಪ್ರಮುಖವಾಗಿ ಶಿಕ್ಷಣ, ಆರೋಗ್ಯ, ಸೃಜನಶೀಲ ಚಿಂತನೆ ಇವುಗಳನ್ನು ಗಮನದಲ್ಲಿರಿಸಿಕೊಂಡು ಯೋಜನೆಗಳನ್ನು ರೂಪಿಸಿ ವಿದ್ಯಾರ್ಥಿಗಳು ಮತ್ತು ಯುವಜನತೆಗೆ ಪ್ರೋತ್ಸಾಹ ನೀಡಬೇಕಿದೆ. ಅಲ್ಲದೆ ಔದ್ಯೋಗಿಕ ಕ್ಷೇತ್ರ, ಸಾಮಾಜಿಕ ರಂಗಗಳಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತಂದಾಗ ಮಾತ್ರ ಸ್ವಾತಂತ್ರ್ಯದ ಶತಮಾನೋತ್ಸದ ಹೊತ್ತಿಗೆ ಭಾರತ ಜಗತ್ತಿನಲ್ಲಿ ಶ್ರೇಷ್ಠ ರಾಷ್ಟ್ರವಾಗಿ, ಸಮರ್ಥ ದೇಶವಾಗಿ ತಲೆಯೆತ್ತಿ ನಿಲ್ಲಲು ಸಾಧ್ಯ.

ನಮ್ಮ ದೇಶದ ಶೇ. 65ರಷ್ಟು ಜನರು 35 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಯುವಕರು. ಯಾವುದೇ ರಾಷ್ಟ್ರಕ್ಕೂ ಇದೊಂದು ಬಹುಮೌಲ್ಯದ ಆಸ್ತಿ. ಆದರೆ ಇದನ್ನು ವ್ಯವಸ್ಥಿತವಾಗಿ ಬಳಸಿಕೊಂಡಾಗ ಮಾತ್ರವೇ ಅದು ಪ್ರಯೋಜನಕ್ಕೆ ಬರುತ್ತದೆ. ಇಂದಿನ ವಿದ್ಯಾಭ್ಯಾಸದ ವ್ಯಾಖ್ಯಾನ ಬದಲಾಗಬೇಕಿದೆ. ಸ್ವಾಮಿ ವಿವೇಕಾನಂದರ ಆಶಯದಂತೆ ವ್ಯಕ್ತಿ ನಿರ್ಮಾಪಕ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಬೇಕು. ವಿದ್ಯಾರ್ಥಿಗಳಿಗೆ ನಾವಿಂದು ಹೊರಗಿನಿಂದ ಮಾಹಿತಿಯನ್ನು ಅವರ ತಲೆಗೆ ತುಂಬುತ್ತಿದ್ದೇವೆ. ಅದು ಬದಲಾಗಿ ಅವರೊಳಗಿನ ಸಾಮರ್ಥ್ಯವನ್ನು ಹೊರತೆಗೆಯುವ ಕಾರ್ಯವಾಗಬೇಕು. ಪ್ರತಿಯೊಬ್ಬನ ಅಂತ ರಂಗದಲ್ಲಿ ಹುದುಗಿರುವ ಶಕ್ತಿ, ಸಾಮರ್ಥ್ಯ, ಪರಿಪೂರ್ಣತೆಯನ್ನು ಪ್ರಕಟಗೊಳಿಸುವುದೇ ಶಿಕ್ಷಣದ ಉದ್ದೇಶವೆಂದು ಸ್ವಾಮಿ ವಿವೇಕಾನಂದರು ಸದಾ ಹೇಳುತ್ತಿದ್ದರು. ನಮ್ಮ ಶಿಕ್ಷಣ ವ್ಯವಸ್ಥೆ ವ್ಯಕ್ತಿಯೊಬ್ಬನನ್ನು ಶಕ್ತಿವಂತನನ್ನಾಗಿಸಿ, ಸಾಮರ್ಥಯವಂತನನ್ನಾಗಿಸಿ ಸಮಾಜದ ಆಸ್ತಿಯನ್ನಾಗಿಸಬೇಕು. ಆತನನ್ನು ಸ್ವಾರ್ಥಿಯನ್ನಾಗಿಸ ಬಾರದು. ಅವನಲ್ಲಿ ತನ್ನಂತೆ ಇತರರು ಎನ್ನುವ ಮನೋಭಾವನೆಯನ್ನು ತುಂಬಿಸುವಂತಿರಬೇಕು. ರಾಷ್ಟ್ರ ಮತ್ತು ಸಮಾಜ ಮೊದಲು ತಾನು ತದನಂತರ ಎನ್ನುವ ಭಾವವನ್ನು ವ್ಯಕ್ತಿಯಲ್ಲಿ ಜಾಗೃತಗೊಳಿಸುವ ಪದ್ಧತಿಯನ್ನು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ನಾವು ಅಳವಡಿಸಿಕೊಂಡಾಗ ಮಾತ್ರವೇ ಶ್ರೇಷ್ಠ ರಾಷ್ಟ್ರದ ಕನಸು ಸಾಕಾರಗೊಳ್ಳ ಬಹುದು.

ಇಂದಿನ ಯುವಕರು ಗಟ್ಟಿಮುಟ್ಟಾದ ಶರೀರ ಹೊಂದುವುದು ಬಹುಮುಖ್ಯ. ರೋಗಗ್ರಸ್ತ, ನರಪೇತಲ ವ್ಯಕ್ತಿಗಳಿಂದ ಶಕ್ತಿಯುತ ರಾಷ್ಟ್ರ ನಿರ್ಮಾಣ ಅಸಾಧ್ಯ. ಆದ್ದರಿಂದ ಇಂದಿನ ಯುವಕರು ಯೋಗಾ ಸನ, ಪ್ರಾಣಾ ಯಾಮ, ವ್ಯಾಯಾಮ ಹಾಗೂ ಕ್ರೀಡಾ ಚಟುವಟಿಕೆಗಳ ಮೂಲಕ ಶರೀರವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಅತೀಮುಖ್ಯ ಹಾಗೂ ಮಾದಕದ್ರವ್ಯ, ಮದ್ಯ, ತಂಬಾಕು ಮತ್ತಿತರ ಅನಾರೋಗ್ಯ ವನ್ನುಂಟು ಮಾಡುವ ಪದಾರ್ಥಗಳ ಸೇವನೆಯನ್ನು ಕಡ್ಡಾಯವಾಗಿ ವರ್ಜಿಸಿ ದಾಗ ಮಾತ್ರವೇ ವ್ಯಕ್ತಿಯೊಬ್ಬ ಸಂಪೂರ್ಣ ಸಾಮರ್ಥ್ಯ ದಿಂದ ಕೆಲಸಕಾರ್ಯ ಮಾಡಲು ಸಾಧ್ಯ. ಹಾಗೆಯೇ ಸ್ವಸ್ಥ ಶರೀರದಲ್ಲಿ ಸ್ವಸ್ಥ ಮನಸ್ಸು ನೆಲೆಯೂರಿ ಆತನು ಸಂತೃಪ್ತ ಬದುಕನ್ನು ನಡೆಸಲು ಸಾಧ್ಯವಾಗುತ್ತದೆ. ಇಂತಹ ವಿಷಯಗಳಲ್ಲಿ ಸರಕಾರ ಮುತುವರ್ಜಿ ತೆಗೆದುಕೊಂಡು ಮಾದಕದ್ರವ್ಯ ಸಹಿತ ದುಷ್ಪರಿಣಾಮ ಬೀರುವ ಎಲ್ಲ ಪದಾರ್ಥಗಳನ್ನು ನಿಷೇಧಿಸಬೇಕು. ಹಾಗೆ “ಹಮ್‌ ಫಿಟ್‌ ತೋ ಇಂಡಿಯಾ ಫಿಟ್‌’ನಂತಹ ಅಭಿಯಾನಗಳನ್ನು ಹೆಚ್ಚು ಹೆಚ್ಚು ಪ್ರಚುರಗೊಳಿಸಬೇಕು ಮತ್ತು ಅದು ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳು ವಂತೆ ನೋಡಿಕೊಂಡಾಗ ಮಾತ್ರ ಜನರ ಬದುಕು ಉತ್ತಮ ಗುಣಮಟ್ಟದಿಂದ ಕೂಡಿರಲು ಸಾಧ್ಯ. ಇದು ರಾಷ್ಟ್ರವನ್ನು ಶ್ರೇಷ್ಠತೆಯತ್ತ ಕೊಂಡೊಯ್ಯಬಲ್ಲದು.

ಭವಿಷ್ಯತ್ತಿನಲ್ಲಿ ಜ್ಞಾನ ಹಾಗೂ ಸೃಜನಶೀಲತ್ವಕ್ಕೆ ಇನ್ನಿಲ್ಲದ ಮಹತ್ವ ಬರಲಿದೆ. ದೇಶದೇಶಗಳ ಮಧ್ಯೆ ಪದಾರ್ಥಗಳು ವಿನಿಮಯವಾದಂತೆ ಜ್ಞಾನ ವಿನಿಮಯದ ಕಾಲ ಬಹುದೂರವಿಲ್ಲ. ಬಹುಕಾಲದಿಂದ ಭಾರತ ಅನ್ಯರನ್ನು ವಿಶೇಷತಃ ಪಾಶ್ಚಾತ್ಯರನ್ನು ನಕಲು ಮಾಡುವುದು ಹಾಗೂ ಅನುಕರಣೆ ಮಾಡುವುದು ನಮಗೆ ರೂಢಿಯಾಗಿಬಿಟ್ಟಿದೆ. ಇದು ನಮ್ಮ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ಹೀಗಾಗಿ ಸೃಜನಶೀಲತೆ ಹಾಗೂ ನಮ್ಮತನಕ್ಕೆ ಧಕ್ಕೆಯಾಗಿದೆ. ಇದನ್ನು ನಾವು ಸರಿಪಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ವಿದ್ಯಾರ್ಥಿಗಳು ಮತ್ತು ಯುವಜನತೆಯಲ್ಲಿ ಸೃಜನಶೀಲತೆಯನ್ನು ಬೆಳೆಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು. ಇಂದಿನ ಯುವಕರು ಮೇಧಾವಿಗಳು ಹಾಗೂ ಬುದ್ಧಿವಂತರಾಗಿದ್ದರೂ ಸೂಕ್ತ ವಾತಾವರಣ ಮತ್ತು ಮಾರ್ಗದರ್ಶನದ ಕೊರತೆಯಿಂದ ನಮ್ಮಲ್ಲಿಯ ಅನೇಕರು ವಿದೇಶದ ಪಾಲಾಗುತ್ತಿದ್ದಾರೆ. ಹಾಗೆ ಇನ್ನು ಅನೇಕರು ಸೂಕ್ತ ಪ್ರೋತ್ಸಾಹದ ಕೊರತೆಯಿಂದ ಅಲ್ಲಲ್ಲಿಯೇ ಕಮರಿ ಹೋಗುತ್ತಿರು ವುದು ವಾಸ್ತವ. ಮುಂದಿನ 25 ವರ್ಷಗಳಲ್ಲಿ ನಮ್ಮ ಯುವಜನತೆಗೆ ಸೂಕ್ತ ತರಬೇತಿ, ಪ್ರೋತ್ಸಾಹ, ಮಾರ್ಗದರ್ಶನ ನೀಡಿ ಅವರ ಸೃಜನಶೀಲತೆಯನ್ನು ಹೊರತೆಗೆಯಲು ಪ್ರಯತ್ನಿಸಬೇಕಿದೆ. ಹಾಗಾದಾಗ ಭಾರತ ಮತ್ತೆ ಜಗತ್ತಿನಲ್ಲಿ ಜ್ಞಾನ ಕೇಂದ್ರವಾಗಿ ಕಂಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

Advertisement

 

ಸ್ವಾಮಿ ಏಕಗಮ್ಯಾನಂದ

ರಾಮಕೃಷ್ಣ ಮಿಷನ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next