ಮುಂಬೈ: ಬಿಜೆಪಿ ಜತೆಗೆ “ಹಿಂದುತ್ವ’ದ ಹೆಸರಿನಲ್ಲಿ ಮೈತ್ರಿ ಮಾಡಿಕೊಂಡು 25 ವರ್ಷಗಳ ಕಾಲ ವ್ಯರ್ಥವಾಗಿ ಕಳೆದೆವು ಎಂದು ಶಿವಸೇನೆ ಮುಖಂಡ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಅದಕ್ಕೆ ಸೋಮವಾರ ಪ್ರಬಲವಾಗಿ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಹಿಂದುತ್ವದ ವಿಚಾರಕ್ಕಾಗಿ ಬಿಜೆಪಿ ಮುಖಂಡರು ಗುಂಡೇಟು ತಿನ್ನುವ ಸಂದರ್ಭದಲ್ಲಿ ಉದ್ಧವ್ ಠಾಕ್ರೆಯವರು ಎಲ್ಲಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ.
ಬೃಹನ್ಮುಂಬೈ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ಸಂದರ್ಭದಲ್ಲಿ ಶಿವಸೇನೆ ರಾಜಕೀಯ ಪಕ್ಷವಾಗಿ ಜನ್ಮತಾಳಿಯೇ ಇರಲಿಲ್ಲ ಎಂದೂ ಫಡ್ನವೀಸ್ ವಾಗ್ಧಾಳಿ ನಡೆಸಿದ್ದಾರೆ.
ರಾಮ ಜನ್ಮಭೂಮಿ ಆಂದೋಲನ ನಡೆಯುವ ಸಂದರ್ಭದಲ್ಲಿ ಶಿವಸೇನೆ ಎಲ್ಲಿತ್ತು. ಆ ಆಂದೋಲನದ ಯಶಸ್ಸಿಗಾಗಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಲಾಠಿ ಏಟು, ಗುಂಡಿನ ಏಟು ತಿಂದಿದ್ದೆವು. ಅದರ ಫಲವಾಗಿಯೇ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ ಎಂದಿ ದ್ದಾರೆ ಫಡ್ನವೀಸ್.
ಶಿವಸೇನೆಯ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ “ಶಿವಸೇನೆ ಬಿಜೆಪಿ ಜತೆಗಿದ್ದ ಮೈತ್ರಿ ಕಡಿದುಕೊಂಡಿರಬಹುದು. ಆದರೆ, “ಹಿಂದುತ್ವ’ವನ್ನು ಅಲ್ಲ ಎಂದಿದ್ದರು. ಈ ಮಾತುಗಳಿಗೆ ಎನ್ಸಿಪಿ ಕೂಡ ಬೆಂಬಲ ವ್ಯಕ್ತಪಡಿಸಿ ಪ್ರತಿಯೊಬ್ಬರೂ ಅವರವರು ಅನುಸರಿಸುವ ಧರ್ಮದ ಬಗ್ಗೆ ಹೆಮ್ಮೆ ಪಡಬೇಕು. ಆದರೆ, ಧರ್ಮದ ಹೆಸರಲ್ಲಿ ದ್ವೇಷ ಹರಡುವ ಕೆಲಸವನ್ನು ಮಾತ್ರ ಮಾಡ ಬಾರದು ಎಂದಿದೆ.