Advertisement

ನಿಮಗಿದು ಗೊತ್ತೆ, ಭಕ್ತಿಯಿಂದ ಬ್ಯೂಟಿ ಹೆಚ್ಚುತ್ತದೆ! 

06:00 AM Jul 17, 2018 | |

ಜನರಿಗೆ ಒಂದು ಲಕ್ಷಣ ಬರಬೇಕು. ಅಂದರೆ ಅವರು ಮೊದಲು ತಮ್ಮ ಮನಸ್ಸನ್ನು ಶುಚಿಗೊಳಿಸಿಕೊಳ್ಳಬೇಕು. ಅದಕ್ಕೆ ದಿನಕ್ಕೆ ಹತ್ತು ನಿಮಿಷವಾದರೂ ದೇವರ ಪೂಜೆ ಅಥವಾ ನಾಸ್ತಿಕರಾಗಿದ್ದರೆ ಅವರು ನಂಬುವ ಶಕ್ತಿಯನ್ನು ಧ್ಯಾನಿಸಬೇಕು. ದೇವರ ಪೂಜೆ ಅಂದರೆ ಆಡಂಬರವಾಗಿ ಮಾಡಬೇಕೆಂದೇನಿಲ್ಲ. ಏಕಾಗ್ರತೆಯಿಂದ ಪ್ರತಿದಿನ ಹತ್ತು ನಿಮಿಷ ದೇವರ ಮನೆಯಲ್ಲಿ ಕುಳಿತು ಯಾವ ಮಂತ್ರ ಬರುತ್ತೋ ಅದನ್ನು ಜಪಿಸಿದರೆ ಸಾಕು. 

Advertisement

ನೀವು ಇದನ್ನು ನಂಬುತ್ತೀರಾ? ಕೆಲವರನ್ನು ನೋಡಿದಾಗ ಇದು ನಿಜ ಅಂತ ನಂಬಲೇಬೇಕಾಗುತ್ತದೆ. ಹಾಗೆಯೇ ಇದು ಖಂಡಿತವಾಗಿಯೂ ನಿಜ. ನಮ್ಮನ್ನು ಸುಂದರಗೊಳಿಸುವುದು ಬ್ಯೂಟಿಪಾರ್ಲರ್‌ಗಳಲ್ಲ. ನಮ್ಮ ಅಂತರಂಗದ ಶುದ್ಧಿ ನಮ್ಮನ್ನು ತುಂಬಾ ಸುಂದರವಾಗಿ ಕಾಣುವಂತೆ ಮಾಡುತ್ತದೆ. 
ಕೆಲವರು ನೋಡಲು ತುಂಬಾ ಚೆನ್ನಾಗಿರುತ್ತಾರೆ. ಬೆಳ್ಳಗೆ, ಕಣ್ಣು, ಮೂಗು, ಬಾಯಿ ಎಲ್ಲಾ ಇರೋ ಜಾಗದಲ್ಲೇ ಇರುತ್ತವೆ. ಮೈಕಟ್ಟೂ ಚೆನ್ನಾಗಿರುತ್ತದೆ. ಆದರೂ ಏನೋ ಒಂದು ಕೊರತೆ ಎದ್ದು ಕಾಣುತ್ತದೆ. ಅದು ಸೌಂದರ್ಯದ ಕೊರತೆಯಲ್ಲ. ಗಂಡಾಗಿರಲಿ, ಹೆಣ್ಣಾಗಿರಲಿ ನೋಡಲು ಮಾತ್ರ ಚೆನ್ನಾಗಿದ್ದರೆ ಸಾಲದು, ಅವರ ಕಣ್ಣಲ್ಲಿ ಒಂದು ಕಾಂತಿ ಇರಬೇಕು. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕು ಅಂತ ಅನ್ನಿಸಬೇಕು. ಮತ್ತೆ ಮತ್ತೆ ಭೇಟಿ ಮಾಡಬೇಕು ಅಂತ ಅನ್ನಿಸಬೇಕು. ಹೀಗೆಲ್ಲಾ ಅನ್ನಿಸುವುದು ನಾವು ಒಬ್ಬರನ್ನು ಪ್ರೀತಿಸುವುದಕ್ಕೆ ಶುರು ಮಾಡಿದಾಗ ಅಲ್ಲವೇ ಅಂತ ನಮಗೆಲ್ಲ ಅನ್ನಿಸಬಹುದು. ಆದರೆ, ನಮ್ಮ ಜೀವನವನ್ನು ನಾವೇ ಗಮನಿಸಿಕೊಂಡು ನೋಡಿದರೆ, ನಮ್ಮ ಸಂಬಂಧಿಕರನ್ನು ಬಿಟ್ಟು ನಾವು ಬಹಳಷ್ಟು ಜನರನ್ನು ತುಂಬಾ ಇಷ್ಟಪಡುತ್ತೇವೆ. ನಮಗೇ ಗೊತ್ತಿಲ್ಲದಂತೆ ಅವರನ್ನು ಗೌರವಿಸುತ್ತೇವೆ. ಅವರನ್ನು ಮನೆಯವರಿಗಿಂತ ಹೆಚ್ಚಾಗಿ ನಂಬುತ್ತೇವೆ. ಇದು ದೈಹಿಕ ಆಕರ್ಷಣೆಯಲ್ಲ, ಸಾತ್ವಿಕ ಆಕರ್ಷಣೆ. ಏಕೆಂದರೆ ಇದಕ್ಕೆ ವಯಸ್ಸಿನ ಮಿತಿ ಇಲ್ಲ. ಮನುಷ್ಯ ಎಷ್ಟು ದೈವಿಕತ್ವನ್ನು ಪಡೆದುಕೊಳ್ಳುತ್ತ ಹೋಗುತ್ತಾನೋ ಅವನು ಹೇಗಿದ್ದರೂ ಎಲ್ಲರ ಕಣ್ಣಿಗೆ ಸುಂದರವಾಗಿ ಗೋಚರಿಸುತ್ತಾನೆ.

ಜನರು ನೋಡಲು ಎಷ್ಟೇ ಚೆನ್ನಾಗಿದ್ದರೂ ಅವರಿಗೆ ಒಂದು ಲಕ್ಷಣ ಬರಬೇಕು. ಅಂದರೆ ಅವರು ಮೊದಲು ತಮ್ಮ ಮನಸ್ಸನ್ನು ಶುಚಿಗೊಳಿಸಿಕೊಳ್ಳಬೇಕು. ಅದಕ್ಕೆ ದಿನಕ್ಕೆ ಹತ್ತು ನಿಮಿಷವಾದರೂ ದೇವರ ಪೂಜೆ ಅಥವಾ ನಾಸ್ತಿಕರಾಗಿದ್ದರೆ ಅವರು ನಂಬುವ ಶಕ್ತಿಯನ್ನು ಧ್ಯಾನಿಸಬೇಕು. ದೇವರ ಪೂಜೆ ಅಂದರೆ ಆಡಂಬರವಾಗಿ ಮಾಡಬೇಕೆಂದೇನಿಲ್ಲ. ಏಕಾಗ್ರತೆಯಿಂದ ಪ್ರತಿದಿನ ಹತ್ತು ನಿಮಿಷ ದೇವರ ಮನೆಯಲ್ಲಿ ಕುಳಿತು ಯಾವ ಮಂತ್ರ ಬರುತ್ತೋ ಅದನ್ನು ಜಪಿಸಿದರೆ ಸಾಕು. ಆದರೆ ಅದನ್ನು ಶ್ರದ್ಧೆಯಿಂದ ಪ್ರತಿದಿನ ಮಾಡಬೇಕಷ್ಟೇ. ಆಗ ನಿಮಗೇ ತಿಳಿಯದಂತೆ ನಿಮ್ಮ ಮುಖದಲ್ಲಿ ಒಂದು ಕಾಂತಿ ಹೊರಹೊಮ್ಮುತ್ತದೆ. ಅದು ನಿಮ್ಮ ಮುಖದ ಲಕ್ಷಣವನ್ನೇ ಬದಲಿಸುತ್ತದೆ. ನೀವು ಎಲ್ಲಿದ್ದರೂ ಎಲ್ಲರ ನಡುವೆ ನಿಂತಿದ್ದರೂ ನೀವು ವಿಶೇಷ ವ್ಯಕ್ತಿಯಂತೆ ಕಾಣಿಸುತ್ತೀರಿ. ಇದಕ್ಕೆ ಕಾರಣ ನಿಮ್ಮೊಳಗಿರುವ ಪಾಸಿಟಿವ್‌ ವೈಬ್ರೇಷನ್‌.

ದೈವಿಕ ಸೌಂದರ್ಯ ನಿಮ್ಮಲಿದೆಯೇ?
ಬ್ಯೂಟಿಪಾರ್ಲರ್‌ಗೆ ಹೋಗಿ ಅನೇಕ ಮಹಿಳೆಯರೂ ಪುರುಷರು ತಮ್ಮನ್ನು ತಾವು ಸುಂದರವಾಗಿ ಕಾಣಿಸಿಕೊಳ್ಳುವಂತೆ ಅನೇಕ ಪ್ರಯೋಗಗಳನ್ನು ಮಾಡುತ್ತಾರೆ. ಆದರೆ, ಅದೆಲ್ಲ ತಾತ್ಕಾಲಿಕವಾಗಿ ಆಕರ್ಷಣೆ ನೀಡುವಂಥದ್ದು. ಅಧ್ಯಾತ್ಮದ ಅರಿವು ನಿಮ್ಮನ್ನು ನಿರಂತರವಾಗಿ ಬ್ಯೂಟಿಫ‌ುಲ್‌ ಮಾಡುತ್ತದೆ. ಪ್ರಪಂಚದಲ್ಲಿ ಎಷ್ಟೇ ಆರ್ಥಿಕ ಹಿನ್ನಡೆ ಆದರೂ ಬ್ಯೂಟಿ ಪಾರ್ಲರ್‌ ಬಿಸಿನೆಸ್‌ಗೆ ಮಾತ್ರ ಯಾವುದೇ ಕುಸಿತವಿಲ್ಲ. ನಾನು ಅನೇಕ ಕಾರಾಗೃಹಗಳಲ್ಲಿ ಕೈದಿಗಳಿಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದೆ. ಅಲ್ಲಿಯೂ ಜನ ಬ್ಯೂಟಿಷಿಯನ್‌ ಕರೆಸಿ ತಮ್ಮ ಬಾಹ್ಯ ಸೌಂದರ್ಯಕ್ಕೆ ಪ್ರಾಮುಖ್ಯತೆ ಕೊಡುವುದನ್ನು ಕಂಡು ಆಶ್ಚರ್ಯವಾಗಿತ್ತು. ಕೆಲವರಿಗೆ ಬ್ಯೂಟಿಪಾರ್ಲರ್‌ ಹುಚ್ಚು ಎಷ್ಟು ಹಿಡಿದಿದೆ ಅಂದರೆ ಮನೆಯಲಿ ಹಿರಿಯರ ತಿಥಿ / ವೈಕುಂಠ ಸಮಾರಾಧನೆ ಇದ್ದರೂ ಬೇಗ ಬೇಗ ಪಾರ್ಲರ್‌ಗೆ ಹೋಗಿ ಐಬ್ರೋಸ್‌ ಮಾಡಿಸಿಕೊಂಡು ಬರುತ್ತಾರೆ. ಸಂಬಂಧ, ಸಂಕಟ, ನೋವು, ಬಾಂಧವ್ಯಕ್ಕಿಂತ ಮನುಷ್ಯ ಬಾಹ್ಯ ಸೌಂದರ್ಯಕ್ಕೆ ಒತ್ತು ನೀಡುತ್ತಿದ್ದಾನೆ. ಏಕೆಂದರೆ ಅವನು ಆಂತರಿಕ ಸೌಂದರ್ಯದ ರುಚಿಯನ್ನು ಕಂಡುಕೊಂಡಿಲ್ಲ. 

ಪಾರ್ಲರ್‌ಗೆ ಬರುವ ದೆವ್ವ!
ಒಂದು ಬ್ಯೂಟಿಪಾರ್ಲರ್‌ನಲ್ಲಿ ತಮಾಷೆ ನಡೆಯಿತು. ಒಬ್ಬ ಹೆಂಗಸಿನ ಮೈಮೇಲೆ ಯಾವಾಗಲೂ ದೆವ್ವ ಬರುತ್ತಿತ್ತಂತೆ. ಆ ದೆವ್ವಕ್ಕೆ ಸತ್ತ ಮೇಲೆ ಶಾಂತಿ ಸಿಕ್ಕಿಲ್ಲವಂತೆ, ಯಾಕಂದ್ರೆ ಅದು ಬದುಕಿದ್ದಾಗ ಅವಳ ಮನೆಯವರು ಅವಳನ್ನು ಬ್ಯೂಟಿಪಾರ್ಲರ್‌ಗೆ ಕಳಿಸ್ತಿರ್ಲಿಲ್ವಂತೆ. ಆ ದೆವ್ವ ಅದರ ಆಸೆ ನೆರವೇರಿಸಿಕೊಳ್ಳಲು ತಾನು ಸತ್ತ ನಂತರ ಬೇರೆಯವರ ಮೈಮೇಲೆ ಬಂದು ಗಲಾಟೆ ಮಾಡಿ ಐಬ್ರೋಸ್‌, ಫೇಷಿಯಲ್‌, ವ್ಯಾಕ್ಸ್‌ ಎಲ್ಲಾ ಮಾಡಿಸಿಕೊಳ್ಳುತ್ತಿತ್ತಂತೆ. ದೆವ್ವ ಪಾರ್ಲರ್‌ಗೆ ಬರುವ ದಿನ ಬೇರೆಯವರಿಗೆ ಪಾರ್ಲರ್‌ ಮುಚ್ಚಿರುತ್ತಿತ್ತು. ನಾವು ಯಾಕೆ ಅಂತ ಕೇಳಿದರೆ ಇವತ್ತು ದೆವ್ವ ಬರುತ್ತೆ ಅಂದರು! ನಾನು ಚಿಂತೆಗೆ ಬಿದ್ದೆ. ದೆವ್ವಕ್ಕೆ ಕೈ ಕಾಲು ಇರುತ್ತಾ? ಅದು ಹೇಗೆ ವ್ಯಾಕ್ಸ್‌ ಮಾಡಿಸಿಕೊಳ್ಳುತ್ತದೆ? ಮಾಡಿಸಿಕೊಂಡರೂ ಯಾರಿಗೆ ತೋರಿಸು ತ್ತದೆ. ಸತ್ತು ದೆವ್ವ ಆದಮೇಲೂ ನಾವು ಹೇಗೆ ಹೊರಗಡೆಯಿಂದ ಬ್ಯೂಟಿಫ‌ುಲ್ಲಾಗಿ ಕಾಣಲಿಕ್ಕೆ ಸಾಧ್ಯ? ಈ ವಿಚಾರದಲ್ಲಿ ಹುಡುಗರೇನೂ ಕಡಿಮೆ ಇಲ್ಲ. ಚೆನ್ನಾಗಿ ಕಾಣಿಸಬೇಕು ಅಂತ ಹುಡುಗರೂ ಏನೇನೋ ಸಾಹಸ ಮಾಡು ತ್ತಾರೆ. ಇವತ್ತಿನ ದಿನ ಎಲ್ಲ ಲೋಪಗಳಿಗೂ ಪರಿಹಾರ ಇದೆ. ಚಿಕ್ಕ ವಯಸ್ಸಿಗೆ ಕೂದಲು ಕಳೆದುಕೊಂಡರೆ ಹೊಸ ಕೂದಲು ಹಾಕಿಸಿ ಕೊಳ್ಳುತ್ತಾರೆ. ಮೂಗು ಚಿಕ್ಕದಾಗಿದ್ದರೆ ಉದ್ದ ಮಾಡಿಸಿಕೊಳ್ಳುತ್ತಾರೆ. ತುಟಿ ಸರಿಮಾಡಿಸಿಕೊಳ್ಳುತ್ತಾರೆ. ಮೈಕಟ್ಟು ಸಣ್ಣ ಮಾಡಿಸಿಕೊಳ್ಳುತ್ತಾರೆ. ತಮ್ಮನ್ನು ತಾವೇ ಗುರುತಿಸಿಕೊಳ್ಳಲಾಗದಷ್ಟು ಮುಖವನ್ನು ಬದಲಾಯಿಸಿಕೊಳ್ಳುತ್ತಾರೆ. ಕೆಲ ಹುಡುಗರು ನಮ್ಮ ದೇಶದಲ್ಲಿ ಸರಿಯಾಗಿ ಮಾಡುವುದಿಲ್ಲ ಅಂತ ಬೇರೆ ದೇಶಗಳಿಗೆ ಬ್ಯೂಟಿ ಟ್ರೀಟ್‌ ಮೆಂಟ್‌ಗಾಗಿಯೇ ಹೋಗುತ್ತಾರೆ.

Advertisement

ಇದೆಲ್ಲ ತಪ್ಪು ಎಂದಲ್ಲ. ನಾನು ಚೆನ್ನಾಗಿ ಕಾಣಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ, ಹೊರಗಿನ ಸೌಂದರ್ಯವನ್ನು ಸರಿಪಡಿಸಿಕೊಳ್ಳಲು ಎಷ್ಟೆಲ್ಲಾ ಖರ್ಚು ಮಾಡುವ ಜನರು ಒಳಗಿನ ಸೌಂದರ್ಯ ಹೆಚ್ಚಿಸಿಕೊಳ್ಳಲು ಏನು ಮಾಡುತ್ತಾರೆ? ಒಳಗಿನಿಂದ ನಮ್ಮ ನಿಜವಾದ ಕಾಂತಿ ಹೊರಹೊಮ್ಮದೆ ಹೊರಗಿನಿಂದ ಎಷ್ಟೇ ಮಾಡಿಸಿಕೊಂಡರೂ ಅದು ಕೃತಕವಾಗಿ ಕಾಣಿಸುತ್ತದೆ. ಹಾಗೆ ಕೆಲವರು ಮಾತಾಡುವುದು, ನಗುವುದೂ ಸಹ ಕೃತಕವಾಗಿಯೇ ಕಾಣಿಸುತ್ತದೆ. ಇನ್ನು ಕೆಲವರು ಮನಸ್ಸಿನಲ್ಲಿ ಕೆಟ್ಟದ್ದನ್ನೇ ಗುಣಿಸುತ್ತಿದ್ದರೆ ಅವರ ಮುಖಗಳು ಸುಂದರವಾಗಿ ಆಕರ್ಷಣೀಯವಾಗಿ ಕಾಣಿಸಿಕೊಳ್ಳಲು ಸಾಧ್ಯವೇ ಇಲ್ಲ. ನಾವು ಒಳಗೆ ಹೇಗೆ ಇರುತ್ತೇವೋ ಅದರ ಛಾಯೆ ನಮ್ಮ ಹೊರ ಮುಖದಲ್ಲಿ ಎದ್ದು ತೋರುತ್ತದೆ. ನಮ್ಮ ಕೆಟ್ಟ ಯೋಚನೆಗಳನ್ನು ಎಷ್ಟೇ ಒಳಗೆ ಮುಚ್ಚಿಟ್ಟುಕೊಂಡರೂ ನಮ್ಮ ಕಣ್ಣುಗಳಲ್ಲಿ ನಾವಾಡುತ್ತಿರುವ ನಾಟಕ ಕಾಣಿಸಿಕೊಳ್ಳುತ್ತದೆ.

ಠಕ್ಕ ಸನ್ಯಾಸಿಗಳನ್ನು ಪತ್ತೆಹಚ್ಚಿ
ಕೆಲವು ಕಳ್ಳ ಸ್ವಾಮಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದ ತಕ್ಷಣವೇ ಹೇಳಬಹುದು ಅವರು ಸಾತ್ವಿಕರಲ್ಲ ಎಂದು. ಸದ್ಯದಲ್ಲೇ ಅವರದ್ದೊಂದು ರಾಸಲೀಲೆ ಸೀಡಿ ಹೊರಬರಬಹುದು ಎಂಬುದು ಆ ಕೊಡಲೇ ಗೊತ್ತಾಗುತ್ತದೆ! ಅವರ ಕಣ್ಣಲ್ಲೇ ಚಂಚಲತೆ ಎದ್ದು ಕುಣಿಯುತ್ತಿರುತ್ತದೆ. ಆತ ನಿಜವಾದ ದೈವಿಕ ಶಕ್ತಿಯನ್ನು ಹೊಂದಿಲ್ಲ ಎಂಬುದು ಒಂದೇ ನೋಟದಿಂದ ಸಾಬೀತಾಗುತ್ತದೆ. ಸಾತ್ವಿಕತೆಯ ಮುಖ ಲಕ್ಷಣವೇ ಬೇರೆ, ವೇಷಭೂಷಣ ಧರಿಸಿದ ನಾಟಕೀಯ ಸಿಂಗಾರವೇ ಬೇರೆ. ಕಳ್ಳ ಸ್ವಾಮಿಗಳಿಗೂ ಸಹ ಮಂತ್ರಗಳ ತಾಕತ್ತು ತಿಳಿದಿರುವುದಿಲ್ಲ, ಏಕೆಂದರೆ ಅವರು ಯಾವತ್ತೂ ಕುಳಿತು ಶ್ರದ್ಧೆಯಿಂದ ಧ್ಯಾನ ಮಾಡಿರುವುದೇ ಇಲ್ಲ. ಅದಕ್ಕೆ ಅವರ ಮುಖದಲ್ಲಿ ದೈವಿಕ ಕಳೆ ಇರುವುದಿಲ್ಲ. 

ಯಾವುದೇ ಮಂತ್ರ ಹೇಳಿದರೂ ಎಲ್ಲಾ ಮಂತ್ರಗಳಿಗೂ ಒಂದು ಶಕ್ತಿ ಇದೆ. ಮಂತ್ರಗಳು ಗೊತ್ತಿಲ್ಲದಿದ್ದರೆ ಏಕಾಕ್ಷರ ಓಂ ಹೇಳಿ ಕೊಂಡರೂ ಸಾಕು. ಓಂಕಾರ ಪರಮಾತ್ಮ ನಾರಾಯಣ ಈ ಜಗತ್ತನ್ನು ಸೃಷ್ಟಿಮಾಡುವಾಗ ಅವನ ಬಾಯಿಯಿಂದ ಹೇಳಿದ ಮೊದಲ ಅಕ್ಷರ / ಮಂತ್ರ. ಯಾವ ಮಂತ್ರಗಳಿಗೂ ಯಾವುದೇ ಜಾತಿ ಭೇದವಿಲ್ಲ. ಮಂತ್ರಗಳು ನಮ್ಮೆಲ್ಲರ ಸ್ವತ್ತು, ಯಾರು ಬೇಕಾದರೂ ಅದರ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳಬಹುದು. 

ಬ್ಯೂಟಿಪಾರ್ಲರ್‌ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಳ್ಳುವವರು ಅದರಲ್ಲರ್ಧವನ್ನು ಆಂತರಿಕ ಸೌಂದರ್ಯದ ಬಗ್ಗೆ ಚಿಂತಿಸಲು ಮೀಸಲಿಟ್ಟರೂ ಸಾಕು, ನಾವೆಲ್ಲ ಸರ್ವಾಂಗ ಸುಂದರರಾಗುತ್ತೇವೆ!

Advertisement

Udayavani is now on Telegram. Click here to join our channel and stay updated with the latest news.

Next