Advertisement

ಆಸಕ್ತಿ ಇದ್ದರೆ ಮಾತ್ರ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯ

11:29 PM Jan 14, 2020 | mahesh |

ಇತರೆ ಜಿಲ್ಲೆಗೆ ಹೋಲಿಸಿ ದರೆ ಕರಾವಳಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಾಧಿಸಿದೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆ ಇದೆ. ಜಿಲ್ಲೆಯಲ್ಲಿ ಮೊದಲು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಜಾಗೃತಿ ಮೂಡಬೇಕು. ನಿರ್ದಿಷ್ಟ ಮಾಹಿತಿ ನೀಡುವ ಮೂಲಕ ಹೆಚ್ಚಿನ ವಿದ್ಯಾರ್ಥಿಗಳು ನಾಗರಿಕ ಸೇವೆ ಪರೀಕ್ಷೆ ಬರೆಯಲು ಪ್ರೇರೇಪಿಸಬೇಕು ಎನ್ನುತ್ತಾರೆ ನವೀನ್‌ ರಾವ್‌ .

Advertisement

ಉದ್ಯೋಗಕ್ಕೆ ಇಂದು ಪದವಿ ಸರ್ಟಿಫಿಕೇಟ್‌ ಗಳಿದ್ದರೆ ಸಾಲದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನೂ ಪಡೆದಿರಬೇಕು. ತಮ್ಮ ನಿರಂತರ ಪರಿಶ್ರಮ ಮತ್ತು ಛಲದಿಂದ ಮೊದಲ ಪ್ರಯತ್ನದಲ್ಲೇ ಕೆಎಎಸ್‌ ತೇರ್ಗಡೆಯಾದ ನವೀನ್‌ ರಾವ್‌ ಸುದಿನದ ಸುಶ್ಮಿತಾ ಜೈನ್‌ ಅವರಿಗೆ ನೀಡಿದ ಸಂದರ್ಶನದಲ್ಲಿ ಪರೀಕ್ಷಾ ಸಿದ್ಧತೆ ಬಗ್ಗೆ ಹಂಚಿಕೊಂಡಿದ್ದಾರೆ.

ಸಾಧನೆಗೆ ಸ್ಪೂರ್ತಿ ಯಾರು ?
ಸಾಧಿಸಬೇಕೆಂಬ ಛಲಕ್ಕೆ ಮತ್ತಷ್ಟು ಸ್ಪೂರ್ತಿ ತುಂಬಿ ದ್ದು ನನ್ನ ಸಹೋದ್ಯೋಗಿ ಮಹೇಶ್‌ ಹೊಳ್ಳ. ನಿನ್ನ ಕೈಯಲ್ಲಿ ಸಾಧ್ಯವಾಗುತ್ತದೆ ಎಂಬ ಧೈರ್ಯ ತುಂಬಿ ಪರೀಕ್ಷಾ ಬರೆಯುವಂತೆ ಪ್ರೇರೇಪಿಸಿದರು. ಜತೆಗೆ ನನ್ನ ತಾಯಿ ಮತ್ತು ಹೆಂಡತಿ ನೀಡಿದ ಪ್ರೋತ್ಸಾಹದ ಫ‌ಲ ಇದು.

ಸಮಯ ಇಲ್ಲ ಎಂಬವರಿಗೆ ನಿಮ್ಮ ಸಲಹೆ ಏನು?
ಓದುವ ಆಸಕ್ತಿ ಇದ್ದರೆ ಹೇಗಾದರೂ ಹೊಂದಿಸಬಹುದು. ಆದರೆ ಆಸಕ್ತಿಯೇ ಇಲ್ಲದೇ ಓದಲು ಸಮಯ ಸಿಗುತ್ತಿಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ. ಅಂಥವರಿಗೆ ಸಿಕ್ಕ ಸಮಯವನ್ನು ಸದುಪಯೋಗ ಮಾಡಿ ಕೊಳ್ಳಲು ಬರುವುದಿಲ್ಲ ಎಂದರ್ಥ ಅಷ್ಟೇ.

ತಯಾರಿ ಹೇಗಿತ್ತು ?
ಮೊದಲಿನಿಂದಲೂ ಅಭ್ಯಾಸವೆಂದರೆ ಇಷ್ಟ. ಸೈನ್ಯದಲ್ಲಿ ಇರುವಾಗಲೇ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಅಗತ್ಯವಿರುವ ಪೂರ್ವ ತಯಾರಿಯನ್ನು ಪ್ರಾರಂಭಿಸಿದ್ದೆ. ನಿವೃತ್ತಿ ಬಳಿಕ ಅಬಕಾರಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಾ, ಬೆಳಗ್ಗೆ 2.30 ರಿಂದ 5.30 ವರೆಗೆ ಕೆಎಎಸ್‌ಗೆ ಅಗತ್ಯವಿರುವ ತಯಾರಿಯನ್ನು ಮಾಡುವ ಹಾಗೆ ನಿತ್ಯದ ದಿನಚರಿಯನ್ನು ಹಾಕಿಕೊಂಡೆ. ಜತೆಗೆ ತಪ್ಪದೇ ದಿನಪತ್ರಿಕೆಗಳನ್ನು ಓದುತ್ತಿದ್ದೆ.

Advertisement

ಎಷ್ಟು ದಿನಗಳ ಸಿದ್ಧತೆ ಇತ್ತು?
ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು ಪಿಯುಸಿ ಬಳಿಕ‌ ತಯಾರಿ ಪ್ರಾರಂಭಿಸಿದರೆ ಉತ್ತಮ. ಕೆಲವರು ಪರೀಕ್ಷಾ ನೋಟಿಫಿಕೇಶನ್‌ ಬರಲಿ ವೇಳಾಪಟ್ಟಿ ಬರಲಿ ಎಂದು ಕಾಯುತ್ತಾರೆ. ತಪಸ್ಸಿಗೆ ಕುಳಿತಂತೆ ಆರೇ ತಿಂಗಳಲ್ಲಿ ಓದಿ ಮುಗಿಸುತ್ತೇನೆ ಎಂದುಕೊಳ್ಳುತ್ತಾರೆ. ಆದರೆ ಈ ಅತಿಯಾದ ಆತ್ಮವಿಶ್ವಾಸ ಸಲ್ಲದು. ಪದವಿ ಮುಗಿದಾಕ್ಷಣ ಒಂದು ವರ್ಷದ ಗಟ್ಟಿ ಓದು ಅಗತ್ಯವಿದ್ದು, ಮರುಮನನ ಮತ್ತು ಕಲಿತ ವಿಷಯವನ್ನು ಬರೆಯುವ ಕೌಶಲ ಬೇಕು.

ಮೊದಲ ಪ್ರಯತ್ನದಲ್ಲೇ ಯಶಸ್ಸು, ಅಚ್ಚರಿ ತಾನೇ?
ಖಂಡಿತ ಇಲ್ಲ. ಅದನ್ನು ಸಾಧಿಸುವುದೇ ನನ್ನ ಛಲ ಆಗಿತ್ತು. ಪರೀಕ್ಷೆಯ ಪ್ರತಿ ಹಂತದಲ್ಲೂ ಅಚ್ಚುಕಟ್ಟಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ವೃತ್ತಿ ನಿರತನಾಗಿದ್ದ ನನಗೆ ಅಲ್ಲಿ ಮಾಡಿದ ಕೆಲಸ ಕೂಡ ನನ್ನ ಜ್ಞಾನವೃದ್ಧಿಗೆ ಸಹಾಯ ಮಾಡಿತು.

ಕೋಚಿಂಗ್‌ ಬೇಕೆ ?
ಬೇಕು ಬೇಡ ಎಂಬ ಪ್ರಶ್ನೆಗಿಂತ ಈ ಕ್ಷೇತ್ರದಲ್ಲಿ ಅನುಭವವಿರುವ ಮತ್ತು ಪರೀಕ್ಷೆಯಲ್ಲಿ ತೇರ್ಗಡೆ Þದವರ ಮಾರ್ಗದರ್ಶನ ಅವಶ್ಯ ನಿರ್ದಿಷ್ಟ ಮಾಹಿತಿ ಇಲ್ಲದೇ ಯಾವ ಕ್ಷೇತ್ರದಲ್ಲೂ ಯಶಸ್ವಿಯಾಗಲು ಸಾಧ್ಯ ಇಲ್ಲ. ಇಲ್ಲೂ ಹಾಗೇ ಸ್ವಯಂ ಪ್ರೇರಣೆಯೊಂದಿಗೆ ಓರ್ವ ಉತ್ತಮ ಮಾರ್ಗದರ್ಶಕ ಬೇಕು.

ಯಾವೆಲ್ಲ ಹುದ್ದೆಗಳನ್ನು ಅಲಂಕಾರಿಸಬಹುದು ?
ನಮಗೆ ಕೆಎಎಸ್‌ ಅಂದರೆ ಕೇವಲ ಪೊಲೀಸ್‌ ಇಲಾಖೆ ಅಥವಾ ತಹಸೀಲ್ದಾರ್‌ ಆಗಬಹುದು ಎಂಬ ಒಂದು ತಪ್ಪು ಕಲ್ಪನೆ ಇದೆ. ಆದರೆ ಇದು ಜ್ಞಾನವಾಗಿದೆ. ಇದೊಂದು ಆಡಳಿತತ್ಮಾಕ ಕ್ಷೇತ್ರವಾಗಿದ್ದು , ವಿಪುಲ ಅವಕಾಶಗಳಿವೆ. ರಾಜ್ಯ ಸರಕಾರದಡಿ ಬರುವ ಎಲ್ಲ ಇಲಾಖೆಗಳಲ್ಲೂ ಸೇವೆ ಸಲ್ಲಿಸಬಹುದಾಗಿದೆ. ಆಡಳಿತ ನಡೆಸಬೇಕೆನ್ನುವವರಿಗೆ ಇದೊಂದು ಅತ್ಯುತ್ತಮ ಅವಕಾಶ.

ಮುಂದಿನ ಪರೀಕ್ಷಾರ್ಥಿಗಳಿಗೆ ನಿಮ್ಮ ಕಿವಿ ಮಾತೇನು ?
ಯಾವುದೇ ಕಾರಣಕ್ಕೂ ತಮ್ಮ ಆಸಕ್ತಿಯನ್ನು ಕೊಂದುಕೊಳ್ಳಬೇಡಿ. ಮೊದಲು ವಿಷಯ ವಸ್ತುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ. ಬಳಿಕ ಅಧ್ಯಯನ ಮಾಡಲು ಆರಂಭಿಸಿ. ಅಂದುಕೊಂಡಿದ್ದನ್ನು ಸಾಧಿಸಿಯೇ ತೀರುತ್ತೇನೆ ಎಂಬ ಛಲ ಮತ್ತು ನಂಬಿಕೆ ಇರಲಿ. ಇವೆಲ್ಲವೂ ಜತೆಗಿದ್ದರೆ ಎಲ್ಲ ಯಶಸ್ಸು ನಮ್ಮನ್ನು ಹಿಂಬಾಲಿಸುತ್ತದೆ. ಈ ಮಾತು ಖಂಡಿತಾ ಅತಿಶಯೋಕ್ತಿಯಲ್ಲ.

ನವೀನ್‌ ರಾವ್‌ ಪರಿಚಯ
ಉಡುಪಿ ಬೆಳ್ಮಣ್ಣು ಮುಂಡ್ಕೂರು ನಿವಾಸಿ ನವೀನ್‌ ಮೊದಲ ಯತ್ನದಲ್ಲೇ ಕೆಎಎಸ್‌ ಪರೀಕ್ಷೆ ತೇರ್ಗಡೆ ಹೊಂದಿ ವಾಣಿಜ್ಯ ತೆರಿಗೆ ಅಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದಾರೆ.ಇವರು ಪ್ರಾಥಮಿಕ ಶಿಕ್ಷಣವನ್ನು ಬೆಳ್ಮಣ್ಣು ಮುಂಡ್ಕೂರು ಗ್ರಾಮದ ಸರಕಾರಿ ಶಾಲೆಯಲ್ಲಿ ಪಡೆದಿದ್ದು, ವಿ.ಎಂ. ಶಾಸ್ತ್ರಿ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ, ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ, ಹಾಸನದ ಮಲೆನಾಡು ಎಂಜಿಯರಿಂಗ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದು ಕೊಂಡಿದ್ದಾರೆ. ಎಂಜಿನಿಯರಿಂಗ್‌ ಮುಗಿಯುತ್ತಿದ್ದಂತೆ 2002ರಲ್ಲಿ ಸೇನೆಗೆ ಸೇರ್ಪಡೆಗೊಂಡು ತಾಂತ್ರಿಕ ವಿಭಾಗದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸುಮಾರು 15.6 ವರ್ಷ ಕಾಲ ಸೇವೆ ಸಲ್ಲಿಸಿದ್ದಾರೆ. ಸೈನ್ಯದಿಂದ ನಿವೃತ್ತಿ ಹೊಂದುತ್ತಿದ್ದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದಿದ್ದಾರೆ. ಎಲ್ಲ ಪರೀಕ್ಷೆಗಳಲ್ಲಿ ಪಾಸಾಗಿದ್ದು, ಪ್ರಸ್ತುತ ಉಡುಪಿ ಅಬಕಾರಿ ಇಲಾಖೆಯಲ್ಲಿ ಕುಂದಾಪುರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next