Advertisement

ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್‌ ನೀರೇ ಗತಿ!

05:41 PM Apr 07, 2018 | Team Udayavani |

ಕಂಪ್ಲಿ: ಕಂಪ್ಲಿ ಭಾಗದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ (ಎಲ್‌ಎಲ್‌ಸಿ) ಹಾಗೂ ಕಾಲುವೆ ವ್ಯಾಪ್ತಿಯ ವಿತರಣಾ ನಾಲೆಗಳಲ್ಲಿ ನೀರು ಸ್ಥಗಿತಗೊಳಿಸಿದ್ದರಿಂದ ಕಾಲುವೆ ಹಾಗೂ ವಿತರಣಾ ನಾಲೆಗಳ ವ್ಯಾಪ್ತಿಯಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆದ ಭತ್ತವನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್‌ ನೀರಿಗೆ ಮೊರೆ ಹೋಗಿದ್ದಾರೆ.

Advertisement

ಕಂಪ್ಲಿ ಭಾಗದಲ್ಲಿ ನಾಟಿ ಮಾಡಿರುವ ಹಿಂಗಾರು ಭತ್ತದ ಬೆಳೆಯು ತೆನೆ ಕಟ್ಟಿಕೊಳ್ಳುವ ಹಂತದಲ್ಲಿದೆ. ಈ ಸಮಯದಲ್ಲಿ ಬೆಳೆಗೆ ನೀರು ಹರಿಸುವುದು ಅಗತ್ಯವಾಗಿದೆ. ಆದರೆ ಮಾ.30ರಿಂದ ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ತಾಲೂಕಿನ ಬೆಳಗೋಡು ಹಾಳು, ದೇವಸಮುದ್ರ, ಮೆಟ್ರಿ, ದೇವಲಾಪುರ ಹಂಪಾದೇವನಹಳ್ಳಿ ಭಾಗಗಳಲ್ಲಿ ರೈತರು ತಮ್ಮ ಭತ್ತದ ಬೆಳೆಯನ್ನು ಉಳಿಸಿಕೊಳ್ಳಲು ಟ್ಯಾಂಕರ್‌ ಮೂಲಕ ನೀರನ್ನು ಹರಿಸಲು ಮುಂದಾಗಿದ್ದಾರೆ.

ಸಮೀಪದ ಬೆಳಗೋಡುಹಾಳು ಗ್ರಾಮದ ಸಮೀಪದಲ್ಲಿ ರೈತ ನಾಯಕರ ಗೋವಿಂದಪ್ಪ ಅವರು ಟ್ಯಾಂಕರ್‌ ಮೂಲಕ ಹೊಲಕ್ಕೆ ನೀರು ಹರಿಸುತ್ತಿದ್ದಾರೆ. ಮೂರು ಎಕರೆ ಹೊಲ ಗುತ್ತಿಗೆ ಪಡೆದು ಎಕರೆಗೆ ಈಗಾಗಲೇ 30 ಸಾವಿರ ರೂ. ವೆಚ್ಚ ಮಾಡಿ ಗಂಗಾ, ಕಾವೇರಿ ತಳಿ ಭತ್ತವನ್ನು ನಾಟಿ ಮಾಡಿದ್ದಾರೆ. ಅದನ್ನು ಉಳಿಸಿಕೊಳ್ಳಲು ಪ್ರತಿ ಟ್ಯಾಂಕರ್‌ಗೆ 800 ರೂ. ವೆಚ್ಚ ಮಾಡುತ್ತಿದ್ದಾರೆ.
 
ಕಂಪ್ಲಿ, ಕುರುಗೋಡು, ಕೋಳೂರು ವ್ಯಾಪ್ತಿಯಲ್ಲಿ ಕಾಲುವೆ ನೀರು ಆಧರಿಸಿ ಸುಮಾರು 80 ಸಾವಿರ ಎಕರೆಯಲ್ಲಿ ರೈತರು
ಭತ್ತ ಬೆಳೆಯಲಾಗಿದೆ. ಕಾಲುವೆಗೆ ನೀರು ಸ್ಥಗಿತಗೊಳಿಸದ ನಂತರ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ನೀರು ಹರಿಸುವಂತೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಜಿಲ್ಲಾಡಳಿತ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಲುವೆಗೆ ನೀರು ಬಿಡದಿದ್ದರೆ ಅಂದಾಜು 600 ರಿಂದ 700 ಕೋಟಿ ರೂ. ನಷ್ಟ ಸಂಭವಿಸಲಿದೆ ಎಂದು ಅಂದಾಜಿಸಲಾಗಿದೆ. ಕೆಲವರು ಕೊಳವೆಬಾವಿ ಅವಲಂಭಿಸಿ ಭತ್ತ ನಾಟಿ ಮಾಡಿದ್ದಾರೆ. ಆದರೆ ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದಾಗಿ ರೈತರು ಜನರೇಟರ್‌ ಬಾಡಿಗೆಗೆ ಪಡೆದು ನೀರು ಹಾಯಿಸಿಕೊಳ್ಳುತ್ತಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಒಂದು ತಿಂಗಳು ಕಾಲುವೆಗೆ ನೀರು ತಡವಾಗಿ ಪೂರೈಸಿದ್ದರಿಂದ ಭತ್ತದ ಬೆಳೆಗೆ ಸಕಾಲಕ್ಕೆ ನೀರು ಸಿಗದೆ ರೈತರು ತೊಂದರೆ ಅನುಭವಿಸುವಂತಾಯಿತು. ಇದೀಗ ಮತ್ತೆ ಹಿಂಗಾರಿನಲ್ಲಿ ನೀರು ಸ್ಥಗಿತಗೊಳಿಸಿದ್ದರಿಂದ ರೈತರನ್ನು ಸಂಕಷ್ಟಕ್ಕೀಡು ಮಾಡಿದೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕನಿಷ್ಠ 10 ದಿನಗಳಾದರೂ ಕಾಲುವೆಗೆ ಹಾಗೂ ವಿತರಣಾ ನಾಲೆಗಳಿಗೆ ನೀರು ಹರಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next