Advertisement

ನೀನೆಂದರೆ ಬರೀ ನಂಬಿಕೆ, ಅಷ್ಟೇ!

11:28 AM Aug 22, 2017 | |

ನನ್ನ ಪ್ರೀತಿ ಅದೆಷ್ಟೋ ಕನವರಿಕೆಗಳ, ಅದೆಷ್ಟೋ ಕನಸುಗಳ, ಅದೆಷ್ಟೋ ದಿನಗಳ ತಪಸ್ಸಿನ ಪ್ರತಿಫ‌ಲ. ಈಗ ನನ್ನ ನಿರ್ಮಲವಾದ ಪ್ರೀತಿಯನ್ನೇ ತಿರಸ್ಕರಿಸಿ ಜೀವಂತವಾಗಿ ಸುಟ್ಟು ಹಾಕಿರುವೆ. ಒಂದಾಗಿ ಕೂಡಿ ಬೆಳೆದ ಪ್ರೀತಿಗೆ ಈಗ ಅಗಲಿಕೆಯ ಮುಳ್ಳು ಚುಚ್ಚಿ ಕಮರಿ ಹೋಗಿದೆ… 

Advertisement

ನನ್ನ ವ್ಯರ್ಥ ಬದುಕಿಗೊಂದು ಅರ್ಥ ನೀಡಿ ನವಚೈತನ್ಯ ತುಂಬಿದ ಚೆಲುವಾಂತ ರಾಜಕುಮಾರಿಗೆ ನೂರು ಒಲವಿನ ಹಾರೈಕೆಗಳು. ನನ್ನುಸಿರಿಗೆ ಹಾಗೂ ಬದುಕಿಗೆ ತುಂಬಾ ಹತ್ತಿರದ ಆತ್ಮೀಯ ಜೀವವೆಂದರೆ, ಅದು ನೀನೇ. ಅದಕ್ಕೇ ನನ್ನ ಜೀವನದಲ್ಲಿ ಹೊತ್ತು ಹೆತ್ತ ತಾಯಿಯ ನಂತರದ ಸ್ಥಾನವನ್ನು ನಿನಗೆ ನೀಡಿದ್ದು.

ನಿನ್ನೆಯ ನೋವುಗಳನ್ನು ಮರೆಸಿ, ಇಂದಿನ ಸುಖ ಹಾಗೂ ನಾಳೆಯ ನಗುವ ತೋರಿದವಳೇ, ಹರಿವ ನೀರಿನಲ್ಲೂ, ಸುರಿವ ಮಳೆಯಲ್ಲೂ, ಬೀಸುವ ಗಾಳಿಯಲ್ಲೂ ನಿನ್ನದೇ ಪ್ರತಿರೂಪ. ನಿನ್ನೊಂದಿಗೆ ಕೈ ಕೈ ಹಿಡಿದು ನಡೆದ ದಿನಗಳು ಇತಿಹಾಸದ ಪುಟ ಸೇರಿವೆ. ಮನಸ್ಸು ದುಃಖದಲ್ಲಿ ಮಡುಗಟ್ಟಿದಾಗ ಮನಕ್ಕೆ ಮುದ್ದಿಸಿ, ಸಾಂತ್ವನಿಸಿ, ಕಚಗುಳಿಯಿಟ್ಟು, ನಕ್ಕು ನಗಿಸಿದ ಘಳಿಗೆಗಳು ಗತಿಸಿ ಹೋಗಿವೆ. ನಾನು ಮೈ ಮರೆತು ಕುಳಿತಾಗ ಬೊಗಸೆಯಲ್ಲಿ ಮಳೆ ನೀರು ಹಿಡಿದು ಮುಖಕ್ಕೆ ಚಿಮುಕಿಸಿ ಖುಷಿಪಡಿಸಿದ ಕ್ಷಣಗಳು ಕಳೆದುಹೋಗಿವೆ. ಈ ರೀತಿಯ ಕಾರಣಗಳಿಂದಲೇ ಈ ಜೀವಕ್ಕೆ ಜೀವದ ಗೆಳತಿಯಾದೆ ನೀನು. ನನ್ನ ಜೀವನದೊಳಗೆ ಮರೆಯಲಾಗದಷ್ಟು ಸಿಹಿ ನೆನಪುಗಳನ್ನು ಬಳುವಳಿಯಾಗಿ ಬಿಟ್ಟು ಹೋದೆ. 

ನನ್ನ ಪ್ರೀತಿ ಅದೆಷ್ಟೋ ಕನವರಿಕೆಗಳ, ಅದೆಷ್ಟೋ ಕನಸುಗಳ, ಅದೆಷ್ಟೋ ದಿನಗಳ ತಪಸ್ಸಿನ ಪ್ರತಿಫ‌ಲ. ಈಗ ನನ್ನ ನಿರ್ಮಲವಾದ ಪ್ರೀತಿಯನ್ನೇ ತಿರಸ್ಕರಿಸಿ ಜೀವಂತವಾಗಿ ಸುಟ್ಟು ಹಾಕಿರುವೆ. ಒಂದಾಗಿ ಕೂಡಿ ಬೆಳೆದ ಪ್ರೀತಿಗೆ ಈಗ ಅಗಲಿಕೆಯ ಮುಳ್ಳು ಚುಚ್ಚಿ ಕಮರಿ ಹೋಗಿದೆ. ನಮ್ಮ ಬದುಕಿನ ಹಾದಿಯೂ ಕವಲೊಡೆದು ನಾನೊಂದು ತೀರ ನೀನೊಂದು ತೀರ. ನೀನಿಲ್ಲದ ನಾನೀಗ ರೆಕ್ಕೆ ಮುರಿದ ಹಕ್ಕಿಯಂತಾಗಿ, ತಂತಿ ಹರಿದ ವೀಣೆಯಂತಾಗಿರುವೆ.

ಆದರೂ ನೀನೆಂದರೆ, ನನ್ನ ವೇದನೆಯ ಬಾಳಿಗೆ ಸುಖದ ಸೆಲೆಯಾದವಳು. ಕೆಟ್ಟ ಕನಸುಗಳ ಕೊಳೆ ತೊಳೆದು ಹೊಸತನದ ಬಾಳಿಗೆ ಬೆಳಕಾದವಳು. ಒಂಟಿತನದ ತೆರೆ ಸರಿಸಿ ಸುಂದರ ಬದುಕಿಗೆ ಜೊತೆಯಾಗಿ ನಿಂತವಳು. ಇವೆಲ್ಲಕ್ಕಿಂತ ಮಿಗಿಲಾಗಿ ನೀನೆಂದರೆ ನಂಬಿಕೆ, ಬರೀ ನಂಬಿಕೆ ಅಷ್ಟೇ. ಕಾರಣ, ನೀನೆಂದರೆ ಪ್ರೀತಿ, ಪ್ರೀತಿಯೆಂದರೆ ನಂಬಿಕೆ, ಅದಕ್ಕೋಸ್ಕರ ಇಲ್ಲಿಯವರೆಗೂ ನಿನ್ನ ಮೇಲಿರೋ ನನ್ನ ನಂಬಿಕೆಯ ಹೊರತು ಬೇರೇನೂ ಗೊತ್ತಿಲ್ಲ. 

Advertisement

ಇನ್ನಾದರೂ ನಿನ್ನ ಪ್ರೀತಿಯ ಜಪತಪದಲ್ಲಿ ಕಂಗೆಟ್ಟು ಕಂಗಾಲಾಗಿರುವ ಈ ನೊಂದ ಮನಕ್ಕೆ ತಂಪನ್ನೆರೆದು ಇಂದು, ಮುಂದು, ಎಂದೆಂದೂ ನೀನೇ ನನಗೆ ಎಲ್ಲವೂ ಆಗಿರು.

ಎಂದೆಂದಿಗೂ ನಿನ್ನವನು…

ರಂಗನಾಥ ಎಸ್‌. ಗುಡಿಮನಿ

Advertisement

Udayavani is now on Telegram. Click here to join our channel and stay updated with the latest news.

Next