Advertisement

BJP: ಸಂಸತ್‌ ಚುನಾವಣೆಗೆ ಯೋಗೇಶ್ವರ್‌ ಸಿದ್ಧತೆ

10:15 PM Jun 22, 2023 | Team Udayavani |

ರಾಮನಗರ: ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್‌ ಅವರು ರಾಜಕೀಯ ವೈರಾಗ್ಯದ ಮಾತುಗಳನ್ನಾಡುತ್ತಿರುವ ಬೆನ್ನಲ್ಲೇ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಾನು ಸಿದ್ಧವಿರುವುದಾಗಿ ಬಿಜೆಪಿ ನಾಯಕ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಸದ್ದು ಜೋರಾಗಿಯೇ ಕೇಳಿಬರುತ್ತಿದೆ. ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಮತ್ತೆ ಮೈಕೊಡವಿ ಮೇಲೆದ್ದಿರುವ ಸಿ.ಪಿ.ಯೋಗೇಶ್ವರ್‌, ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೂ ಜೆಡಿಎಸ್‌ ನಾಯಕ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮಾತ್ರ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

Advertisement

ಜಿಲ್ಲೆಯ ಪ್ರಭಾವಿ ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್‌ ಜತೆ ಯೋಗೇಶ್ವರ್‌ ಆರಂಭದಿಂದಲೂ “ಲವ್‌ ಆ್ಯಂಡ್‌ ಹೇಟ್‌’ ಸಂಬಂಧ ಇರಿಸಿಕೊಂಡೇ ಬಂದಿದ್ದಾರೆ. ಎರಡು ಬಾರಿ ಕಾಂಗ್ರೆಸ್‌ ತೊರೆದಾಗಲೂ ಡಿ.ಕೆ.ಶಿವಕುಮಾರ್‌ ಅವರನ್ನು ಬೈದುಕೊಂಡೇ ಹೊರ ಬಂದಿರುವ ಯೋಗೇಶ್ವರ್‌, ಇದುವರೆಗೆ ಡಿಕೆಶಿ ಮತ್ತು ಅವರ ಕುಟುಂಬದ ವಿರುದ್ಧ ಯಾವುದೇ ಚುನಾವಣೆ ಎದುರಿಸಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆ ಡಿ.ಕೆ.ಶಿವಕುಮಾರ್‌ ಸಹೋದರ ಡಿ.ಕೆ.ಸುರೇಶ್‌ ಮತ್ತು ಸಿ.ಪಿ.ಯೋಗೇಶ್ವರ್‌ ನಡುವಿನ ಜಿದ್ದಾಜಿದ್ದಿನ ಅಖಾಡವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಡಿ.ಕೆ.ಸುರೇಶ್‌ ರಾಜಕೀಯ ವೈರಾಗ್ಯ ಮುಂದುವರಿಸುವರೇ, ಅಥವಾ ಮತ್ತೆ ಕಣಕ್ಕಿಳಿಯುವರೇ ಎಂಬುದಿನ್ನೂ ಸ್ಪಷ್ಟವಾಗಿಲ್ಲ.

ರಾಮನಗರ ಕ್ಷೇತ್ರದಲ್ಲಿ ಪುತ್ರ ನಿಖೀಲ್‌ ಸೋಲಿಗೆ ಸ್ಮಾರ್ಟ್‌ಕಾರ್ಡ್‌ ತಂತ್ರ ಕಾರಣವಾಗಿದ್ದು, ಈ ತಂತ್ರದ ಹಿಂದೆ ಡಿ.ಕೆ.ಸುರೇಶ್‌ ಪಾತ್ರ ಇದೆ ಎಂದು ಎಚ್‌.ಡಿ.ಕುಮಾರಸ್ವಾಮಿ ಗರಂ ಆಗಿದ್ದಾರೆ. ಮಗನ ಸೋಲಿನ ಸೇಡು ತೀರಿಸಿಕೊಳ್ಳಲು ಎಚ್‌ಡಿಕೆ ಕಾದು ಕುಳಿತಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರತೀಕಾರ ತೀರಿಸಿಕೊಳ್ಳಲಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next