Advertisement

ಸ್ವಸ್ಥ ಜೀವನಕ್ಕೆ ಯೋಗ ಸಹಕಾರಿ

12:41 PM Jun 22, 2018 | |

ಶಿವಮೊಗ್ಗ: ಸ್ವಸ್ಥ ಜೀವನ ಹೊಂದಲು ಯೋಗ ಸಹಕಾರಿ ಎಂದು ಶಾಸಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ, ಆಯುಷ್‌ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಯೋಗ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ನಗರದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಯೋಗ ದೇಶದ ನಾಗರಿಕರಲ್ಲಿ ಸಹೋದರತ್ವ ಮೂಡಿಸಿ ಸಹಬಾಳ್ವೆಯಿಂದ ಒಂದಾಗಿ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು.

ಯೋಗ ದಿನ ಕಾರ್ಯಕ್ರಮದಲ್ಲಿ ಪ್ರಧಾನಿ ಸೇರಿದಂತೆ ದೇಶದ ಅನೇಕ ಗಣ್ಯರು ಭಾಗಿಯಾಗುತ್ತಿದ್ದಾರೆ. ವಿಶೇಷವೆಂದರೆ ಡೆಹ್ರಾಡೂನ್‌ ನಲ್ಲಿ 55,000ಕ್ಕೂ ಹೆಚ್ಚು ಮಂದಿ ಏಕಕಾಲದಲ್ಲಿ ಯೋಗ ಮಾಡಿ ದಾಖಲೆ ಬರೆಯುತ್ತಿರುವುದು ಹರ್ಷದ ಸಂಗತಿ ಎಂದರು.

ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಹಲವು ಧರ್ಮಗಳ ಪ್ರತಿನಿಧಿಗಳು ಭಾಗಿಯಾಗಿ, ಬ್ರಾತೃತ್ವದ ಮನೋಭಾವನೆಯಿಂದ ಭಾಗಿಗಳಾಗುತ್ತಿರುವುದು ಭಾರತೀಯರೆಲ್ಲರಲ್ಲೂ ಸಂತಸ ತಂದಿದೆ. ಈ ಹರ್ಷಕ್ಕೆ ನಮ್ಮ ದೇಶ ಭಾಜನವಾಗಿರುವುದು ಮತ್ತಷ್ಟು ಸಂಭ್ರಮ ತಂದಿದೆ ಎಂದು ಹೇಳಿದರು.

ಅಸಂಖ್ಯಾತ ಜನರು ಯೋಗ ಕಲಿತು ದುಶ್ಚಟಗಳಿಂದ ದೂರಾಗಿ, ತಮ್ಮ ಜೀವನ ಶೈಲಿ ಬದಲಾಯಿಸಿಕೊಂಡಿದ್ದಾರೆ. ಇದರಿಂದಾಗಿ ಭಾರತದ ವೈಶಿಷ್ಟ ವಿಶ್ವಕ್ಕೆ ಪರಿಚಯವಾಗಿದೆ. ಶಾಂತಿ ನೆಮ್ಮದಿ ತರುವ ಯೋಗ ಜನರಲ್ಲಿ ಶಾರೀರಿಕ ಮತ್ತು ಮಾನಸಿಕ ನೆಮ್ಮದಿ ಸೃಜಿಸಲು ಪ್ರೇರಕ ಶಕ್ತಿಯಾಗಿದೆ ಎಂದು ಹೇಳಿದರು. ಯೋಗದಿಂದ ಮನಸ್ಸು-ದೇಹದ ಆಲಸ್ಯ ದೂರಾಗುವುದು. ಯೋಗದಿಂದ ರೋಗದ ಭಯವಿಲ್ಲ. ಯಾವುದೇ ಅಡ್ಡಪರಿಣಾಮಗಳಿಲ್ಲದೇ ರೋಗಗಳನ್ನು ದೂರ ಮಾಡುವ, ದೇಹಕ್ಕೆ ನವ ಚೈತನ್ಯವನ್ನು ನೀಡುವ ಶಕ್ತಿ ಮತ್ತು ಪ್ರಭಾವಶಾಲಿ ಸಹಜ ಚಿಕಿತ್ಸೆ ಯೋಗ ಎಂದರು.

Advertisement

ಗ್ರಾಮಾಂತರ  ಕ್ಷೇತ್ರದ ಶಾಸಕ ಕೆ.ಬಿ. ಅಶೋಕನಾಯ್ಕ ಮಾತನಾಡಿ, ಯೋಗದಿಂದ ಮಾನವ ಸಹಜವಾದ ಸ್ನೇಹ, ಪ್ರೀತಿ, ಶಾಂತಿ, ನಿಸ್ವಾರ್ಥ ಸೇವಾ ಮನೋಭಾವ, ವಿಶ್ವಬ್ರಾತೃತ್ವದ ಶ್ರೇಷ್ಠಭಾವನೆ ಬೆಳೆದು ಬರುತ್ತದೆ. ಸುಖ-ಶಾಂತಿ-ಸಮೃದ್ಧಿ ಹಾಗೂ ಆರೋಗ್ಯವಂತ ವ್ಯಕ್ತಿ, ಸಮಾಜ ಮತ್ತು ವಿಶ್ವದ ನಿರ್ಮಾಣಕ್ಕೆ ಯೋಗಶಕ್ತಿ ಭದ್ರಬುನಾದಿಯಾಗಲಿದೆ.

ದೇಹದ ಆಂತರಿಕ ಭಾಗಗಳನ್ನು ಯೋಗದಿಂದ ನಿಯಂತ್ರಿಸಬಹುದಾಗಿದೆ ಎಂದರು. ಕಾರ್ಯಕ್ರಮಕ್ಕೆ ಮುನ್ನ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಂದ ಯೋಗ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನಂತರ ಸಾರ್ವಜನಿಕರಲ್ಲಿ ಯೋಗದ ಅರಿವು ಮೂಡಿಸಲು ಜಾಥಾ ಏರ್ಪಡಿಸಲಾಗಿತ್ತು.

ಜಾಥಾದಲ್ಲಿ ಆಯುರ್ವೇದ ವೈದ್ಯರು, ಸಿಬ್ಬಂದಿಗಳು, ವಿವಿಧ ಆಯುರ್ವೇದ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು,
ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಿವಿಧ ಯೋಗ ಸಂಘ-ಸಂಸ್ಥೆಗಳ ಯೋಗಪಟುಗಳು
ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಜಿಪಂ ಉಪ ಕಾರ್ಯದರ್ಶಿ ಎ.ಎಸ್‌. ಮಣಿ, ಡಾ| ರಂಗಸ್ವಾಮಿ, ಉದ್ಯಮಿ ಡಿ.ಎಸ್‌. ಅರುಣ್‌, ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ರಮೇಶ್‌, ಆಯುಷ್‌ ಅಧಿಕಾರಿ ಡಾ| ಹರ್ಷಪುತ್ರಾಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next