Advertisement

ಹೌದು, ನಾನು ಕಣ್ಣೀರು ಸುರಿಸುವ ಸಿಎಂ

11:41 AM Apr 20, 2019 | pallavi |

ತೇರದಾಳ (ಬನಹಟ್ಟಿ): ನನಗೆ ಮನುಷ್ಯತ್ವ ಇದೆ. ಬಡವರ ಕಷ್ಟಗಳಿಗೆ ಭಾವನಾತ್ಮಕವಾಗಿ ಸ್ಪಂದಿಸಿದ್ದೇನೆ. ನಾನು ಕಣ್ಣೀರು ಸುರಿಸುವ ಸಿಎಂ ಹೌದು. ಭಾವನಾತ್ಮಕ ವಿಷಯವಿದ್ದಾಗ ಕಣ್ಣೀರು ಹಾಕಿದ್ದೇನೆ. ಇದರ ಬಗ್ಗೆ ಮೋದಿ ಲಘುವಾಗಿ ಮಾತನಾಡುತ್ತಾರೆ. ನಮ್ಮದು ಮಜಬೂರ ಸರ್ಕಾರ ಅಲ್ಲ. ಜೆಡಿಎಸ್‌ ಮತ್ತು ಕಾಂಗ್ರೆಸ್‌ನ ಮೈತ್ರಿ ಸರ್ಕಾರ ಮಜಬೂತ ಸರ್ಕಾರವಾಗಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಮಜಬೂರ ಸರ್ಕಾರ ಮೋದಿ ಹೇಳಿಕೆಗೆ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

Advertisement

ತೇರದಾಳದ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ಮೈತ್ರಿ ಬಾಗಲಕೋಟೆ ಲೋಕಸಭಾ ಅಭ್ಯರ್ಥಿ ವೀಣಾ ಕಾಶಪ್ಪನವರ ಪರ ಪ್ರಚಾರದ ಬೃಹತ್‌ ಸಮಾರಂಭದಲ್ಲಿ ಮಾತನಾಡಿದ ಅವರು,

ಮೋದಿ ಬಾಲಕೋಟೆಯಲ್ಲಿ ಬಂದಾಗ ಉತ್ತರ ಕರ್ನಾಟಕ ಹಾಗೂ ಅದರಲ್ಲೂ ಬಾಗಲಕೋಟೆಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಪ್ರಸ್ತಾಪಿಸಲಿಲ್ಲ. ಆದರೆ ಕೊನೆಯ ಹಂತದಲ್ಲಿ ಈಗ ಆಲಮಟ್ಟಿ ಜಲಾಶಯವನ್ನು ನೆನೆಪಿಸಿಕೊಂಡಿದ್ದಾರೆ. ಹೂಳು ತೆಗೆಯುವುದು ಹಾಗೂ ಜಲ ನಿಧಿಯನ್ನು ಹೊಸದಾಗಿ ಕಾರ್ಯರೂಪಕ್ಕೆ ತಂದು ಜಲಸಚಿವಾಲಯ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ ಈಗಾಗಲೇ ಕೇಂದ್ರದಲ್ಲಿ ಜಲ ಸಂಪನ್ಮೂಲ ಇಲಾಖೆ ಇದೆ. ಅದಕ್ಕೆ ಗಡ್ಕರಿಯವರೇ ನೀರಾವರಿ ಸಚಿವರು. 5 ವರ್ಷದಲ್ಲಿ ಈ ಭಾಗದ ಪ್ರಮುಖ ನೀರಾವರಿ ಸಮಸ್ಯೆಗಳಿಗೆ ಸ್ಪಂದಿಸದಿರುವ ಮೋದಿ ಮುಂದಿನ ಬಾರಿ ಪ್ರಧಾನ ಮಂತ್ರಿಯಾದರೆ ಈ ಭಾಗದ ಜನತೆಯ ಈ ನೀರಾವರಿ ಸೌಲಭ್ಯಗಳಿಗೆ ಹಣವನ್ನು ಕೊಡುತ್ತಾರೆ ಎಂಬುದು ಗ್ಯಾರಂಟಿ ಇಲ್ಲ ಎಂದರು.

ಮಾತೃಪೂರ್ಣ ಯೋಜನೆಯಡಿ ಬಾಣಂತಿ ತಾಯಿಯ ಆರೋಗ್ಯ ಮತ್ತು ಮಗುವಿನ ರಕ್ಷಣೆಗಾಗಿ 6 ರಿಂದ 12ನೇ ತಿಂಗಳವರೆಗೆ 12,000 ರೂ. ಕೊಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು 24 ಸಾವಿರ ರೂ.ಗೆ ಹೆಚ್ಚಿಸಲಾಗುವುದು. ಅದೇ ರೀತಿಯಾಗಿ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಶಾಶ್ವತವಾಗಿ 5000 ರೂ. ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಅದರ ಹಿನ್ನೆಲೆಯಲ್ಲಿ ಈಗಿರುವ ಮೊತ್ತವನ್ನು 500ರಿಂದ ಒಂದು ಸಾವಿರದವರೆಗೆ ಹೆಚ್ಚಿಸಲಾಗುವುದು. ಬೀದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಬಡವರ ಬಂಧು ಯೋಜನೆ ಜಾರಿಗೆ ತರಲಾಗಿದೆ. ಬಾಗಲಕೋಟೆಯ ವಿವಿಧ ನೀರಾವರಿ ಯೋಜನೆ, ರಸ್ತೆ ಅಭಿವೃದ್ಧಿ ಸೇರಿದಂತೆ ಒಟ್ಟಾರೆ ಜಿಲ್ಲೆಯ ಅಭಿವೃದ್ಧಿಗೆ 3000 ಕೋಟಿ ರೂ.ಗಳನ್ನು ಹತ್ತು ತಿಂಗಳಲ್ಲಿ ಅನುದಾನ ನೀಡಿದ್ದೇವೆ. ತೇರದಾಳ ನೂತನ ತಾಲೂಕು ಘೋಷಣೆ ಮಾಡಿದ್ದೇವೆ. ಅದರ ಜೊತೆಗೆ ಎಲ್ಲ ನೂತನ ತಾಲೂಕುಗಳಿಗೆ ಮೂಲಭೂತ ಸೌಲಭ್ಯ ಒದಗಿಸಲಾಗುವುದು ಎಂದರು.

ನೀರಿನಲ್ಲಿ ಕೀಳು ರಾಜಕೀಯ: ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರನ್ನು ಬಿಡುಗಡೆ ಮಾಡುವಲ್ಲಿ ಬಿಜೆಪಿ ಮುಖಂಡರು ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈಗಾಗಲೇ ಹತ್ತಕ್ಕಿಂತ ಹೆಚ್ಚು ಬಾರಿ ಮಹಾರಾಷ್ಟ್ರ ಸರ್ಕಾರವನ್ನು ವಿನಂತಿಸಿಕೊಂಡಿದ್ದಾರೆ. ಆದರೆ ಅಲ್ಲಿಯ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವರು ನೀಡು ಬಿಡುಗಡೆ ಮಾಡುತ್ತಿಲ್ಲ. ಆಲಮಟ್ಟಿ ಮತ್ತು ಕೃಷ್ಣಾ ನದಿ ನೀರಿನ ಯೋಜನೆಗಾಗಿ ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ 7500 ಕೋಟಿ ಹಣ ಬಿಡುಗಡೆ ಮಾಡಿದ್ದರು. ಆದರೆ ಪ್ರಧಾನಿ ಮೋದಿ ಇದುವರೆಗೆ ಯಾವುದೇ ಹಣವನ್ನು ಬಿಡುಗಡೆ ಮಾಡಿಲ್ಲ. ಆದರೆ ಈಗ ಆಲಮಟ್ಟಿಯ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ ಎಂದರು.

Advertisement

ತಂಗಿ ವೀಣಾ ಗೆಲ್ಲಿಸಿ: ಸಿಎಂ ಕುಮಾರಸ್ವಾಮಿ
ಬಾಗಲಕೋಟೆ ಲೋಕಸಭಾ ಅಭ್ಯರ್ಥಿ ವೀಣಾ ಕಾಶಪ್ಪನವರ ಒಬ್ಬ ಸಮರ್ಥವಾದ ಅಭ್ಯರ್ಥಿ. ಅವರು ಸಂಸದರಾದರೆ ಬಾಗಲಕೋಟೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಗಮನ ನೀಡುತ್ತಾರೆ. ತಂಗಿಯನ್ನು ಗೆಲ್ಲಿಸಿ ಕೊಡಿ. ದೆಹಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಸತ್ಯಾಗ್ರಹ ಮಾಡಿದರೆ ಈ ಪ್ರಧಾನಿ ಸೌಜನ್ಯಕ್ಕಾದರೂ ಅವರನ್ನು ಕರೆಯಿಸಿ ಮಾತನಾಡಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಕಠಿಣ ಹೃದಯದ ಪ್ರಧಾನಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

ಗದ್ದಿಗೌಡರ ಮಹಿಳೆ ಎದುರು ಸೋಲುತ್ತಾರೆ: ಸಚಿವ ಪಾಟೀಲ
ತೇರದಾಳ:
ಮೂರು ಬಾರಿ ಎದುರಾಳಿ ಪುರುಷರನ್ನು ಸೋಲಿಸಿ ಗೆದ್ದ ಗದ್ದಿಗೌಡರು, ಈಗ ಓರ್ವ ಮಹಿಳೆಗೆ ಸೋಲುತ್ತಾರೆ. ಏಕೆಂದರೆ ಯಾವ ಅಭಿವೃದ್ಧಿ ಮಾಡಿಲ್ಲ. ಸೂಕ್ತ ಅಭ್ಯರ್ಥಿಯಾದ ವೀಣಾ ಕಾಶಪ್ಪನವರ ಅವರನ್ನು 40 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಲೋಕಸಭೆ ಚುನಾವಣೆಯ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಪರ ಪ್ರಚಾರದ ಬೃಹತ್‌ ಸಮಾರಂಭದಲ್ಲಿ ಅವರು ಮಾತನಾಡಿದರು. ಬೂಟಾಟಿಕೆಯ ಭಾಷಣವನ್ನೆ ಬಂಡವಾಳ ಮಾಡಿಕೊಂಡ ಬಿಜೆಪಿಗೆ ಬಾಗಲಕೋಟೆ ಜನತೆಯಿಂದ ಮತಕೇಳುವ ನೈತಿಕತೆಯಿಲ್ಲ. ತಮ್ಮ ಸರಕಾರವಿದ್ದ ರಾಜ್ಯಗಳಲ್ಲಿ ರೈತರು ಸಾಲಮನ್ನಾ ಮಾಡಲು ಉಪವಾಸ ಕುಳಿತರು ಸಹ ಪ್ರಧಾನಿ ರೈತರ ಸಾಲಮನ್ನಾ ಮಾಡಿಲ್ಲ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಸರಕಾರಗಳೇ ರೈತರ ಸಾಲಮನ್ನಾ ಮಾಡಿದ್ದು. ಅದಕ್ಕೆ ರೈತರಿಂದ ಮತಕೇಳುವ ಹಕ್ಕು ಅವರಿಗಿಲ್ಲ.

ಸಕ್ಕರೆ ಸಚಿವ ಆರ್‌.ಬಿ. ತಿಮ್ಮಾಪೂರ ಮಾತನಾಡಿ, ಮನಮೋಹನ ಸಿಂಗ್‌ ಅವರ ಕೇಂದ್ರ ಸರಕಾರ, ಸಿದ್ಧರಾಮಯ್ಯ ಹಾಗೂ ಕುಮಾರಸ್ವಾಮಿಯವರ ರಾಜ್ಯ ಸರಕಾರಗಳು ರೈತರ ಸಾಲಮನ್ನಾ ಮಾಡಿವೆ. ಬಿಜೆಪಿಗೆ ರೈತರಿಂದ ಮತ ಕೇಳುವ ಹಕ್ಕಿಲ್ಲ. ಈಶ್ವರಪ್ಪನವರಿಗೆ ಹಿಂದುಳಿದ ಜನಾಂಗದ ಒಬ್ಬರಿಗೂ ಟಿಕೆಟ್ ಕೊಡಿಸಲಾಗಿಲ್ಲ. ಹಿಂದುಳಿದವರನ್ನು ಮತ ಕೇಳುವ ಹಕ್ಕಿಲ್ಲ. 15 ವರ್ಷ ಸಂಸದರಾದರೂ ಅಭಿವೃದ್ಧಿ ಮಾಡದ ಗದ್ದಿಗೌಡ್ರು ನಿದ್ದಿಗೌಡ್ರರಾಗಿದ್ದಾರೆ. ಅವರಿಗೇಕೆ ಮತ ನೀಡಬೇಕು ಎಂದರು.

ಅಭ್ಯರ್ಥಿ ವೀಣಾ ಕಾಶಪ್ಪನವರ ಮಾತನಾಡಿ, ಬಾಗಲಕೋಟೆ ಭಾಷಣದಲ್ಲಿ ಮೋದಿಯವರು ತಮ್ಮ ಅಭ್ಯರ್ಥಿ ಬಗ್ಗೆ ಏನೂ ಹೇಳಲಿಲ್ಲ. ಹೇಳುವಂತದ್ದೇನಾದರು ಇದ್ದರೆ ಹೇಳುತ್ತಿದ್ದರು. ಕೇವಲ ತಮ್ಮ ಸರಕಾರ ನೋಡಿ ಮತ ಹಾಕಬೇಕಂತೆ. ಈ ಬಾರಿ ನನಗೆ ಆಶೀರ್ವಾದ ಮಾಡಿದರೆ, ಅದು ನನಗೆ ಅಧಿಕಾರವೆಂದು ಭಾವಿಸದೆ ಸೇವೆಯ ಭಾಗ್ಯವೆಂದು ತಿಳಿದು ಸೇವೆ ಮಾಡುತ್ತೇನೆ. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆಂದು ಮತಯಾಚಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳನ್ನು ತೇರದಾಳ ತಾಲೂಕು ಹೋರಾಟ ಸಮಿತಿ, ವಿವಿಧ ಸಂಘಟನೆ ಪರವಾಗಿ ಸನ್ಮಾನಿಸಲಾಯಿತು. ಎಸ್‌.ಆರ್‌. ಪಾಟೀಲ, ಆನಂದ ನ್ಯಾಮಗೌಡ, ಜೆ.ಟಿ. ಪಾಟೀಲ, ಪಾರಸ್ಮಲ್ ಜೈನ್‌, ಎಸ್‌.ಆರ್‌. ನವಲಿಹಿರೇಮಠ, ಬಸವರಾಜ ಕೊಣ್ಣೂರ, ಅಜಯ್‌ಕುಮಾರ ಸರ್‌ನಾಯಿಕ್‌, ಶಿವಾನಂದ ಉದಪುಡಿ, ಎಚ್.ವೈ. ಮೇಟಿ, ಎನ್‌.ಎಸ್‌. ದೇವರವರ, ಘನಶಾಂ ಬಾಂಡಗೆ, ಬಿ.ಎ. ದೇಸಾಯಿ, ಬಾಯಕ್ಕ ಮೇಟಿ, ಲಲಿತಾ ನಂದೆಪ್ಪನವರ, ಪ್ರವೀಣ ನಾಡಗೌಡ, ಭುಜಬಲಿ ಕೆಂಗಾಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next