Advertisement

ಹೆಸರು ಬೆಳೆಗೆ ಹಳದಿ ರೋಗ

11:34 AM Jul 22, 2019 | Suhan S |

ಯಲಬುರ್ಗಾ: ಕಳೆದ ನಾಲ್ಕು ವರ್ಷ ನಿರಂತರ ಬರಗಾಲದ ಸಂಕಷ್ಟ ಅನುಭವಿಸಿದ ತಾಲೂಕಿನ ರೈತರು, ಈ ಬಾರಿಯಾದರೂ ಮುಂಗಾರು ಪೂರ್ವ ಅಲ್ಪ, ಸ್ವಲ್ಪ ಮಳೆ ಸುರಿದಿದ್ದರಿಂದ ತಾಲೂಕಿನ ರೈತರು ಹೆಸರನ್ನು ಬಿತ್ತನೆ ಮಾಡಿದ್ದರು. ಲಭ್ಯವಿರುವ ಪ್ರಮಾಣದ ತೇವಾಂಶದಿಂದ ಹೆಸರು ಬೆಳೆ ಚೆನ್ನಾಗಿಯೇ ಬೆಳೆದಿದೆ. ಆದರೆ ಇತ್ತೀಚೆಗೆ ಹಳದಿ ರೋಗ ಕಾಣಿಸಿಕೊಂಡಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.

Advertisement

ಹವಾಮಾನ ವೈಪರೀತ್ಯದಿಂದ ಹೆಸರು ಬೆಳೆ ಹಳದಿ ಎಲೆ ನಂಜು ರೋಗಕ್ಕೆ ಹಾಗೂ ಕೀಟಬಾಧೆಗೆ ತುತ್ತಾಗಿದ್ದು, ರೈತ ವಲಯದಲ್ಲಿ ಆತಂಕ ಶುರುವಾಗಿದೆ. ಹೆಸರು ಕಡಿಮೆ ವೆಚ್ಚ, ಅಲ್ಪಾವಧಿಯಲ್ಲಿಯೇ ಹೆಚ್ಚು ಲಾಭ ತಂದುಕೊಡುವ ಬೆಳೆಯಾಗಿದ್ದರಿಂದ ಕೃಷಿಕರು ಹೆಚ್ಚಿನ ಪ್ರಮಾಣದಲ್ಲಿ ಮುಂಗಾರಿನ ಸಮಯದಲ್ಲಿ ಈ ಬೆಳೆಯನ್ನೇ ಬಿತ್ತನೆ ಮಾಡಿದ್ದಾರೆ. ಕೀಟ ಬಾಧೆ ಒಕ್ಕರಿಸಿ ಎಲೆಗಳು ಮುದುರಿಕೊಂಡಿವೆ. ಹೆಸರಿಗೆ ಜಿಗಿ ಹುಳು, ಹೇನು, ನಂಜು ರೋಗ ಹಾಗೂ ಬೂದಿ ರೋಗ ತಗುಲಿ ಬೆಳೆ ನೆಲಕಚ್ಚುತ್ತಿದೆ. ಬಂಪರ್‌ ಬೆಳೆಯ ನಿರೀಕ್ಷೆಯಲ್ಲಿದ್ದ ಅನ್ನದಾತನ ಕನಸು ಕಮರುತ್ತಿದೆ.

13814 ಹೆಕ್ಟೇರ್‌ ಬಿತ್ತನೆ: ಕೆಂಪು ಮಿಶ್ರಿತ ಭೂಮಿ, ಎರಿ ಭಾಗ ತಾಲೂಕಿನಲ್ಲಿ ಹೆಚ್ಚಿದೆ. ಯಲಬುರ್ಗಾ, ಮಂಗಳೂರು, ಕುಕನೂರು, ಹಿರೇವಂಕಲಕುಂಟಾ ಭಾಗದಲ್ಲಿ ಹೆಸರು ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದೆ.

ಕೃಷಿ ಇಲಾಖೆಯ ಅಂದಾಜಿನ ಪ್ರಕಾರ ಯಲಬುರ್ಗಾ ಹೋಬಳಿ 2850 ಹೆಕ್ಟೇರ್‌, ಕುಕನೂರು ಹೋಬಳಿ 6300 ಹೆಕ್ಟೇರ್‌, ಮಂಗಳೂರು 4574 ಹೆಕ್ಟೇರ್‌, ಹಿರೇವಂಕಲಕುಂಟಾ 90 ಹೆಕ್ಟೇರ್‌, ಈ ರೀತಿಯಾಗಿ ಹೋಬಳಿವಾರು ಬಿತ್ತನೆ ಆಗಿದೆ. ಈ ಪೈಕಿ ಎರಿ ಭಾಗ ಕುಕನೂರು ಹೋಬಳಿಯಲ್ಲಿ ಹೆಚ್ಚು ಹೆಸರು ಬಿತ್ತನೆ ಮಾಡಲಾಗಿದೆ.

ಕುಕನೂರು ಹೋಬಳಿಯ ಚಿಕೇನಕೊಪ್ಪ, ಬಿನ್ನಾಳ, ಸಿದ್ನೇಕೊಪ್ಪ, ಸೋಂಪುರ, ಯರೇಹಂಚಿನಾಳ ಗ್ರಾಮಗಳಲ್ಲಿ ಹೆಸರು ಬೆಳೆ ಚೆನ್ನಾಗಿ ಬೆಳೆದಿದೆ. ಬೆಳೆದು ನಿಂತು ಹೆಸರು ಬೆಳೆ ಕಂಡು ರೈತರು ಸದ್ಯ ಫಸಲಿನ ನಿರೀಕ್ಷೆ ಹೊಂದಿದ್ದಾರೆ. ಆದರೆ ಹಳದಿ ನಂಜು ರೋಗ ರೈತರ ಪಾಲಿಗೆ ಮತ್ತೆ ಶಾಪವಾಗಿದೆ.

Advertisement

ಹೊಲದಲ್ಲಿ ಹೆಸರು ಬೆಳೆ ಹಳದಿ ಬಣಕ್ಕೆ ತಿರುಗಿರುವುದು ಹಾಗೂ ಕೀಟಬಾಧೆಗೆ ತುತ್ತಾಗಿದ್ದರಿಂದ ಹಾಕಿದ ಬಂಡವಾಳ ವಾಪಸ್‌ ಬರತ್ತೋ ಇಲ್ಲವೋ ಎನ್ನೋ ಚಿಂತಿ ಆಗೈತಿ ಎನ್ನುವುದು ರೈತರ ಅಳಲು.

ರೋಗ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ. ತಾಲೂಕಿನ ನಾನಾ ಕಡೆಗಳಲ್ಲಿ ಖಾಸಗಿ ಅಂಗಡಿಯಲ್ಲಿ ಔಷಧ ಪಡೆದು ಸಿಂಪರಣೆ ಮಾಡುವ ಪ್ರಯತ್ನದಲ್ಲಿದ್ದಾರೆ. ಆದರೆ ಬಹುತೇಕ ರೈತರು ಯಾವ ಕ್ರಿಮಿನಾಶಕ ಸಿಂಪರಣೆ ಮಾಡಬೇಕು ಎನ್ನುವ ಮಾಹಿತಿ ಇಲ್ಲದೇ ಆತಂಕದಲ್ಲಿ ಜೀವನ ಕಳೆಯುತ್ತಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಕೂಡ ಜಮೀನುಗಳಿಗೆ ಭೇಟಿ ನೀಡಿ ಮಾಹಿತಿ ನೀಡದ ಕಾರಣ ರೈತರಿಗೆ ದಾರಿ ತೋಚದಾಗಿದೆ. ಸತತ ಬರದಿಂದ ತತ್ತರಿಸಿದ್ದ ರೈತರಿಗೆ ರೋಗ ಬಾಧೆಯಿಂದಾಗಿ ಪುನಃ ನಷ್ಟಕ್ಕೆ ಒಳಗಾಗುವ ಆತಂಕ ಶುರುವಾಗಿದೆ. ಕೃಷಿ ಇಲಾಖೆಯೇ ರೈತರ ನೆರವಿಗೆ ನಿಂತು ರೋಗ ನಿವಾರಣೆಗೆ ಶ್ರಮಿಸಬೇಕಿದೆ.

 

•ಮಲ್ಲಪ್ಪ ಮಾಟರಂಗಿ

Advertisement

Udayavani is now on Telegram. Click here to join our channel and stay updated with the latest news.

Next