Advertisement

ಹಳದಿ ರೋಗ, ಕೃಷಿ ಕಾರ್ಮಿಕರಿಗೆ ನೆರವು

02:17 PM Jan 17, 2018 | |

ಸುಳ್ಯ : ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣ ಬಿಜೆಪಿ ಚುನಾವಣಾ ಪೂರ್ವ ಪ್ರಣಾಳಿಕೆಗೆ ತಯಾರಿ ಸಂಬಂಧಿಸಿ ತಾಲೂಕಿನಲ್ಲಿ ಮಂಗಳವಾರ ನಡೆದ ಚಿಂತನಾ ಸಭೆಯಲ್ಲಿ ಬೇರೆ-ಬೇರೆ ಕ್ಷೇತ್ರದ ಪ್ರಮುಖರು ನಾನಾ ಸಲಹೆ, ಅಭಿಪ್ರಾಯಗಳನ್ನು ಮಂಡಿಸಿದರು.

Advertisement

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್‌ ಭಾರದ್ವಾಜ್‌ ಅವರು, ಯುವ ಜನತೆಗೆ ರಾಜಕೀಯ ಎಂದರೆ ಅಸಹ್ಯಪಟ್ಟುಕೊಳ್ಳುವ ಸ್ಥಿತಿ ಇದೆ. ಪರಸ್ಪರ ತೆಗಳಿಗೆ ನಿಲ್ಲಿಸಬೇಕು. ನೋಟು ಬ್ಯಾನ್‌ ನಿಷೇಧದ ಪರಿಣಾಮ ಮತ್ತು ಡಿಜಿಟಲಿಕರಣದ ಮಹತ್ವವನ್ನು ಜನರಿಗೆ ತಿಳಿಸಬೇಕು. ಕೃಷಿ ಕಾರ್ಮಿಕರಿಗೆ ಸಬ್ಸಿಡಿ, ಟೋಲ್‌ ಫ್ರೀ ಹೆದ್ದಾರಿ ನಿರ್ಮಾಣ ಮಾಡಬೇಕು ಎಂದರು.

ವಸಂತ ಭಟ್‌ ತೊಡಿಕಾನ ಮಾತನಾಡಿ, ಅಡಿಕೆಗೆ ಬಂದಿರುವ ಹಳದಿ ರೋಗದಿಂದ ಬೆಳೆ ನಾಶವಾದ ಪ್ರದೇಶದಲ್ಲಿ ಸಂಪೂರ್ಣ ಸಾಲ ಮನ್ನಾ, ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಣೆ, ತಾಳೆ ಬೆಳೆಗಾಗಿ ಕ್ಯಾಂಪ್ಕೋ ಮಾದರಿಯಲ್ಲಿ ಸಹಕಾರ ಸಂಸ್ಥೆ ಸ್ಥಾಪನೆಗೆ ಸರಕಾರ ಸಹಕಾರ ನೀಡಬೇಕು ಎಂದರು.

ಸಂಚಾರ ವ್ಯವಸ್ಥೆ ಸುಗಮಕ್ಕೆ ನಗರದ ಮಧ್ಯದಿಂದ ರಾಜ್ಯ ಹೆದ್ದಾರಿಗಳನ್ನು ಹೊರಗೆ ನಿರ್ಮಿಸಬೇಕು. ಜಿಲ್ಲಾ ಕೇಂದ್ರದ
ಮಾರುಕಟ್ಟೆಗೆ ಹಳ್ಳಿಗಳ ಕೃಷಿ ಉತ್ಪನ್ನಗಳನ್ನು ನೇರವಾಗಿ ಸಾಗಿಸುವ ವ್ಯವಸ್ಥೆ ಮಾಡಬೇಕೆಂದು ರಮೇಶ್‌ ದೇಲಂಪಾಡಿ
ಅವರು ಹೇಳಿದರು.

ಗೋಪಾಲಕೃಷ್ಣ ಭಟ್‌ ಮಾತನಾಡಿ, ರಿಕ್ಷಾ ಚಾಲಕರಿಗೆ ಸಬ್ಸಿಡಿ ದರದಲ್ಲಿ ಇಂಧನ, ವೈದ್ಯಕೀಯ ನೆರವು, ಅಪಘಾತ ಪರಿಹಾರ 5 ಲಕ್ಷಕ್ಕೆ ಏರಿಕೆ, ಬ್ಯಾಡ್ಜ್ ಕಡ್ಡಾಯದಿಂದ ಮುಕ್ತಿ, ಅಪಘಾತ ರಹಿತ ಚಾಲಕರ ಗುರುತಿಸುವಿಕೆಗೆ ಆದ್ಯತೆ ನೀಡಬೇಕು ಎಂದರು.

Advertisement

ನಿವೃತ್ತ ಶಿಕ್ಷಕ ಗಣಪತಿ ಭಟ್‌ ಮಾತನಾಡಿ, ಮಾತೃಭಾಷೆಯೊಂದಿಗೆ ಆಂಗ್ಲಭಾಷೆ ಬೋಧನೆ, ಗ್ರೇಡ್‌ ನಿಯಮ ಕೈಬಿಟ್ಟು ಅಂಕ ಪದ್ಧತಿ ಜಾರಿ, 7ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ಪುನಾರಂಭ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿ, ಪ್ಲಾಸ್ಟಿಕ್‌ ನಿಷೇಧಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ವೆಂಕಪ್ಪ ಗೌಡ ಕಡಬ ಮಾತನಾಡಿ, ಮನೆ ನಿರ್ಮಾಣಕ್ಕೆ ಸಾಕಷ್ಟು ಮರಳು ಒದಗಿಸುವುದು, ಕೃಷಿ ಯಂತ್ರಗಳಿಗೆ
ಜಿಎಸ್‌ಟಿ ವಿನಾಯಿತಿ, ಸರಕಾರಿ ಇಲಾಖೆಯಲ್ಲಿ ಖಾಲಿ ಹುದ್ದೆ ಭರ್ತಿ, ನಿಯೋಜನೆ ವ್ಯವಸ್ಥೆ ಬಿಟ್ಟು, ಯುವಕರಿಗೆ ಉದ್ಯೋಗ ಕಲ್ಪಿಸುವುದು, ತರಬೇತಿ ಶಾಲೆ ಸ್ಥಾಪಿಸಬೇಕು ಎಂದರು.

ಸಹಕಾರಿ ಮುಂದಾಳು ರಾಧಾಕೃಷ್ಣ ಕೋಟೆ, ವೈದ್ಯನಾಥ ಆಯೋಗ ವರದಿ ಜಾರಿ, ಸಹಕಾರ ಕಾಯಿದೆ ತಿದ್ದುಪಡಿ
ಬಗ್ಗೆ ಮರು ಪರಿಶೀಲನೆ, ಸಬ್ಸಿಡಿ ಹಣ ಫಲಾನುಭವಿಯ ಖಾತೆಗೆ ನೇರ ಜಮೆ, ಸಹಕಾರ ಕ್ಷೇತ್ರಕ್ಕೆ ಮೇಲ್ಮನೆಯಲ್ಲಿ ಒಂದು ಸದಸ್ಯ ಸ್ಥಾನ ಮೀಸಲಿಡಬೇಕು ಎಂದರು. 

ಜಯಚಂದ್ರ ರೈ ಕಡಬ ಮಾತನಾಡಿ, ಗೋಮಾಳ ಜಾಗವನ್ನು ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ನೀಡುವುದು, ಕುಮ್ಕಿ ಗೊಂದಲ ನಿವಾರಣೆ, ಕೃಷಿ ಕಾರ್ಮಿಕರಿಗೆ ಪಿಂಚಣಿ, ಕೇಂದ್ರದ ಗ್ರಾಮ ಸಡಕ್‌ ಯೋಜನೆ ಮರು ಜಾರಿ, ಸಾಲ ಮನ್ನಾ ಸಮರ್ಪಕ ಜಾರಿ ಮಾಡಬೇಕು ಎಂದರು.

ನ್ಯಾಯವಾದಿ ವಿನಯ ಮುಳುಗಾಡು ಮಾತನಾಡಿ, ಫಾರೆಸ್ಟ್‌ ಆ್ಯಕ್ಟ್ನಿಂದ ಉಂಟಾಗುವ ಸಮಸ್ಯೆ ನಿವಾರಣೆ, ಅರಣ್ಯ
ನೀತಿ ಸರಳೀಕರಣ, ಪ್ರತಿ ಗ್ರಾಮದಲ್ಲಿ ಶೇ. 30 ಅರಣ್ಯ ಇರುವಂತೆ ಕ್ರಮ ಕೈಗೊಳ್ಳುವ ಯೋಜನೆ ಅಗತ್ಯವಿದೆ ಎಂದರು. ಎನ್‌.ಎಸ್‌. ಸುವರ್ಣಿನಿ ಮಾತನಾಡಿ, ಭೌಗೋಳಿಕಕ್ಕೆ ತಕ್ಕಂತೆ ಯೋಜನೆ ಅನುಷ್ಠಾನಿಸಬೇಕು. ಕೃಷಿ ಒಡ್ಡುಗಳನ್ನು ನಿರ್ಮಿಸಬೇಕು ಎಂದರು.

ಪ್ರಾಣಿಗಳಿಂದ ಕೃಷಿಗೆ ಉಂಟಾಗುವ ಹಾನಿ ತಡೆಗಟ್ಟುವುದು, ಪರಿಹಾರವನ್ನು ಹೆಚ್ಚಿಸಬೇಕೆಂದು ಮಲೆನಾಡು ರಕ್ಷಣ
ವೇದಿಕೆಯ ದಾಮೋದರ ಆಗ್ರಹಿಸಿದರು. ಡಾ| ಶ್ರೀಕೃಷ್ಣ ಬಿ.ಎನ್‌. ಮಾತನಾಡಿ, ಸರಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಛತೆಗೆ ಆದ್ಯತೆ, ಗ್ರಾಮೀಣ ವೈದ್ಯ ಸೇವೆಗೆ ಇರುವ ಸಮಸ್ಯೆ ನಿವಾರಣೆ, ವೈದ್ಯರಿಗೆ ರಕ್ಷಣೆ, ಮಕ್ಕಳಿಗೆ ಜಿಲ್ಲಾ ಮಟ್ಟದ ವಿಜ್ಞಾನ ಮೇಳ ಆಯೋಜನೆ ಮಾಡಬೇಕೆಂದರು.

ಕೃ.ಶಾ. ಮರ್ಕಂಜ ಮಾತನಾಡಿ, ಪುತ್ತೂರಿನಲ್ಲಿ ಜಾರಿಯಾದ ಗುಬ್ಬಚ್ಚಿ ಸ್ಪೀಕಿಂಗ್‌ ತರಗತಿಗಳನ್ನು ಎಲ್ಲ ಸರಕಾರಿ ಶಾಲೆಗಳಲ್ಲಿ ಅನುಷ್ಠಾನ ಮಾಡಬೇಕೆಂದರು. ಮಹೇಶ್‌ ರೈ ಮೇನಾಲ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಅವರ ಘೋಷಿಸಿದಂತೆ ರಾಜ್ಯದಲ್ಲಿಯೂ ಮದ್ಯ ಮುಕ್ತಿಯ ಚಿಂತನೆ ಮಾಡಬೇಕೆಂದರು. ಸಭೆಯಲ್ಲಿದ್ದ ನೂರಾರು ಮಂದಿ ಲಿಖಿತ ರೂಪದಲ್ಲಿಯೂ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಬಿಜೆಪಿ ಪ್ರಣಾಳಿಕೆ ಸಮಿತಿ ಸದಸ್ಯ ಜಯಪ್ರಕಾಶ್‌ ಹೆಗ್ಡೆ, ಶಾಸಕ ಎಸ್‌. ಅಂಗಾರ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ
ವೆಂಕಟ ವಳಲಂಬೆ, ಎ.ವಿ. ತೀರ್ಥರಾಮ ಉಪಸ್ಥಿತರಿದ್ದರು.

ಸೌಲಭ್ಯ ಆದ್ಯತೆ
ಬಾಲಸುಬ್ರಹ್ಮಣ್ಯ ಭಟ್‌ ಕಡಬ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಎಲ್ಲ ಮಾದರಿಯ ಲ್ಯಾಬ್‌, ತಾಲೂಕು ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌, ವಿಷ ಜಂತು ಕಚ್ಚಿದ್ದಕ್ಕೆ ಸೂಕ್ತ ಔಷಧ, ಪಂಚಕರ್ಮ ಚಿಕಿತ್ಸೆ, ಆ್ಯಂಬುಲೆನ್ಸ್‌ ಸೌಲಭ್ಯ, ಸಂಶೋಧನ ಕೇಂದ್ರ ಸ್ಥಾಪನೆಗೆ ಆದ್ಯತೆ ನೀಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next