Advertisement

ಯಾದಗಿರಿ ಜಿಲ್ಲಾದ್ಯಂತ ವರುಣಾರ್ಭಟ

10:12 AM Jul 24, 2020 | Suhan S |

ಯಾದಗಿರಿ: ಜಿಲ್ಲೆಯಲ್ಲಿ ಗುರುವಾರ ಬೆಳಗಿನ ಜಾವ ಸುರಿದ ಭಾರೀ ಮಳೆ ಅವಾಂತರ ಸೃಷ್ಟಿಸಿದೆ. ಜಿಲ್ಲೆಯ ವಿವಿಧ ತಾಲೂಕಿನ ಕೃಷಿ ಜಮೀನುಗಳಲ್ಲಿ ನೀರು ನಿಂತಿದ್ದು, ಬೆಳೆ ಜಲಾವೃತವಾಗಿದೆ.ಕೊಯಿಲೂರು-ಪಗಲಾಪುರ ಹಳ್ಳದ ಸೇತುವೆ ಕುಸಿದಿದ್ದು, ಸಂಪರ್ಕ ಕಡಿತಗೊಂಡಿದೆ.

Advertisement

ಜಿಲ್ಲೆಯಲ್ಲಿ ಒಂದು ಕಡೆ ಕೋವಿಡ್‌ ಅಟ್ಟಹಾಸ ಮುಂದುವರಿದಿದ್ದು ಇನ್ನೊಂದೆಡೆ ಮಳೆಯ ಅಬ್ಬರ ರೈತರ ಗಾಯದ ಮೇಲೆ ಬರೆ ಎಳೆಯುವಂತೆ ಮಾಡಿದೆ. ಕೊಯಿಲೂರು ಬಳಿ ಹಳ್ಳ ಉಕ್ಕಿ ಹರಿಯುತ್ತಿರುವುದರಿಂದ ಹಳ್ಳದ ಅಕ್ಕಪಕ್ಕದ ಜಮೀನುಗಳು ಸಂಪೂರ್ಣ ಜಲಾವೃತವಾಗಿವೆ. ಸೇತುವೆ ಮೇಲಿನ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದೆ.

ಕೊಯಿಲೂರ ಗ್ರಾಮ ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿದೆ. ವರ್ಕನಳ್ಳಿಯಿಂದ ಕೆರೆ ತುಂಬಿ ನೀರು ಗ್ರಾಮಕ್ಕೆ ಹರಿದು ಬಂದಿರುವುದರಿಂದ ಮೊಣಕಾಲು ಮುಳುಗುವಷ್ಟು ನೀರು ಗ್ರಾಮದಲ್ಲಿ ಹರಿಯಿತು. ನೀರು ರಭಸವಾಗಿ ಹರಿಯುತ್ತಿದ್ದರಿಂದ ಹಗ್ಗ ಕಟ್ಟಿ ಗರ್ಭಿಣಿ ಮತ್ತು ಮಕ್ಕಳು ಹಾಗೂ ಮಹಿಳೆಯರನ್ನು ಸುರಕ್ಷಿತ ಸ್ಥಳಕ್ಕೆ ದಾಟಿದರು. ಇನ್ನು ಸೈದಾಪುರ ಪಟ್ಟಣದ ಉಪ ತಹಸೀಲ್ದಾರ್‌ ಕಚೇರಿ ಮತ್ತು ನೆಮ್ಮದಿ ಕೇಂದ್ರಕ್ಕೆ ಮಳೆ ನೀರು ನುಗ್ಗಿದೆ.

ಸುತ್ತಮುತ್ತಲಿನ ಆನೂರ ಕೆ., ಕೊಂಡಾಪುರ, ಸಂವಾದ, ಮುನಗಾಲ, ಹಾಗೂ ಬೆಳಗುಂದಿ ಹಳ್ಳಗಳ ಸೇತುವೆ ಮೇಲಿಂದ ನೀರು ರಭಸದಿಂದ ಹರಿಯುತ್ತಿದ್ದು ಗ್ರಾಮೀಣ ಭಾಗಗಳಲ್ಲಿ ಸಂಪರ್ಕ ಕಲ್ಪಿಸುವ ರಸ್ತೆ, ಸೇತುವೆಗಳ ಮೇಲೆ ನೀರು ಹರಿಯುತ್ತಿದೆ. ಎಲ್ಲೆಡೆ ಜನಜೀವನ ಅಸ್ತವ್ಯವಸ್ಥವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next