Advertisement

ಚುನಾವಣಾ ಪ್ರಚಾರದಲ್ಲಿ ಯಾತ್ರೆ ಅನುಭವ

09:04 AM May 23, 2019 | mahesh |

ನವದೆಹಲಿ: ‘ಪ್ರಸಕ್ತ ಲೋಕಸಭೆ ಚುನಾವಣೆಯ ಪ್ರಚಾರವು ನನಗೆ ಯಾತ್ರೆಗೆ ತೆರಳಿದಂಥ ಅನುಭವ ನೀಡಿತು.’

Advertisement

ಹೀಗೆಂದು ಹೇಳಿರುವುದು ಪ್ರಧಾನಿ ನರೇಂದ್ರ ಮೋದಿ. ಲೋಕಸಭೆ ಚುನಾವಣೆಗೆ ತೆರೆ ಬಿದ್ದ ಬಳಿಕ ಮಂಗಳವಾರ ತಮ್ಮ ಸಂಪುಟದ ಸಹೋದ್ಯೋಗಿಗಳೊಂದಿಗೆ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆಸಿದ ಸಭೆಯಲ್ಲಿ ಪ್ರಧಾನಿ ಮೋದಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಪಕ್ಷಕ್ಕಾಗಿ ದುಡಿದ ಎಲ್ಲ ಸಚಿವರು ಹಾಗೂ ನಾಯಕರಿಗೆ ಧನ್ಯವಾದ ಹೇಳಿದ ಮೋದಿ, ‘ನಾನು ಅನೇಕ ಚುನಾವಣೆಗಳನ್ನು ಕಂಡಿದ್ದೇನೆ. ಆದರೆ ಈ ಬಾರಿಯದ್ದು ರಾಜಕೀಯದಾಚೆಗಿನ ಅನುಭವ ನೀಡಿತು. ಈ ಸಲ ಚುನಾವಣೆಯಲ್ಲಿ ಕೇವಲ ಪಕ್ಷ ಮಾತ್ರ ಸ್ಪರ್ಧಿಸಿರಲಿಲ್ಲ, ದೇಶದ ಜನರೇ ಸ್ಪರ್ಧಿಸಿದ್ದರು. ಹಲವಾರು ಚುನಾವಣೆಗಳಲ್ಲಿ ನಾನು ರಾಜಕೀಯ ಪ್ರವಾಸಗಳನ್ನು ಮಾಡಿದ್ದೇನೆ ಮತ್ತು ವಿಧಾನಸಭೆ ಚುನಾವಣೆಗಳಿಗಾಗಿ ಪ್ರಚಾರ ಕಾರ್ಯ ಕೈಗೊಂಡಿದ್ದೇನೆ. ಆದರೆ, ಈ ಲೋಕಸಭೆ ಚುನಾವಣೆಯ ಪ್ರಚಾರಕ್ಕೆಂದು ನಾನು ದೇಶಾದ್ಯಂತ ಸಂಚರಿಸಿದಾಗ, ನನಗೆ ನಾನು ಪವಿತ್ರ ಯಾತ್ರೆ ಕೈಗೊಳ್ಳುತ್ತಿದ್ದೇನೆ ಎಂಬಂತೆ ಭಾಸವಾಯಿತು’ ಎಂದು ಹೇಳಿದ್ದಾರೆ.

ಪಕ್ಷದ ಅಧ್ಯಕ್ಷ ಅಮಿತ್‌ ಶಾ ಅವರು ಆಯೋಜಿಸಿದ್ದ ‘ಆಭಾರ್‌ ಮಿಲನ್‌’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಕೇಂದ್ರದ ಸಚಿವರು ಮತ್ತು ಬಿಜೆಪಿಯ ಮಿತ್ರ ಪಕ್ಷಗಳ ನಾಯಕರನ್ನೂ ಭೇಟಿಯಾಗಿದ್ದಾರೆ.

ಸಭೆಯ ಬಳಿಕ ಟ್ವೀಟ್ ಮಾಡಿದ ಪಕ್ಷದ ಅಧ್ಯಕ್ಷ ಅಮಿತ್‌ ಶಾ, ‘ಕಳೆದ 5 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಾಧಿಸಿದ ಸಾಧನೆಗಳಿಗೆ ಹಾಗೂ ಕಠಿಣ ಪರಿಶ್ರಮಕ್ಕಾಗಿ ಟೀಂ ಮೋದಿ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ಬರೆದು ಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next