ಗುರುಪುರ ಕೈಕಂಬದ “ತಕಧಿಮಿ’ ತಂಡದ ಪುಟಾಣಿ ಕಲಾವಿದರ ಯಕ್ಷ ರಂಗ ಪ್ರವೇಶ ಇತ್ತೀಚೆಗೆ ನಡೆಯಿತು. ಮೊದಲು ಬಾಲಕರಿಂದ ಯಕ್ಷಗಾನದ ಪೂರ್ವರಂಗದ ಪ್ರದರ್ಶನ ಜರಗಿತು. ಉತ್ತರಾರ್ಧದಲ್ಲಿ ತಂಡದ ವಿದ್ಯಾರ್ಥಿಗಳಿಂದ ಶ್ರೀ ಕೃಷ್ಣ (ಕಾಳಿಂಗ ಮರ್ದನ) ಶ್ರೀ ಹರಿ (ಸುದರ್ಶನ ವಿಜಯ) ಶ್ರೀ ರಾಮ (ಲವ – ಕುಶ) ಕಥಾ ಭಾಗದ ಪ್ರದರ್ಶನಗಳು ಮಂತ್ರಮುಗ್ಧಗೊಳಿಸಿದವು. ಹೆಚ್ಚಾಗಿ ಪ್ರಾಥಮಿಕ ಶಾಲಾ ಅದರಲ್ಲೂ ಆಂಗ್ಲ ಮಾಧ್ಯಮ ಶಾಲಾ ಮಕ್ಕಳು ಈ ಯಶಸ್ವಿ ಪ್ರದರ್ಶನದಲ್ಲಿ ಪಾತ್ರಧಾರಿಗಳಾಗಿ ಮಿಂಚಿದ್ದು ಅಚ್ಚರಿಗೆ ಕಾರಣವಾಯಿತು. ಮಕ್ಕಳು ಕುಣಿತ, ಅಭಿನಯ, ಮಾತುಗಾರಿಕೆಗಳಲ್ಲಿ ಮಿಂಚಿದರು. ಪ್ರದರ್ಶನದುದ್ದಕ್ಕೂ ಮೊಳಗಿದ ಸಿಳ್ಳು, ಕೇಕೆ, ಚಪ್ಪಾಳೆಗಳು ಮಕ್ಕಳ ಸಮರ್ಥ ನಿರ್ವಹಣೆಗೆ ಸಾಕ್ಷಿಯಾಯಿತು. ಎಲ್ಲಾ ಮಕ್ಕಳು ರಂಗದಲ್ಲಿ ಮುದ್ದಾಗಿ ಕಂಡದ್ದು ನಮ್ಮ ಯಕ್ಷಗಾನ ಕಲೆಯ ವಿಸ್ಮಯವೆನ್ನಲೇ ಬೇಕು. ಸುದರ್ಶನ, ಶ್ರೀ ಕೃಷ್ಣ , ವಿಷ್ಣು, ಲಕ್ಷ್ಮೀ , ಸೀತೆ, ಪ್ರಸೂದನ ಲವ- ಕುಶ ಪಾತ್ರಗಳು ವಿಶೇಷವಾಗಿ ಗಮನ ಸೆಳೆದವು. “ಲವ-ಕುಶ’ದ ಅಂತಿಮ ಸನ್ನಿವೇಶ ಭಾವುಕರನ್ನಾಗಿಸಿತು. ಭಾಗವತರಾಗಿ ಕಟೀಲು ಮೇಳದ ಶ್ರೀನಿವಾಸ ಬಳ್ಳಮಂಜ ಮತ್ತು ಪ್ರಫುಲ್ಲ ಚಂದ್ರ ನೆಲ್ಯಾಡಿ ಸಹಕರಿಸಿದರು.
ರಮೇಶ್ ರಾವ್