Advertisement

Yakshagana ಸಾಗಿ ಬಂದ ದಾರಿ ವಿಶೇಷ; ಮುಂದಿನದರ ಬಗ್ಗೆ ಕೌತುಕ

12:12 AM Dec 24, 2023 | Team Udayavani |

ಯಕ್ಷಗಾನವು ಸಾಗಿ ಬಂದ ದಾರಿಯನ್ನೊಮ್ಮೆ ನೋಡಿದರೆ ನಾವು ಈಗ ಕೆಲವು ವಿಷಯಗಳ ಬಗ್ಗೆ ಚರ್ಚೆ ನಡೆಸುವುದರಲ್ಲಿ ಹುರುಳಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಯಕ್ಷಗಾನದಲ್ಲಿ ಕಾಲಮಿತಿ ಎಂಬ ಹೊಸ ಹಾಗೂ ವಿಶೇಷ ಬದಲಾವಣೆ ಆದಾಗ ಸ್ವಾಗತಕ್ಕೆ ಹೆಚ್ಚು ಟೀಕೆಯೇ ಕಂಡುಬಂದದ್ದು. ನಿಧಾನವಾಗಿ ಅದಕ್ಕೆ ಒಗ್ಗಿಕೊಳ್ಳುತ್ತಿರುವ ಈ ಶ್ರೀಮಂತ ಕಲೆಯ ಪ್ರೇಕ್ಷಕರು ಹಾಗೂ ಕಲಾವಿದರು, ಆದದ್ದೆಲ್ಲ ಒಳಿತೇ ಎನ್ನುತ್ತಿದ್ದಾರೆ.
ಹಾಗೆ ನೋಡಿದರೆ ಹಿಂದಿನ ಯಕ್ಷಗಾನದಿಂದ ಈಗಿನದರಲ್ಲಿ ತುಂಬಾ ಬದಲಾವಣೆ ಕಾಣುತ್ತಿ ದ್ದೇವೆ. ಹಿಂದೆಲ್ಲ ದೊಂದಿ ಬೆಳಕಿನಲ್ಲಿ, ಧ್ವನಿವರ್ಧಕಗಳಿಲ್ಲದೆ ನಡೆಯುತ್ತಿದ್ದ ಯಕ್ಷಗಾ ನವು ಈಗ ಆಕರ್ಷಕ ವಿದ್ಯುತ್‌ ದೀಪಗಳಲ್ಲಿ ಧ್ವನಿವರ್ಧಕ ಬಳಸಿಯೇ ನಡೆಯುತ್ತಿದೆ. ಇವೆ ರಡು ಇಲ್ಲದೆ ಈಗ ಯಕ್ಷಗಾನ ಪ್ರದರ್ಶನ ಸಾಧ್ಯವೇ ಇಲ್ಲ ಎಂಬಂತಾಗಿದೆ ಪರಿಸ್ಥಿತಿ. ಇದು ಅಭಿವೃದ್ಧಿಯ ಬದಲಾವಣೆ ಎಂದು ಸುಮ್ಮನಿ ದ್ದರೂ, ಬೇರೆಯೂ ಕೆಲವು ಮಹತ್ತರ ಬದಲಾವಣೆಗಳು ಈ ಕಲೆಯಲ್ಲಿ ಆಗಿರುವುದನ್ನು ನಾವು ಕಾಣಬಹುದು.

Advertisement

ಹಿಂದೆಲ್ಲ ಯಕ್ಷಗಾನದಿಂದ ಮಹಿಳೆಯರು ತುಂಬಾ ದೂರವಿದ್ದರು. ಪ್ರೇಕ್ಷಕರ ಸಾಲಿನಲ್ಲೂ ಮಹಿಳೆಯರ ಸಂಖ್ಯೆ ಕಡಿಮೆಯಿತ್ತು. ಕಲಾವಿದರ ವಿಷಯದಲ್ಲಿ ಶೂನ್ಯ ಎಂಬಂತಿತ್ತು. ಲೀಲಾವತಿ ಬೈಪಾಡಿತ್ತಾಯರು ಭಾಗವತರಾಗಿ ಮಹಿಳೆ ಯರೂ ಯಕ್ಷಗಾನದಲ್ಲಿ ತಿರುಗಾಟ ಮಾಡಬಹುದು ಎಂಬುದನ್ನು ತೋರಿಸಿ ಕೊಟ್ಟರು. ಆಗ ಅದೊಂದು ದೊಡ್ಡ ಸಂಗತಿಯಾಗಿತ್ತು. ಮಹಿಳಾ ಭಾಗವತರಂತೆ ಎಂಬ ಕುತೂಹಲದ ಮಾತು ಎಲ್ಲರಿಂದಲೂ ಕೇಳಿ ಬರುತ್ತಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮಹಿಳೆಯರು ಯಕ್ಷಗಾನದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಹಿಮ್ಮೇಳ, ಮುಮ್ಮೇಳದಲ್ಲೂ ಮಹಿಳೆಯರು ತಮ್ಮದೇ ಆದಂ ಥ ಛಾಪು ಮೂಡಿಸುತ್ತಿದ್ದಾರೆ. ಮಹಿಳಾ ಯಕ್ಷಗಾನ ತಂಡಗಳ ಸಂಖ್ಯೆ ಯೂ ಅಪಾರವಿದೆ. ತಾಳಮದ್ದಳೆ ಕೂಟದಲ್ಲೂ ಮಹಿಳೆಯರು ಹಿಂದೆ ಬಿದ್ದಿಲ್ಲ.

ಯಕ್ಷಗಾನದ ಕಲಾವಿದರಿಗೆ ಹಿಂದೆ ಸಮಾಜದಲ್ಲಿ ಉತ್ತಮ ಗೌರವ ಇರಲಿಲ್ಲ ಎಂಬುದು ಕಹಿಸತ್ಯ. ಯಕ್ಷಗಾನದ ಕಲಾವಿದ ಎಂದರೆ ಮದುವೆಯಾಗಲು ಹೆಣ್ಣು ಕೊಡಲೂ ಹಿಂದುಮುಂದು ನೋಡುತ್ತಿದ್ದರು ಎಂಬುದನ್ನು ಹಿರಿಯರು ಹೇಳುತ್ತಿದ್ದಾರೆ. ಆಟಕ್ಕಾಗಿ ಒಮ್ಮೆ ಮನೆ ಬಿಟ್ಟರೆ ಮತ್ತೆ ಬರುವುದು ಯಾವಾಗ ಎಂಬುದು ಖಾತ್ರಿಯೇನೂ ಇರಲಿಲ್ಲ. ಊರಿಂದೂರಿಗೆ ಅಲೆದಾ ಡುತ್ತಾ ಕಲಾವಿದರು ಬದುಕು ಕಟ್ಟಿಕೊಳ್ಳಬೇಕಿತ್ತು. ಆಗ ಈಗಿನಂತೆ ಸಂಪರ್ಕ ವ್ಯವಸ್ಥೆಯೂ ಉತ್ತಮವಾಗಿರಲಿಲ್ಲ. ಮನೆಯ ಮಾಹಿತಿಯೂ ಕಲಾವಿದರಿಗೆ ಕಾಲಕಾಲಕ್ಕೆ ತಿಳಿಯುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ತುಂಬಾ ಭಿನ್ನವಾಗಿದೆ. ಕಲಾವಿದರೂ ಪ್ರತಿದಿನ ಮನೆಗೆ ಬರುತ್ತಾರೆ. ಅವರ ಆದಾಯ ಹೆಚ್ಚಿ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ. ಸ್ವಂತ ವಾಹನದಲ್ಲಿ ಆಟಕ್ಕೆ ಹೋಗುವವರೂ ಸಾಕಷ್ಟು ಮಂದಿ ಇದ್ದಾರೆ. ಕಲಾವಿದರಿಗೆ ಸಮಾಜದಲ್ಲಿ ಉತ್ತಮ ಗೌರವ, ಪ್ರತಿಷ್ಠೆ ಇದೆ. ಸಮಾಜ ಯಕ್ಷಗಾನ ಕಲಾವಿದರನ್ನು ಪ್ರೀತಿ, ಅಭಿಮಾನದಿಂದ ಸ್ವಾಗತಿಸುತ್ತದೆ.

ಹಿಂದೆಲ್ಲ ಆಟಕ್ಕೆ ಸೇರುವವರಿಗೆ ತುಂಬಾ ಕಡಿಮೆ ಶಿಕ್ಷಣ ಇರುತ್ತಿತ್ತು. ಆದರೂ ಅವರು ಪುರಾಣದ ಪಾತ್ರಗಳಿಗೆ ಅತ್ಯುತ್ತಮವಾಗಿ ಜೀವ ತುಂಬು ತ್ತಿದ್ದರು. ಸುಶಿಕ್ಷಿತರು ಯಕ್ಷಗಾನದಲ್ಲಿ ಇರುತ್ತಿರಲಿಲ್ಲ. ಅವರು ಯಕ್ಷಗಾನದತ್ತ ತಿರುಗಿಯೂ ನೋಡುತ್ತಿರಲಿಲ್ಲ. ಯಕ್ಷಗಾನದ ಗ್ರಾಮೀಣ ಭಾಗದಲ್ಲಿಯೇ ಹೆಚ್ಚು ಪ್ರದರ್ಶನ ಕಾಣುತ್ತಿತ್ತು. ನಗರದಲ್ಲಿ ಅದಕ್ಕೆ ಪ್ರೇಕ್ಷಕರ ಕೊರತೆ ಕಾಡುತ್ತಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಭಿನ್ನ ವಾಗಿದೆ. ಯಕ್ಷಗಾನವು ಗ್ರಾಮೀಣ ಭಾಗ ಕ್ಕಿಂತ ಹೆಚ್ಚಾಗಿ ನಗರ ಪ್ರದೇಶದಲ್ಲೇ ಯಶಸ್ಸು ಕಾಣುತ್ತಿದೆ. ಸುಶಿಕ್ಷಿತರೂ ಯಕ್ಷಗಾನದಲ್ಲಿ ಪೂರ್ಣ ಪ್ರಮಾಣದ ಕಲಾವಿದರಾಗಿ ದುಡಿ ಯುತ್ತಿರುವುದು ಸಾಮಾನ್ಯ ಎಂಬಂತಾಗಿದೆ. ಪ್ರೊಫೆಸರ್‌ಗಳು, ವೈದ್ಯರು ಮುಂತಾದ ಉನ್ನತ ಹುದ್ದೆಯಲ್ಲಿರುವವರು ಕೂಡ ಯಕ್ಷಗಾನದಲ್ಲಿ ಬಣ್ಣ ಹಾಕಿ ಪ್ರದರ್ಶನ ನೀಡುತ್ತಿದ್ದಾರೆ. ಇದೆಲ್ಲವೂ ಯಕ್ಷಗಾನದ ಮೇಲಿನ ಗೌರವವನ್ನು ಮತ್ತಷ್ಟು ಹೆಚ್ಚಿಸಲು ಪೂರಕವಾದಂಥ ಅಂಶಗಳೇ.

ಹಿಂದೆಲ್ಲ ಹಗಲು ಹೊತ್ತಿನಲ್ಲಿ ಆಟದ ಮಾತೇ ಇರಲಿಲ್ಲ. ಒಂದೆರಡು ದಶಕಗಳ ಹಿಂದೆ ಮಳೆಗಾಲದ ಪ್ರದರ್ಶನ ಎಂದು ಸಭಾಂಗಣಗಳಲ್ಲಿ ಯಕ್ಷಗಾನ ನಡೆಯುತ್ತಿದ್ದವು. ಬಳಿಕ ಎಲ್ಲೆಡೆಯೂ ಹಗಲು ಹೊತ್ತಿನಲ್ಲಿ ಯಕ್ಷಗಾನ ಪ್ರದರ್ಶನ ಸಾಮಾನ್ಯ ಎಂಬಂತಾಯಿತು. ದೊಡ್ಡ ದೊಡ್ಡ ಉತ್ಸವಗಳ ಮನೋರಂಜನ ಕಾರ್ಯಕ್ರಮಗಳಲ್ಲಿ ಯಕ್ಷಗಾನ ಪ್ರದರ್ಶನ ಇದ್ದರೆ ಅದರ ಘನತೆಯೇ ಹೆಚ್ಚಾಗುತ್ತದೆ. ರಾತ್ರಿ ಆಟಕ್ಕಿಂತ ಹಗಲಿನ ಆಟಕ್ಕೆ ಸೇರುವ ಜನರೇ ಹೆಚ್ಚು.

Advertisement

ಕಾಲಮಿತಿಯ ವಿಷಯಕ್ಕೆ ಬಂದಾಗ ನಾವು ಸಾಕಷ್ಟು ಟೀಕೆಗಳನ್ನು ಕೇಳಿದ್ದೇವೆ. ಕಾಲಮಿತಿಯು ಯಕ್ಷಗಾನಕ್ಕೆ ಮಾರಕ ಎಂದು ಹೇಳಿದವರೇ ಹೆಚ್ಚು. ಆದರೆ ಹಿಂದೆಲ್ಲ ದೇವಿ ಮಹಾತೆ¾ಯಂಥ ಕೆಲವು ಪ್ರಸಂಗಗಳು 2-3 ದಿನಗಳ ಕಾಲ ನಡೆಯುತ್ತಿತ್ತು ಎಂದು ಹಿರಿಯರು ಹೇಳುತ್ತಿದ್ದಾರೆ. ಅದು ಬದ ಲಾಗಿ, ಕಿರಿದಾಗಿ ಒಂದು ರಾತ್ರಿಗೆ ಸೀಮಿತವಾಯಿತು. ಈಗ ಅದನ್ನೇ 5-6 ತಾಸುಗಳಿಗೆ ಇಳಿಸಲಾಗಿದೆ. ಇದರಿಂದ ಯಕ್ಷಗಾನಕ್ಕೆ ಏನೂ ಚ್ಯುತಿ ಆಗುವುದಿಲ್ಲ ಎಂಬ ವಾದ ಈಗ ಹೆಚ್ಚು ಪ್ರಬಲವಾಗಿದೆ. ಕಾಲಮಿತಿಯನ್ನು ಪ್ರೇಕ್ಷಕರು ಹಾಗೂ ಕಲಾವಿದರು ಸ್ವೀಕರಿಸಿ, ಒಪ್ಪಿಕೊಂಡಾಗಿದೆ. ರಾತ್ರಿ ಪೂರ್ತಿ ಆಟ ಎನ್ನು ವುದು ಯಾವಾಗ ಇತಿಹಾಸದ ಪುಟಕ್ಕೆ ಸೇರಲಿದೆಯೇ ಹೇಳಲಾಗದು. ಕಾಲ ಮಿತಿಯ ಪ್ರದರ್ಶನ ಕಲಾವಿದರ ಆರೋಗ್ಯದ ವಿಷಯದಲ್ಲೂ ಉತ್ತಮ ನಿರ್ಧಾರ ಎನ್ನಲಾಗುತ್ತಿದೆ. ಸರಕಾರದ ಧ್ವನಿವರ್ಧಕ ನಿಯಮವನ್ನು ಪಾಲಿಸಿ ರಾತ್ರಿಯಿಡೀ ಯಕ್ಷಗಾನ ನಡೆಸುವುದು ಕಷ್ಟಸಾಧ್ಯವೇ ಎನ್ನುವಂಥ ಪರಿಸ್ಥಿತಿ ಈಗಿದೆ.

ಯಕ್ಷಗಾನವು ಪ್ರತಿಯೊಂದು ಬದಲಾವಣೆಯನ್ನು ಕಂಡಾಗಲೂ ಸಾಕಷ್ಟು ಟೀಕೆಯನ್ನು ಎದುರಿಸಿತ್ತು. ಆದರೆ ದಿನದಿಂದ ದಿನಕ್ಕೆ ಯಕ್ಷಗಾನವು ತನ್ನ ಪ್ರಗತಿ ಹಾಗೂ ಪ್ರಸಿದ್ಧಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಇದನ್ನು ಗಮನಿಸುವಾಗ ಇದುವರೆಗೆ ಆಗಿರುವ ಎಲ್ಲ ಬದಲಾವಣೆಗಳೂ ಯಕ್ಷಗಾನಕ್ಕೆ ಒಳಿತನ್ನೇ ಮಾಡಿದೆ ಎಂದು ಹೇಳಬಹುದು. ಯುವಜನಾಂಗವನ್ನೂ ಈಗ ಯಕ್ಷಗಾನ ಸೆಳೆಯುತ್ತಿರುವುದು ಒಂದು ಅತೀ ದೊಡ್ಡ ಪೂರಕ ಬದಲಾವಣೆ.

ಇದನ್ನೆಲ್ಲ ಗಮನಿಸುವಾಗ ಯಕ್ಷಗಾನದ ಬದಲಾವಣೆ, ಅದರಲ್ಲಿ ಆಗುತ್ತಿರುವ ಸುಧಾರಣ ಕ್ರಮಗಳನ್ನು ಟೀಕಿಸುವ ಮೊದಲು ನಾವು ಸಾಕಷ್ಟು ಚಿಂತಿಸುವುದು ಅಗತ್ಯ. ಯಕ್ಷಗಾನ ಎಂಬುದು ಸಮುದ್ರವಿದ್ದಂತೆ. ಬದಲಾ ವಣೆಯಾಗದ ಯಾವ ಕ್ಷೇತ್ರವೂ ಈ ಸಮಾಜದಲ್ಲಿಲ್ಲ. ಅದನ್ನು ನಾವು ಹೇಗೆ ಸ್ವೀಕರಿಸಿಕೊಳ್ಳುತ್ತೇವೆ ಎಂಬುದರಲ್ಲಿ ಅದರ ಯಶಸ್ಸು ಅಡಗಿದೆ. ಪರಂಪರೆ ಹೆಸರಲ್ಲಿ ಬದಲಾವಣೆಯನ್ನು ನಿರ್ಬಂಧಿಸಲು ಸಾಧ್ಯವೂ ಇಲ್ಲ, ಅಂಥ ಕ್ರಮ ಸೂಕ್ತವೂ ಅಲ್ಲ. ಹಾಗೆಂದು ಮೂಲಕ್ಕೆ ಧಕ್ಕೆ ಬರದಂತೆ ಎಚ್ಚರದಿಂದಿರುವುದು ಕೂಡ ಅಷ್ಟೇ ಅಗತ್ಯ.

ಪುತ್ತಿಗೆ ಪದ್ಮನಾಭ ರೈ

Advertisement

Udayavani is now on Telegram. Click here to join our channel and stay updated with the latest news.

Next