Advertisement

ಅಂದು v/s ಇಂದು; ಯಕ್ಷ ಲೋಕದಲ್ಲಿ ಮತ್ತೆ ಹಳೆಯ ಕಾಲ ಬರುವುದೇ ? 

04:00 PM Sep 16, 2018 | Team Udayavani |

ಯಕ್ಷಗಾನ ರಂಗಕ್ಕೆ ತನ್ನದೇ ಆದ ಕೊಡುಗೆಗಳನ್ನು ಕಾಲ ಕಾಲಕ್ಕೆ ನೀಡುತ್ತಾ ಮರೆಯಾದ ದಿಗ್ಗಜರು ನೂರಾರು ಮಂದಿ. ತಲೆಮಾರುಗಳಿಂದ ವಿವಿಧ ಪರಂಪರೆ ವಿಶಿಷ್ಟತೆಗಳನ್ನು ತನ್ನೊಳಗೆ ಸೇರಿಸಿಕೊಂಡಿರುವ ಶ್ರೀಮಂತ ಕಲೆ ಯಕ್ಷಗಾನ. ಕಲೆಗಾಗಿ ತಮ್ಮ ಸಂತೋಷವನ್ನೆಲ್ಲಾ ಬದಿಗೊತ್ತಿ ಬದುಕನ್ನೇ ನಿಸ್ವಾರ್ಥ ಭಾವದಿಂದ ಮುಡಿಪಾಗಿಟ್ಟವರು ಹಲವಾರು ಮಂದಿ ದಿಗ್ಗಜರು. ಅವರೆಲ್ಲಾ ಇಂದು ನಮ್ಮೊಂದಿಗೆ ಭೌತಿಕವಾಗಿ ಇಲ್ಲದೇ ಹೋದರು ತಮ್ಮ ಅದ್ಭುತ ಕೊಡುಗೆಳಿಂದಾಗಿ ಇಂದಿಗೂ ಕೆಲವರು ಕಲಾಲೋಕದಲ್ಲಿ ನಿತ್ಯ , ಇನ್ನು ಕೆಲವರು ಆಗಾಗ ನೆನಪಾಗುತ್ತಾರೆ. ಇತಿಹಾಸದ ಪುಟಗಳಲ್ಲಿ ಸೇರಿರುವ ಅವರೆಲ್ಲಾ ಕಲೆ ಇರುವವರೆಗೆ ಸದಾ ನೆನಪಿನಲ್ಲಿ ಉಳಿಯುತ್ತಾರೆ. 

Advertisement

ಯಕ್ಷಗಾನವೊಂದರ ಪ್ರದರ್ಶನ ಬಳಿಕ ಅಭಿಮಾನಿಯೊಬ್ಬರು ಯುವ ಕಲಾವಿದನೊಬ್ಬನ ಪಾತ್ರವನ್ನು ನೋಡಿ ತಟ್ಟನೆ ಹಿರಿಯ ಕಲಾವಿದರ ಹೆಸರು ಹೇಳಿ …..ಅವರ ಹಾಗೆ ಆಗದಿದ್ದರೂ ಅಡ್ಡಿಲ್ಲ..ಮಾಡಿದ್ದಾನೆ… ಎನ್ನುವುದು ರೂಢಿ.

ತೆಂಕಿನ ಕಂಸವಧೆ ಪ್ರಸಂಗವೊಂದರ ಪ್ರದರ್ಶನಕ್ಕೆ ತೆರಳಿದ್ದ ವೇಳೆ ಅಪರೂಪಕ್ಕೆ ಬಂದ ಹಿರಿಯ ಅಭಿಮಾನಿಯೊಬ್ಬರು ಹೇಳಿದ ಮಾತು ಪುತ್ತೂರು ನಾರಾಯಣ ಹೆಗ್ಡೆಯವರ ಕಂಸ ನೋಡಿದ್ದೆ, ಆ ರೀತಿಯ ಕಂಸ ಮತ್ತೆ ಬರುವುದು ಅಸಾಧ್ಯ ಎಂದರು. ಅಂದರೆ ಆ ಪಾತ್ರದಲ್ಲಿ ಅವರನ್ನು ಸರಿಗಟ್ಟುವ ಇನ್ನೋರ್ವ ಕಲಾವಿದ ಇಲ್ಲ ಎನ್ನಬಹುದು. 

ಪ್ರಸಿದ್ಧ ಕಲಾವಿದರಿಗೆ ತನ್ನದೆ ಆದ ಕೆಲ ಪಾತ್ರಗಳು ಅಪಾರ ಖ್ಯಾತಿ ತಂದುಕೊಟ್ಟಿದ್ದು ಇಂದಿನ ಕಲಾವಿದರು ಆ ಛಾಪನ್ನು ಅನುಸರಿಸುತ್ತಿದ್ದಾರೆ, ಅನುಕರಿಸುತ್ತಲೂ ಇದ್ದಾರೆ.

 ದುಷ್ಟಬುದ್ದಿ ಪಾತ್ರ ದಿವಂಗತ ಮಹಾಬಲ ಹೆಗಡೆಯವರಿಗೆ ಅಪಾರ ಖ್ಯಾತಿ ತಂದುಕೊಟ್ಟಿದ್ದ ಪಾತ್ರ. ಬಳಿಕ ಆ ಪಾತ್ರಕ್ಕೆ ಪದ್ಮಶ್ರಿ ವಿಜೇತ ದಿವಂಗತ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ತನ್ನದೇ ಆದ ನ್ಯಾಯ ಒದಗಿಸಿಕೊಟ್ಟು ಅದನ್ನು ಸಮೀಪಿಸಲು ಬೇರೆಯವರಿಗೆ ಅಸಾಧ್ಯ ಎನ್ನುವ ಮಟ್ಟಿಗೆ ಅಭಿನಯಿಸಿ ಹಲವು ಯುವ ಕಲಾವಿದರಿಗೆ ದಾರಿ ತೋರಿಸಿ ಕೊಟ್ಟಿದ್ದಾರೆ. 

Advertisement

ನಳದಮಯಂತಿ ಪ್ರಸಂಗದಲ್ಲಿ  ತೆಂಕು ತಿಟ್ಟಿನಲ್ಲಿ ಸವಾಲಿನ ಪಾತ್ರವಾದ ಬಾಹುಕ ಪಾತ್ರಕ್ಕೆ ಪೆರುವೋಡಿ ನಾರಾಯಣ ಭಟ್ಟರು ತನ್ನದೇ ಆದ ನ್ಯಾಯ ಒದಗಿಸಿ ಅಭಿಮಾನಿಗಳಲ್ಲಿ ತನ್ನದೇ ಆದ ಹೆಸರು ಉಳಿಸಿಕೊಂಡಿದ್ದಾರೆ. ಬಡಗಿನ ಹಿರಿಯ ಪ್ರೇಕ್ಷಕರು ಬಾಹುಕನ ಪಾತ್ರದಲ್ಲಿ ಹಾಸ್ಯಗಾರ ಕೋರ್ಗು ಅವರನ್ನು ನೆನಪಿಸಿಕೊಳ್ಳುತ್ತಾರೆ. 

ಬಡಗುತಿಟ್ಟಿನಲ್ಲಿ  ಇಂದು ಬಡವಾಗುತ್ತಿರುವ ಬಣ್ಣದ ವೇಷದ ವಿಚಾರಕ್ಕೆ ಬಂದರೆ ಎಲ್ಲರೂ ಸಕ್ಕಟ್ಟು ಲಕ್ಷ್ಮಿ ನಾರಾಯಣಯ್ಯ ಅವರನ್ನು ನೆನಪಿಸಿ ಕೊಳ್ಳುತ್ತಾರೆ. ಅವರ ಆಳ್ತನ, ಸ್ವರ ತ್ರಾಣ, ವೇಷಗಾರಿಕೆಯ ವೈಭವ, ದೈತ್ಯಾಕಾರ ಪ್ರೇಕ್ಷಕರಲ್ಲಿ ನಿಜವಾಗಿಯೂ ಭೀತಿ ಹುಟ್ಟಿಸುವಂತಾಗಿತ್ತು. ಇಂದು ಅಂತಹ ವೇಷಗಳು ಕಾಣ ಸಿಗುವುದಿಲ್ಲ ಎನ್ನುವುದು ಹಿರಿಯ ಕಲಾವಿದರದ್ದು, ಪ್ರೇಕ್ಷಕರ ಕೊರಗು.. 

ಯಕ್ಷಗಾನದಲ್ಲಿ ‘ನಡೆ’ ಅಂದರೆ ಪಾತ್ರಕ್ಕೆ ಇರುವ ದಾರಿ . ಹೀಗೆ ಸಾಗಬೇಕು ಎನ್ನುವ ಕ್ರಮ ಇದೆ. ಅಂದರೆ ಮಾತುಗಾರಿಕೆಯಲ್ಲೂ , ಅಭಿನಯದಲ್ಲೂ , ವೇಷಗಾರಿಕೆಯಲ್ಲೂ  ಕೆಲ ವಿಶಿಷ್ಟತೆಗಳಿವೆ. ಇಲ್ಲಿ ಒಬ್ಬ ಮಾಡಿದಂತೆ ಇನ್ನೊಬ್ಬ ಮಾಡಬೇಕೆಂದೆನಿಲ್ಲ ಆದರೆ ಪಾತ್ರದ ಔಚಿತ್ಯ ಪ್ರಧಾನವಾಗುತ್ತದೆ. ಹೀಗಾಗಿ ಪದ್ಯಕ್ಕೆ ಕುಣಿಯುವಾಗಲೂ , ಅರ್ಥ ಹೇಳುವಾಗಲೂ ಹಿರಿಯ ಕಲಾವಿದರ ಮಾರ್ಗದರ್ಶನ ಪಡೆಯುವುದು ಅನಿವಾರ್ಯವಾಗುತ್ತದೆ. ಇಂದಿನ ದಿನಗಳಲ್ಲಿ  ಯುವ ಕಲಾವಿದರಲ್ಲಿ ಕಲಿಯುವ ಮತ್ತು ಹಿರಿಯರಲ್ಲಿ ಕೇಳುವ ಆಸಕ್ತಿ ಕಡಿಮೆಯಾಗುತ್ತಿರುವುದು, ತನ್ನದೇ ಆದ ಹೊಸ ಶೈಲಿ (ಯಕ್ಷಗಾನ ರಂಗಭೂಮಿಗೆ ಸರಿಹೊಂದದ) ಹುಟ್ಟು ಹಾಕಲು ಯತ್ನಿಸುತ್ತಿರುವುದು ಕಲೆ ಬೆಳೆದು ಬಂದ ಹಾದಿಯನ್ನು ಬಿಟ್ಟು ಅಡ್ಡ ದಾರಿ ಹಿಡಿದುದನ್ನು ಸೂಚಿಸುತ್ತಿದೆ ಎನ್ನಬಹುದು. 

ಮುಂದುವರಿಯುವುದು…

Advertisement

Udayavani is now on Telegram. Click here to join our channel and stay updated with the latest news.

Next