Advertisement

ಪ್ರಜಾತಂತ್ರದ ಹಬ್ಬಕ್ಕೆ ಯಕ್ಷಗಾನ, ಬೀದಿ ನಾಟಕ, ಗೊಂಬೆಯಾಟದ ಮೆರಗು

07:26 PM Apr 04, 2019 | Team Udayavani |

ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನವಾಗುವಂತೆ ಮಾಡಲು ಉಡುಪಿ ಜಿಲ್ಲಾ ಸ್ವೀಪ್‌ ಸಮಿತಿ ಯಕ್ಷಗಾನ, ಬೀದಿ ನಾಟಕ, ಗೊಂಬೆಯಾಟಗಳಿಗೆ ಮೊರೆ ಹೋಗಿದೆ.

Advertisement

ಸಮೃದ್ಧಿಪುರದ ರಾಜ ರತ್ನಶೇಖರನಿಗೆ ಪುತ್ರ ಸಂತಾನವಿರದಾಗ ತನ್ನ ಉತ್ತರಾಧಿಕಾರಿಯನ್ನು ಜನರೇ ಆರಿಸಬೇಕೆಂಬ ಕಥಾನಕವಿದು. ಪ್ರಜೆಗಳು ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವಾಗ ಹಣ, ಹೆಂಡ ಇತ್ಯಾದಿ ಆಮಿಷಗಳಿಗೆ ಬಲಿಯಾಗಬಾರದೆಂಬ ಸಂದೇಶ, ಜಾತಿ ಮತಗಳನ್ನು ಗಣಿಸಬಾರದೆಂಬ ಸಂದೇಶವನ್ನು ದೂತರ ಮೂಲಕ ರಾಜ ಅಪ್ಪಣೆ ಕೊಡಿಸುತ್ತಾನೆ. ತಾವು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಉತ್ತರಾಧಿಕಾರಿಯನ್ನು ಆಯ್ದುಕೊಳ್ಳುತ್ತೇವೆಂಬ ಪ್ರತಿಜ್ಞಾವಿಧಿ ಬೋಧನೆಯೂ ಇಲ್ಲಿದೆ. ಅಲ್ಲಲ್ಲಿ ಹಾಸ್ಯಭರಿತ ಸನ್ನಿವೇಶಗಳೂ ಇವೆ.

ವಿಧಾನಸಭಾ ಚುನಾವಣೆಯಲ್ಲಿ ಶಿಕ್ಷಣಾ ಧಿಕಾರಿಯಾಗಿದ್ದ ನಾಗೇಶ್‌ ಶ್ಯಾನುಭಾಗ್‌ ಸ್ವೀಪ್‌ ಸಮಿತಿಗಾಗಿ ರಚಿಸಿದ ಒಂದು ತಾಸಿನ ಈ ಪ್ರಸಂಗವನ್ನು ನರಸಿಂಹ ತುಂಗ ನೇತೃತ್ವದ ಕೋಟದ ಕಲಾಪೀಠ ತಂಡದ ಕಲಾವಿದರು ಪ್ರಸ್ತುತ ಪಡಿಸುತ್ತಿದ್ದಾರೆ. ಲಂಬೋದರ ಹೆಗ್ಡೆಯವರು ಭಾಗವತರಾಗಿ ಪಾತ್ರ ವಹಿಸುತ್ತಿದ್ದಾರೆ. ಪ್ರಸಂಗಕ್ಕೆ ಹೆಸರಿಡದೆ ಇದ್ದರೂ “ಪ್ರಜಾಪ್ರಭುತ್ವ ಮಹಾತ್ಮೆ’ ಎಂದು ನಾಮಕರಣ ಮಾಡಬಹುದು. ಉಡುಪಿ ಜಿಲ್ಲೆಯಲ್ಲಿ 15 ಆಟಗಳನ್ನು ಆಡಿ ತೋರಿಸುವ ಇರಾದೆ ಸ್ವೀಪ್‌ ಸಮಿತಿಗೆ ಇದೆ.

ವೈಟ್‌ಕಾಲರ್‌ ಕಾರ್ಮಿಕರಿಗೆ ಕಿವಿಮಾತು
ಅರ್ಧ, ಮುಕ್ಕಾಲು ತಾಸು ನಡೆಸಬಹುದಾದ ಬೀದಿ ನಾಟಕವನ್ನು ಸುರತ್ಕಲ್‌ ಗಣೇಶಪುರದ ಗಿರೀಶ್‌ ನಾವಡ ಅವರು ಬರೆದಿದ್ದಾರೆ. ಮತದಾನ ಮಾಡಬೇಕಾದರೆ ಸಮಯ ಬೇಕು. ವಿಳಂಬವಾಗಿ ಕೆಲಸಕ್ಕೆ ಹೋದರೆ ಭೂಮಾಲಕ ವೇತನ ಕೊಡದೆ ಇರಬಹುದು, ನಮ್ಮ ಹೊಟ್ಟೆಗೆ ಏನು ಗತಿ ಎಂದು ಚಿಂತಿತರಾದ ಕೂಲಿ ಕಾರ್ಮಿಕರ ಕಥೆಯನ್ನು ಇಲ್ಲಿ ಹೆಣೆಯಲಾಗಿದೆ. ರಜೆ ಇದ್ದರೂ ವೇತನ ಕಡಿತ ಮಾಡುವುದಿಲ್ಲ ಎಂದು ಮಾಲಕ ಹೇಳಿದಾಗ “ಕೆಲಸ ಮಾಡದೆ ವೇತನ ಪಡೆಯುವುದು ಸರಿಯಲ್ಲ’ ಎಂಬ ಕೂಲಿ ಕಾರ್ಮಿಕನೊಬ್ಬನ ಪ್ರಾಮಾಣಿಕತೆ ವೈಟ್‌ಕಾಲರ್‌x ಕಾರ್ಮಿಕರ ಕಣ್ಣು ತೆರೆಸಬೇಕು. ಮತದಾನ ಮಾಡಿ ಬರುವಾಗ ವಿಳಂಬವಾದರೂ ವೇತನ ಕೊಡುತ್ತೇನೆ ಎಂಬ ಭರವಸೆಯನ್ನು ಮಾಲಕ ನೀಡುತ್ತಾನೆ. ಹಾಗಿದ್ದರೆ ಯಾರಿಗೆ ಮತದಾನ ಮಾಡಬೇಕೆಂಬ ಕಾರ್ಮಿಕನಿಗೆ “ಸಂಬಳ ಕೊಡುವುದು ಕೆಲಸಕ್ಕಾಗಿ. ಮತದಾನದ ವಿಷಯದಲ್ಲಿ ಗೌಪ್ಯತೆ ಬೇಕು. ವಿದ್ಯುನ್ಮಾನ ಮತಯಂತ್ರದಲ್ಲಿ ಎಲ್ಲವೂ ಪಾರದರ್ಶಕವಾಗಿರುತ್ತದೆ. ನಾವು ಇಂತಹವರಿಗೇ ಮತ ಹಾಕಬೇಕೆಂದು ಹೇಳಬಾರದು. ನಿನ್ನ ಜತೆಗೆ ಮನೆಯವರನ್ನೂ ಕರೆದುಕೊಂಡು ಹೋಗು’ ಎಂದು ಹೇಳುತ್ತಾನೆ.

ಕಾರ್ಮಿಕನ ಮಾತೋ? ಶಿಕ್ಷಿತರ ಮಾತೋ?
“ನನ್ನೊಬ್ಬನ ಮತದಿಂದ ಏನಾಗುತ್ತದೆ’ ಎಂಬ ಕಾರ್ಮಿಕನೂ ನಾಟಕದಲ್ಲಿ ಬರುತ್ತಾನೆ. ವಾಸ್ತವದಲ್ಲಿ ವೈಟ್‌ಕಾಲರ್‌ ಮತದಾರರೇ ಇಂತಹ ಮಾತುಗಳನ್ನಾಡುವುದು. “ನಾವು ಮತದಾನ ಮಾಡದೆ ರಸ್ತೆ, ಶಾಲೆ, ಆಸ್ಪತ್ರೆ ಸರಿ ಇಲ್ಲ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಮತದಾನ ಮಾಡಿದ ಬಳಿಕ ಇಂತಹ ಬೇಡಿಕೆಗಳನ್ನು ಆರಿಸಿಬಂದವರ ಮುಂದೆ ಇಡಲು ನೈತಿಕ ಅರ್ಹತೆ ಬರುತ್ತದೆ’ ಎಂಬ ಉತ್ತರವೂ ಇದೆ.

Advertisement

ರಜೆ ಉದ್ದೇಶ ಏನು?
“ರಜೆ ಕೊಟ್ಟಿರುವುದು ಪ್ರವಾಸಕ್ಕೆ ಅಲ್ಲ. ಮತದಾನಕ್ಕಾಗಿ’ ಎಂಬ ಸಂದೇಶದ ಕಥಾನಕವೂ ಇದೆ. ದೇವಸ್ಥಾನ, ಜಾತ್ರೆ, ಆಟವಾಡಲು ಹೋಗುವುದಕ್ಕೆ ಅಡ್ಡಿ ಇಲ್ಲ. ಮೊದಲು ಮತದಾನ ಮಾಡಿ ಹೋಗಿ ಎನ್ನುವ ಸಂದೇಶ ಮತದಾನಕ್ಕಾಗಿ ಕೊಟ್ಟ ರಜೆಯನ್ನು ಮತದಾನ ಮಾಡದೆ ಉಪಭೋಗಿಸುವ ಜನರಿಗೆ ಹೇಳಿಸಿ ಮಾಡಿಸಿದಂತಿದೆ. ಆಮಿಷಗಳಲ್ಲಿ ಒಂದಾದ ಮದ್ಯಪಾನದಿಂದ ಮತದಾನ ಮಾಡಲಾಗದವನ ಕಥೆಯೂ ಇದೆ. ಈತನ ಮದ್ಯಪಾನ ಅಮಲು ಇಳಿಯುವಾಗ ಮತದಾನವೂ ಮುಗಿದಿರುತ್ತದೆ.

ಪ್ರತಿಜ್ಞೆ ಸ್ವೀಕರಿಸುವ ಎಲ್ಲರಿಗೂ ಸಂದೇಶ
ಮದ್ಯಪಾನ ಮಾಡುತ್ತಿದ್ದ ಮತದಾರನೊಬ್ಬ ಪ್ರಜಾಪ್ರಭುತ್ವದ ಹೆಸರಿನಲ್ಲಿ ಪ್ರತಿಜ್ಞಾವಿಧಿ ಬೋಧಿಸುವುದು ವಿಶೇಷವಾಗಿದೆ. ಪ್ರಜಾಪ್ರಭುತ್ವದ ವ್ಯಾಪ್ತಿಯಲ್ಲಿ ಹೆಂಡತಿ, ಮಕ್ಕಳು ಎಲ್ಲರೂ ಬರುವಾಗ ಇವರ ಮೇಲೆ ಮಾಡಿದ ಪ್ರತಿಜ್ಞೆ/ ಆಣೆಯನ್ನು ಸುಳ್ಳು ಮಾಡುವುದು ಹೇಗೆಂಬ ನೈತಿಕತೆ ಇಲ್ಲಿದೆ. ಪ್ರತಿಜ್ಞಾವಿಧಿ ಸ್ವೀಕರಿಸುವ ಮಂತ್ರಿಮಾಗಧರೇ ಮೊದಲಾದ ಪ್ರತಿಷ್ಠಿತರಿಗೂ ಸಂದೇಶವಿದೆ.

“1950′ ಸಂಖ್ಯೆ ಹುಟ್ಟಿದ ವರ್ಷದ್ದಲ್ಲ. ಇದು ಸಹಾಯವಾಣಿ. ಇಲ್ಲಿ ಮತದಾರರಿಗೆ ಬೇಕಾದ ಮಾಹಿತಿಗಳಿರುತ್ತದೆ ಎಂಬ ಮೂಲಕ ಸಹಾಯವಾಣಿಯ ಸಹಾಯವನ್ನು ಹೊರಗೆಡಹುತ್ತಾರೆ. ಆರು ಕಲಾವಿದರ ತಂಡವು ಉಡುಪಿ ಜಿಲ್ಲೆಯ ಸುಮಾರು 20 ಕಡೆ ಬೀದಿ ನಾಟಕವನ್ನು ಪ್ರಸ್ತುತಪಡಿಸುತ್ತಿದೆ.

ಗೊಂಬೆಯಾಟ
ಸ್ವೀಪ್‌ ಸಮಿತಿ ಐಕಾನ್‌ ಕೊಗ್ಗ ಭಾಸ್ಕರ ಕಾಮತ್‌ ಅವರ ನೇತೃತ್ವದಲ್ಲಿ ಗೊಂಬೆಯಾಟವನ್ನು ವೆಬ್‌ಸೈಟ್‌, ಫೇಸ್‌ಬುಕ್‌ ಇತ್ಯಾದಿ ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಡಲಾಗಿದೆ.

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next