Advertisement
ಸಂಗೀತೋಪಕರಣಗಳನ್ನು ನುಡಿಸುವ ಕಲಾವಿದರು ಅದೆಷ್ಟೋ ಮಂದಿ ಇದ್ದರೂ ಉಪಕರಣಗಳ ತಯಾರಿ, ರಿಪೇರಿ ಮತ್ತು ಮುಚ್ಚಿಗೆ ಹಾಕಿ ಕೊಡುವವರು ತೀರಾ ವಿರಳ. ಈ ಕಾಯಕದಲ್ಲಿ 70 ವರ್ಷಗಳಿಂದ ತನ್ನನ್ನು ತೊಡಗಿಸಿಕೊಂಡು ತೆಂಕುತಿಟ್ಟು ಯಕ್ಷಗಾನದ ಹಿರಿಯರಿಂದ ಕಿರಿಯರ ತನಕ ಬಹುತೇಕ ಹಿಮ್ಮೇಳವಾದಕರಿಗೆ ಅನಿವಾರ್ಯ ವ್ಯಕ್ತಿ ಎಂಬಂತೆ ರೂಪುಗೊಂಡ ಹಿರಿಯ ಕಲಾತಪಸ್ವಿ ಕೂಡ್ಲು ಸದಾನಂದ ರಾವ್ಗೆ ಕುಲಕಸುಬಿನಲ್ಲಿ ಸಪ್ತತಿಯ ಸಮಯ.
ಮನೆತುಂಬಾ ಚೆಂಡೆ ಮದ್ದಳೆಗಳ ಸಹಿತ ಚರ್ಮವಾದ್ಯಗಳು. ಇವುಗಳ ದುರಸ್ತಿ ಕಾಯಕದಲ್ಲಿ ತನ್ನನ್ನು ಸಮರ್ಪಿಸಿಕೊಂಡಿರುವ ಸದಾನಂದ ರಾಯರಿಗೆ ಸದಾ ಆನಂದದ ನಾದಾನುಸಂಧಾನವೇ ಬದುಕು. ಅವರ ಅಜ್ಜ ಲಕ್ಷ್ಮಣರಾಯರು ಚರ್ಮವಾದ್ಯ ನುಡಿಸುವುದರಲ್ಲಿ ತಯಾರಿಸುವುದರಲ್ಲಿ ಸಿದ್ಧ ಹಸ್ತರು. ಕೊಡಗಿನ ಅರಸರಿಗೆ ವಿಶಿಷ್ಟವಾದ ಮದ್ದಳೆಯೊಂದನ್ನು ನಿರ್ಮಿಸಿಕೊಟ್ಟು ಅರಸರಿಂದ ಧನ-ಕನಕ ಸಮ್ಮಾನಗಳನ್ನು ಪಡೆದವರು. ತಂದೆ ರಾಮಚಂದ್ರರಾಯರೂ ಕುಲವೃತ್ತಿಯನ್ನೇ ಅನುಸರಿಸಿದವರು. ಹೀಗೆ ವಂಶವಾಹಿನಿಯಾಗಿ ಬಂದು ಸಿದ್ಧಿಸಿದ ಈ ಕಲೆಯಲ್ಲಿ ಪ್ರಸ್ತುತ ಸದಾನಂದ ರಾಯರದ್ದು ಅನನ್ಯ ಪ್ರತಿಭೆ, ಅದ್ಭುತ ಸಾಧನೆ. ತಂದೆಯೇ ಮೊದಲ ಗುರು
ಚೆಂಡೆ ಮದ್ದಳೆಗಳ ನಿನಾದ ಬಾಲ್ಯದಿಂದಲೇ ಕೇಳಿದವರು. ತಂದೆಯೇ ಮೊದಲ ಗುರು, ಮನೆಯೇ ಮೊದಲ ಕಲಾಶಾಲೆ. ಗುಂಡಿಹಿತ್ತಿಲು ಕೃಷ್ಣಯ್ಯ, ಕುದ್ರೆಕೋಡ್ಲು ರಾಮಭಟ್ಟರಿಂದ ಹಿಮ್ಮೇಳವಾದನದ ಹೆಚ್ಚಿನ ಶಿಕ್ಷಣ, ತಲೆಂಗಳ ಗೋಪಾಲ ಕೃಷ್ಣ ಭಟ್ಟರು ಹಾಗೂ ವಿದ್ವಾನ್ ಬಾಬು ರೈಗಳಿಂದ ಮದ್ದಳೆಯ ನುಡಿತ ಬಡಿತಗಳ ಮರ್ಮವನ್ನು ಕಲಿತರು. ಕುಲಕಸುಬಿನ ಮೂಲಕ ಜೀವನದ ಯಶಸ್ಸನ್ನು ಕಂಡ ಸದಾನಂದ ರಾಯರಿಗೆ ಹೊಸ ತಲೆಮಾರಿನಲ್ಲಿ ಈ ಕಸುಬಿನ ಬಗ್ಗೆ ಗೌರವ ಇಲ್ಲದಾಗಿದೆ. ಉದರ ನಿಮಿತ್ತ ಇತರ ಆಕರ್ಷಣೀಯ ಕ್ಷೇತ್ರಕ್ಕೆ ತೆರಳುವ ಕಾರಣ ಚರ್ಮವಾದ್ಯಗಳ ದುರಸ್ತಿ ಕೆಲಸದಲ್ಲಿ ನಿರತರಾಗಲು ಹೊಸ ಪೀಳಿಗೆಯವರು ಯಾರು ಬರುತ್ತಿಲ್ಲ ಎಂಬ ಕೊರಗು ಇದೆ.
Related Articles
Advertisement
ಈ ವೇಳೆಯಲ್ಲಿ ಯಕ್ಷಮಿತ್ರರು ಮಧೂರು ಇವರ 12ನೇ ಕಲಾಕಾಣಿಕೆಯ ಅಂಗವಾಗಿ ಅಕ್ಟೋಬರ್ 14ರಂದು ಸಾಯಂಕಾಲ ಗಂಟೆ 3ರಿಂದ ಮಧೂರು ಪರಕ್ಕಿಲ ದೇವಸ್ಥಾನದ ಸಭಾಭವನದಲ್ಲಿ ನಡೆಯುವ ಮಧೂರು ಯಕ್ಷಸಂಭ್ರಮದಲ್ಲಿ ನೆರೆದ ಗಣ್ಯರ ಉಪಸ್ಥಿತಿಯಲ್ಲಿ ಕಲಾಭಿಮಾನಿಗಳ ಸಮಕ್ಷ ಸದಾನಂದ ರಾಯರಿಗೆ ಹುಟ್ಟೂರ ಗೌರವಾರ್ಪಣೆ ನಡೆಯಲಿದೆ. ಅನಂತರ ತೆಂಕುತಿಟ್ಟಿನ ಅಗ್ರಗಣ್ಯ ಕಲಾವಿದರ ಕೂಡುವಿಕೆಯಲ್ಲಿ ತುಳಸೀ ಜಲಂಧರ – “ತಾಮ್ರಧÌಜ ಕಾಳಗ’ ಎಂಬ ಯಕ್ಷಗಾನ ಪ್ರದರ್ಶನವೂ ಜರಗಲಿದೆ.
6ನೇ ವಯಸ್ಸಿನಲ್ಲಿ ಮದ್ದಳೆವಾದಕನಾಗಿ ಕಲಾಸೇವೆಯನ್ನು ಆರಂಭಿಸಿ, ಚರ್ಮವಾದ್ಯ ಗಳೆಲ್ಲದರ ಮರ್ಮವನ್ನರಿತ ಕುಶಲ ಕರ್ಮಿಯಾದ ಸದಾನಂದ ರಾಯರಿಗೆ ಈಗ 76ರ ಹರೆಯ. ಆರಂಭದಲ್ಲಿ ಯಕ್ಷಗಾನದ ಚೆಂಡೆ ಮದ್ದಳೆವಾದಕನಾಗಿ ಕಲಾಸೇವೆಯನ್ನು ಸಲ್ಲಿಸಿ ನಂತರ ಚರ್ಮವಾದ್ಯಗಳ ರಿಪೇರಿಯ ಕುಲಕಸುಬಿಗೆ ಅಂಟಿಕೊಂಡು ನೇಪಥ್ಯದಲ್ಲಿ ಉಳಿದ ಇವರ ಚೆಂಡೆ ಮದ್ದಳೆಗಳಿಗೆ ಅತ್ಯಂತ ಬೇಡಿಕೆಯಿದೆ. ಶ್ರೀ ಧರ್ಮಸ್ಥಳ, ಎಡನೀರು, ಹನುಮಗಿರಿ, (ಪ್ರಾರಂಭದಲ್ಲಿ ಕಟೀಲು) ಮೊದಲಾದ ಮೇಳಗಳಿಗೆಲ್ಲ ಇವರೇ ಚೆಂಡೆ ಮದ್ದಳೆ ದುರಸ್ತಿಗಾರರು. ಅಲ್ಲದೇ ವಿದೇಶಗಳಿಂದಲೂ ದೇಶದ ಹಲವೆಡೆಗಳಿಂದಲೂ, ಹಲವಾರು ದೇವಾಲಯಗಳಿಂದಲೂ, ವಿವಿಧ ಕಲಾಕ್ಷೇತ್ರಗಳಿಂದಲೂ ಇವರನ್ನು ಹುಡುಕಿಕೊಂಡು ಕಲಾವಿದರು ಬಂದೇ ಬರುತ್ತಾರೆ.