Advertisement

ಪುಣೆ:ಯಕ್ಷಗಾನ ಮತ್ತು ಸಾಧಕ ಕಲಾವಿದರಿಗೆ ಸಮ್ಮಾನ

02:29 PM Aug 23, 2017 | Team Udayavani |

ಪುಣೆ: ನಮ್ಮ ಕರಾವಳಿ ಕರ್ನಾಟಕದ ಭವ್ಯ ಸುಂದರ ಕಲೆ ಯಕ್ಷಗಾನ  ಎಲ್ಲ  ಕಲೆಗಳಿಗಿಂತಲೂ ಶ್ರೇಷ್ಠವಾದುದು. ಸರ್ವ ಭಂಗಿಯಲ್ಲಿ, ನೃತ್ಯ ಶೃಂಗಾರದಲ್ಲಿ, ಬಣ್ಣಗಾರಿಕೆ, ನಾಟ್ಯ ವೈಭವ, ಉತ್ಕೃಷ್ಟ ಮಾತುಗಾರಿಕೆಯೊಂದಿಗೆ ನಮ್ಮೆದುರು ಪ್ರದರ್ಶನಗೊಳ್ಳುವ ಕಲೆಯೊಂದಿದ್ದರೆ ಅದು ಯಕ್ಷಗಾನ ಒಂದೇ. ವಿಶ್ವ ಖ್ಯಾತಿಯನ್ನು ಪಡೆದಿರುವ ಯಕ್ಷಗಾನಕ್ಕೆ ಮನಸೋಲದವರು ಯಾರೂ ಇಲ್ಲ. ಎಲ್ಲ ವರ್ಗದ ಜನರನ್ನು ಆಕರ್ಷಿಸುವ ಕಲೆಯೊಂದಿದ್ದರೆ ಅದು ಯಕ್ಷಗಾನ. ಕರಾವಳಿ ಕರ್ನಾಟಕದ ಗಂಡುಕಲೆ ದೇಶ ವಿದೇಶಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಇಂತಹ ಕಲೆಯನ್ನು  ನಾವು ಉಳಿಸಿ ಬೆಳೆಸುವ ಅಗತ್ಯವಿದೆ. ಉತ್ತಮ ಕಲಾವಿದರನ್ನು, ಮಾತುಗಾರರನ್ನು, ಹಾಡುಗಾರರನ್ನು ಹೊಂದಿರುವ ಯಕ್ಷಗಾನ ಇಂದು ಮೇಲ್ಪಂಕ್ತಿಯಲ್ಲಿ ಕಂಡುಬರುತ್ತಿದೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಅವರು  ಹೇಳಿದರು.

Advertisement

ಪುಣೆಯ ಶ್ರೀ ಮಹಾಗಣಪತಿ  ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್‌ ಶೆಟ್ಟಿ  ಪುತ್ತೂರು ಅವರ ಆಯೋಜನೆಯಲ್ಲಿ, ಪುರೋಹಿತ ರಾಘವೇಂದ್ರ ಭಟ್‌  ಪ್ರಾಯೋಜಕತ್ವದಲ್ಲಿ, ಕಲಾಭಿಮಾನಿಗಳ   ಸಹಕಾರ ದೊಂದಿಗೆ, ಶ್ರೀ  ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇದರ ಸಂಚಾಲಕ ಗೋವಿಂದ ಭಟ್‌ ಅವರ ಸಾರಥ್ಯದಲ್ಲಿ ಆ. 19ರಂದು ಕೇತ್ಕರ್‌ರೋಡ್‌ನ‌ ಶ್ಯಾಮ್‌ ರಾವ್‌ ಕಲ್ಮಾಡಿ ಕನ್ನಡ ಹೈಸ್ಕೂಲ್‌ನ ಸಭಾಗೃಹದಲ್ಲಿ ಜರಗಿದ  ಶ್ರೀ  ಬಪ್ಪನಾಡು  ಕ್ಷೇತ್ರ ಮಹಾತೆ¾ ಎಂಬ ಯಕ್ಷಗಾನ ಪ್ರದರ್ಶನ, ಸಮ್ಮಾನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಯಕ್ಷಗಾನ ಕಲೆಗೆ ಪುಣೆ ಬಂಟರ ಸಂಘದ ಸಂಪೂರ್ಣ ಸಹಕಾರವಿದೆ. ಇದೇ ರೀತಿಯ ಉತ್ತಮ ಪ್ರದರ್ಶನಗಳನ್ನು ಮುಂದುವರಿಸಲು ಆಯೋಜಕರಿಗೆ, ಕಲಾವಿದರಿಗೆ ಎಲ್ಲರ ಸಹಕಾರ ಬೇಕು. ಪ್ರವೀಣ್‌ ಶೆಟ್ಟಿ ಮತ್ತು ಬಳಗದವರ  ಕಾರ್ಯ ಅಭಿನಂದನೀಯವಾಗಿದೆ ಎಂದು ಹೇಳಿದರು.

ಈ ಯಕ್ಷಗಾನದ ಮಧ್ಯಾಂತರದಲ್ಲಿ ನಿಡ್ಲೆ ಮೇಳದ ಗೋವಿಂದ ಭಟ್‌  ನಿಡ್ಲೆ  ಮತ್ತು ಕಾರ್ಯಕ್ರಮದ ಪ್ರಾಯೋಜಕ ರಾಘವೇಂದ್ರ ಭಟ್‌ ಅವರನ್ನು  ಪುಣೆಯ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಪರವಾಗಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ನಿಧಿಯನ್ನಿತ್ತು ಸಮ್ಮಾನಿಸಿದರು. 

ಪುಣೆ ಬಂಟರ ಸಂಘದ ಕಾರ್ಯದರ್ಶಿ ಅಜಿತ್‌ ಹೆಗ್ಡೆ, ವಿಶ್ವನಾಥ್‌ ಶೆಟ್ಟಿ ಶೀತಲ್‌, ಪಿಂಪ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಯಕ್ಷಗಾನ ಮಂಡಳಿಯ ಉಪಾಧ್ಯಕ್ಷ ದಿನೇಶ್‌ ಶೆಟ್ಟಿ ಕಳತ್ತೂರು, ಕಾರ್ಯದರ್ಶಿ ಸಂಕಯ್ಯ ಶೆಟ್ಟಿ, ಕೋಶಾಧಿಕಾರಿ ಶ್ರೀಧರ್‌ ಶೆಟ್ಟಿ ಕಲ್ಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಲಾವಿದರನ್ನು ಅತಿಥಿಗಳು ಅಭಿನಂದಿಸಿದರು. ಮಂಡಳಿಯ ಜೊತೆ 
ಕಾರ್ಯದರ್ಶಿ ರಾಮಣ್ಣ ರೈ ಪುತ್ತೂರು ಕಲಾವಿದರನ್ನು ಪರಿಚಯಿಸಿದರು.

ಸಮ್ಮಾನಿತರಾದ ರಾಘವೇಂದ್ರ ಭಟ್‌ ಅವರು ಮಾತನಾಡಿ, ತಮ್ಮೆಲ್ಲರ ಅಭಿಮಾನ ಪ್ರೀತಿಗೆ ನಾನು ಚಿರಋಣಿ. ಕಲಾಸೇವೆಯ ಯಾವುದೇ ಕಾರ್ಯಕ್ಕೂ ನನ್ನ ಸಹಕಾರ ಸದಾ ಇದೆ ಎಂದರು. ಹೆಚ್ಚಿನ ಸಂಖ್ಯೆಯ ಸೇರಿದ ಕಲಾಭಿಮಾನಿಗಳು ಪಾಲ್ಗೊಂಡಿದ್ದರು. ಶರತ್‌ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಮಂಡಳಿಯ ಪ್ರಮುಖರಾದ ಗೋವರ್ಧನ್‌ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಮೊದಲಾದವರು ಸಹಕರಿಸಿದರು. ಪ್ರಿಯಾ ದೇವಾಡಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಹೊಸಮೂಲೆ ಗಣೇಶ್‌ ಭಟ್‌ ಅವರು ಭಾಗವತಿಕೆ ಮತ್ತು ಪಡ್ರೆ ಶ್ರೀಧರ್‌, ಸುದಾಸ್‌  ಕಾವೂರು ಹಿಮ್ಮೇಳದೊಂದಿಗೆ ಯಕ್ಷರಂಗದ ಘಟಾನುಘಟಿ ಕಲಾವಿದರಾದ ಕುಂಬ್ಳೆ  ಶ್ರೀಧರ್‌  ರಾವ್‌, ನಿಡ್ಲೆ ಗೋವಿಂದ ಭಟ್‌, ಅಮ್ಮುಂಜೆ ಮೋಹನ್‌, ಉದಯಕುಮಾರ್‌ ಅಡ್ಯನಡ್ಕ, ರಾಮಣ್ಣ ರೈ ಪುತ್ತೂರು, ರಘುನಾಥ್‌ ನಲ್ಲೂರು, ಬಾಲಕೃಷ್ಣ ಮಣಿಯಾಣಿ, ಕೆದಿಲ ಜಯರಾಂ ಭಟ್‌, ಅರಳ ಗಣೇಶ್‌  ಶೆಟ್ಟಿ, ಗೌತಮ್‌ ಹಾಗೂ ಇನ್ನಿತರ ಉದಯೋನ್ಮುಖ   ಕಲಾವಿದರ ಕೂಡುವಿಕೆಯಲ್ಲಿ  ಬಪ್ಪನಾಡು ಕ್ಷೇತ್ರ ಮಹಾತೆ¾ ಯಕ್ಷಗಾನ ಪ್ರದರ್ಶನಗೊಂಡಿತು.

Advertisement

ಕಳೆದ ನಾಲ್ಕು  ವರ್ಷಗಳಿಂದ  ಪುಣೆಯಲ್ಲಿ ನಮ್ಮ ಮಂಡಳಿಯ ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ವಿಶೇಷ ಮುತುವರ್ಜಿ ವಹಿಸಿದ ಪ್ರವೀಣ್‌ ಶೆಟ್ಟಿ ಪುತ್ತೂರು ಅವರ ಕಲಾ ಸೇವೆಗೆ ನಾವು ತಲೆ ಬಾಗುತ್ತೇವೆ. ಎಂತಹ ಕಠಿನ ಪರಿಸ್ಥಿತಿಯಲ್ಲೂ ಕಾರ್ಯದ ಒತ್ತಡದಲ್ಲೂ ನಮ್ಮನ್ನು ತಮ್ಮ ಕುಟುಂಬದವರಂತೆ ನೋಡಿಕೊಂಡು ಸಂಪೂರ್ಣ ಜವಾಬ್ದಾರಿ ವಹಿಸುತ್ತಾ ಬಂದಿರುವ ಪುಣೆಯ ಯಕ್ಷಮಂಡಳಿಯ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಮತ್ತು ಅವರ ಬಳಗದವರು ಮತ್ತು ವೇದಮೂರ್ತಿ ರಾಘವೇಂದ್ರ ಭಟ್‌ ಅವರ  ಕಾರ್ಯ ಶ್ಲಾಘನೀಯ. ಪುಣೆಯಲ್ಲಿ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿ ಆ ಮೂಲಕ ಯಕ್ಷಗಾನವನ್ನು ಸಮೃದ್ಧಗೊಳಿಸುವಲ್ಲಿ ಪುಣೆಯ ಯಕ್ಷ ಕಲಾಭಿಮಾನಿಗಳ ಕಾರ್ಯ ಮೆಚ್ಚುವಂಥದ್ದು. ಇಲ್ಲಿ ನಮ್ಮ ಮೇಳದ ಪ್ರದರ್ಶನ  ಆಯೋಜಿಸಿ ಸಹಕಾರ ನೀಡಿದ  ತಮಗೆ ವಂದನೆಗಳು
 – ಗೋವಿಂದ ಭಟ್‌ ನಿಡ್ಲೆ (ಸಮ್ಮಾನಿತರು).

ಇಂದಿನ  ತಂತ್ರಜ್ಞಾನದ ಯುಗದಲ್ಲೂ ನಮ್ಮ ಕರಾವಳಿ ಕರ್ನಾಟಕದ ಶ್ರೇಷ್ಠ ಕಲೆ ಯಕ್ಷಗಾನ ಕಲೆಯನ್ನು ಯಾರೂ ಮರೆತಿಲ್ಲ ಎನ್ನುವುದಕ್ಕೆ ಇಲ್ಲಿ ಸೇರಿರುವ ಪ್ರೇಕ್ಷಕರೇ ನಿದರ್ಶನ. ಈ ಕಲೆಯನ್ನು ಉಳಿಸಿ ಬೆಳೆಸಲು ನಾವು ಮಾಡುತ್ತಿರುವ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲ ಬೇಕು. ಇದೇ ರೀತಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು  ನೀಡಲು ಕಲಾಭಿಮಾನಿಗಳ, ಸಂಘ ಸಂಸ್ಥೆಗಳ ಸಹಕಾರ ನಮ್ಮೊಂದಿಗಿರಲಿ. ತಮ್ಮ ವೃತ್ತಿಯೊಂದಿಗೆ ಯಕ್ಷಗಾನಕ್ಕೆ ಗೌರವ ನೀಡುತ್ತಿರುವ ರಾಘವೇಂದ್ರ ಭಟ್‌ ಅವರ ನಿರಂತರ ಕಲಾಸೇವೆಯ ಸಹಕಾರಕ್ಕೆ ಅವರಿಗೆ ಆಭಾರಿಯಾಗಿದ್ದೇವೆ. ಕಾರ್ಯ ಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ವಂದನೆಗಳು
 – ಪ್ರವೀಣ್‌ ಶೆಟ್ಟಿ ಪುತ್ತೂರು (ಅಧ್ಯಕ್ಷರು : ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ).

ಚಿತ್ರ-ವರದಿ ಹರೀಶ್‌ ಮೂಡಬಿದ್ರಿ

Advertisement

Udayavani is now on Telegram. Click here to join our channel and stay updated with the latest news.

Next