Advertisement

ಮರುಭೂಮಿಯಲ್ಲಿ ನಿರಂತರ ಯಕ್ಷ ಅನುರಣನ

05:26 PM Jun 27, 2019 | mahesh |

ಹೌದು, ಈ ಪ್ರಕೃತಿಯ ನಿಯಮವೇ ಹಾಗೆ, ಒಂದರ ನಾಶ ಇನ್ನೊಂದರ ಹುಟ್ಟಿಗೆ ಮೂಲ. ಇದು ಸತ್ಯ ಎನ್ನುವುದನ್ನು ಈಗ ಯಕ್ಷಗಾನವೂ ದೃಢಪಡಿಸಿತು.

Advertisement

ಹುಟ್ಟಿದ ನಾಡಿನಲ್ಲಿ ತನ್ನನ್ನು ಬೆಳೆಸಿದ ಯಕ್ಷಗಾನವನ್ನು ತೊರೆದು ಆಶ್ರಯ ನೀಡಿದ ನಾಡಿನಲ್ಲಿ ಯಕ್ಷಗಾನವನ್ನು ಬೆಳೆಸಿದ ಕಥೆ ಇದು. ತನ್ನ ನೆಲವನ್ನು, ತನ್ನವರನ್ನು, ಎಲ್ಲವನ್ನು ಬಿಟ್ಟು ಪರವೂರಿಗೆ ಹೋದರೂ ಬಿಟ್ಟು ಹೋಗದ ಕಲಾ ವಾಸನೆಯನ್ನು ಹೋದ ಊರಿನಲ್ಲಿ ಪಸರಿಸಿದ ಸಂತಸದ ವಿಚಾರ ಇದು. ಕಡಲಾಚೆಯ ದುಬಾೖ ನೆಲದಲ್ಲಿ ಮಕ್ಕಳ ತೆಂಕು ಯಕ್ಷಗಾನ ತಂಡವೊಂದು ಲೋಕಾರ್ಪಣೆಗೆ ಅಣಿಯಾಗಿದೆ. ಜೂ. 28ರಂದು ದುಬಾೖಯ ಗೀಸೈಸ್‌ನ ಫಾರ್ಚೂನ್‌ ಪ್ಲಾಝಾದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅಲ್ಲಿನ ಪ್ರಖ್ಯಾತ ಉದ್ಯಮಿಗಳು, ಕಲಾವಿದರು ಸಾಕ್ಷಿಯಾಗಲಿದ್ದಾರೆ.

ಜೀವನಾಧಾರಕ್ಕಾಗಿ ದುಬಾೖಯಲ್ಲಿ ನೆಲೆ ಕಂಡವರು ಅನೇಕ ತುಳುವರು. ಆ ನೆಲದಲ್ಲಿ ತಮ್ಮೂರಿನ ಕಲೆಗೂ ನೆಲೆ ಕಲ್ಪಿಸಬೇಕೆಂದು ಕನಸು ಕಂಡವರು ದಿನೇಶ್‌ ಶೆಟ್ಟಿ ಕೊಟ್ಟಿಂಜ. ಅದನ್ನು ನನಸಾಗಿಸಲು ಐದು ವರ್ಷಗಳ ಹಿಂದೆ “ಯಕ್ಷಗಾನ ಅಭ್ಯಾಸ ತರಗತಿ’ ಹುಟ್ಟು ಹಾಕಿದರು. ದುಬಾೖಯಲ್ಲಿದ್ದ ಯಕ್ಷಗಾನ ಮತ್ತು ಇತರ ಕಲಾವಿದರನ್ನು, ಕಲಾಪೋಷಕರನ್ನು ಕಲೆಹಾಕಿದರು. ತುಳು ಕನ್ನಡಪರ ಸಂಘ ಸಂಸ್ಥೆಗಳನ್ನು ಜೊತೆ ಸೇರಿಸಿದರು.

ಇದೆಲ್ಲಕ್ಕೂ ಮುಕುಟಪ್ರಾಯ ಎಂಬಂತೆ ಅವರಿಗೆ ನಿರ್ದೇಶಕರಾಗಿ ಮತ್ತು ಮುಖ್ಯಗುರುಗಳಾಗಿ ದೊರಕಿದವರು ಖ್ಯಾತ ಯಕ್ಷಗಾನ ಕಲಾವಿದರಾದ ಶೇಖರ ಶೆಟ್ಟಿಗಾರ್‌ ಕಿನ್ನಿಗೋಳಿ. ಕಟೀಲು ಮೇಳದಲ್ಲಿ ದಶಕಗಳ ಕಾಲ ವ್ಯವಸಾಯ ಮಾಡಿದ್ದ ಶೆಟ್ಟಿಗಾರರು ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಯಕ್ಷ “ಧೀಂಗಿಣ’ವನ್ನು ಸಮರ್ಥವಾಗಿ ಕಟ್ಟಿ ಬೆಳೆಸಿದ ಅನುಭವ ಸಂಪನ್ನರು. ಇವರ ಪರಿಕಲ್ಪನೆಯಲ್ಲಿ ಐದು ವರ್ಷಗಳಿಂದ ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಅಲ್ಲಿಯ ಆಸಕ್ತ ಮಕ್ಕಳನ್ನು ಸೇರಿಸಿ, ಅವರಿಗೆ ಶಾಸ್ತ್ರೀಯ ಮಾದರಿಯಲ್ಲಿ ಯಕ್ಷಗಾನವನ್ನು ಕಲಿಸಲಾಗಿದೆ. ಈ ತಂಡ ಶಿಸ್ತುಬದ್ಧ ಪ್ರದರ್ಶನಕ್ಕೆ ಸಿದ್ಧವಾಗಿದೆ. ಇವರ ಕಲಾಪ್ರದರ್ಶನದ ಸವಿಯನ್ನು 2018ರ ಅಡ್ಯಾರ್‌ ಗಾರ್ಡನ್‌ ಪಟ್ಲ ಸಂಭ್ರಮದಲ್ಲಿ ನಾವು ಕಂಡಿದ್ದೇವೆ. ಸಮಸ್ತರ ಮೆಚ್ಚುಗೆಗೆ ಪಾತ್ರವಾದ ಪ್ರೌಢ ಪ್ರದರ್ಶನ ಅದಾಗಿತ್ತು. ಇದೀಗ ಈ ತಂಡ ಅಧಿಕೃತ ಉದ್ಘಾಟನೆಗೆ ಸಿದ್ಧವಾಗಿದೆ. ಎಲ್ಲ ಕರಾವಳಿ ಕನ್ನಡಿಗರು ಅಭಿಮಾನ ಪಡಬೇಕಾದ ವಿಶೇಷ ವಿಶಿಷ್ಟ ಸಂದರ್ಭ ಇದು. ಕಡಲಾಚೆಯ ನೆಲದಲ್ಲಿ ಚರಿತ್ರೆ ನಿರ್ಮಾಣವಾಗುವ, ಕಲಾಮಾತೆ ಸಂತೃಪ್ತಿಯ ನಿಟ್ಟುಸಿರು ಬಿಡುವ ಅವಸರವಿದು.

ಈ ತಂಡದಲ್ಲಿ ನಾಟ್ಯ ಗುರುಗಳಾಗಿ ಶರತ್‌ ಕುಮಾರ್‌, ಹಿಮ್ಮೇಳ ತರಬೇತುದಾರರಾಗಿ ಭವಾನಿ ಶಂಕರ ಶರ್ಮ, ಲಕ್ಷ್ಮೀಶ ಶರ್ಮ, ಪುತ್ತಿಗೆ ವೆಂಕಟೇಶ ಶಾಸ್ತ್ರಿ ಸಹಕಾರ ನೀಡುತ್ತಿದ್ದಾರೆ. ಇವರೊಂದಿಗೆ ಚಿತ್ರಕಲೆ ತರಗತಿಯನ್ನು ಗಿರೀಶ್‌ ನಾರಾಯಣ್‌ ಕಾಟಿಪಳ್ಳ ನೀಡಲಿದ್ದಾರೆ. ಇತರ ಕಲಾ ಶಿಕ್ಷಣವನ್ನು ಒದಗಿಸಲು ಯೋಜನೆಯನ್ನು ರೂಪಿಸಿದೆ. ವೇಷಭೂಷಣ, ಹಿಮ್ಮೇಳ ಪರಿಕರಗಳನ್ನು ಸಂಸ್ಥೆಗೆ ಮಾಡಿಕೊಳ್ಳುವ ಚಿಂತನೆ ಇದೆ. ವರ್ಷಪೂರ್ತಿ ಈ ಸಂಸ್ಥೆಯ ಮೂಲಕ ವಿವಿಧ ಚಟುವಟಿಕೆಗಳು ನಡೆಯಲಿವೆ. ಇವುಗಳ ಮುಖಾಂತರ, ಕಲಾಜಾಗೃತಿ, ಕಲಾಜ್ಞಾನ, ಕಾವ್ಯ ಜ್ಞಾನ. ಪುರಾಣ ಜ್ಞಾನವೃದ್ಧಿಯೇ ಮೊದಲಾದ ಕಾರ್ಯಕ್ರಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗುವಂತೆ ದೃಢ ನಿರ್ಧಾರವನ್ನು ಸಂಸ್ಥೆ ಕೈಗೊಂಡಿದೆ.

Advertisement

ಈ ಉದ್ಘಾಟನ ಕಾರ್ಯಕ್ರಮದ ವೇದಿಕೆಯಲ್ಲಿ ಬಾಲ ಕಲಾವಿದರ ಪ್ರತಿಭಾ ವಿಕಾಸಕ್ಕೆ ವೇದಿಕೆ ಸೃಷ್ಟಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಿರುವ “ಸಾಧನಾ ಸಂಭ್ರಮ’ ಮತ್ತು ಯಕ್ಷಾರಾಧನಾ – 2019ಕ್ಕೂ ಮುಹೂರ್ತ ಪೂಜೆ ನಡೆಯಲಿದೆ.

– ಡಾ| ಶ್ರುತಕೀರ್ತಿರಾಜ, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next