Advertisement

Yakshagana: ಬಲ್ಲಿರೇನಯ್ಯ.. ಬೆಂಗಳೂರಿಗೆ ಯಾರೆಂದು ಕೇಳಿದ್ದೀರಿ…?

10:45 AM Sep 04, 2023 | Team Udayavani |

ಕರ್ನಾಟಕದ ಅಗ್ರೇಸರ ಕಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಯಕ್ಷಗಾನ, ವಿಶ್ವಗಾನವಾಗಿ ದಶಕಗಳೇ ಸಂದಿವೆ. ಅದರಲ್ಲಿಯೂ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅದರ ಪ್ರಸರಣ, ವ್ಯಾಪ್ತಿ ಇತ್ತೀಚಿನ ವರ್ಷಗಳಲ್ಲಿ ಹಿಗ್ಗಿದೆ. ಕೇವಲ ರವೀಂದ್ರ ಕಲಾಕ್ಷೇತ್ರ, ಎ.ಡಿ.ಎ.ರಂಗ ಮಂದಿರಕ್ಕೆ ಸೀಮಿತವಾಗಿದ್ದ ಯಕ್ಷಗಾನ, ಈಗ ಉದ್ಯಾನ ನಗರಿಯ ಹಲವು ಪ್ರಮುಖ ಕೇಂದ್ರಗಳಲ್ಲಿ ಒಡ್ಡೋಲಗ ನಡೆಸುತ್ತಿದೆ. ಬಡಾವಣೆಗಳಲ್ಲಿ ಪ್ರತಿ ವಾರ ತರಬೇತಿ, ಕಾರ್ಯಕ್ರಮಗಳೂ ನಡೆಯುತ್ತಿದೆ. 

Advertisement

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಪ್ರಿಯ ಆಗಿರುವ ಯಕ್ಷಗಾನ ಬೆಂಗಳೂರಿನವರಿಗೆ ಇತ್ತೀಚಿನ ವರ್ಷಗಳಲ್ಲಿ ಅಪರಿಚಿತ ಏನೇನೂ ಅಲ್ಲ. ಅದು ನಮ್ಮ ಮನೆಯದ್ದೇ ಎಂಬ ಭಾವನೆ ಇದೆ. ಇನ್ನು ಹೋಟೆಲ್‌ ಉದ್ಯಮ ಮತ್ತು ಯಕ್ಷಗಾನಕ್ಕೆ ಅವಿನಾಭಾವ ನಂಟು ಹಿಂದಿನಿಂದಲೂ ಇದೆ. ಕಲಾವಿದರಿಗೆ ಮತ್ತು ಯಕ್ಷಗಾನಕ್ಕೆ ರಾಜಧಾನಿಯಲ್ಲಿ ಹೆಚ್ಚು ಪ್ರೋತ್ಸಾಹ ನೀಡಿದ್ದರಲ್ಲಿ ಹೋಟೆಲ್‌ ಉದ್ಯಮದ್ದು ಅಗ್ರಪಂಕ್ತಿ ಎಂದರೆ ತಪ್ಪಾಗಲಾರದು.

ರಾಜಧಾನಿಯಲ್ಲಿನ ಯಕ್ಷಕಾಲ: ಕರಾವಳಿ ಜಿಲ್ಲೆಗಳಲ್ಲಿ ನವೆಂಬರ್‌ನಿಂದ ಮೇ ವರೆಗೆ ವಾರ್ಷಿಕ ತಿರುಗಾಟ ನಡೆಯುತ್ತದೆ. ನಂತರ  ಜೂನ್‌ನಿಂದ ಅಂದರೆ ಪ್ರತಿ ಮಳೆಗಾಲ ಆರಂಭದಿಂದ ನವೆಂಬ ರ್‌ವರೆಗೆ ಬೆಂಗಳೂ ರಲ್ಲಿ ಯಕ್ಷ ಪ್ರದರ್ಶನಗಳು ನಡೆಸಲಾಗುತ್ತದೆ.

ರವೀಂದ್ರ ಕಲಾಕ್ಷೇತ್ರವೇ ಪ್ರಧಾನ: ಬೆಂಗಳೂರಿನಲ್ಲಿ ಯಕ್ಷಗಾನ ನಡೆಯುವ ಪ್ರಧಾನಕೇಂದ್ರವೇ ರವೀಂದ್ರ ಕಲಾಕ್ಷೇತ್ರ. ಹೋಟೆಲ್‌ ಉದ್ಯಮದ ಲ್ಲಿರು ವವರಿಗೆ ದಶಕಗಳ ಹಿಂದೆ ಮನ ರಂಜನೆಗೆ ಯಕ್ಷಗಾ ನವೇ ಆಗಿತ್ತು. ಹೀಗಾಗಿ, ಬಡಗುಟ್ಟಿನ ಯಕ್ಷ ಗಾನ ಮೇಳಗಳು ಬೆಂಗ ಳೂ ರಿ ನಲ್ಲಿ  ಪ್ರಧಾನ ಭೂಮಿಕೆ ವಹಿಸಿದ್ದವು. ಅಲ್ಲಿ ಟಿಕೆಟಿನ ಆಟದ ಜತೆಗೆ ತೆಂಕುತಿಟ್ಟಿನ ಕಲಾ ವಿದರನ್ನು ಆಹ್ವಾನಿಸ ಲಾಗುತ್ತಿತ್ತು.

ಇತರೆಡೆಗೆ:  ಬೆಂಗಳೂರು ನಗರ ವ್ಯಾಪ್ತಿ ವಿಸ್ತರಿಸಿದಂತೆ ಜನರೂ ಕೂಡ ತಮ್ಮ ತಮ್ಮ ವ್ಯಾಪ್ತಿಯ ವಾಸ ಸ್ಥಳಗಳಲ್ಲಿ ಯಕ್ಷ ಗಾನ ಕಾರ್ಯಕ್ರಮ ಆಯೋಜನೆಗೆ ಮನಸ್ಸು ಮಾಡಿದರು. ಹೀಗಾಗಿ, ರವೀಂದ್ರ ಕಲಾಕ್ಷೇತ್ರದ ಜತೆ ಹೊಸ ಬಡಾವಣೆಗಳು, ದೇಗುಲಗಳ ವ್ಯಾಪ್ತಿಯಲ್ಲಿ  ಆರಂಭಗೊಂಡವು. ಶನಿವಾರ, ಭಾನುವಾರ ಕಾರ್ಯಕ್ರಮ ನಡೆಯುತ್ತದೆ.

Advertisement

ಕಾಲಮಿತಿ ಪ್ರಯೋಗ: ರವೀಂದ್ರ ಕಲಾಕ್ಷೇತ್ರದಲ್ಲಿ ಆದರೆ, ರಾತ್ರಿ ಪೂರ್ತಿ ಕಾರ್ಯಕ್ರಮಕ್ಕೆ ಅವಕಾಶ ಇದೆ. ಆದರೆ, ಉದ್ಯಾನಗರಿಯ ಇತರೆಡೆ ಅದಕ್ಕೆ ಅವಕಾಶ ಇಲ್ಲ ಎನ್ನುತ್ತಾರೆ ಹಿರಿಯ ಕಲಾವಿದ ರವಿಶಂಕರ ವಳಕ್ಕುಂಜ. ಅದಕ್ಕೆ ಉದ್ಯಾನ ನಗರಿಯ ಜೀವನ ಶೈಲಿಯೂ ಕಾರಣ. ಸೀಮಿತ ಅವಧಿಯ ಕಾರ್ಯಕ್ರಮವಾದ್ದರಿಂದ ಯಕ್ಷಗಾನದ ಕಥೆಯನ್ನು ಪ್ರೇಕ್ಷಕರಿಗೆ ಮಿಸ್ಸಿಂಗ್‌ ಲಿಂಕ್‌ ಆಗದಂತೆ ನಿರೂಪಿಸುವ ಹೊಣೆಗಾರಿಕೆ ಕಲಾವಿದರಿಗೆ ಇದ್ದೇ ಇರುತ್ತದೆ.  ಮತ್ತೂಬ್ಬ ಹಿರಿಯ ಕಲಾವಿದ ರವೀಂದ್ರ ದೇವಾಡಿಗರು ಹೇಳುವಂತೆ ಉದ್ಯಾನ ನಗರಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕರಾವಳಿಯ ಅಗ್ರಕಲೆ ಯಕ್ಷಗಾನದ ವ್ಯಾಪ್ತಿ ವಿಸ್ತಾರವಾಗುತ್ತಿದೆ. ಅದಕ್ಕೆ ಊರಿನಿಂದ ಬಂದವರ ಪ್ರೋತ್ಸಾಹ ಕೂಡ ಕಾರಣ ಎನ್ನುತ್ತಾರೆ. ಪ್ರೇಕ್ಷಕರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ನಮಗೂ ಅನುಕೂಲ ಎನ್ನುತ್ತಾರೆ.

ಪತ್ರಕರ್ತರಿಂದ ಸೀನಿಯರ್‌ ಮ್ಯಾನೇಜರ್‌ ವರೆಗೆ:

ಬೆಂಗಳೂರಿನಲ್ಲಿ ತೆಂಕು ಮತ್ತು ಬಡಗು ಯಕ್ಷಗಾನಕ್ಕೆ ಸಂಬಂಧಿಸಿದ 70 ತಂಡಗಳು ಇವೆ ಎನ್ನುತ್ತಾರೆ ಹಿರಿಯ ಪತ್ರ ಕರ್ತ ಅವಿನಾಶ್‌ ಬೈಪಡಿ ತ್ತಾಯ. ಪತ್ರಕರ್ತರು, ಟೆಕಿ ಗಳು, ಚಾರ್ಟರ್ಡ್‌ ಅಕೌಟೆಂಟ್‌ಗಳು, ಎಚ್‌.ಆರ್‌. ಮ್ಯಾನೇಜರ್‌ಗಳು ಸೇರಿದಂತೆ ಹತ್ತು ಹಲವು ವಿಭಿನ್ನ ವೃತ್ತಿಯವರು ಇದ್ದಾರೆ. ಖಾಸಗಿ ಕಂಪನಿಯಲ್ಲಿ ಹಿರಿಯ ಅಧಿಕಾರಿ ಆಗಿರುವ ಶಶಾಂಕ ಅರ್ನಾಡಿಯ ವರೇ ಹೇಳುವಂತೆ ಬೆಂಗಳೂರಲ್ಲಿ ತೆಂಕು ಮತ್ತು ಬಡಗು ಯಕ್ಷಗಾನ ಶೈಲಿಯ 100 ಕಲಾವಿದರು ಇದ್ದಾರೆ.

ತಾಳಮದ್ದಳೆ: ತಾಳಮದ್ದಳೆ ಎನ್ನು ವುದು ಯಕ್ಷಗಾನದ ಒಂದು ಪ್ರಾಕಾರ. ಅಸ್ಖಲಿತ ಮಾತು ಗಾ ರಿಕೆಯೇ ಅದರ ಜೀವಾಳ. ಉದ್ಯಾನ ನಗರಿ ಯಲ್ಲಿ ತಾಳಮದ್ದಳೆ ಕಾರ್ಯಕ್ರಮ ಜನ ಪ್ರಿಯಗೊ ಳಿಸುವ ಒಂದು ಪ್ರಯತ್ನ ನಡೆದಿದೆ. ಚಾರ್ಟರ್ಡ್‌ ಅಕೌಟೆಂಟ್‌ ರವಿ ಐತುಮನೆ ನೇತೃತ್ವ ದಲ್ಲಿ ನಿರ್ಮಾಣ್‌ ಯಕ್ಷಬಳಗ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

ಯಕ್ಷಗಾನ ಸಂಘಟಕ ಉಜಿರೆ ಅಶೋಕ ಭಟ್‌ ಹೇಳುವಂತೆ ಕುಬಣೂರು ಬಾಲಕೃಷ್ಣ ರಾವ್‌ ನೇತೃ ತ್ವದಲ್ಲಿ ತಾಳಮದ್ದಳೆಗಳೂ ನಡೆದ್ದವು. ಇತ್ತೀ ಚಿನ ವರ್ಷಗಳಲ್ಲಿ ರಾಜಧಾನಿಯ ಉದ್ದಗಲಕ್ಕೆ ಕಾರ್ಯಕ್ರಮಗಳು ನಡೆಯುತ್ತಿರುವುದು ಅದರ ವ್ಯಾಪ್ತಿ ವಿಸ್ತಾರವಾಗಿರುವುದಕ್ಕೆ ಸಾಕ್ಷಿ ಎನ್ನುತ್ತಾರೆ.

ಒಂದು ಯಶಸ್ವಿ ಪ್ರದರ್ಶನ: ಯಕ್ಷಗಾನ ಕ್ಷೇತ್ರದ ಸಂಘಟಕ ನಾಗರಾಜ ನೈಕಂಬಳ್ಳಿ ಯ ವರು ಹೊಸ ಪ್ರಯೋ ಗಕ್ಕೆ ಕೈಹಾಕಿ ಯಶಸ್ವಿಯೂ ಆಗಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ಜು.22ರಂದು ಪೂರ್ಣರಾತ್ರಿಯ ಯಕ್ಷಗಾನ ತಾಳಮದ್ದಳೆ ನಡೆಸಿದ್ದಾರೆ. ಬೆಳಗಿನವರೆಗೆ 400 ಪ್ರೇಕ್ಷಕರು ಅದನ್ನು ನಿದ್ದೆಬಿಟ್ಟು ವೀಕ್ಷಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಕಲಾವಿದ ವಾಸುದೇವ ರಂಗಾ ಭಟ್ಟ ಮಧೂರು, ಇದೊಂದು ಹೊಸ ಪ್ರಯತ್ನ. ಹೊಸ ಕಲಾವಿದರಿಗೂ ಅವಕಾಶ ಸಿಗುತ್ತಿದೆ ಎನ್ನುತ್ತಾರೆ

ತುಳು ಯಕ್ಷಗಾನ: ತುಳು ಯಕ್ಷಗಾನ ಪ್ರಯೋಗದ ಬಗ್ಗೆ ಮಾತ ನಾಡಿದ  ಗಣೇಶ್‌ ಭಟ್‌ ಬಾಯಾರು ಸೀಮಿತ ವ್ಯಾಪ್ತಿ ಯಲ್ಲಿ ನಡೆದಿದೆ. ಊರ ಕಡೆಯ ಪ್ರೇಕ್ಷಕರನ್ನು ಸೆಳೆಯುತ್ತಿದೆ ಎನ್ನುತ್ತಾರೆ.

ಮುಂಬೈ ಬೆಂಗಳೂರು ಸಮಾನ: ಯಕ್ಷಗಾನ ಕಲಾ ವಿದರಿಗೆ ಮಳೆಗಾಲದ ಅವಧಿಯಲ್ಲಿ ಕಾರ್ಯಕ್ರಮ ಪ್ರದರ್ಶ ನಕ್ಕೆ ಹೆಚ್ಚು ಅವಕಾಶ ಕೊಡುವುದು ಮುಂಬೈ ಮತ್ತು ಬೆಂಗಳೂರು ಎನ್ನುತ್ತಾರೆ ಯಕ್ಷಗಾನ ಕಲಾವಿದರಾದ ಚಂದ್ರಶೇಖರ ಧರ್ಮ ಸ್ಥಳ ಮತ್ತು ಚೆಂಡೆ ವಾದಕ ಪದ್ಮನಾಭ ಉಪಾಧ್ಯಾಯ.

ಜಾಲತಾಣಗಳು ಪ್ರಭಾವ: ಹಿಂದೆ ಬೆಂಗಳೂರಿನಲ್ಲಿ ಎಲ್ಲಿ ಯಕ್ಷಗಾನ ಕಾರ್ಯಕ್ರಮ ಇದೆ ಎಂದು ಉದಯವಾಣಿ ನೋಡುತ್ತಿದ್ದೆವು. ಈಗ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಜೊತೆ ವಿಡಿಯೋ ಕೂಡ ಸಿಗುತ್ತಿದೆ. ಇದರಿಂದ ಪ್ರಚಾರವೂ ಹೆಚ್ಚಾಗುತ್ತದೆ ಎನ್ನುತ್ತಾರೆ ಶಶಾಂಕ ಅರ್ನಾಡಿ.

ಪ್ರಮುಖ ಯಕ್ಷ ತಂಡಗಳು:

ಸಾಲಿಗ್ರಾಮ, ಪೆರ್ಡೂರು ಮೇಳ, ಪುತ್ತೂರು ಶ್ರೀಧರ ಭಂಡಾರಿ ಸ್ಥಾಪಿತ ಪುತ್ತೂರುಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ, ಮಹಾಗಣಪತಿ ಯಕ್ಷಗಾನ ಮಂಡಳಿ(ರಿ)ನಿಡ್ಲೆ, ಧರ್ಮಸ್ಥಳ, ಹಿರಿಯ ಕಲಾವಿದ ವಿದ್ಯಾಧರ ಜಲವಳ್ಳಿ ಅವರ ತಂಡಗಳು ಕಾರ್ಯಕ್ರಮ ನೀಡುತ್ತಿವೆ.

ಎಲ್ಲೆಲ್ಲಿ ಕಾರ್ಯಕ್ರಮ ನಡೆಯುತ್ತಿದೆ:

ರವೀಂದ್ರ ಕಲಾಕ್ಷೇತ್ರ, ಎ.ಡಿ.ಎ.ರಂಗ ಮಂದಿರ, ನಯನ ಸಭಾಂಗಣ, ಎಚ್‌.ಎನ್‌.ಕ್ಷೇತ್ರ, ಟಿ.ದಾಸರಹಳ್ಳಿಯ ಸೌಂದರ್ಯ ಕಾಲೇಜು, ಕೋರಮಂಗಲದಲ್ಲಿ ಇರುವ ಎಡನೀರಿನ ಶಾಖಾ ಮಠ, ಉದಯಭಾನು ಕಲಾಸಂಘ, ಬಸವೇಶ್ವರನಗರ, ಪದ್ಮನಾಭನಗರ, ಹನುಮಂತನಗರದ ಕೆ.ಎಚ್‌.ಕಲಾಸೌಧಗಳಲ್ಲಿ ತೆಂಕುತಿಟ್ಟು, ಬಡಗುತಿಟ್ಟು ಯಕ್ಷಗಾನ ತಂಡಗಳ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ.

ರವೀಂದ್ರ ಕಲಾಕ್ಷೇತ್ರ ಸೇರಿ ನಗರದ ಹಲವು ಸ್ಥಳಗಳಲ್ಲಿ ಕಾರ್ಯಕ್ರಮ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿರುವುದು ಶ್ಲಾಘನೀಯ. ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಉದ್ಯಾನಗರಿಯ ಪ್ರೇಕ್ಷಕರು ಸಭ್ಯತೆಯಿಂದ ವರ್ತಿಸುತ್ತಾರೆ. ಪಟ್ಲ ಸತೀಶ್‌ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಷನ್‌ ಸಂಸ್ಥಾಪಕ.

ನಮ್ಮ ರಾಜಧಾನಿಯಲ್ಲಿ ಯಕ್ಷಗಾನಕ್ಕೆ ಯಾವತ್ತೂ ಪ್ರೋತ್ಸಾಹ ಸಿಗುತ್ತದೆ ಎನ್ನುವುದು ಸಂತೋಷದ ವಿಷಯವೇ. ನಗರದ ವಿವಿಧ ಭಾಗಗಳಲ್ಲಿ ತೆಂಕು – ಬಡಗು ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿವೆ.ಪ್ರಜ್ವಲ್‌ ಕುಮಾರ್‌, ಯಕ್ಷಗಾನ ಕಲಾವಿದ, ಗುರುವಾಯನಕೆರೆ.

25 ವರ್ಷದಿಂದ ರಾಜಧಾನಿಯಲ್ಲಿನ ಕಾರ್ಯಕ್ರಮಕ್ಕೆ ಬರುತ್ತಿದ್ದೇನೆ. ಹಳೆ ತಲೆಮಾರಿನ ಪ್ರೇಕ್ಷಕರ ಜತೆಗೆ ಹೊಸ ತಲೆಮಾರಿನ ಪ್ರಬುದ್ಧ ಪ್ರೇಕ್ಷಕರು ಇರುವುದು ಸಂತೋಷದ ವಿಚಾರ. ನೋಡುಗರಿಗೆ ಗೂಗಲ್‌, ಜಾಲತಾಣಗಳ ಮೂಲಕ ಕತೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳಲೂ ಅನುಕೂಲ ಇದೆ.ಸೀತಾರಾಮ್‌ಕುಮಾರ್‌, ಯಕ್ಷಗಾನ ಕಲಾವಿದ, ಕಟೀಲು.

ಉತ್ತಮ ಕಾರ್ಯಕ್ರಮ ನೀಡಿದರೆ ಅದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಕಾರ್ಯಕ್ರಮ ನೀಡದಿದ್ದರೆ ಏನು ವಿಚಾರ, ನಿಮಗೆ ಏನು ಬೆಂಬಲ ಬೇಕು ಎಂದು ಕೇಳುವವರು ಇರುವುದು ಸಂತೋಷ. ಡಾ.ಸಿಬಂತಿ ಪದ್ಮನಾಭ, ಯಕ್ಷಗಾನ ಕಾರ್ಯಕ್ರಮ ಸಂಘಟಕ. 

– ಸದಾಶಿವ ಕೆ.

Advertisement

Udayavani is now on Telegram. Click here to join our channel and stay updated with the latest news.

Next