Advertisement

Yakshagana; ಹಳಿ ತಪ್ಪಿದ ಭಾಗವತಿಕೆ ಮರಳಿ ಸುಸ್ಥಿತಿಗೆ ಬರಲೇಬೇಕು

12:17 AM Oct 22, 2023 | Team Udayavani |

ನಾನು ಅಣುಗ, ಅಣಗ ನಾನು
ನಾನು ಅಣುಗ, ಅಣಗ ನಾನು
ನಾನು ಅಣಗನಾದರೇನು
ಅಣುಗನಾದರೇನು ನಾನು
ನಾದರೇನು.. ನಾದರೇನು…
ಇದು ಇತ್ತೀಚೆಗೆ ನಾನು ಕೇಳಿದ ಅಭಿಮನ್ಯು ಕಾಳಗದ ಪದ. ಶಾಲಾ ನಾಟಕದ ನೃತ್ಯರೂಪಕದ ಹಿನ್ನೆಲೆ ಗಾಯನವಲ್ಲ. ಅಂದರೆ ನಮ್ಮ ಯಕ್ಷಗಾನ ಭಾಗವತಿಕೆಯ ಧಾಟಿ ಯಾವ ಪರಿ ಬದಲಾಗಿದೆ ಎಂಬುದು ನಿಮ್ಮ ಊಹೆಗೆ ಬಿಟ್ಟ ವಿಚಾರ. ಪದದ ಪೂರ್ಣ ಪಾಠ ಹೀಗಿದೆ. “ನಾನು ಅಣುಗನಾದ ಡೆನ್ನ/ಬಾಣಗಳಿಗೆ ಬಾಲತನವೇ! ಹೂಣಿ ನೋಡಿರೆನುತಲೆಚ್ಚ/ ನಾಣಿಶರಗಳ’.
ದ್ರೋಣಾಚಾರ್ಯರು ಬಲಿದ ಚಕ್ರವ್ಯೂಹದ ದ್ವಾರವನ್ನು ಭೇದಿಸಿ ಒಳ ಪ್ರವೇಶಿಸಿದ ಅಭಿಮನ್ಯುವನ್ನು ಕಂಡು ಕೌರವಾದಿಗಳು ಸಣ್ಣವನಾದ ನಿನಗೆ ನಮ್ಮೊಡನೆ ಕಾದಾಡಿ ಜಯಿಸಲು ಸಾಧ್ಯವೇ ಎಂದು ಕೇಳಿದಾಗ, ಆತ್ಮವಿಶ್ವಾಸದ ಹಾಗೂ ವಿರೋಚಿತವಾದ ಮಾತುಗಳನ್ನೇ ಆಡು ತ್ತಾನೆ. ನಾನು ಬಾಲಕನಾದರೇನು ನನ್ನ ಬಾಣಗಳಿಗೆ ಬಾಲತನವಿದೆಯೇ ಪರೀಕ್ಷಿಸಿ ಎಂದು ಕೌರವ ಪಡೆಯ ಮೇಲೆ ಬಾಣದ ಸುರಿಮಳೆ ಗರೆಯುತ್ತಾನೆ. ಇದರ ಭಾವ ಹೇಗಿರತಕ್ಕದ್ದು? ಇದು ಸನ್ನಿವೇಶ.

Advertisement

ಇನ್ನೊಂದು ಸಂದರ್ಭ. ಪದ- “ಕುರುರಾಯ ಕೇಳೆನ್ನಮಾತ..’ ವೈಶಂಪಾ ಯನ ಸರೋವರದಲ್ಲಿ ವರುಣ ಮಂತ್ರ ಜಪಿಸುತ್ತಾ ಮುಳುಗಿ ಕುಳಿತಿರುವ ಕೌರವನನ್ನು ದಡದಲ್ಲಿ ನಿಂತು ಅಶ್ವತ್ಥಾಮ ಮಾತಾಡಿಸುವುದು. ಗೋಚರಕ್ಕೆ ಸಿಗಬಾರದೆಂಬ ಉದ್ದೇಶದಿಂದಲೇ ಕೌರವ ನೀರಿನಲ್ಲಿ ಮುಳುಗಿ ಅಡಗಿಕೊಂಡಿದ್ದಾನೆ. ಅವನೊಡನೆ ಮಾತಾಡುವ ಸನ್ನಿವೇಶದ ಭಾವ ಹೇಗಿರಬೇಕು! ನಾನು ಕಂಡ ಪ್ರದರ್ಶನದಲ್ಲಿ ಅಶ್ವತ್ಥಾಮ ಹದಿನೈದು ನಿಮಿಷ ಕುಣಿದ ಅಥವಾ ಭಾಗವತರು ಕುಣಿಸಿದರು. ಪದದ ಸ್ಥಾಯಿಭಾವ ಪ್ರಕಟವಾಗಲಿಲ್ಲ. ರಂಗಸ್ಥಳದಲ್ಲಿ ಏನೋ ಗೌಜು ಆಗುತ್ತಿರುವುದು ಅನುಭವಕ್ಕೆ ಬರುತ್ತದೆ.

ಯಕ್ಷಗಾನ ಒಂದು ಭಾವ ಪ್ರಧಾನ ದೃಶ್ಯಮಾಧ್ಯಮ. ಇಲ್ಲಿ ಕಥಾ ನಿರೂಪಣೆ ಪ್ರಸಂಗ ಸಾಹಿತ್ಯದ ಮೂಲಕ ಸಾಗುತ್ತದೆ. ಈ ಪ್ರಸಂಗ ಸಾಹಿತ್ಯ ಛಂದೋಬದ್ಧ, ತಾಳನಿಬದ್ಧ, ಗೇಯ ಪ್ರಬಂಧ ಎನ್ನುವುದು ವಿದ್ವಾಂಸರ ಅಭಿಪ್ರಾಯ. ಇಲ್ಲಿ ಬಳಸುವ ರಾಗಗಳನ್ನು “ಮಟ್ಟು’ಗಳಿಗೆ ಅಳವಡಿಸಿ ಹಾಡುವುದು ರೂಢಿ. ಹಾಗಾಗಿ ಗೇಯತೆಯ ಧಾಟಿಯಲ್ಲಿ ವಿಶಿಷ್ಟತೆ ಇರುತ್ತದೆ. ಎಲ್ಲ ಶಿಷ್ಟ, ಶಾಸ್ತ್ರೀಯ ಹಾಗೂ ಜಾನಪದ ಸಂಗೀತ ಪ್ರಕಾರಗಳಲ್ಲಿ ಅವುಗಳದ್ದೇ ಆದ ಗೇಯತೆಯ ಧಾಟಿ ಇರುತ್ತದೆ. ಉದಾಹರಣೆಗೆ ಕೋಲು ಹೊಯ್ಯುವ ಹಾಡುಗಳು. ಆ ಹಾಡನ್ನು ಅದೇ ಧಾಟಿಯಲ್ಲಿ ಹಾಡಿದರೆ ಮಾತ್ರ ಅದು ಕೋಲು ಹೊಯ್ಯುವ ಹಾಡೆಂದೆನಿಸಿಕೊಳ್ಳುತ್ತದೆ ಮತ್ತು ಹಾಗೆ ಹಾಡಿದರೆ ಮಾತ್ರ ಅದರ ವಿಶಿಷ್ಟತೆ ಉಳಿಯುತ್ತದಲ್ಲವೇ!

ಆಗಲೇ ಹೇಳಿದ ಹಾಗೆ ಯಕ್ಷಗಾನದ ಪ್ರಸಂಗ ಸಾಹಿತ್ಯ ಛಂದೋಬದ್ಧವಾದುದು. ಹಾಗಾಗಿ ಭಾಗವತರಿಗೆ ಛಂದಸ್ಸಿನ ಕಿರು ಪರಿಚಯವಾದರೂ ಇರುವುದು ಅಗತ್ಯ ಮತ್ತು ಉತ್ತಮ. ಸರಳವಾಗಿ ಹೇಳುವುದಾದರೆ ಲಘು, ಗುರುಗಳ ಕಾಲ ಮಾಪನವೇ ಛಂದಸ್ಸಿನ ಮಾತ್ರೆಗಳು. ಭಾಗವತರು ಅಕ್ಷರ ಕಾಲಗಳಿಗನುಸಾರ ತಾಳ ನುಡಿಸಿ, ಸ್ವರಗಳಿಗೂ ಭಾವಕ್ಕೂ ಇರುವ ಸಂಬಂಧವನ್ನು ಖಚಿತಪಡಿಸಬೇಕಾದುದು ಭಾಗವತಿಕೆಯ ಧರ್ಮ. ಆದರೆ ಈಗ ವೃತ್ತಿ ನಿರತ ಭಾಗವತರು ಹಿಂದೂಸ್ಥಾನಿ ಸಂಗೀತ ಅಳವಡಿಸುವುದು, ಸುಗಮ ಸಂಗೀತ ಬೆರೆಸುವುದು, ಕುಂದಾಪುರ ಕನ್ನಡದಲ್ಲಿ ಭಾಗವತಿಕೆ ಮಾಡುವುದರಲ್ಲಿ ನಿರತರಾಗಿದ್ದಾರೆ. ತಪ್ಪೇನಿಲ್ಲ. ಅದು ಅವರ ಪ್ರಯೋಗ, ಅವರು ಸ್ವತಂತ್ರರಿದ್ದಾರೆ. ಆದರೆ ನಮ್ಮ ಯಕ್ಷಗಾನದ ಭಾಗವತಿಕೆಯ ಮೂಲಸ್ವರೂಪದ ಗತಿ ಏನಾದೀತು. ಒಂದು ಗಾನ ಪರಂಪರೆಯೇ ನಷ್ಟ, ಕಣ್ಮರೆ ಯಾಗುವುದಿಲ್ಲವೇ? ಹಾಗಾಗಿ ಈಗ ನಮ್ಮ ಭಾಗವತರು ಗಂಭೀರವಾಗಿ ಚಿಂತಿಸುವ ಕಾಲ ಸನ್ನಿಹಿತವಾಗಿದೆ. ಭಾಗವತರು ಕಣ್ಮರೆಯಾಗುತ್ತಿರುವ ಪರಂಪರೆಯ ಮಟ್ಟುಗಳನ್ನು ಊರ್ಜಿತಕ್ಕೆ ತಂದು ಹಳಿ ತಪ್ಪಿದ ಯಕ್ಷಗಾನ ಭಾಗವತಿಕೆಯನ್ನು ಮರಳಿ ಸುಸ್ಥಿತಿಗೆ ತರುವ ಜವಾಬ್ದಾರಿ ಅವರ ಹೆಗಲ ಮೇಲಿದೆ.

ಇನ್ನು ಯಕ್ಷಗಾನದ ಮೂಲ ಸ್ವರೂಪದ ಬಗ್ಗೆ ಸಭಾ ಲಕ್ಷಣದಲ್ಲಿಯೇ ಸಾಕಷ್ಟು ಮಾಹಿತಿ ಇದೆ. ಛಂಧೋಬದ್ಧ, ತಾಳನಿಬದ್ಧ, ಪ್ರಸಂಗ ಸಾಹಿತ್ಯವನ್ನು ತಾಳ ನುಡಿಸಿ ಹಾಡುವುದು ಹೇಗೆ ಎಂಬುದರ ಬಗ್ಗೆ ಸೂಚನೆ ಇದೆ. ಯಕ್ಷಗಾನದಲ್ಲಿ ಲಯಭರಿತವಾದ ಹೆಜ್ಜೆಗಾರಿಕೆಯೇ ಪ್ರಧಾನವಾಗಿದ್ದು, ಆಗ ಮನಸ್ಸು ಸಹಿತ ಇತರ ಅಂಗಚಲನೆಗಳು ಹೇಗಿರಬೇಕೆಂಬ ಮಾರ್ಗ ದರ್ಶನವಿದೆ. ಅಲೌಕಿಕ ಲೋಕ ಸೃಷ್ಟಿಯ ಪರಿಕಲ್ಪನೆಯಲ್ಲಿ ರೂಪಿಸಿದ ಆಹಾರ್ಯದ ಕುರಿತೂ ಮಾಹಿತಿ ಇದೆ. ವಿವಿಧ ರಾಗಗಳನ್ನು ಯಕ್ಷಗಾನದಲ್ಲಿ “ಮಟ್ಟು’ಗೆ ಅಳವಡಿಸಿ ಹಾಡುವುದು ರೂಢಿ. ಶಕ್ತರಾದ ಭಾಗವತರು ಹಿಂದೆ ಅನೇಕ ರಾಗಗಳನ್ನು ಸೇರ್ಪಡೆಗೊಳಿಸಿದ್ದಾರೆ.

Advertisement

ಬೆಳಕಿನ ಸೇವೆ ಬೆಳಗಿನ ತನಕ ಮಾಡದೆ ಕಾಲಮಿತಿಗೆ ಕ್ರಾಂತಿಕಾರಿಯಾಗಿ ಅನುಷ್ಠಾನಕ್ಕೆ ತರಲು ಭಾವನಾತ್ಮಕ ಹಾಗೂ ತಾಂತ್ರಿಕ ಅಡಚಣೆಗಳಿವೆ. ಯಕ್ಷಗಾನ ಕೇವಲ ಪ್ರದರ್ಶನ ಕಲೆಯಾಗಿರದೆ, ಆರಾಧನಾ ಕಲೆಯಾಗಿ ಉಳಿದು, ಬೆಳೆದು ಬಂದಿದೆ. ಅದರ ಸುತ್ತ ನಂಬಿಕೆಯ ಆವರಣವಿದ್ದು, ಆಸ್ತಿಕರ ಭಾವನೆಗೆ ಸಂಬಂಧಿಸಿದ ವಿಚಾರ. ಅಲ್ಲದೆ ಕಾಲಮಿತಿ ಪ್ರದರ್ಶನಕ್ಕಾಗಿ ಪ್ರಸಂಗವನ್ನು ಸಂಕುಚಿತಗೊಳಿಸುವಾಗ ಉಂಟಾಗಬಹುದಾದ ಅಪೂರ್ಣತೆಯನ್ನು ಭರ್ತಿ ಮಾಡುವ ವಿಧಾನ ಇನ್ನೂ ಕರಗತವಾಗಿಲ್ಲ. ಈ ಅಂಶಗಳನ್ನೆಲ್ಲ ಗಮನದಲ್ಲಿರಿಸಿಕೊಂಡು ಬದಲಾವಣೆಗಳನ್ನು ಮಾಡಿದಲ್ಲಿ ಮಾತ್ರವೇ ಯಕ್ಷಗಾನ ಕಲೆಯ ನೈಜತೆ ಉಳಿದು, ಮತ್ತಷ್ಟು ಬೆಳೆಯಲು ಸಾಧ್ಯ.
ನಮ್ಮ ಕರಾವಳಿಯ ಯಕ್ಷಗಾನ ಶತಮಾನಗಳಿಂದ ಉಳಿದು, ಬೆಳೆದು ಬಂದ ಕಲೆ. ಇದರಲ್ಲಿ ನಮ್ಮ ಭಾರತೀಯ ಸಾಂಸ್ಕೃತಿಕ ಪರಂಪರೆ ಅಡಕವಾಗಿದೆ. ಈ ದೃಶ್ಯಮಾಧ್ಯಮದ ನೆಲೆಗಟ್ಟು, ಮೂಲಸ್ವರೂಪವನ್ನು ಕಾಪಿಟ್ಟು ಮುಂದಿನ ತಲೆಮಾರಿಗೆ ದಾಟಿಸುವ ಹೊಣೆಗಾರಿಕೆ ನಮ್ಮ ಮೇಲಿದೆ.

ಬೇಳೂರು ರಾಘವ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next