Advertisement

ಹೊಸ ಸಾರಥ್ಯ: ಆರ್ಥಿಕ, ಕೋವಿಡ್ ಸವಾಲುಗಳ ನಡುವೆ ಯಕ್ಷಗಾನ ಅಕಾಡಮಿ ಗೆಲ್ಲಿಸಬೇಕಿದೆ

12:16 PM Jan 13, 2022 | Team Udayavani |

ಶಿರಸಿ: ಬಯಲಾಟ ಅಕಾಡೆಮಿಯಿಂದ ಬೇರ್ಪಟ್ಟ ಯಕ್ಷಗಾನ ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿದ್ದ ಪ್ರೋ.ಎಂ.ಎ ಹೆಗಡೆ ದಂಟಕಲ್ ಅವರ ಅಕಾಲಿಕ ಅಗಲಿಕೆಯ ಎಂಟು ತಿಂಗಳ ಬಳಿಕ ಸರಕಾರ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಹಿರಿಯ ವಿದ್ವಾಂಸ ಡಾ. ಜಿ.ಎಲ್.ಹೆಗಡೆ ಅವರನ್ನು ನೇಮಕಗೊಳಿಸಿದೆ. ಯಕ್ಷಗಾನ, ಮೂಡಲಪಾಯದ ಕಲಾವಿದರು ಕೋವಿಡ್ ಸಂಕಷ್ಟದ ನಡುವೆ ಇರುವಾಗ ಅಕಾಡೆಮಿಯ ಜವಬ್ದಾರಿಯ ನೊಗ ಹೊತ್ತ ಜಿ.ಎಲ್.ಹೆಗಡೆ ಅವರ ಎದುರು ಎಲ್ಲವನ್ನೂ ತೂಗಿಸಿಕೊಂಡು ಹೋಗುವ ಸವಾಲುಗಳ ರಾಶಿಯೇ ಇದೆ.

Advertisement

ಇರುವ ಕೇವಲ ಒಂದುಕಾಲು ವರ್ಷದ ಅವಧಿಯಲ್ಲಿ ಯಕ್ಷಗಾನ ಅಕಾಡೆಮಿಯನ್ನು ಎಂ.ಎ.ಹೆಗಡೆ ಅವರು ಹಾಕಿಕೊಟ್ಟ ಮಾರ್ಗದಲ್ಲೂ ಮುನ್ನಡೆಸಬೇಕಾಗಿದೆ. ಕೋವಿಡ್‌ನಂತಹ ಸಂಕಷ್ಟದಲ್ಲಿ ಇರುವ ಯಕ್ಷಗಾನ, ಮೂಡಲಪಾಯ ಕಲಾವಿದರಿಗೆ ಅಕಾಡಮಿ ಒಂದಿಷ್ಟು ನೆರವಾಗುವ ಕಾರ್ಯ ಮಾಡಬೇಕಾಗಿದೆ. ಪ್ರಥಮ ಅಧ್ಯಕ್ಷರಾಗಿ ಅನೇಕ ಅಕಾಡೆಮಿಕ್ ಕೆಲಸ ಮಾಡಿದ್ದ ಹೆಗಡೆ ಅವರ ಪಥದಲ್ಲಿ ಹಾಗೂ ಒಂದಿಷ್ಟು ಹೊಸ ಹೊಸ ಐಡಿಯಾಗಳ ಮೂಲಕ ಯಕ್ಷಗಾನದ ಸಂಸ್ಕೃತಿ ಹಾಗೂ ಅವುಗಳ ವಿಸ್ತಾರ, ಕಲಾ ಕ್ಷೇತ್ರಕ್ಕೆ ಒಂದು ಘಟ್ಟಿ ಆಧಾರ ಸ್ಥಂಭವಾಗಬೇಕಾದ ಕಾರ್ಯ ಮಾಡಬೇಕಿದೆ.

ಎಂ.ಎ.ಹೆಗಡೆ ಅವರು ಅಧ್ಯಕ್ಷರಾಗಿದ್ದಾಗಲೂ ಅಧಿಕಾರ ವಹಿಸಿಕೊಂಡ ಮರು ದಿನವೇ ವಿಧಾನ ಸಭೆ ನಂತರ ಸಂಸತ್ ಚುನಾವಣೆ ನೀತಿ ಸಂಹಿತೆಗಳು ಬಂದವು. ಇನ್ನೇನು ಅಕಾಡೆಮಿ ಅರಿತು ಕೆಲಸ ಮಾಡಬೇಕು ಎನ್ನುವ ವೇಳೆಗೆ ಕೋವಿಡ್ ಹಾಗೂ ಲಾಕ್ ಡೌನ್ ಸಿಕ್ಕವು. ಮತ್ತೆ ಇನ್ನೇನು ಶುರುವಾಯಿತು ಚಟುವಟಿಕೆ ಎನ್ನುವ ವೇಳೆಗೂ ಮತ್ತೆ ಲಾಕ್ ಡೌನ್ ಬಂದಿತ್ತು. ಎರಡು ಕಾಲು ವರ್ಷದಲ್ಲಿ ಅಂತೂ ಕೆಲಸಕ್ಕೆ ಸಿಕ್ಕ ಮಾಸ ೯ ಮಾತ್ರ. ಆದರೂ ಹಿರಿಯರ ನೆನಪು, ತರಬೇತಿ ಶಿಬಿರಗಳು, ಕೃತಿಗಳ ಪ್ರಕಟನೆ, ಸಾಕ್ಷ್ಯ ಚಿತ್ರಗಳು, ಯಕ್ಷಗಾನ ಪುಸ್ತಕಗಳ ಡಿಜಟಲೀಕರಣ, ಗೌರವ ಪ್ರಶಸ್ತಿಗಳ ಜೊತೆ ಅಕಾಡೆಮಿಯ ಹಣದಲ್ಲೇ ಯಕ್ಷಸಿರಿ ಪ್ರಶಸ್ತಿ ಪ್ರದಾವನ್ನೂ ಎಂ.ಎ.ಹೆಗಡೆ ಅವರು ನಡೆಸಿದವರು. ಮೂಡಲಪಾಯಕ್ಕೂ ಆದ್ಯತೆ ನೀಡಿದ ಎಂ.ಎ. ಹೆಗಡೆ ಅವರು ಕೋವಿಡ್ ಕಾಲದಲ್ಲಿ ಫೇಸ್‌ಬುಕ್ ಲೈವ್ ಕೊಟ್ಟು ಸದಸ್ಯರ ಜೊತೆ ಸೇರಿ ಕೆಲಸ ಮಾಡಿದವರು. ಹೀಗೆ ಸಾಕಷ್ಟು ಅನವರತ ಕೆಲಸ ಮಾಡಿ ಅಕಾಡೆಮಿಗೆ ಒಂದು ನೆಲೆ, ಸೂತ್ರ ಅಳವಡಿಸಿಕೊಟ್ಟಿದವರು ಎಂ.ಎ.ಹೆಗಡೆ ಎಂಬುದರಲ್ಲಿ ಎರಡು ಮಾತಿಲ್ಲ.

ಎಂ.ಎ.ಹೆಗಡೆ ಅವರ ನಂತರ ಅವರಿಂದ ತೆರವಾದ ಸ್ಥಾನಕ್ಕೆ ಯಕ್ಷಗಾನದ ಸಂಶೋಧಕ, ವಿದ್ವಾಂಸ, ಅರ್ಥದಾರಿ, ಕಲಾವಿದ, ಕವಿ, ನಿವೃತ್ತ ಪ್ರಾಧ್ಯಾಪಕ, ಪ್ರವಚನಕಾರ ಡಾ. ಜಿ.ಎಲ್.ಹೆಗಡೆ ಅವರ ನೇಮಕ ಯಕ್ಷಗಾನ ವಲಯದಲ್ಲಿ ಖುಷಿ ತಂದಿದೆ. ಸಮರ್ಥ ಆಡಳಿತಗಾರ ಜಿ.ಎಲ್.ಹೆಗಡೆ ಅವರ ಎದುರು ಎಂ.ಎ.ಹೆಗಡೆ ಅವರು ಎದುರಿಸಿದ ಸಂಕಷ್ಟಗಳೇ ಈಗಲೂ ಇವೆ. ಈಗಲೂ ಕೋವಿಡ್ ಸಂಕಟವಿದೆ. ಯಕ್ಷಗಾನ ಮೇಳಗಳು ರಾತ್ರಿ ಆಟ ಮಾಡದಂಥ ಸ್ಥಿತಿಯಲ್ಲಿವೆ. ಯಕ್ಷಗಾನ, ಮೂಡಲಪಾಯ ಕಲಾವಿದರಿಗೆ ಇನ್ನೇನು ಎಲ್ಲವೂ ಸರಿಯಾಗುತ್ತದೆ ಎಂಬ ವೇಳೆಗೆ ಮತ್ತೆ ಕೋವಿಡ್ ಸಂಕಷ್ಟ ತಂದು ನಿಲ್ಲಿಸಿದೆ. ಜಿಲ್ಲಾ ಪಂಚಾಯತ್ , ತಾಲೂಕು ಪಂಚಾಯತ್ ಚುನಾವಣಾ ನೀತಿ ಸಂಹಿತೆಗಳೂ ನೂತನ ಅಧ್ಯಕ್ಷರ ಅವಧಿ ಕಡಿಮೆಗೂ ಸಾತ್ ಕೊಡಲಿವೆ.

ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗವತ್ ಅಧ್ಯಕ್ಷತೆಯಲ್ಲಿ ನಡೆದ ಪಠ್ಯ ಪುಸ್ತಕ ರಚನಾ ಸಮಿತಿಯಿಂದ ರಚಿತವಾದವುಗಳಲ್ಲಿ ಒಂದು ಹಂತದ ಪ್ರಾಥಮಿಕ ಪಠ್ಯ ಮಾತ್ರ ಪುಸ್ತಕವಾಗಿ ಪ್ರಕಟವಾಗಿದೆ. ಹಿರಿಯರ ವಿಭಾಗದ ಪಠ್ಯ ಹಾಗೂ ವಿದ್ವತ್ ವಿಭಾಗದ ಪಠ್ಯಗಳು ಮುದ್ರಣವಾಗಬೇಕಿದೆ. ಪ್ರಾಥಮಿಕ ವಿಭಾಗದ ಪಠ್ಯದ ಕಲಿಸುವಿಕೆಗೆ ಗುಣಮಟ್ಟದ ಶಿಕ್ಷಕರ ನೇಮಕಾತಿಯನ್ನೂ, ಪ್ರಾಥಮಿಕ ಪಠ್ಯದ ಮುದ್ರಣದಲ್ಲಿ ಉಂಟಾದ ಲೋಪಗಳನ್ನೂ ಸರಿ ಮಾಡಿ, ಪ್ರಾದೇಶಿಕ ಅಸಮತೋಲನ ನಿವಾರಿಸಬೇಕಿದೆ. ಯಕ್ಷಗಾನ ಸಂಶೋಧನೆಗಳ ಕುರಿತೂ ಆದ್ಯತೆ ಸಿಗಬೇಕಿದೆ. ಯಕ್ಷಗಾನ ವೈಜ್ಞಾನಿಕ ಕಲೆ ಎಂಬುದನ್ನು ಋಜುವಾತುಗೊಳಿಸಲು ಇವು ನೆರವಾಗಬಲ್ಲದು.

Advertisement

ಯಕ್ಷಗಾನ ಅಕಾಡೆಮಿ ಜೊತೆಗೇ ಈಗ ಸರಕಾರ ಯಕ್ಷ ರಂಗಾಯನವನ್ನೂ ಆರಂಭಿಸಲು ಮುಂದಾಗಿದೆ. ಈ ರಂಗಾಯಣದ ಆಲೋಚನೆ ಒಳ್ಳೆಯದು. ಇಷ್ಟು ವರ್ಷಗಳ ಬಳಿಕವಾದರೂ ರಂಗಾಯಣದ ಮಾದರಿಯಲ್ಲಿ ಯಕ್ಷಗಾನಕ್ಕೂ ಒಂದು ಯಕ್ಷರಂಗಾಯಣದ ಕಲ್ಪನೆ ಮೂರ್ತ ರೂಪಕಕ್ಕೆ ಬಂದಿದೆ. ರಾಜ್ಯದಲ್ಲಿ ವಿಭಾಗಕ್ಕೊಂದು ರಂಗಾಯಣ ಇದ್ದಂತೆ ಬಡಗು, ತೆಂಕು, ಮೂಡಲಪಾಯಗಳಿಗೆ ಪ್ರತ್ಯೇಕ ರಂಗಾಯಣ ಅಗತ್ಯವಿದೆ. ಇದನ್ನೂ ಜಿ.ಎಲ್.ಹೆಗಡೆ ಅವರು ನಿರ್ವಹಿಸಿಕೊಡಬೇಕಾಗಿದೆ.

ಅಕಾಡೆಮಿ ಹಿರಿಯ ಕಲಾವಿದರುಗಳಿಗೆ ಪ್ರಶಸ್ತಿ ನೀಡಬಲ್ಲದು. ೬೦ ವರ್ಷ ಆದವರಿಗೆ ಈ ಪ್ರಶಸ್ತಿ ಸಿಗಲಿದೆ. ಆದರೆ, ಯುವ ಹಾಗೂ ಎಳೆಯ ಪ್ರತಿಭೆಗೆಗಳಿಗೆ ಯಾವುದೇ ಪುರಸ್ಕಾರಗಳಿಲ್ಲ, ಪ್ರೋತ್ಸಾಹವೂ ಇಲ್ಲ. ಈ ಬಗ್ಗೂ ಯಕ್ಷಗಾನ ಅಕಾಡೆಮಿ, ಮೂಲಪಾಯ ಹಾಗೂ ಯಕ್ಷಗಾನಕ್ಕೆ ಲಕ್ಷ್ಯ ಹಾಕಿ ಹಳೆ ಬೇರು, ಹೊಸ ಚಿಗುರು ಜೊತೆಯಾಗಿಸಬೇಕಿದೆ. ನಾಟಕ ಅಕಾಡೆಮಿಗಳಲ್ಲಿ ಇದ್ದಂತೆ ಪ್ರಶಸ್ತಿಯ ಆಯ್ಕೆಯ ಮಾನದಂಡ ವಯಸ್ಸಾಗದೇ ಸಾಧನೆ ಆಗಿದ್ದೂ ಇಲ್ಲೂ ಅಳವಡಿಸಬೇಕಾಗಿದೆ.

ಈ ಮಧ್ಯೆ ಅತಿವೃಷ್ಟಿ ಅನಾವೃಷ್ಟಿ ಹಾಗೂ ಕೋವಿಡ್ ನಂತಹ ಸಂಕಷ್ಟದಲ್ಲಿ ಅಕಾಡೆಮಿಗಳಿಗೆ ಆರ್ಥಿಕ ನೆರವು ನೀಡಿದಲ್ಲಿ ಮಾತ್ರ ಬಹು ದೊಡ್ಡ ಸವಾಲುಗಳನ್ನೂ ಡಾ. ಜಿ.ಎಲ್.ಹೆಗಡೆ ಹಾಗೂ ಅವರ ಸದಸ್ಯರ ಬಳಗಕ್ಕೆ ಇವನ್ನೆಲ್ಲ ಹೂವಿನಂತೆ ಎತ್ತಿ ಬದಿಗಿಡಲು ಸಾಧ್ಯವಿದೆ.

ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next