Advertisement
ಮಧೂರು ವಾಸುದೇವ ಕಲ್ಲೂರಾಯರ ಸುಮಧುರ ಭಾಗವತಿಕೆಗೆ ಲೋಕೇಶ್ ಕಟೀಲ್ ಮತ್ತು ರಾಜೇಶ್ ಕಟೀಲ್ ಅವರ ಹಿತವಾದ ಮತ್ತು ಗಾನ ನೃತ್ಯಗಳಿಗೆ ಪೂರಕವಾದ ಚೆಂಡೆ ಮದ್ದಳೆಗಳ ನಾದ, ಅನೀಶ್ ಚಕ್ರತಾಳ ಪೂರಕವಾಗಿತ್ತು. ರಾಜಸೂಯಾಧ್ವರವನ್ನು ಸಂಕಲ್ಪಿಸಿ ಧರ್ಮರಾಜನು ಭೀಷ್ಮರ ಮಾರ್ಗದರ್ಶನದಲ್ಲಿ ತೊಡಗುವಲ್ಲಿಂದ ಆರಂಭವಾದ ಪ್ರಸಂಗವು ವಿಳಂಬಗತಿಯಲ್ಲಿ ಆರಂಭವಾಗಿ ವೇಗವನ್ನು ಪಡೆದುಕೊಳ್ಳುತ್ತ, ಎಲ್ಲೂ ಅವಸರಕ್ಕೆಣೆಯಿಲ್ಲದಂತೆ, ಅನಗತ್ಯ ಎಳೆಯಲ್ಪಡದೆ ಮುಂದುವರಿದದ್ದು ವಿಶಿಷ್ಟವಾಗಿತ್ತು. ಧರ್ಮರಾಯನಾಗಿ ನಾಗರಾಜ ಕಳತ್ತೂರು ಅವರದ್ದು ಪಾತ್ರೋಚಿತವಾದ, ಹಿತಮಿತವಾದ ನಿರ್ವಹಣೆ. ಭೀಷ್ಮನಾಗಿ ವೇಣುಗೋಪಾಲ ರಾವ್ ಪಾತ್ರಗಾಂಭೀರ್ಯವನ್ನು ಕಾಯ್ದುಕೊಂಡು, ಶ್ರೀ ಕೃಷ್ಣನ ಹಿರಿಮೆ ಮತ್ತು ಶಿಶುಪಾಲನ ಇತಿಹಾಸವನ್ನು ವಿವರಿಸುವಲ್ಲಿ ವಿದ್ವತೂ³ರ್ಣತೆ ಮೆರೆದು, ಅಗ್ರಪೂಜೆಯಲ್ಲಿ ಭೀಷ್ಮನದ್ದು ಕೇವಲ ಪೂರಕ ಮತ್ತು ಪೋಷಕ ಪಾತ್ರವಲ್ಲ, ಮುಖ್ಯಪಾತ್ರವೆನ್ನುವ ಅರಿವು ಮೂಡಿಸುವಲ್ಲಿ ಶಕ್ತರಾದರು. ಶಿಶುಪಾಲನಾಗಿ ಪ್ರಸಂಗದ ಅವಧಿಯುದ್ದಕ್ಕೂ ಏಕಪ್ರಕಾರವಾದ ಶಕ್ತಿಯನ್ನು ಕಾಯ್ದುಕೊಂಡು ಬೀಸುನಡೆಯ ವೀರಾವೇಷದ ಕುಣಿತ, ಸಿಟ್ಟು, ವ್ಯಂಗ್ಯ, ಹತಾಶೆ ಮತ್ತು ಅಹಂಕಾರವನ್ನು ವ್ಯಕ್ತಪಡಿಸುವ ಸಂಭಾಷಣೆಗಳಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸುವಲ್ಲಿ ಶಕ್ತರಾದರು. ಕಿಶೋರ್ ಕುಮಾರ್ ಆರೂರ್ ವೈವಿಧ್ಯಮಯವಾದ ವೀರಾವೇಷದ ಕುಣಿತ ಮತ್ತು ವ್ಯಂಗ್ಯ ಮೊನಚುಗಳಿಂದ ಕೂಡಿದ ಮಾತುಗಳ ಮೂಲಕ ದಂತವಕ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದರು. ಸಂಭಾಷಣೆಗಳಲ್ಲಿ ಪ್ರಸಂಗದ ಚೌಕಟ್ಟಿನೊಳಗೆ ಪ್ರಸಕ್ತ ವರ್ತಮಾನದ ಘಟನಾವಳಿಗಳನ್ನು ಕಥೆಗೆ ಅಪಚಾರವಾಗದಂತೆ, ಅಸಂಬದ್ಧವೆನಿಸದಂತೆ ಪ್ರಸ್ತಾಪಿಸಿ ಯಕ್ಷಗಾನದ ಹೊಸಪ್ರೇಕ್ಷಕರನ್ನು ಪ್ರದರ್ಶನದಲ್ಲಿ ಸಂಪೂರ್ಣವಾಗಿ ಒಳಗೊಳ್ಳುವಂತೆ ಮಾಡಿದ್ದು, ಆ ಮೂಲಕ ಪ್ರೇಕ್ಷಕರೂ ಕೂಡ ಪ್ರಸಂಗದ ಭಾಗವಾದದ್ದು ಈ ಪ್ರದರ್ಶನದ ವಿಶೇಷ. ಶ್ರೀಕರ ಆಚಾರ್ಯ (ಭಗದತ್ತ), ಪ್ರದೀಪ ಆಚಾರ್ (ಸೋಮದತ್ತ) ಮತ್ತು ನಿರಂಜನ (ಶೂರಸೇನ) ಶಿಶುಪಾಲ ದಂತವಕರ ಆಟಾಟೋಪಗಳಿಗೆ ಪೂರಕರಾಗಿ, ಪ್ರೇರಕರಾಗಿ ಸಮರ್ಥ ನಿರ್ವಹಣೆ ನೀಡಿದರು.
ಪಾತ್ರನಿರ್ವಹಣೆಯಲ್ಲಿ ಉಳಿದ ಪುಂಡುವೇಷಕ್ಕೂ, ಶ್ರೀಕೃಷ್ಣನಿಗೂ ಇರುವ ವ್ಯತ್ಯಾಸವನ್ನರಿತ ನಿರ್ವಹಣೆ ಇವರದ್ದು. ಕುಣಿತ, ಮಾತುಗಳಿಗೆ ಅವಕಾಶವಿಲ್ಲದಿದ್ದರೂ ಆಭಾಸವಿಲ್ಲದಂತೆ ಅಗ್ರಪೂಜೆಯನ್ನು ಧರ್ಮಜನ ಆದೇಶಾನುಸಾರ ನಿರ್ವಹಿಸುವ ಸಹದೇವನಾಗಿ ಕಾಣಿಸಿಕೊಂಡವರು ನಿಶಾ. ಏಣಿನಾಮ (ಕ್ಲಾವರ್ ಕಿರೀಟ) ದಂತಹ ವಿಶಿಷ್ಟ ಮತ್ತು ವೈವಿಧ್ಯಮಯ ಮುಖವರ್ಣಿಕೆಗಳನ್ನು ಜಯಕರ ಬೈಲೂರು ಮತ್ತು ತಂಡದವರು ಒದಗಿಸಿದ್ದರು. ವೀಕ್ಷಕ