Advertisement

ವಿನೂತನ ಪ್ರಯೋಗ ಯಕ್ಷ ಭಜನಾ ನೃತ್ಯ

06:00 AM Oct 12, 2018 | |

ಧರ್ಮಸ್ಥಳ ಭಜನಾ ಪರಿಷತ್‌ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ವಾರ್ಷಿಕ ಭಜನಾ ಕಮ್ಮಟ ಸೆ.23ರಿಂದ 30ರ ತನಕ ಭಜನಾ ಕಮ್ಮಟ ನಡೆದಿದ್ದು, ಭಜನೆಯನ್ನು ಯುವಪೀಳಿಗೆಯ ಮೂಲಕ ಸಂಸ್ಕಾರಯುತವಾಗಿ ಕೈದಾಟಿಸುವ ಕಾಯಕದೊಂದಿಗೆ ಹಲವು ಹೊಸ ಆವಿಷ್ಕಾರಗಳಿಗೂ ನಾಂದಿ ಹಾಡಿದೆ. ಭಜನಾ ಕಮ್ಮಟದ ಈ ಬಾರಿಯ ವಿಶೇಷ ಆಕರ್ಷಣೆ ಯಕ್ಷಭಜನಾ ನೃತ್ಯ. ಇದು ವಿನೂತನ ಪರಿಕಲ್ಪನೆ. ಕರಾವಳಿಯಲ್ಲಿ ಗಾಢ ಪರಿಣಾಮ ಬೀರಿರುವ ಯಕ್ಷಗಾನ ಈಗ ಬೆಳವಣಿಗೆಯ ಹಾದಿಯಲ್ಲಿ ವಿಸ್ತರಣೆಗೊಳ್ಳುತ್ತಾ, ಶಾಖೋಪಶಾಖೆಯಾಗಿ ಹೊಸ ಆವಿಷ್ಕಾರಗಳನ್ನು ಪಡೆಯುತ್ತಿದೆ. ಬಯಲಾಟ-ತಾಳಮದ್ದಳೆ ಎಂದಷ್ಟೇ ಇದ್ದ ಯಕ್ಷಗಾನ ಬಳಿಕ ಗಾನವೈಭವ, ನೃತ್ಯವೈಭವ, ಏಕವ್ಯಕ್ತಿ, ಯುಗಳ ಇತ್ಯಾದಿಯಾಗಿ ಬೆಳೆದು ಜನಾಕರ್ಷಿಸಿದ ಹಾದಿಯಲ್ಲೇ ಮುನ್ನಡೆದು ಇದೀಗ ಭಜನೆಗೂ ಯಕ್ಷಗಾನದ ಪ್ರವೇಶವಾಗಿದೆ. ಇದುವೇ ಯಕ್ಷಭಜನಾ ನೃತ್ಯ. 

Advertisement

ಈಗಾಗಲೇ ಭಜನೆಯಲ್ಲಿ ಕುಣಿತಭಜನೆ, ಕೋಲಾಟ ಭಜನೆ, ನರ್ತನಭಜನೆ ಇತ್ಯಾದಿಗಳು ಜನಪ್ರಿಯಗೊಂಡಿದೆ. ಇದೇ ಹಾದಿಯಲ್ಲಿ ಯಕ್ಷಗಾನದ ನಾಟ್ಯವನ್ನೂ ಭಜನೆಗೆ ಬಳಸಿದ ಪ್ರಥಮ ಪ್ರಯೋಗವೇ ಯಕ್ಷಭಜನೆ. ಇದು ಧರ್ಮಸ್ಥಳದ ಹೇಮಾವತಿ ಅಮ್ಮನವರ ಕಲ್ಪನೆ. ಇದನ್ನು ಸಾಕಾರಗೊಳಿಸಿದ್ದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಯಕ್ಷಗಾನ ಕಲಾಕೇಂದ್ರದ ವಿದ್ಯಾರ್ಥಿಗಳು. ಇದಕ್ಕೆ ಕೇಂದ್ರದ ಸಂಯೋಜಕ ಅರುಣ್‌ ಉಜಿರೆ ಅವರ ನೇತೃತ್ವ. ಯಕ್ಷಗಾನ ಪೂರ್ವರಂಗದ ಪೀಠಿಕೆಯಲ್ಲಿ ಮುಖ್ಯಸ್ತ್ರೀ ವೇಷವನ್ನು ಕುಣಿಸುವ “ನಿನ್ನ ನಂಬಿದೆ ಶಾರದೇ…’ಪದ್ಯವನ್ನು ಆಯ್ದು ಅದನ್ನು ಯಕ್ಷಗಾನದ ತಾಳದಲ್ಲೇ ಅಷ್ಟದಿಂದ ರೂಪಕ, ರೂಪಕದಿಂದ ಏಕತಾಳದಲ್ಲಿ ಹೆಜ್ಜೆ ಹಾಕುತ್ತಾ, ಕೈಯ್ಯಲ್ಲಿ ಭಜನೆಯ ತಾಳ ಹಿಡಿದು, ಯಕ್ಷಗಾನದ ತಾಳಹಾಕುತ್ತಾ ಹಾಡುತ್ತಾ ವೃತ್ತಾಕಾರದಲ್ಲಿ ವಿನ್ಯಾಸಗಳನ್ನು ಬದಲಾಯಿಸುತ್ತಾ ಕುಣಿದ ಈ ಪ್ರಯೋಗ ಭಜನಾ ಕ್ಷೇತ್ರದಲ್ಲಿ ವಿನೂತನ. ಉಜಿರೆ ಎಸ್‌. ಡಿ. ಎಂ ಯಕ್ಷಗಾನ ಕಲಾಕೇಂದ್ರದ 14ಆಯ್ದು ಮಕ್ಕಳು ಪ್ರಸ್ತುತಿಗೊಳಿಸಿದ ಈ ಚೊಚ್ಚಲ ಪ್ರಯೋಗವನ್ನು ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ಅಮ್ಮನವರು ಮತ್ತು ಕುಟುಂಬ ಪರಿವಾರ ಸಹಿತ ನೂರಾರು ಮಂದಿ ಕಣ್ತುಂಬಿಕೊಂಡರು. 

ಯಕ್ಷಗಾನದಂತೆಯೇ ದಾಂಡಿಯಾ ನೃತ್ಯವನ್ನು ಕೂಡಾ ಭಜನೆಗೆ ಅಳವಡಿಸಿದ್ದು ಈ ಬಾರಿಯ ಮತ್ತೂಂದು ವೈಶಿಷ್ಟé. ಹೀಗೆಯೇ ಕಮ್ಮಟದಲ್ಲಿ ಪಾಲ್ಗೊಂಡವರಿಗೂ ಯಕ್ಷಗಾನದ ಕುಣಿತಗಳಲ್ಲಿ ಭಜನೆ ಹಾಡುವ ತರಬೇತಿಯನ್ನು ನೀಡಲಾಗಿದೆ. ನೃತ್ಯ ಭಜನೆಗಳಿಗೆ ಹಿರಿಯ ಕಲಾವಿದ ಬೆಳಾಲು ಲಕ್ಷ್ಮಣ ಗೌಡ ಮತ್ತು ಯುವ ಕಲಾವಿದ ದಿವಿತ್‌ ಕೋಟ್ಯಾನ್‌ ನಿರ್ದೇಶನವಿತ್ತಿದ್ದಾರೆ. ಭಜನೆ ಕುಳಿತು ಹಾಡುವುದಷ್ಟೇ ಆಗದೇ, ಕುಣಿದು ಹಾಡುವುದೂ ಆಗಬೇಕು, ತನ್ಮೂಲಕ ಯುವ ಪೀಳಿಗೆ ನಾಮ ಸಂಕೀರ್ತನೆಯನ್ನು ಅನುಭವಿಸಿ, ಅದರ ಸದಾಶಯಗಳನ್ನು ಅನುಷ್ಠಾನಗೊಳಿಸಬೇಕು ಎಂಬುದೇ ಉದ್ದೇಶ. ಪ್ರತಿದಿನ ಖ್ಯಾತ ಸಂಕೀರ್ತನಕಾರರಿಂದ ನಿದಿಷ್ಟ ಭಜನಾಪದಗಳ ಗಾನಪದ್ಧತಿಯ ತರಬೇತಿ, ಸಂಜೆ ನಗರಭಜನೆಯೊಂದಿಗೆ ಶ್ರೀ ಕ್ಷೇತ್ರ ಪರಿಸರದಲ್ಲಿ ಪ್ರದಕ್ಷಿಣೆ, ರಾತ್ರಿ ನೃತ್ಯ-ಕುಣಿತ ಭಜನೆಗಳ ಮನೋರಂಜನೆಯೂ ಒಳಗೊಂಡ ಕಮ್ಮಟದಲ್ಲಿ ಯೋಗ, ವ್ಯಕ್ತಿತ್ವ ವಿಕಸನಕ್ಕೆ ಪ್ರೇರಣೆ, ಧಾರ್ಮಿಕ ಉಪನ್ಯಾಸ ಇತ್ಯಾದಿಗಳೂ ಇವೆ. ಒಟ್ಟಿನಲ್ಲಿದು ಆಯ್ದ ಭಜನಾರ್ಥಿಗಳಿಗೆ ಒದಗುವ ವಾರ್ಷಿಕ ಪುನಶ್ಚೇತನ. ಭಜನೆ ಎಂಬುದು ಆರಾಧನಾ ಮಾಧ್ಯಮವಾದರೂ ಅದರೊಳಗೆ ಕಲೆಯನ್ನು ಬೆರೆಸಿ, ರಂಜನೆ ನೀಡಿ ಹೊಸ ತಲೆಮಾರಿನೆಡೆಗೆ ಭಜನಾ ಸಂಸ್ಕೃತಿ ಕೈದಾಟಿಸಿ, ಆ ಮುಖೇನ ಒಂದು ತಲೆಮಾರನ್ನು ಭಕ್ತಿಪಥದಲ್ಲಿ ವ್ಯಸನಮುಕ್ತರಾಗಿಸಿ ಶುದ್ಧೀಕರಿಸುವ ಮತ್ತು ಸಮಾಜಮುಖೀಯಾಗಿ ತೊಡಗಿಸುವ ಆಶಯ, ಕಾಳಜಿ ಇದರಲ್ಲಡಗಿದೆ.

ಎಂ.ನಾ. ಚಂಬಲ್ತಿಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next