Advertisement

ಪರಭಾಷೆಯಲ್ಲಿ ಯಜ್ಞಾ ಯಾಗ

09:25 PM Jun 27, 2019 | mahesh |

ಕನ್ನಡದ ಬಹುತೇಕ ನಟಿಯರು ಪರಭಾಷೆಯಲ್ಲಿ ನಟಿಸಿದ್ದಾರೆ. ನಟಿಸುತ್ತಲೂ ಇದ್ದಾರೆ. ಆದರೆ, ಇಲ್ಲಿದ್ದುಕೊಂಡೇ ಪರಭಾಷೆಯಲ್ಲೂ ತಮ್ಮದ್ದೊಂದು ಛಾಪು ಮೂಡಿಸುವುದು ಸುಲಭವಲ್ಲ. ಕನ್ನಡದಲ್ಲಿ ಹೊಸಬಗೆಯ ಚಿತ್ರಗಳಲ್ಲಿ ನಟಿಸುತ್ತಲೇ, ತೆಲುಗು ಚಿತ್ರರಂಗದಲ್ಲಿ ಜೋರು ಸದ್ದು ಮಾಡಿರುವ ಬೆರಳೆಣಿಕೆ ನಟಿಯರ ಪೈಕಿ ಯಜ್ಞಾ ಶೆಟ್ಟಿ ಕೂಡ ಸೇರುತ್ತಾರೆ.

Advertisement

ಯಜ್ಞಾ ಶೆಟ್ಟಿ ಈಗ ತೆಲುಗು ಚಿತ್ರರಂಗದ ಮಂದಿಗೆ ಫೇವರೆಟ್‌. ಅದಕ್ಕೆ ಕಾರಣ, ರಾಮ್‌ಗೊಪಾಲ್‌ ವರ್ಮ ನಿರ್ದೇಶನದ ಎರಡು ಚಿತ್ರಗಳು. ಹೌದು, “ಕಿಲ್ಲಿಂಗ್‌ ವೀರಪ್ಪನ್‌ ‘ ಮತ್ತು “ಲಕ್ಷ್ಮೀಸ್‌ ಎನ್‌ಟಿಆರ್‌’. ಈ ಎರಡು ಚಿತ್ರಗಳು ತೆಲುಗು ಚಿತ್ರರಂಗ ಮಾತ್ರವಲ್ಲ ಪರಭಾಷೆಯಲ್ಲೂ ಸದ್ದು ಮಾಡಿದ್ದು ಗೊತ್ತೇ ಇದೆ. ಈ ಮೂಲಕ ಯಜ್ಞಾ ಶೆಟ್ಟಿ ಅವರು ಅಲ್ಲಿನ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದು ಸುಳ್ಳಲ್ಲ. ಸದ್ಯಕ್ಕೆ ಯಜ್ಞಾ ಶೆಟ್ಟಿ ಅವರಿಗೆ ತೆಲುಗು ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿದೆ. ಅಷ್ಟೇ ಬೇಡಿಕೆ ಕನ್ನಡ ಚಿತ್ರರಂಗದಲ್ಲೂ ಇದೆ. ಹಾಗಂತ, ಯಜ್ಞಾ ಶೆಟ್ಟಿ ಅವರು ಸಿಕ್ಕ ಕಥೆಗಳಿಗೆಲ್ಲಾ ಗ್ರೀನ್‌ ಸಿಗ್ನಲ್‌ ಕೊಡುತ್ತಿಲ್ಲ. ಕನ್ನಡದ “ಉಳಿದವರು ಕಂಡಂತೆ ‘ ಚಿತ್ರದಲ್ಲಿ ವಿಭಿನ್ನ ಪಾತ್ರದ ಮೂಲಕ ಗಮನಸೆಳೆದ ಅವರು, ಆ ನಂತರದ ದಿನಗಳಲ್ಲಿ ಆಯ್ಕೆ ಮಾಡಿಕೊಂಡ ಚಿತ್ರಗಳಲ್ಲೂ ವಿಭಿನ್ನ ಕಥೆ, ಪಾತ್ರದಲ್ಲಿ ಕಾಣಿಸಿಕೊಂಡರು. ಸದ್ಯಕ್ಕೆ ಯಜ್ಞಾ ಶೆಟ್ಟಿ ಬಿಡುಗಡೆಗೆ ರೆಡಿಯಾಗಿರುವ ಕನ್ನಡದ “ಆಪರೇಷನ್‌ ನಕ್ಷತ್ರ’ ಚಿತ್ರದಲ್ಲಿ ವಿಭಿನ್ನ ಪಾತ್ರ ನಿರ್ವಹಿಸಿದ್ದಾರೆ. ಶೀರ್ಷಿಕೆ ಹೇಳುವಂತೆ “ಆಪರೇಷನ್‌ ನಕ್ಷತ್ರ’ ಒಂದು ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ. ಈ ಚಿತ್ರದಲ್ಲಿ ಯಜ್ಞಾಶೆಟ್ಟಿ ಅವರು ಹಿಂದೆಂದೂ ಮಾಡದ ಪಾತ್ರವನ್ನು ನಿರ್ವಹಿಸಿದ್ದಾರಂತೆ. ಮೊದಲ ಸಲ ವಿಶೇಷ ಎನಿಸುವ ಪಾತ್ರ ಮಾಡಿರುವ ಅವರಿಗೆ “ಆಪರೇಷನ್‌’ ಸಕ್ಸಸ್‌ ಆಗುವ ನಂಬಿಕೆ ಇದೆ. ಆ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಯಜ್ಞಾ ಶೆಟ್ಟಿ ಹೇಳ್ಳೋದು ಹೀಗೆ.

“ಈಗಾಗಲೇ “ಆಪರೇಷನ್‌ ನಕ್ಷತ್ರ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಹೊಸ ಕುತೂಹಲ ಹುಟ್ಟುಹಾಕಿದೆ. ಚಿತ್ರದಲ್ಲೇನೋ ಸ್ಪೆಷಲ್‌ ಇದೆ ಎಂಬ ಸೂಚನೆಯೂ ನೀಡಿದೆ. ಹಾಗಂತ, ಟ್ರೇಲರ್‌ ನೋಡಿ ಇದು ಈ ರೀತಿಯ ಚಿತ್ರ ಎಂದು ಲೆಕ್ಕಾಚಾರ ಹಾಕುವುದು ತಪ್ಪು. ಇಲ್ಲೊಂದಷ್ಟು ತಿರುವುಗಳಿವೆ. ಟ್ರೇಲರ್‌ ಹೇಳುವಂತೆ, ಇದು ಥ್ರಿಲ್ಲರ್‌ ಜಾನರ್‌ ಸಿನಿಮಾ ಅಂತ ಕ್ಲಿಯರ್‌ ಆಗುತ್ತೆ. ನನಗೆ ಈ ಸ್ಕ್ರಿಪ್ಟ್ ಬಂದಾಗ, ಹೊಸತನ ಇದೆ ಎನಿಸಿತು. ಪಾತ್ರದಲ್ಲೂ ಸ್ಪೆಷಲ್‌ ಕ್ವಾಲಿಟಿಯ ಸೂಚನೆಯೂ ಸಿಕ್ಕಿತು. ಪಾತ್ರದ ಬಗ್ಗೆ ನಾನು ಈಗಲೇ ಹೇಳುವುದಿಲ್ಲ. ನಿರ್ದೇಶಕ ಮಧುಸೂದನ್‌ ಅವರು, ನನ್ನನು ಹೊಸ ಲುಕ್‌ನಲ್ಲಿ ತೋರಿಸಿದ್ದಾರೆ. ಈವರೆಗೆ ನಿರ್ವಹಿಸದ ಪಾತ್ರವನ್ನು ಕೊಟ್ಟಿದ್ದಾರೆ. ಅದೊಂದು ಹೊಸ ಪ್ರಯತ್ನ ಮತ್ತು ಪ್ರಯೋಗ ಎನ್ನಬಹುದು. ಅವರು ಹೆಣೆದ “ಆಪರೇಷನ್‌’ ಅನ್ನು ಸಕ್ಸಸ್‌ ಮಾಡ್ತೀನಾ ಇಲ್ಲವಾ ಅನ್ನೋದು ಕಥೆ ಎನ್ನುವ ಯಜ್ಞಾಶೆಟ್ಟಿ , ಹೊಸಬರಲ್ಲಿ ಖಂಡಿತ ಹೊಸತನ ನಿರೀಕ್ಷಿಸಬಹುದು. ಚಿತ್ರದಲ್ಲಿ ನಾಲ್ಕು ಪ್ರಮುಖ ಪಾತ್ರಗಳು ಹೈಲೈಟ್‌. ಉಳಿದಂತೆ ಇಲ್ಲಿ ಕಥೆಯೇ ಪ್ರಧಾನ. ಮುಂದಿನ ದಿನಗಳಲ್ಲೂ ಹೊಸ ರೀತಿಯ ಪಾತ್ರದ ಮೂಲಕ ಕಾಣಿಸಿಕೊಳ್ಳುವ ಆಸೆ ಇದೆ ಎನ್ನುತ್ತಾರೆ ಅವರು.

Advertisement

Udayavani is now on Telegram. Click here to join our channel and stay updated with the latest news.

Next