Advertisement

ವಾರದಲ್ಲೇ ವಿದ್ಯುತ್‌ ಸಂಪರ್ಕ ಕಲ್ಪಿಸಿ

11:48 AM Aug 23, 2019 | Naveen |

ಯಾದಗಿರಿ: ಜಿಲ್ಲೆಯ ಕೃಷ್ಣಾ ಮತ್ತು ಭೀಮಾ ನದಿಗಳ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಾನಿಗೊಳಗಾದ ವಿದ್ಯುತ್‌ ಪರಿವರ್ತಕಗಳು ಮತ್ತು ಕಂಬಗಳನ್ನು ಬದಲಾಯಿಸಿ ವಾರದೊಳಗೆ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು ಎಂದು ಸಚಿವ ಬಿ.ಶ್ರೀರಾಮುಲು ತಾಕೀತು ಮಾಡಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ಕುರಿತು ಗುರುವಾರ ಹಮ್ಮಿಕೊಂಡಿದ್ದ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯ ನದಿಗಳ ತೀರದ ಗ್ರಾಮಗಳಲ್ಲಿ 1900 ವಿದ್ಯುತ್‌ ಕಂಬಗಳು ಬಿದ್ದಿವೆ. 507 ವಿದ್ಯುತ್‌ ಪರಿವರ್ತಕ (ಟಿಸಿ)ಗಳು ಹಾಳಾಗಿವೆ. ಇವುಗಳಲ್ಲಿ 110 ಬದಲಾಯಿಸಲಾಗಿದೆ. 300 ವಿದ್ಯುತ್‌ ಪರಿವರ್ತಕಗಳ ಸಂಗ್ರಹ ಇದ್ದು, ಬದಲಾಯಿಸುವ ಕಾರ್ಯ ನಡೆಯುತ್ತಿದೆ ಎಂದು ಜೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್‌ ಡಿ. ರಾಘವೇಂದ್ರ ಅವರಿಂದ ಮಾಹಿತಿ ಪಡೆದ ಸಚಿವರು, ವಿದ್ಯುತ್‌ ಸಂಪರ್ಕ ಕಡಿತಗೊಂಡಿರುವುದರಿಂದಾಗಿ ಬೆಳೆಗಳು ಒಣಗುತ್ತಿವೆ. ವಿದ್ಯುತ್‌ ಇಲ್ಲವಾದರೆ ರೈತರು ಸಂಕಷ್ಟಕ್ಕೀಡಾಗುತ್ತಾರೆ. ತಡವಾಗಿ ವಿದ್ಯುತ್‌ ನೀಡಿದರೆ ಯಾವುದೇ ಪ್ರಯೋಜನವಿಲ್ಲ. ಅಲ್ಲದೇ, ಈ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತದೆ. ಕಾರಣ ತುರ್ತಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸಭೆಯಲ್ಲಿಯೇ ಕರೆ ಮಾಡಿದ ಸಚಿವರು, 2 ಸಾವಿರ ವಿದ್ಯುತ್‌ ಪರಿವರ್ತಕಗಳು ಸಂಗ್ರಹ ಇರುವುದಾಗಿ ಹೇಳಿದ್ದಿರಿ. ಯಾದಗಿರಿ ಜಿಲ್ಲೆಗೆ ಬೇಕಾದಷ್ಟು ವಿದ್ಯುತ್‌ ಪರಿವರ್ತಕಗಳನ್ನು ತರಿಸಿಕೊಂಡು ತಕ್ಷಣ ಸಮಸ್ಯೆ ಪರಿಹರಿಸಿ ಎಂದು ನಿರ್ದೇಶಿಸಿದರು.

ಪ್ರವಾಹ ನಿಂತ ಬಳಿಕ ಸಾಂಕ್ರಾಮಿಕ ರೋಗ ಕಾಡುವ ಹಿನ್ನೆಲೆಯಲ್ಲಿ ಅಗತ್ಯ ಔಷಧಗಳನ್ನು ಸಂಗ್ರಹಿಸುವ ಜತೆಗೆ ಆರೋಗ್ಯ ಶಿಬಿರ ನಡೆಸಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಅದೇ ರೀತಿ ಕುಡಿಯುವ ನೀರು ಸರಬರಾಜಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಜೋಳದಡಗಿ ಬ್ರಿಡ್ಜ್ ಕಂ ಬ್ಯಾರೇಜ್‌ ದುರಸ್ತಿಗೆ ಬೇಕಾಗುವ 1 ಕೋಟಿ ರೂ.ಗಳನ್ನು ಪ್ರವಾಹ ನಿಧಿ ಅಥವಾ ಎಚ್ಕೆಆರ್‌ಡಿಬಿಯಿಂದ ಪಡೆದುಕೊಳ್ಳಬೇಕು. ಮಳೆ ಬಂದಾಗ ಪ್ರತಿ ವರ್ಷ ಜಿಲ್ಲೆಯ ನದಿಗಳಲ್ಲಿ ಪ್ರವಾಹ ಉಂಟಾಗುವುದು ಸಾಮಾನ್ಯ. ಈ ಸಂದರ್ಭದಲ್ಲಿ ಜಿಲ್ಲೆಯ ಕೆರೆಗಳನ್ನು ತುಂಬಿಸಿಕೊಳ್ಳಲು ಯೋಜನೆ ರೂಪಿಸುವಂತೆ ಸಲಹೆ ನೀಡಿದರು.

ಸಚಿವ ಪ್ರಭು ಚವ್ಹಾಣ ಮಾತನಾಡಿ, ಪ್ರವಾಹ ಸಂತ್ರಸ್ತರಿಗೆ ಈಗಾಗಲೇ ತುರ್ತು ಪರಿಹಾರವಾಗಿ 3800 ರೂ. ನೀಡಲಾಗಿದೆ. ಈಗ ಹೆಚ್ಚುವರಿವಾಗಿ ಘೋಷಿಸಿದ 6200 ರೂ. ಸೇರಿ ಪ್ರತಿ ಕುಟುಂಬಕ್ಕೆ ತಲಾ 10 ಸಾವಿರ ರೂ.ಗಳಂತೆ ಪರಿಹಾರ ಹಣವನ್ನು ತಕ್ಷಣ ನೀಡಬೇಕು. ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಯಾದ ಬೆಳೆ ಹಾನಿ, ಮನೆಗಳ ಹಾನಿ ವರದಿಯನ್ನು ನಿಖರವಾಗಿ ಸಲ್ಲಿಸಬೇಕು. ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ ಸೂಕ್ತ ಪರಿಹಾರಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದರು.

Advertisement

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಪ್ರವಾಹದಲ್ಲಿ ಹಾಳಾದ ಜಿಲ್ಲೆಯ ರಸ್ತೆಗಳನ್ನು ಶೀಘ್ರ ದುರಸ್ತಿ ಮಾಡಬೇಕು. ಪ್ರವಾಹ ಪೀಡಿತ ಗ್ರಾಮಗಳ ಸಂತ್ರಸ್ತರಿಗೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮನೆ ಕಳೆದುಕೊಂಡವರ ಮಾಹಿತಿಯನ್ನು ನಿಖರವಾಗಿ ಸಲ್ಲಿಸಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಮಾತನಾಡಿ, ಜಿಲ್ಲೆಯ ನಾರಾಯಣಪುರ ಜಲಾಶಯದಿಂದ ಅತಿ ಹೆಚ್ಚು ಅಂದರೆ ಕಳೆದ ಆಗಸ್ಟ್‌ 10ರಂದು 6.26 ಲಕ್ಷ ಕ್ಯೂಸೆಕ್‌ ನೀರು ಕೃಷ್ಣಾ ನದಿಗೆ ಬಿಡಲಾಗಿದೆ. ಈ ಮೊದಲು 2009ರಲ್ಲಿ 4.95 ಲಕ್ಷ ಕ್ಯೂಸೆಕ್‌ ನೀರು ಕೃಷ್ಣಾ ನದಿಗೆ ಬಿಡಲಾಗಿತ್ತು. ಸದ್ಯ ಜಲಾಶಯಕ್ಕೆ ಒಳಹರಿವು 10 ಸಾವಿರ ಕ್ಯೂಸೆಕ್‌ ಇರುವುದರಿಂದ ನದಿಗೆ ನೀರು ಬಿಡುತ್ತಿಲ್ಲ. ಇನ್ನು ಸನ್ನತಿ ಬ್ಯಾರೇಜ್‌ನಿಂದ ಆಗಸ್ಟ್‌ 11ರಂದು 3.05 ಲಕ್ಷ ಕ್ಯೂಸೆಕ್‌ ನೀರನ್ನು ಭೀಮಾ ನದಿಗೆ ಬಿಡಲಾಗಿದೆ. ಆಗಸ್ಟ್‌ 20ರಂದು 4,500 ಕ್ಯೂಸೆಕ್‌ ಹೊರಹರಿವು ಇತ್ತು ಎಂದು ಮಾಹಿತಿ ನೀಡಿದರು.

ಪ್ರವಾಹದಿಂದಾಗಿ ಜಿಲ್ಲೆಯ ನದಿ ತೀರದ 22 ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ 339 ಮನೆಗಳು ಹಾನಿಯಾಗಿರುವುದನ್ನು ಗುರುತಿಸಲಾಗಿದೆ. 75 ಗ್ರಾಮಗಳಲ್ಲಿ 7,663 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಪ್ರವಾಹ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ವಿವಿಧ ಗ್ರಾಮಗಳ 7,260 ಜನರಿಗೆ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಈ ಕೇಂದ್ರಗಳಲ್ಲಿ ಸಂತ್ರಸ್ತರಿಗಾಗಿ ಆರೋಗ್ಯ ಶಿಬಿರ ನಡೆಸುವ ಜತೆಗೆ ಆರೋಗ್ಯ ಕಿಟ್, ಆಹಾರ ಕಿಟ್ ವಿತರಿಸಲಾಗಿದೆ. ಈಗ ಪ್ರವಾಹ ನಿಂತಿರುವುದರಿಂದ ಎಲ್ಲ ಜನರನ್ನು ಗ್ರಾಮಗಳಿಗೆ ಮರಳಿ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರವಾಹ ಸಂದರ್ಭದಲ್ಲಿ ಗೆದ್ದಲಮರಿ ಗ್ರಾಮದಲ್ಲಿ ಒಂದೇ ಕುಟುಂಬದ 5 ಜನರನ್ನು ಹೆಲಿಕಾಪ್ಟರ್‌ ಮೂಲಕ ರಕ್ಷಿಸಲಾಯಿತು. ಚೌಡೇಶ್ವರಹಾಳದ 2 ಕುಟುಂಬದ 5 ಜನರನ್ನು ದೋಣಿ ಮೂಲಕ ರಕ್ಷಿಸಲಾಯಿತು. ಪ್ರತಿ ಬಾರಿ ಮಳೆ ಬಂದಾಗ ಸಂಪರ್ಕ ಕಡಿದುಕೊಳ್ಳುತ್ತಿದ್ದ ನೀಲಕಂಠರಾಯನಗಡ್ಡಿಗೆ ಸೇತುವೆ ನಿರ್ಮಿಸಲಾಗಿದೆ. ಆದರೆ, ಈ ಸೇತುವೆ 6 ಲಕ್ಷ ಕ್ಯೂಸೆಕ್‌ಗೂ ಹೆಚ್ಚು ನೀರು ಬಿಡುಗಡೆ ಮಾಡಿದ್ದರಿಂದ ಮುಳುಗಡೆಯಾಗಿತ್ತು. ಈ ಸಂದರ್ಭದಲ್ಲಿ ನೀಲಕಂಠರಾಯನಗಡ್ಡಿ ಗರ್ಭಿಣಿ ಹಣಮವ್ವ ಅವರನ್ನು ಬೋಟ್ ಮೂಲಕ ಕರೆತರಲಾಯಿತು. ಪ್ರವಾಹದಲ್ಲಿ ಸಾವನ್ನಪ್ಪಿದ ಕೌಳೂರು ಗ್ರಾಮದ ಸಾಬರಡ್ಡಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ ಎಂದು ವಿವರಿಸಿದರು.

ಪ್ರವಾಹ ಹಾನಿ ಪ್ರಮಾಣದ ಕುರಿತು ಎನ್‌ಡಿಆರ್‌ಎಫ್‌ ಮತ್ತು ಎನ್‌ಸಿಆರ್‌ಎಫ್‌ ಮಾರ್ಗಸೂಚಿ ಅನ್ವಯ ಮೊತ್ತ ಹಾಗೂ ವಾಸ್ತವದಲ್ಲಿ ಸಂಭವಿಸಿರುವ ಹಾನಿ ಮೊತ್ತವನ್ನು ಇಲಾಖಾವಾರು ವರದಿ ಸಲ್ಲಿಸಸಬೇಕು ಎಂದು ಸಚಿವರು ಸೂಚಿಸಿದರು.

ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಜಂಜಿನಿಯರ್‌ ಚನ್ನಬಸಪ್ಪ ಮೆಕಾಲೆ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಬ್ರಿಡ್ಜ್ ಮತ್ತು ರಸ್ತೆಗಳು ಸೇರಿದಂತೆ 15 ಕೋಟಿ ರೂ. ಮೊತ್ತದ ಹಾನಿ ಸಂಭವಿಸಿದೆ. 16 ಕಿಮೀನಷ್ಟು ರಸ್ತೆ ಸಂಪೂರ್ಣ ಹಾಳಾಗಿದೆ ಎಂದು ಮಾಹಿತಿ ನೀಡಿದರು.

ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಮಾತನಾಡಿ, ಪ್ರತಿ ಬಾರಿ ಪ್ರವಾಹ ಬಂದಾಗ ಕೊಳ್ಳೂರು ಎಂ. ಸೇತುವೆ ಮುಳುಗುತ್ತದೆ. ಇದನ್ನು ಎತ್ತರಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಆಗ ಸಚಿವರಾದ ಬಿ.ಶ್ರೀರಾಮುಲು ಹೊಸ ಪ್ರಸ್ತಾವನೆ ಸಲ್ಲಿಕೆಗೆ ಸೂಚಿಸಿದರು.

ಪ್ರವಾಹ ಪೀಡಿತ ಗ್ರಾಮಗಳಲ್ಲಿ ಉಂಟಾದ ನೀರಿನ ಸಮಸ್ಯೆಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂಬುದಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಇ ರಾಜ್‌ಕುಮಾರ ಪತ್ತಾರ ತಿಳಿಸಿದರು.

ರೋಗಗಳು ಹರಡದಂತೆ ಡಿಡಿಟಿ ಪೌಡರ್‌, ರಾಸಾಯನಿಕ ಸಿಂಪಡಿಸಲಾಗುತ್ತಿದೆ. ಕುದಿಸಿ ಆರಿಸಿದ ನೀರನ್ನು ಕುಡಿಯಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಂ.ಎಸ್‌. ಪಾಟೀಲ ಮಾಹಿತಿ ನೀಡಿದರು. ಜಿಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ, ಜಿಪಂ ಉಪಾಧ್ಯಕ್ಷೆ ಗಿರಿಜಮ್ಮ ಎಸ್‌. ರೊಟ್ನಡಗಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್‌ ಸೋನವಣೆ, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್‌., ಸಹಾಯಕ ಆಯುಕ್ತ ಶಂಕರಗೌಡ ಎಸ್‌.ಸೋಮನಾಳ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next