Advertisement

ಯಾದಗಿರಿ ಬಂದ್‌ ಯಶಸ್ವಿಗೊಳಿಸಿ

11:25 AM Jul 08, 2019 | Naveen |

ಯಾದಗಿರಿ: ನಮ್ಮ ಭಾಗಕ್ಕೆ ರಾಜ್ಯ ಸರ್ಕಾರದಿಂದ ಆಗುತ್ತಿರುವ ಧೋರಣೆ ಎಲ್ಲರೂ ಖಂಡಿಸಿ ಯಾದಗಿರಿ ಬಂದ್‌ ಯಶಸ್ವಿಗೊಳಿಸುವಂತೆ ಶಾಸಕ ವೆಂಕಟರೆಡ್ಡಿ ಮುದ್ನಾಳ ಕರೆ ನೀಡಿದರು.

Advertisement

ಶಾಸಕರ ಕಚೇರಿಯಲ್ಲಿ ಕರೆದ ವಿವಿಧ ಸಂಘ-ಸಂಸ್ಥೆಗಳ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಭಾಗಕ್ಕೆ ನಿರಂತರ ಅನ್ಯಾಯ ಮಾಡುತ್ತಾ ಬರುತ್ತಿರುವವರ ಸಾಲಿಗೆ ಸೇರಿರುವ ಹಾಲಿ ಮುಖ್ಯಮಂತ್ರಿ ಇಲ್ಲಿ ಮೆಡಿಕಲ್ ಕಾಲೇಜು ಅಗತ್ಯವಿಲ್ಲ ಎಂದು ಹೇಳಿ ಈ ಭಾಗದ ಜನರ ಸ್ವಾಭಿಮಾನ ಕೆಣಕಿದ್ದಾರೆ.

ಆದ್ದರಿಂದ ಇದಕ್ಕೆ ತಕ್ಕ ಉತ್ತರ ನೀಡಲು ಬಂದ್‌ ಯಶಸ್ವಿಗೊಳಿಸುವ ಮೂಲಕ ಅವರ ಕಣ್ಣು ತೆರೆಸುವ ನಿಟ್ಟಿನಲ್ಲಿ ಹೋರಾಟ ನಡೆಸಬೇಕಿದೆ. ಶಾಂತಿಯುತ ಹೋರಾಟ ನಡೆಸಿ ಯಾದಗಿರಿಗೆ ಕಾಲೇಜು ಮತ್ತು ಬೇಕಾದ ಅನುದಾನ ತರಲು ಹಂತ ಹಂತವಾಗಿ ಉಗ್ರ ಹೋರಾಟ ನಡೆಸಲು ಸಿದ್ಧ ಎಂದು ಅವರು ತಿಳಿಸಿದರು.

ಬುಧವಾರ ಜುಲೈ 10ರಂದು ಮೈಲಾಪೂರ ಬೇಸ್‌ನಿಂದ ಗಾಂಧಿ ವೃತ್ತದ ಮಾರ್ಗವಾಗಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು, ಇದರಲ್ಲಿ ಜಿಲ್ಲೆಯ ಪ್ರತಿಯೊಬ್ಬರೂ ಭಾಗವಹಿಸಿ ನಮ್ಮ ಹಕ್ಕು ಪಡೆಯಲು ಭಾಗಿಯಾಗಬೇಕೆಂದು ಮನವಿ ಮಾಡಿದರು.

ಈಗಾಗಲೇ ವಾಣಿಜ್ಯೋದ್ಯಮಿಗಳು, ವ್ಯಾಪಾರಸ್ಥರು ಬೆಂಬಲ ಸೂಚಿಸಿದ್ದು, ಇನ್ನುಳಿದಂತೆ ವಿವಿಧ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು ಪ್ರತಿಯೊಬ್ಬ ಸಾರ್ವಜನಿಕರು ಹೋರಾಟದಲ್ಲಿ ಭಾಗಿಯಾಗುವ ಮೂಲಕ ಅನ್ಯಾಯ ಖಂಡಿಸಿ ಹೋರಾಟಕ್ಕೆ ಧುಮುಕಬೇಕೆಂದು ಮನವಿ ಮಾಡಿದರು.

Advertisement

ವೀರ ಕನ್ನಡಿಗರ ಪ್ರತಿಷ್ಠಾನ ಅಧ್ಯಕ್ಷ ಕೃಷ್ಣಮೂರ್ತಿ ಕುಲಕರ್ಣಿ, ವೀರಭಾರತಿ ಪ್ರತಿಷ್ಠಾನ ಅಧ್ಯಕ್ಷ ವೈಜನಾಥ ಹಿರೇಮಠ, ಕರ್ನಾಟಕ ರಣಧೀರ ಪಡೆಯ ಜಿಲ್ಲಾಧ್ಯಕ್ಷ ಡಿ. ಬಾಸ್ಕರ್‌ ಅಲ್ಲಿಪುರ, ನಮ್ಮ ಕರುನಾಡು ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರವಿ ರಾಠೊಡ ಮುದ್ನಾಳ, ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಚಂದ್ರಶೇಖರ ದಾಸನಕೇರಿ, ಜಯ ಕರ್ನಾಟಕ ಸಂಘಟನೆಯ ಮಲ್ಲಿಕಾರ್ಜುನ ಜಲ್ಲಪ್ಪನೋರ್‌, ಶಂಕರನಾಗ ಆಟೋ ಚಾಲಕರ ಸಂಘದ ಮಲ್ಲಿಕಾರ್ಜುನ ಸಾಂಗ್ಲಿಯಾನ, ಬೆಂಜಮಿನ್‌ ಶಿವನೂರು, ವಿದ್ಯಾರ್ಥಿ ಮುಖಂಡ ಪವನಕುಮಾರ, ರೈತ ಸಂಘದ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next