Advertisement

ಬಣ್ಣದಲ್ಲಿ ಮಿಂದೆದ್ದ ಯಾದಗಿರಿ ಜನತೆ

04:36 PM Mar 03, 2018 | Team Udayavani |

ಯಾದಗಿರಿ: ಹೋಳಿ ಹಬ್ಬದ ನಿಮಿತ್ತ ನಗರದ ಜನತೆ ಸಡಗರದಿಂದ ಶುಕ್ರವಾರ ವಿವಿಧ ಬಗೆಯ ಬಣ್ಣ ಎರೆಚುವ ಮೂಲಕ ರಂಗಿನಾಟದಲ್ಲಿ ತೊಡಗಿ ಮಿಂದೆದ್ದರು. ನಗರದ ರೈಲ್ವೆ ಸ್ಟೇಷನ್‌ ರಸ್ತೆ, ಬಸವೇಶ್ವರ ನಗರ, ಗಾಂಧಿ ವೃತ್ತ, ಮೈಲಾಪುರ ಅಗಸಿ, ಸುಭಾಷ ವೃತ್ತ, ಶಾಸ್ತ್ರೀ ವೃತ್ತ, ಬಸ್‌ ನಿಲ್ದಾಣ, ಬಸವೇಶ್ವರ ಗಂಜ್‌, ಲಕ್ಷ್ಮೀ ನಗರ, ಶಹಾಪುರಪೇಠ ಸೇರಿದಂತೆ ಇತರೆ ಬಡಾವಣೆಗಳಲ್ಲಿ ಮಹಿಳೆಯರು, ಮಕ್ಕಳು, ಯುವಕರು ಬಂಧುಗಳಿಗೆ ಪರಸ್ಪರ ಬಣ್ಣ ಎರಚುವ ಮೂಲಕ ಹೋಳಿ ಹಬ್ಬ ಆಚರಿಸಿ ಸಂಭ್ರಮಿಸಿದರು.

Advertisement

ಮಕ್ಕಳು, ಯುವಕರು, ಮಹಿಳೆಯರು ತಮ್ಮ ಸ್ನೇಹಿತರ, ಸಂಬಂಧಿಕರ ಮನೆಗಳಿಗೆ ತೆರಳಿ ಬಣ್ಣ ಎರಚುತ್ತಿರುವುದು ಸಾಮಾನ್ಯವಾಗಿ ಕಂಡು ಬಂದಿತು. ಮಧ್ಯಾಹ್ನ ಮೈಲಾಪುರ ಅಗಸಿಯಿಂದ ನಗರದ ಗಾಂಧಿ ವೃತ್ತ ಹಾಗೂ ಸ್ಟೇಷನ್‌ ಬಜಾರ್‌ನಲ್ಲಿ ಎರಡು ಪ್ರತ್ಯೇಕ ಬಂಡಿಗಳಲ್ಲಿ ಬಣ್ಣ ತುಂಬಿಕೊಂಡು ಎಲ್ಲರ ಮೈಮೇಲೆ ಬಣ್ಣದ ನೀರು ಎರಚುವ ಮೂಲಕ ಹೋಳಿ ಆಚರಿಸಲಾಯಿತು.

ಯುವಕರು ಹೋಳಿ ಹಬ್ಬಕ್ಕೆ ಸಂಬಂಧಿಸಿದ ಹಾಡು ಹಾಡುತ್ತಾ, ಕುಣಿಯುತ್ತಾ ನಗರ ತುಂಬೆಲ್ಲಾ ಬೈಕ್‌ ಮೇಲೆ ಸಂಚರಿಸುವ ಮೂಲಕ ಹೋಳಿ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಹೋಳಿ ಹಬ್ಬ ನಿಮಿತ್ತ ನಗರದಲ್ಲಿ ಪೊಲೀಸ್‌ ಇಲಾಖೆ ಸೂಕ್ತ ಬಂದೋಬಸ್ತ್ ಮಾಡಿತ್ತು. ಜಿಲ್ಲಾಡಳಿತ ಮದ್ಯ ನಿಷೇಧ ಹೇರಿದ್ದರಿಂದ ಯಾವುದೇ ಅಹಿತಕರ ಘಟನೆ ಜರುಗದೆ ಹೋಳಿ ಹಬ್ಬ ಶಾಂತಿಯುತವಾಗಿ ನಡೆಯಿತು.

ನಗರದಲ್ಲೆಡೆ ಹೋಳಿ ಸಂಭ್ರಮ
ಶಹಾಪುರ: ಪಟ್ಟಣದ ಗಣೇಶ ನಗರದಲ್ಲಿ ಶುಕ್ರವಾರ ಯುವತಿಯರು, ಮಹಿಳೆಯರು ಬಣ್ಣದಾಟದಲ್ಲಿ ಮಿಂದೇಳುವ ಮೂಲಕ ಹೋಳಿ ಹಬ್ಬ ಸಂಭ್ರಮದಿಂದ ಆಚರಿಸಲಾಯಿತು. ನಗರದ ಚರಬಸವೇಶ್ವರ ವಸತಿ ನಿಲಯದ ವಿದ್ಯಾರ್ಥಿನಿಯರು ಸಾಮೂಹಿಕವಾಗಿ ರಂಗಿನಾಟವಾಡಿದರು. ಪರಸ್ಪರ ಬಣ್ಣ ಎರಚಿ ಕುಣಿದು ಸಂಭ್ರಮಿಸಿದರು. ಅದರಂತೆ ವಿವಿಧ ಬಡಾವಣೆಗಳಲ್ಲಿ, ಪ್ರಮುಖ ರಸ್ತೆ ಮೇಲೆ
ಮಕ್ಕಳು, ಯುವ ಸಮೂಹಗಳು ಪ್ರಮುಖ ರಸ್ತೆಗಳಲ್ಲಿ ಡಿಜೆ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸುತ್ತಿರುವುದು ಕಂಡು ಬಂದಿತು.

ಕಾಮ ದಹಿಸುವ ಮುಂಚೆ ಬಡಾವಣೆ ಮಹಿಳೆಯರು ಕಾಮ ದೇವನಿಗೆ ಹೋಳಿಗೆ, ಕಡಬು ಸೇರಿದಂತೆ ಖಾದ್ಯ ಪದಾರ್ಥಗಳ ನೈವೇದ್ಯವನ್ನು ಸಾಂಪ್ರದಾಯದಂತೆ ಅರ್ಪಿಸಿದರು.

Advertisement

ಪಟ್ಟಣದಾದ್ಯಂತ ಬಣ್ಣದ ಓಕುಳಿ ಸಡಗರ ಮನೆ ಮಾಡಿತ್ತು. ಹೋಳಿ ಹಬ್ಬದಂಗವಾಗಿ ವ್ಯಾಪಾರ ವ್ಯವಹಾರಕ್ಕೆ ಅಲ್ಪ ಬ್ರೇಕ್‌ ಹಾಕಲಾಗಿತ್ತು. ಬೆಳಗ್ಗೆಯಿಂದಲೇ ಮಕ್ಕಳು, ಹಿರಿಯರು ಮಹಿಳೆಯರು ಸೇರಿದಂತೆ ಯುವತಿಯರು ಪರಸ್ಪರ ಬಣ್ಣ ಹಚ್ಚುವ ಮೂಲಕ ಸಂತಸ ಹಂಚಿಕೊಂಡರು. 

ಹೋಳಿ ಬಣ್ಣ ಬದುಕಿಗೆ ಮೆರಗು
ಸೈದಾಪುರ: ಹೋಳಿ ಹಬ್ಬ ಬಣ್ಣದ ಬದುಕಿಗೆ ಹೊಸ ಮೆರಗು ನೀಡುತ್ತದೆ. ಇದೊಂದು ಹಿಂದುಗಳ ಪವಿತ್ರ ಧಾರ್ಮಿಕ ಹಿನ್ನೆಲೆಯುಳ್ಳ ಆಚರಣೆಯಾಗಿದೆ ಎಂದು ಬಳಿಚಕ್ರ ಜಿಪಂ ಸದಸ್ಯ ಭೀಮರಡ್ಡಿಗೌಡ ಹೊಸಗೌಡ ಕೂಡಲೂರ ಹೇಳಿದರು. ಅವರು ಇಲ್ಲಿಗೆ ಸಮೀಪದ ಸೈದಾಪುರ ಹೊರವಲಯದ ತಮ್ಮ ಜಮೀನಿನಲ್ಲಿ ಅಭಿಮಾನಿಗಳಿಂದ ಬಣ್ಣ ಎರಚಿಕೊಂಡು ನಂತರ ಹಿತೈಷಿಗಳೊಂದಿಗೆ ಹೋಳಿ
ಆಚರಣೆ ಮಾಡಿ ಸಂಭ್ರಮಿಸಿದರು. ಗ್ರಾಮೀಣ ಭಾಗದಲ್ಲಿ ಈ ಹಬ್ಬಕ್ಕೆ ವಿಶೇಷ ಮಹತ್ವ ಇದೆ. ಇದೊಂದು ಭಾವೈಕ್ಯತೆಯ
ಉತ್ತಮ ಸಾಮಾಜಿಕ ವಾತವರಣವನ್ನುಂಟು ಮಾಡುವ ಆಚರಣೆಯಾಗಬೇಕು ಎಂದರು. ಈ ಸಂದರ್ಭದಲ್ಲಿ ಸದಾಶಿವರಡ್ಡಿಗೌಡ ಪಾಟೀಲ ಕಣೇಕಲ, ಗ್ರಾಪಂ ಸದಸ್ಯ ಕೆ.ಪಿ. ಗೋವರ್ಧನ, ಬಸರಡ್ಡಿಗೌಡ ಹೆಗ್ಗಣಗೇರಾ, ಚಂದ್ರಯ್ಯಗೌಡ ಶೆಟ್ಟಳ್ಳಿ, ಸತೀಶ ಉಡುಪಿ ಇದ್ದರು.

ಹಲಗಿ ಬಾರಿಸಿ ಸಂತಸ ಪಟ್ಟ ಯುವ ಪಡೆ 
ನಾರಾಯಣಪುರ: ಪಟ್ಟಣದಲ್ಲಿ ಶುಕ್ರವಾರ ಹಿರಿಯರು, ಯುವಕರು, ಚಿಣ್ಣರೆಲ್ಲರು ಸೇರಿ ಹೋಳಿ ಹಬ್ಬವನ್ನು ರಂಗು ರಂಗಿನ ಬಣ್ಣದಲ್ಲಿ
ಮೂಳುಗಿ ಸಂಭ್ರಮದಿಂದ ಆಚರಿಸಿದರು. ಯುವಕರ ದಂಡು ಹಲಗಿ ಬಾರಿಸುವ ಮೂಲಕ ವಿವಿಧ ರಂಗಿನ ಬಣ್ಣಗಳನ್ನು ಬಂಧು
ಸ್ನೇಹಿತರಿಗೆ ಪರಸ್ಪರ ಎರಚಿ ಬಣ್ಣದಾಟದಲ್ಲಿ ತೊಡಗಿದ್ದರು. ಗ್ರಾಪಂ ಮಾಜಿ ಅಧ್ಯಕ್ಷ ಶಿವಪ್ಪ ಬಿರಾದಾರ, ರಮೇಶ ಕೋಳುರ, ಯಂಕಪ್ಪ
ರೊಡಲಬಂಡಾ, ಮಂಜು ಹಾದಿಮನಿ, ಚರಣ, ಮುತ್ತು ಶೃಂಗೇರಿ, ಪುಂಡಲಿಕ, ಯಂಕೂಬ, ಸದ್ದಾಂ, ವೀರೇಶ, ಜಗದೀಶ, ಗುರು ಸೇರಿದಂತೆ ಯುವಕರು ಇದ್ದರು. ಹೋಳಿ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳೀಯ ಪೊಲೀಸ್‌ ಠಾಣೆ ಪಿಎಸೈ ಮಾನಪ್ಪ ಯಕ್ಷಂತಿ, ಎಎಸೈ ಕೃಷ್ಣಮೂರ್ತಿ ನೇತೃತ್ವದ ಪೊಲೀಸ್‌ ಸಿಬ್ಬಂದಿ ಸೂಕ್ತ ಭದ್ರತೆ ಒದಗಿಸಿದ್ದರು

ಚಿಣ್ಣರ ತಂಡ ಸಂಭ್ರಮ
ಹುಣಸಗಿ: ವಜ್ಜಲ ಗ್ರಾಮದಲ್ಲಿ ಹೋಳಿ ಹಬ್ಬದ ಅಂಗವಾಗಿ ಸಾರ್ವಜನಿಕರು ಬಣ್ಣದ ಓಕುಳಿಯಾಡಿ ಸಂಭ್ರಮಿಸಿದರು. ಗ್ರಾಮದಲ್ಲಿ ಯುವಕರ ದಂಡು ಹಲಗೆ ಮೆರವಣೆಗೆಯೊಂದಿಗೆ ಮನೆ ಮನೆಗೆ ತೆರಳಿ ಬಣ್ಣದಾಟದಲ್ಲಿ ತೊಡಗಿರುವುದು ಕಂಡು ಬಂದಿತು. ಗ್ರಾಮದ ಪ್ರತಿ ಬಡಾವಣೆಯಲ್ಲಿ ಮಹಿಳೆಯರು, ಮಕ್ಕಳು, ಯುವಕರು ಸೇರಿ ವಿವಿಧ ವರ್ಣದ ಬಣ್ಣವನ್ನು ಮುಖಕ್ಕೆ ಸವರುತ್ತಾ ಮೈತುಂಬ ಬಣ್ಣ ಚಿಮ್ಮುತ್ತಾ ಸಂತಸಗೊಂಡರು. ಚಿಕ್ಕ ಮಕ್ಕಳು ಕೂಡ ಬಣ್ಣದಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡು ಹರ್ಷದಿಂದ ಕುಣಿದಾಡಿದರು.

ಸಡಗರದ ಹೋಳಿ ಆಚರಣೆ
ಸುರಪುರ: ಕೈಯಲ್ಲಿ ಬಣ್ಣದ ಬಾಟಲಿ, ಹೆಗಲಿಗೆ ಹಲಗೆ ಹಾಕಿ ಯುವಕರು ಹಾಡು ಹಾಡುವ ಮೂಲಕ ಹೋಳಿ ಹಬ್ಬ ಆಚರಣೆ ಮಾಡಿದ ಸಂಭ್ರಮದ ಕ್ಷಣ ನಗರದಲ್ಲಿ ಶುಕ್ರವಾರ ಕಂಡು ಬಂತು. ಹೌದು, ನಗರದಲ್ಲಿ ಹೋಳಿ ಹಬ್ಬ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಭಾತೃತ್ವ
ಸಾರುವ ಹೋಳಿ ಹಬ್ಬವನ್ನು ನಗರದ ಜನತೆ ಶುಕ್ರವಾರ ಸಂಭ್ರಮದಿಂದ ಆಚರಿಸಿದರು. ನಗರದ ಗಾಂಧಿ ವೃತ್ತ, ಪಟೇಲ ವೃತ್ತ, ವೇಣುಗೋಪಾಲಸ್ವಾಮಿ ದೇವವಸ್ಥಾನದ ಬಳಿ ಯುವಕರು ಹಲಗೆ ಬಾರಿಸುವ ಮೂಲಕ ಬಣ್ಣದ ಆಟದಲ್ಲಿ ತೊಡಗಿದ್ದರು.
ಕೆಲವರು ಮನೆ ಮನೆಗೆ ಹೋಗಿ ತಮ್ಮ ಗೆಳೆಯರನ್ನು ಹಿಡಿದು ಬಣ್ಣ ಎರಚಿ ಸಂಭ್ರಮಿಸಿದರು. ಕೆಲವರು ಅಣುಕು ಶವದ ಯಾತ್ರೆ ನಡೆಸಿ ಮೋಜು ಮಾಡಿದರು. ಮಹಿಳೆಯರು, ಯುವತಿಯರು, ಬಣ್ಣದ ಆಟದಲ್ಲಿ ತೊಡಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next