Advertisement

ಮಹಾನ್‌ ಪುರುಷರ ಆದರ್ಶ ಪಾಲಿಸಿ

01:51 PM Feb 02, 2020 | Naveen |

ಯಾದಗಿರಿ: 12ನೇ ಶತಮಾನದ ಸಾಮಾಜಿಕ ವ್ಯವಸ್ಥೆಯಲ್ಲಿ ಮೂಢನಂಬಿಕೆ, ತಾರತಮ್ಯ ಹಾಗೂ ಧಾರ್ಮಿಕ ಅಂಧ ಆಚರಣೆಗಳನ್ನು ಖಂಡಿಸಿ, ತಮ್ಮ ವಚನಗಳಲ್ಲಿ ಸಮಾಜವನ್ನು ತಿದ್ದುವ ಮೂಲಕ ಸನ್ಮಾರ್ಗ ತೋರಿದ ಶರಣರಲ್ಲಿ ಮಡಿವಾಳ ಮಾಚಿದೇವರು ಪ್ರಮುಖರಾಗಿದ್ದಾರೆ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.

Advertisement

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಶನಿವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಡಿವಾಳ ಮಾಚಿದೇವರು ಬಸವಣ್ಣನವರ ತತ್ವ-ಸಿದ್ಧಾಂತದಿಂದ ಪ್ರಭಾವಿತರಾಗಿ ಕಲ್ಯಾಣಕ್ಕೆ ಬಂದು ನೆಲೆಸಿದರು. ಎಲ್ಲಾ ಜಾತಿ, ಮತಗಳು ಒಂದೇ. ನಾವೆಲ್ಲರೂ ಒಂದಾಗಿರಬೇಕು ಎಂದು ಸಾರಿದರು. ಆದ್ದರಿಂದ ಮಡಿವಾಳ ಮಾಚಿದೇವರ ತತ್ವ, ಸಿದ್ಧಾಂತಗಳನ್ನು ಆಲಿಸಿದರೆ ಸಾಲದು, ಮೈಗೂಡಿಸಿಕೊಂಡು ಪಾಲಿಸಬೇಕು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ್‌ ಜಿ. ರಜಪೂತ ಮಾತನಾಡಿ, 12ನೇ ಶತಮಾನದಲ್ಲಿ ಶರಣರು ನಡೆಸಿದ ವಚನ ಚಳವಳಿ ಇಡೀ ದೇಶವೇ ಕರ್ನಾಟಕದತ್ತ ನೋಡುವಂತೆ ಮಾಡಿತು. ಮಡಿವಾಳ ಮಾಚಿದೇವರು ಶರಣರ ಬಟ್ಟೆಗಳನ್ನು ಮಡಿ ಮಾಡುವ ಕಾರ್ಯ ಬಹಳ ನಿಷ್ಠೆಯಿಂದ ಮಾಡುತ್ತಿದ್ದರು. ಕಾರ್ಯ ಯಾವುದಾದರೇನು ಮನಸ್ಸು ಶುದ್ಧವಾಗಿಟ್ಟುಕೊಂಡು ಎಲ್ಲರೂ ತಮ್ಮ ಕಾಯಕ ಮಾಡುತ್ತಿರಬೇಕು ಎಂದು ಹೇಳಿದ ಮಾಚಿದೇವರ ಕಾಯಕ ನಿಷ್ಠೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಅಂದಾಗ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ತಿಳಿಸಿದರು.

ಯಾಮರೆಡ್ಡಿ ಪದವಿ ಮಹಾವಿದ್ಯಾಲಯ ಪ್ರಾಂಶುಪಾಲ ಡಾ| ಭೀಮರಾಯ ಲಿಂಗೇರಿ ಉಪನ್ಯಾಸ ನೀಡಿ, ಮಡಿವಾಳ ಮಾಚಿದೇವರು ತುಳಿತಕ್ಕೆ ಒಳಗಾದ ಸಮಾಜವನ್ನು ತಮ್ಮ ವಚನಗಳ ಮೂಲಕ ತಿದ್ದಿದರು. 12ನೇ ಶತಮಾನದ ಕ್ರಾಂತಿಕಾರಿ ಶರಣರಾದ ಇವರು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ದೇವರಹಿಪ್ಪರಗಿಯ ಪರ್ವತಯ್ಯ ಮತ್ತು ಸುಜ್ಞಾನಮ್ಮ ದಂಪತಿಗೆ 1120-30ರ ಸುಮಾರಿನಲ್ಲಿ ಜನಿಸಿದರು ಎಂಬುದಾಗಿ ಇತಿಹಾಸದಿಂದ ತಿಳಿದು ಬರುತ್ತದೆ ಎಂದರು.

Advertisement

ವಚನಗಳ ರಕ್ಷಕ ಮಡಿವಾಳ ಮಾಚಿದೇವರು ಅನುಭವ ಮಂಟಪಕ್ಕೆ ಬರುವ ಶರಣರನ್ನು ಬರಮಾಡಿಕೊಳ್ಳುವ ಕಾಯಕವು ಇಂದಿನ ವಿದೇಶಾಂಗ, ರಕ್ಷಣಾ ಸಚಿವರ ಕಾಯಕದಂತೆ ಇತ್ತು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ತತ್ವವನ್ನು ವಚನ ಚಳವಳಿ ಮೂಲಕ ತಿಳಿಸಿದರು. ಅಂತಹ ಶರಣರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್‌, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಸರೆಡ್ಡಿಗೌಡ ಪಾಟೀಲ ಅನಪುರ, ಶ್ರೀ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಮಡಿವಾಳಪ್ಪ ಬಿಜಾಸ್ಪೂರ, ಮಹಾದೇವಪ್ಪ ಯಲಸತ್ತಿ, ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೇರಿ ಸೇರಿದಂತೆ ಸಮಾಜದ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಮತ್ತು ತಂಡದವರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಉಪನ್ಯಾಸಕ ಗುರುಪ್ರಸಾದ ವೈದ್ಯ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next