Advertisement

ಗುರುಮಠಕಲ್ ನಲ್ಲಿ ಸೋಲು-ಗೆಲುವಿನ ಲೆಕ್ಕಚಾರ

12:41 PM Apr 27, 2019 | Team Udayavani |

ಯಾದಗಿರಿ: ಜಿಲ್ಲೆಯ ಗುರುಮಠಕಲ್ ವಿಧಾನಸಭಾ ಕ್ಷೇತ್ರ ಕಲಬುರಗಿ ಲೋಕಸಭೆ ವ್ಯಾಪ್ತಿಗೆ ಒಳಪಟ್ಟಿದ್ದು, ಕಾಂಗ್ರೆಸ್‌ ಭದ್ರ ಕೋಟೆ ಎಂದೇ ಹೆಸರಾಗಿದ್ದ ಕ್ಷೇತ್ರದಲ್ಲೀಗ ಸೋಲು ಗೆಲುವಿನ ಲೆಕ್ಕಾಚಾರ ಚರ್ಚೆಗೆ ಆಹಾರವಾಗಿದೆ.

Advertisement

ಕಾಂಗ್ರೆಸ್‌ ಕೋಟೆಯನ್ನು ಭೇದಿಸಿ ಜೆಡಿಎಸ್‌ನ ನಾಗನಗೌಡ ಕಂದಕೂರ ಶಾಸಕರಾಗಿದ್ದಾರೆ. ರಾಜ್ಯದಲ್ಲಿ ಮೈತ್ರಿಯಾಗಿರುವುದರಿಂದ ಕಲಬುರಗಿ ಲೋಕಸಭೆ ಕ್ಷೇತ್ರದ ಗುರುಮಠಲ್ ವಿಧಾನ ಸಭೆಯಲ್ಲಿ ಮೈತ್ರಿ ವರ್ಕೌಟ್ ಆಗಬಹುದೇ ಎನ್ನುವ ಕುರಿತು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಮತದಾನ ಕೇವಲ ಒಂದು ದಿನ ಉಳಿದಿರುವಾಗ ಜೆಡಿಎಸ್‌ನವರು ಕಡಿಮೆ ಸಮಯದಲ್ಲಿ ಏನು ಪ್ರಭಾವ ಬೀರಲಾಗಿಲ್ಲ ಎನ್ನುವ ಜನರ ಗುಸು ಗುಸು ಮಾತು ಒಂದೆಡೆ ಕೇಳಿಬರುತ್ತಿದ್ದರೆ, ಇನ್ನೊಂದೆಡೆ ಕಲಬುರಗಿ ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಹಿಂದಿನಿಂದಲೂ ಗುರುಮಠಕಲ್ನಲ್ಲಿ ಹಿಡಿತ ಹೊಂದಿದ್ದು, ಅವರಿಗೆ ಲಾಭವಾಗಲಿದೆ ಎನ್ನಲಾಗುತ್ತಿದೆ. ಈ ಹಿಂದಿನ ಚುನಾವಣೆಗಳ ಟ್ರೆಂಡ್‌ ಬೇರೆನೇ ಇತ್ತು. ಈ ಚುನಾವಣೆ ದೇಶದ ಚುನಾವಣೆಯಾಗಿದೆ. ಗುರುಮಠಕಲ್ ನಗರದ ಹಿಂದಿನಿಂದಲೂ ಬಿಜೆಪಿಗೆ ಲೀಡ್‌ ನೀಡುತ್ತ ಬಂದಿದೆ. ಈ ಬಾರಿ ದೇಶದ ವಿಚಾರಗಳು ಮತದಾರರ ತಲೆಹೊಕ್ಕಿರುವುದು ಬಿಜೆಪಿಗೆ ಲಾಭವಾಗಲಿದೆ ಎನ್ನುವ ಮಾತು ಬಿಜೆಪಿಗರದ್ದು. ಪ್ರತಿ ಗ್ರಾಮದಲ್ಲಿಯೂ ದೇಶದ ವಿಚಾರ ಮತದಾರರು ಯೋಚಿಸುವ ಮಟ್ಟಕ್ಕೆ ಅರಿವು ಮೂಡಿರುವುದು ಕಮಲಕ್ಕೆ ಸ್ಫೂರ್ತಿಯಾಗಲಿದೆ ಎನ್ನುವ ಮಾತುಗಳು ಕೇಳಿಬಂದಿದೆ.

ಇದೆಲ್ಲಕ್ಕೂ ಮಿಗಿಲಾಗಿ 2014ರ ಚುನಾವಣೆಗಿಂತ 2019ರ ಚುನಾವಣೆಯಲ್ಲಿ ಗುರುಮಠಕಲ್ನಲ್ಲಿ ಶೇಕಡವಾರು ಮತದಾನ ಹೆಚ್ಚಾಗಿರುವುದು ಬಿಜೆಪಿಗೆ ಲಾಭವಾಗಬಹುದಾ ಎನ್ನುವ ಅಂಶವೂ ಪ್ರಮುಖವಾಗಿದೆ. 2014ರಲ್ಲಿ ಒಟ್ಟು 213293 ಮತದಾರರಲ್ಲಿ 61069 ಪುರುಷರು 61245 ಮಹಿಳೆಯರು ಮತ ಚಲಾಯಿಸಿದ್ದರಿಂದ ಶೇ.57.35 ಮತದಾನವಾಗಿದ್ದು, ಗುರುಮಠಕಲ್ನಲ್ಲಿ ಕಾಂಗ್ರೆಸ್‌ 2700ಕ್ಕೂ ಲೀಡ ಪಡೆದಿತ್ತು. 2019ರಲ್ಲಿ 245251 ಮತದಾರರಲ್ಲಿ 73714 ಪುರುಷ, 74,062 ಮಹಿಳೆಯರು ಮತ್ತು 2 ಇತರೆ ಹಕ್ಕು ಚಲಾಯಿಸಿದ್ದು ಶೇ. 60.31ಮತದಾನ ದಾಖಲಾಗಿದೆ.

ಈ ಹಿಂದಿನ ಚುನಾವಣೆಗಳೇ ಬೇರೆ. ಈ ಚುನಾವಣೆಯಲ್ಲಿ ಮತದಾರರು ಸಾಕಷ್ಟು ಅಂಶಗಳನ್ನು ಗಮನದಲ್ಲಿರಿಸಿಕೊಂಡು ಮತ ನೀಡಿದ್ದಾರೆ. ಅತ್ಯಂತ ಉಲ್ಲಾಸದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರಿಂದ ಶೇಕಡಾವಾರು ಮತದಾನವೂ ಹೆಚ್ಚಾಗಿದೆ. ಮೋದಿ ಅಲೆ ಪ್ರಭಾವ ಬೀರಿರುವುದು ಕಂಡು ಬಂದಿದೆ. ಹಾಗಾಗಿ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚಿನ ಲೀಡ್‌ ದೊರೆಯುವ ವಿಶ್ವಾಸವಿದೆ.
• ಚಂದುಲಾಲ್ ಚೌಧರಿ,
ಬಿಜೆಪಿ ನಗರ ಘಟಕ ಅಧ್ಯಕ್ಷ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದೆ. ಮಾತ್ರವಲ್ಲದೇ ಗುರುಮಠಕಲ್ನಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ಮೈತ್ರಿ ಅಭ್ಯರ್ಥಿಪರ ಉತ್ತಮ ವಾತಾವರಣ ಕಂಡು ಬಂದಿದೆ. ಹೆಚ್ಚಿನ ಮತಗಳು ಮೈತ್ರಿ ಅಭ್ಯರ್ಥಿಗೆ ದೊರೆಯುತ್ತವೆ. ಇದರಲ್ಲಿ ಯಾವುದೇ ಸಂಶಯವಿಲ್ಲ.
•ಶರಣು ಆವುಂಟಿ,
ಜೆಡಿಎಸ್‌ ಮತಕ್ಷೇತ್ರ ಅಧ್ಯಕ್ಷ.

Advertisement

ಮೈತ್ರಿ ಸರ್ಕಾರ ಇರುವುದರಿಂದ ಕೆಲವು ಕಡೆ ಸಹಾಯವಾಗುತ್ತದೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 2700ಕ್ಕೂ ಹೆಚ್ಚು ಲೀಡ್‌ ದೊರೆತಿತ್ತು. ಈ ಬಾರಿ ಗುರುಮಠಕಲ್ ನಗರದಲ್ಲಿ 1 ಸಾವಿರ ಲೀಡ್‌ ಮತ್ತು ಕ್ಷೇತ್ರದಲ್ಲಿ 15 ಸಾವಿರ ಲೀಡ್‌ ಪಡೆಯುವ ವಿಶ್ವಾಸವಿದೆ.
•ಮಹಿಪಾಲರೆಡ್ಡಿ ಹತ್ತಿಕುಣಿ,
ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ.

ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next