Advertisement

ನಿಷ್ಪಕ್ಷಪಾತ ಚುನಾವಣೆ ನಡೆಯಲು ಶ್ರಮಿಸಿ: ಶೈಲಾ

03:34 PM Apr 12, 2019 | Naveen |

ಯಾದಗಿರಿ: 2019ರ ಲೋಕಸಭೆ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ, ನಿಷ್ಪಕ್ಷಪಾತ, ಶಾಂತಿಯುತ ಹಾಗೂ ಸುವ್ಯವಸ್ಥಿತವಾಗಿ ನಡೆಯಲು ಚುನಾವಣಾ ಕಾರ್ಯಕ್ಕೆ ನಿಯೋಜಿತ ಪ್ರತಿಯೊಬ್ಬ ಅಧಿಕಾರಿಗಳು
ಶ್ರಮಿಸಬೇಕು ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕಿ ಶೈಲಾ ಎ. ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಲೋಕಸಭೆ ಸಾರ್ವತ್ರಿಕ ಚುನಾವಣೆ-2019ರ ಪ್ರಯುಕ್ತ ರಾಯಚೂರು ಹಾಗೂ ಕಲಬುರಗಿ ಲೋಕಸಭೆ ಕ್ಷೇತ್ರಗಳ ಚುನಾವಣೆ ಸಾಮಾನ್ಯ ಮತ್ತು ಲೆಕ್ಕ ವೀಕ್ಷಕರು, ಜಿಲ್ಲೆಯ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ವಿವಿಧ ನೋಡಲ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಅನುಮತಿ ಕಡ್ಡಾಯ: ಜಿಲ್ಲಾದ್ಯಂತ ಚುನಾವಣೆ ನೀತಿ ಸಂಹಿತೆ ಕಟ್ಟುನಿಟ್ಟಿನ ಜಾರಿಗಾಗಿ ನಿಯೋಜಿಸಿದ ವಿವಿಧ ತಂಡಗಳು ತಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು. ಸಂಚಾರಿ ದಳ, ಸ್ಥಾಯಿ ಕಣ್ಗಾವಲು ದಳ ತಂಡಗಳ ಪಾತ್ರ ಮುಖ್ಯವಾಗಿದೆ. ಅನುಮತಿ ಇಲ್ಲದೇ ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳು ಬಹಿರಂಗ ಸಭೆ-ಸಮಾರಂಭ, ಕಾರ್ಯಕ್ರಮ,
ಮೆರವಣಿಗೆ ಮುಂತಾದವುಗಳನ್ನು ಮಾಡುವಂತಿಲ್ಲ. ಅಭ್ಯರ್ಥಿಗಳು ಆಯಾ ವಿಧಾನಸಭೆ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಿಂದ ಕಡ್ಡಾಯವಾಗಿ
ಅನುಮತಿ ಪಡೆಯಬೇಕು. ಸಂಬಂಧಪಟ್ಟ ತಂಡಗಳು ಕಾರ್ಯಕ್ರಮ, ಮೆರವಣಿಗೆ ಬಗ್ಗೆ ವಿಡಿಯೋ ಚಿತ್ರೀಕರಿಸಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಸೂಚಿಸಿದರು.

ರಾಜ್ಯ ಮಟ್ಟದ, ಪ್ರಾದೇಶಿಕ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗುವ ಕಾಸಿಗಾಗಿ ಸುದ್ದಿ ಜತೆಗೆ ರಾಜ್ಯ ಮಟ್ಟದ ಹಾಗೂ ಸ್ಥಳೀಯ ಚಾನಲ್‌ಗ‌ಳಲ್ಲಿ
ಪ್ರಸಾರವಾಗುವ ಸುದ್ದಿಗಳ ಮೇಲೆ ನಿಗಾವಹಿಸಬೇಕು. ಕಾಸಿಗಾಗಿ ಸುದ್ದಿ ಪ್ರಕಟವಾಗಿರುವುದು ಕಂಡುಬಂದಲ್ಲಿ ವರದಿ ನೀಡಬೇಕು ಎಂದು ಎಂಸಿಎಂಸಿ ನೋಡಲ್‌ ಅಧಿಕಾರಿ ಪೂರ್ಣಿಮಾ ಚೂರಿ ಅವರಿಗೆ ಸೂಚಿಸಿದರು.

ಏಪ್ರಿಲ್‌ 23ರಂದು ಬೆಳಗ್ಗೆ 7:00ರಿಂದ ಸಂಜೆ 6:00ರ ವರೆಗೆ ಮತದಾನ ನಡೆಯಲಿದೆ. ಮತದಾನ ಮಾಡುವ ಸಮಯದಲ್ಲಿ ಚುನಾವಣಾ ಗುರುತಿನ ಚೀಟಿ ಇಲ್ಲದಿದ್ದರೆ 11 ದಾಖಲೆಗಳ ಪೈಕಿ ಒಂದನ್ನು ಹಾಜರುಪಡಿಸಿ ಮತ ಚಲಾಯಿಸಬಹುದು. ಸಂಜೆ 6:00ರೊಳಗೆ ಮತಗಟ್ಟೆಯಲ್ಲಿ ಹಾಜರಿದ್ದ ಮತದಾರರ ಸಾಲಿನ ಕೊನೆ ಮತದಾರನಿಂದ ಕ್ರಮ ಸಂಖ್ಯೆ ಚೀಟಿಗಳನ್ನು ನೀಡಿ
ಮತದಾನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

Advertisement

ಮೂಲ ಸೌಲಭ್ಯಕ್ಕೆ ಕ್ರಮ: ಕಲಬುರಗಿ ಲೋಕಸಭೆ ಕ್ಷೇತ್ರದ ಸಾಮಾನ್ಯ ವೀಕ್ಷಕ ಬ್ರಿಟೀಷಚಂದ್ರ ಬರ್ಮನ್‌ ಮಾತನಾಡಿ, ಮತಗಟ್ಟೆಗಳಲ್ಲಿ ಮತದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರ್‍ಯಾಂಪ್‌, ಕುಡಿಯುವ ನೀರು, ವಿದ್ಯುತ್‌, ಶೌಚಾಲಯದ ವ್ಯವಸ್ಥೆ ಮಾಡಬೇಕು. ಮುಖ್ಯವಾಗಿ ಬೇಸಿಗೆ ಬಿಸಿಲು ಹೆಚ್ಚು ಇರುವುದರಿಂದ ಮತಗಟ್ಟೆಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಮಾತನಾಡಿ, ಜಿಲ್ಲೆಯ ಸುರಪುರ ವಿಧಾನಸಭೆ ಕ್ಷೇತ್ರದಲ್ಲಿ 319, ಶಹಾಪುರ 265, ಯಾದಗಿರಿ 267, ಗುರುಮಠಕಲ್‌ 284 ಸೇರಿದಂತೆ ಒಟ್ಟು ನಾಲ್ಕು ವಿಧಾನಸಭೆ ಕ್ಷೇತ್ರದಲ್ಲಿ 1,135 ಮತದಾನ ಕೇಂದ್ರ ಸ್ಥಾಪಿಸಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ಮತದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರ್‍ಯಾಂಪ್‌, ಕುಡಿಯುವ
ನೀರು, ವಿದ್ಯುತ್‌, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಕ್ಷೇತ್ರವಾರು ಮತದಾರರು: ಜಿಲ್ಲಾದ್ಯಂತ ಕಳೆದ ಏಪ್ರಿಲ್‌ 4ರ ವರೆಗೆ ಮತದಾರರ ನೋಂದಣಿ ಕಾರ್ಯ ನಡೆಸಲಾಗಿದೆ. ಅದರಂತೆ ಸುರಪುರ ವಿಧಾನಸಭೆ ಕ್ಷೇತ್ರದಲ್ಲಿ 2,75,491 ಮತದಾರರಿದ್ದಾರೆ. ಶಹಾಪುರ ವಿಧಾನಸಭೆ ಕ್ಷೇತ್ರದಲ್ಲಿ 2,29,117, ಯಾದಗಿರಿ ವಿಧಾನಸಭೆ ಕ್ಷೇತ್ರದಲ್ಲಿ 2,38,533, ಗುರುಮಠಕಲ್‌ ವಿಧಾನಸಭೆ ಕ್ಷೇತ್ರದಲ್ಲಿ 2,45,251 ಮತದಾರರು ಸೇರಿದಂತೆ ಒಟ್ಟು 9,88,392 ಮತದಾರರಿದ್ದಾರೆ. ಇವರಲ್ಲಿ 19,601 ಯುವ ಮತದಾರರು ಹಾಗೂ 8,896 ಅಂಗವಿಕಲ ಮತದಾರರು ಇದ್ದಾರೆ. ಅಲ್ಲದೆ, 89 ಸೇವಾ ಮತದಾರರು ಇದ್ದಾರೆ ಎಂದು ಮಾಹಿತಿ ನೀಡಿದರು.

ಅಬಕಾರಿ ಉಪ ಆಯುಕ್ತ ಜಿ.ಪಿ. ನರೇಂದ್ರಕುಮಾರ ಮಾತನಾಡಿ, ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ 213 ಪ್ರಕರಣ
ದಾಖಲಿಸಲಾಗಿದೆ. 53.23 ಲಕ್ಷ ರೂ. ಮೌಲ್ಯದ 16,109 ಲೀಟರ್‌ ಮದ್ಯ, 165 ಲೀಟರ್‌ ಬೀಯರ್‌, 696 ಲೀ. ಸೇಂದಿ, 100 ಲೀ. ಕಳ್ಳಭಟ್ಟಿ ಸಾರಾಯಿ ವಶಪಡಿಸಿಕೊಳ್ಳಲಾಗಿದೆ. ಜತೆಗೆ 27 ಲಕ್ಷ ರೂ. ಮೌಲ್ಯದ 43 ವಾಹನ ಜಪ್ತಿ ಮಾಡಲಾಗಿದೆ ಎಂದು ಹೇಳಿದರು.

ರ್‍ಯಾಂಡ್‌ ಮೈಸೇಷನ್‌: ಜಿಲ್ಲೆಯ ವಿಧಾನಸಭೆ ಕ್ಷೇತ್ರವಾರು ಮತಗಟ್ಟೆ ಅಧಿಕಾರಿ (ಪಿಆರ್‌ಒ, ಎಪಿಆರ್‌ಒ ಮತ್ತು ಪಿಓ)ಗಳ ತಂಡಗಳನ್ನು ಚುನಾವಣೆ ವೀಕ್ಷಕರ ಸಮ್ಮುಖದಲ್ಲಿ ರ್‍ಯಾಂಡ್‌ ಮೈಸೇಷನ್‌ ಮಾಡುವ ಮೂಲಕ ರಚಿಸಲಾಯಿತು. ಪ್ರತಿ ತಂಡದಲ್ಲಿ ಇಬ್ಬರು ಮಹಿಳೆಯರು ಇರುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಒಬ್ಬರಾದರೂ ಮಹಿಳೆ ಇರಲೇಬೇಕು ಮತ್ತು ಅವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರದಲ್ಲಿ ನೇಮಿಸುವಂತೆ ಸಾಮಾನ್ಯ ವೀಕ್ಷಕಿ ಶೈಲಾ ಎ. ಸಲಹೆ ನೀಡಿದರು.

ಚುನಾವಣೆ ವೆಚ್ಚ ವೀಕ್ಷಕ ರೋಹಿತ್‌ ಆನಂದ್‌, ವಿ.ಕೆ. ಚಕ್ರವರ್ತಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ್‌ ಭಗವಾನ್‌ ಸೋನವಣೆ, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಸಹಾಯಕ ಚುನಾವಣಾಧಿಕಾರಿ ಡಾ| ವಿ. ಮುನಿರಾಜು, ಎಂ.ಎಸ್‌. ಅಲ್ಲಾಭಕ್ಷ, ಶಂಕರಗೌಡ ಎಸ್‌. ಸೋಮನಾಳ, ಸಂತೋಷ ಕಾಮೆಗೌಡ, ಎನ್‌ಐಸಿ ಅಧಿಕಾರಿ ಶ್ರೀನಿವಾಸರಾವ್‌, ಚುನಾವಣೆ ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರ ಸೇರಿದಂತೆ ವಿವಿಧ ತಂಡಗಳ ನೋಡಲ್‌ ಅಧಿಕಾರಿಗಳು, ತಹಶೀಲ್ದಾರರು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next