Advertisement

ಇನ್ನೂ ಈಡೇರಿಲ್ಲ ಜಿಲ್ಲಾ ಕೇಂದ್ರ ಬ್ಯಾಂಕ್‌ ಬೇಡಿಕೆ

01:25 PM Nov 15, 2019 | Naveen |

„ಅನೀಲ ಬಸೂದೆ
ಯಾದಗಿರಿ
: ಗಡಿ ಜಿಲ್ಲೆ ಯಾದಗಿರಿಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಇಲ್ಲದಿದ್ದರೂ ಅನಾನುಕೂಲಗಳ ಮಧ್ಯೆಯೇ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ ನಿಯಮಿತ ಶಾಖೆಗಳು, ಕೃಷಿ ಪತ್ತಿನ ಸಹಕಾರ ಸಂಘಗಳು ಗ್ರಾಮೀಣ ಭಾಗದ ರೈತರಿಗೆ ಜೀವಾಳವಾಗಿವೆ.

Advertisement

ಈ ಹಿಂದೆ ಕಲಬುರಗಿ ಅಖಂಡ ಜಿಲ್ಲೆಯಾಗಿದ್ದ ಸಂದರ್ಭದಿಂದಲೂ ಕಲಬುರಗಿ ಕೇಂದ್ರಲ್ಲಿಯೇ ಇರುವ ಡಿಸಿಸಿ ಬ್ಯಾಂಕ್‌ ಯಾದಗಿರಿ ಜಿಲ್ಲೆಯಾಗಿ 10 ವರ್ಷ ಕಳೆದರೂ ತನ್ನ ಕೇಂದ್ರ ಕಚೇರಿ ಆರಂಭಿಸಿಲ್ಲ. ಹಾಗಾಗಿ ವ್ಯವಹಾರದ ದೃಷ್ಟಿಯಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಜಿಲ್ಲಾ ಕೇಂದ್ರದಲ್ಲಿ ಡಿಸಿಸಿ ಬ್ಯಾಂಕ್‌ ತೆರೆಯುವ ಬೇಡಿಕೆ ಬಹುವರ್ಷಗಳಿಂದಲೂ ಇದೆ. ಸಹಕಾರಿ ಸಂಘಗಳ ಆರ್ಥಿಕ ಸ್ಥಿತಿಗತಿ ನೆಲಕಚ್ಚಿದ್ದು, ಜಿಲ್ಲೆಯಲ್ಲಿ ಯಾವುದೇ ಸಹಕಾರಿ ಕಾರ್ಖಾನೆಗಳಿಲ್ಲ. ಕೇವಲ ರೈತರಿಗೆ ಸಾಲ ಸೌಲಭ್ಯ, ಠೇವಣಿ ಸಂಗ್ರಹ, ಆಭರಣ ಸಾಲ, ವ್ಯಾಪಾರ ಅಭಿವೃದ್ಧಿಗೆ ಸಾಲ, ವಾಹನ ಸಾಲದಂತ ಸೌಕರ್ಯಗಳು ಜನರಿಗೆ ಸಿಗುತ್ತಿದೆ. ಕಳೆದೆರಡು ವರ್ಷಗಳಿಂದ ಸ್ತ್ರೀ ಸ್ವಸಹಾಯ ಗುಂಪುಗಳಿಗೆ ನೀಡುವ ಸಾಲ ಸೌಲಭ್ಯ ನೀಡುವುದನ್ನು ನಿಲ್ಲಿಸಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಕಲಬುರಗಿ ಡಿಸಿಸಿ ಬ್ಯಾಂಕ್‌ ಶಾಖೆಗಳು ಜಿಲ್ಲೆಯ ಮೂರು ಕಡೆ ಕಾರ್ಯನಿರ್ವಹಿಸುತ್ತಿವೆ. ಯಾದಗಿರಿ ತಾಲೂಕಿನ ಡಿಸಿಸಿ ಬ್ಯಾಂಕ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಸದಸ್ವತ್ವ ಪಡೆದಿದ್ದಾರೆ. ಇದರ ವ್ಯಾಪ್ತಿಯಲ್ಲಿ 30 ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ನಡೆಯುತ್ತಿವೆ. ವಾರ್ಷಿಕ ಅಂದಾಜು 20 ಕೋಟಿಯಷ್ಟು ರೂ. ವಹಿವಾಟು ಹೊಂದಿವೆ. ಶಹಾಪುರ ಶಾಖೆಯಲ್ಲಿ 35 ಸಾವಿರ ಜನ ಸದಸ್ವತ್ವ ಹೊಂದಿದ್ದು, ಒಟ್ಟು 80 ಕೋಟಿಯಷ್ಟು ವಾರ್ಷಿಕ ವಹಿವಾಟು ಇದೆ. ಇದರಡಿ 33 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸೇರಿದಂತೆ ಹಲವು ಸಹಕಾರಿಗಳು ಕಾರ್ಯನಿರ್ವಹಿಸುತ್ತಿವೆ. ಸುರಉಪುರ ಶಾಖೆಯಲ್ಲಿ 14 ಸಾವಿರ ಜನ ಸದಸ್ವತ್ವ ಪಡೆದಿದ್ದಾರೆ. ಇದರಡಿ 31 ಕೃಷಿ ಪತ್ತಿನ ಸಹಕಾರಗಳು, 40 ನೀರು ಬಳಕೆದಾರರ ಸಹಕಾರಿಗಳು, 2 ಸಹಕಾರಿ ಬ್ಯಾಂಕ್‌ಗಳು ಸೇರಿ ವಿವಿಧೋದ್ದೇಶ ಸಹಕಾರಗಳಿವೆ.

ಅಂದಾಜು 50 ಕೋಟಿಯಷ್ಟು ವಹಿವಾಟು ಹೊಂದಿದೆ. ಜಿಲ್ಲೆಯಲ್ಲಿ ಸಹಕಾರಿಗಳ ಜಾಗೃತಿ ಕೊರತೆಯಿಂದ ಸರ್ಕಾರದ ಸಮರ್ಪಕ ಲಾಭ ಪಡೆಯುವಲ್ಲಿ ಹಿಂದೆ ಬಿದ್ದಿವೆ. ಜಿಲ್ಲೆಯಲ್ಲಿ ಒಟ್ಟು 818 ಸಹಕಾರಿ ಸಂಘಗಳು ನೋಂದಣಿಯಾಗಿದ್ದು, ಇವುಗಳಲ್ಲಿ 543 ಸಂಘಗಳು ಚಟುವಟಿಕೆಗಳಲ್ಲಿ ತೊಡಗಿದ್ದರೆ, 216 ಸಂಘಗಳು ಸ್ಥಗಿತಗೊಂಡಿವೆ. 59 ಸಂಘಗಳು ಸಮಾಪಣೆಗೊಂಡಿವೆ.

ಜಿಲ್ಲೆಯ ಸಹಕಾರಿ ಸಂಘಗಳು ಆಧುನಿಕ ತಂತ್ರಜ್ಞಾ ಅಳವಡಿಕೊಳ್ಳುವ ಗೋಜಿಗೆ ಹೋಗಿಲ್ಲ. ಕೆಲವು ಸಂಘಗಳು ಇರುವ ಅವಕಾಶಗಳಲ್ಲಿಯೇ ಆರ್ಥಿಕವಾಗಿ ಚೇತರಿಸಿಕೊಂಡು ಮಾದರಿಯಾಗಿವೆ. ಇದರಲ್ಲಿ ಸುರಪುರದ ಬಸವೇಶ್ವರ ಪತ್ತಿನ ಸಹಕಾರಿ ಸಂಘ 24 ವರ್ಷ ಪೂರೈಸಿ 25ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಜನವರಿಯಲ್ಲಿ ಬೆಳ್ಳಿ ಹಬ್ಬ ಆಚರಿಸಿಕೊಳ್ಳಲಿದೆ.

Advertisement

ಯಾದಗಿರಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2018-19ನೇ ಸಾಲಿನಲ್ಲಿ 10 ಲಕ್ಷ ರೂ. ಲಾಭಗಳಿಸುವ ಮೂಲಕ ಗ್ರಾಮೀಣ ಸಹಕಾರಿಗಳಲ್ಲಿ ಮಾದರಿ ಎನಿಸಿದೆ. ಸಂಘದಿಂದ 494 ರೈತರಿಗೆ 1 ಕೋಟಿಗೂ ಅಧಿಕ ಬೆಳೆಸಾಲ ನೀಡಲಾಗಿತ್ತು. ಅದರಲ್ಲಿ ಹೊಸದಾಗಿ ಸಾಲ ಪಡೆದ ರೈತರ 15 ಲಕ್ಷ ರೂ. ಸಾಲ ಮನ್ನಾವಾಗಿದೆ. ವ್ಯಾಪಾರ ಅಭಿವೃದ್ಧಿ ಯೋಜನೆಯಲ್ಲಿ ಸಣ್ಣಪುಟ್ಟ ವ್ಯಾಪಾರಸ್ಥರಿಗೆ 1 ಕೋಟಿಗೂ ಅಧಿಕ ಸಾಲ ನೀಡಲಾಗಿದೆ. ಸಂಘದಲ್ಲಿ ರೈತರು 15 ಲಕ್ಷ ಮುದ್ದತ್‌ ಠೇವಣಿ ಹಣ ಇಟ್ಟಿದ್ದಾರೆ. ಜಿಲ್ಲೆಯಲ್ಲಿಯೇ ಉತ್ತಮ ಆರ್ಥಿಕ ಪ್ರಗತಿ ಕಾಣುವ ಸಂಘ ಎಂದು ಖ್ಯಾತಿಗಳಿಸಿದೆ. ಸಂಘದಲ್ಲಿ ಸ್ವಸಹಾಯ 108 ಸಂಘಗಳು ಆರ್ಥಿಕ ವ್ಯವಹಾರ ಮಾಡುತ್ತಿರುವುದರಿಂದ ಸಂಘದ ಪ್ರಗತಿಗೆ ಸಹಕಾರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next