Advertisement

ಕೃಷಿ ವಿಜ್ಞಾನಿಗಳಿಂದ ಭತ್ತ ಬೆಳೆ ಹಾನಿ ಸಮೀಕ್ಷೆ

04:23 PM Aug 25, 2019 | Team Udayavani |

ಯಾದಗಿರಿ: ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಲ್ಲಿ ಉಂಟಾಗಿರುವ ಭತ್ತ ಬೆಳೆ ಹಾನಿ ಹಾಗೂ ಅದರ ಪುನಶ್ಚೇತನ ಕುರಿತು ಅಧ್ಯಯನ ಕೈಗೊಳ್ಳುವ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ಈಚೆಗೆ ಸಮೀಕ್ಷೆ ನಡೆಸಿತು.

Advertisement

ತಂಡವು ಜಿಲ್ಲಾಧಿಕಾರಿ ಸಲಹೆ ಹಾಗೂ ಮಾರ್ಗದರ್ಶನದೊಂದಿಗೆ ಜಿಲ್ಲೆಯ ವಿವಿಧ ಭತ್ತದ ತಾಕುಗಳಿಗೆ ಭೇಟಿ ನೀಡಿ, ಮೂರು ತಾಲೂಕಿನ ವಿವಿಧ ಭತ್ತದ ಬೆಳೆಯ ತಾಕುಗಳನ್ನು ವೀಕ್ಷಿಸಲಾಯಿತು.

ಕೃಷ್ಣಾ ಮತ್ತು ಭೀಮಾ ನದಿ ಪ್ರವಾಹದ ನೀರಿನಲ್ಲಿ ಏಳು ದಿನಗಳ ಮೇಲ್ಪಟ್ಟು ನೀರಿನಲ್ಲಿ ಮುಳುಗಿದ ಭತ್ತದ ತಾಕುಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದನ್ನು ತಂಡ ಮನಗಂಡು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದೆ.

ಹೈದ್ರಾಬಾದ್‌ ಭಾರತೀಯ ಭತ್ತ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ| ಬ್ರಿಜೇಂದ್ರ, ಡಾ| ಶ್ರೀಧರ, ಡಾ| ಗಿರೀಶ, ಡಾ| ಅನಂತ, ಡಾ| ಬಸವರಾಜ ಅವರು ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಮಲ್ಲಿಕಾರ್ಜುನ ಕೆಂಗನಾಳ ಅವರ ನೇತೃತ್ವದಲ್ಲಿ ಯಾದಗಿರಿ, ಶಹಾಪುರ ಹಾಗೂ ಸುರಪುರ ತಾಲೂಕುಗಳಲ್ಲಿ ನೆರೆ ಪೀಡತ ಗ್ರಾಮಗಳ ಭತ್ತದ ತಾಕುಗಳಿಗೆ ಭೇಟಿ ನೀಡಿ ಹಾನಿ ಕುರಿತು ಪರಿಶೀಲಿಸಿದರು.

ಭತ್ತದ ಬೆಳೆ ಮೂರರಿಂದ ಐದು ದಿನಗಳವರೆಗೆ ಮುಳುಗಿದ ಪ್ರದೇಶಗಳಲ್ಲಿ ಸ್ವಲ್ಪ ಸಾರಜನಕ ಗೊಬ್ಬರಗಳನ್ನು ಹಾಕಿದ್ದಲ್ಲಿ ಮತ್ತೆ ಚೇತರಿಸಿಕೊಳ್ಳುವ ಸಾಧ್ಯತೆ ಇದೆಯಂದು ವಿಜ್ಞಾನಿಗಳು ರೈತರಿಗೆ ತಿಳಿಸಿದ್ದು, ಇನ್ನು ಪರ್ಯಾಯವಾಗಿ ಪ್ರಮುಖವಾಗಿ ಕಾಲುವೆ ನೀರಾವರಿ ಪ್ರದೇಶದ ರೈತರ ಹತ್ತಿರ ಭತ್ತದ ಸಸಿಗಳು ದೊರೆಯುವ ಸಾಧ್ಯತೆ ಇದ್ದರೆ, ಭತ್ತವನ್ನು ಪುನಃ ನಾಟಿ ಮಾಡಲು ಅವಕಾಶವಿದೆ ಎಂದು ಕ್ಷೇತ್ರ ಭೇಟಿ ಸಂದರ್ಭದಲ್ಲಿ ಸಂವಾದ ಕೈಗೊಂಡ ರೈತರಿಗೆ ವಿಜ್ಞಾನಿಗಳು ತಿಳುವಳಿಕೆ ನೀಡಿದರು.

Advertisement

ಇಲ್ಲವಾದಲ್ಲಿ ಮತ್ತೆ ಸಸಿಗಳನ್ನು ತಯಾರಿಸಿ ಭತ್ತದ ಬೆಳೆ ಬೆಳೆಯಬಹುದು. ಇದರಿಂದ ಹಂಗಾಮು ಒಂದು ತಿಂಗಳು ಮುಂದುವರೆದರೂ ಶೇ. 85ರಿಂದ 90ರಷ್ಟು ಇಳುವರಿ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.

ಮುಂದಿನ ಕೆಲ ದಿನಗಳಲ್ಲಿ ಕೃಷಿ ವಿಜ್ಞಾನ ಕೇಂದ್ರದಿಂದ ನೇರವಾಗಿ ಬಿತ್ತನೆ ಮಾಡಲು ಸಾಧ್ಯವಿರುವ ಡ್ರಮ್‌ ಸೀಡರ್‌ ಬಳಕೆ ಪ್ರಾತ್ಯಕ್ಷಿಕೆಗಳನ್ನು ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಕೈಗೊಳ್ಳಲು ಸಹ ತಂಡವು ಸಲಹೆ ನೀಡಿದೆ. ಒಟ್ಟಾರೆ ಭತ್ತ ಹಾನಿಯಾಗಿರುವ ಪ್ರದೇಶದಲ್ಲಿ ಭತ್ತವನ್ನೆ ಬೆಳೆಯಲು ಇಚ್ಚಿಸುವ ರೈತರಿಗೆ ಇನ್ನೂ ಕಾಲಾವಕಾಶವಿದ್ದು, ಸಸಿಗಳ ಅಥವಾ ಬೀಜದ ವ್ಯವಸ್ಥೆಯನ್ನು ಮಾಡಿಕೊಂಡು ಭತ್ತದ ಬೆಳೆಯನ್ನು ಪುನಃ ನಾಟಿ ಮಾಡಬಹುದೆಂದು ತಂಡವು ಸಲಹೆ ನೀಡಿದೆ.

ಒಟ್ಟು ಮೂರು ತಾಲ್ಲೂಕಿನಲ್ಲಿ 12 ಗ್ರಾಮಗಳಿಗೆ ತಂಡ ಭೇಟಿ ನೀಡಿ, ರೈತರೊಂದಿಗೂ ಚರ್ಚೆ ನಡೆಸಿತು. ಸಮೀಕ್ಷೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಡಾ| ಉಮೇಶ ಬಾರಿಕರ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಡಾ| ಹೊನ್ನಳ್ಳಿ, ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್‌, ಶಹಾಪುರ ಮತ್ತು ಸುರಪುರ, ವಡಗೇರಾ ಹಾಗೂ ಕಕ್ಕೇರಾ ಸಹಾಯಕ ಕೃಷಿ ನಿರ್ದೇಶಕರು ಕೃಷಿ ಅಧಿಕಾರಿಗಳು ಅಲ್ಲದೇ ಆತ್ಮ ಯೋಜನೆ ತಂತ್ರಜ್ಞಾನ ವ್ಯವಸ್ಥಾಪಕರು ಸಹ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next