Advertisement

ಗೂಡೂರು ಗ್ರಾಮಸ್ಥರಲ್ಲಿ ತೀವ್ರ ಆತಂಕ

11:29 AM May 10, 2019 | Team Udayavani |

ಯಾದಗಿರಿ: ರಾಜ್ಯಾದ್ಯಂತ ತೀವ್ರ ಬರ ಹಿನ್ನೆಲೆ ನದಿ, ನಾಲೆಗಳೆಲ್ಲ ಬತ್ತಿ ಹೋಗಿದ್ದು, ಅಲ್ಪಸ್ವಲ್ಪ ನೀರಿನಲ್ಲಿರುವ ಜಲಚರಗಳು ಬಿಸಿಲ ಝಳಕ್ಕೆ ತತ್ತರಿಸಿ ಹೋಗುತ್ತಿವೆ. ಈ ಮಧ್ಯೆ ನದಿಯಲ್ಲಿರುವ ಮೊಸಳೆಗಳು ಏ. 28ರಂದು ಅಮಾಯಕ ಕುರಿಗಾಹಿಯನ್ನು ಬಲಿಪಡೆದಿರುವುದು ಜಿಲ್ಲೆಯ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಗೂಡೂರು ಗ್ರಾಮಸ್ಥರಲ್ಲಿ ತೀವ್ರ ಆತಂಕ ಹುಟ್ಟಿಸಿದೆ.

Advertisement

ಗ್ರಾಮದ ಕುರಿ ಗಾಹಿ ಬಸವಲಿಂಗಪ್ಪ ಎಂಬುವವರು ತನ್ನ ಕುರಿಮರಿಗಳನ್ನು ಮೇಯಿಸಲು ಹೋಗಿದ್ದ ವೇಳೆ ನದಿ ದಡಕ್ಕೆ ಕುಳಿತು ಊಟ ಸೇವಿಸಿ ನೀರು ಕುಡಿಯಲು ನದಿಗೆ ಇಳಿದಿದ್ದ ಸಂದರ್ಭದಲ್ಲಿ 2 ಮೊಸಳೆಗಳು ದಾಳಿ ನಡೆಸಿ ಒಂದು ಕಾಲು ಮತ್ತು ಕೈ ತಿಂದಿದ್ದವು, ಘಟನೆಯಲ್ಲಿ ರಕ್ತ ಸ್ರಾವವಾಗಿದ್ದರಿಂದ ಕುರಿಗಾಹಿ ಮೃತಪಟ್ಟಿದ್ದ.

ನದಿ ಪಾತ್ರದ ಗ್ರಾಮಗಳ ಗ್ರಾಮಸ್ಥರಲ್ಲಿ ಸೂಕ್ತ ಎಚ್ಚರಿಕೆ ಮೂಡಿಸಬೇಕಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸದೇ ನಿರ್ಲಕ್ಷ್ಯ ವಹಿಸಿದ್ದು, ಇಂತಹ ಘಟನೆ ನಡೆಯಲು ಕಾರಣ ಎಂದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.

ಯಾದಗಿರಿಯಿಂದ ಗೂಡೂರು ಮಾರ್ಗವಾಗಿ ಸಂಗಮದ ಕೃಷ್ಣಾ ನದಿಗೆ ಈ ನೀರು ಸೇರುತ್ತದೆ. ಇಷ್ಟು ದಿನ ಅಲ್ಪ ಸ್ವಲ್ಪ ನೀರು ನಿಂತಿದ್ದ ತೆಗ್ಗುಗಳಲ್ಲಿ ಅಡಗಿದ್ದ ಮೊಸಳೆಗಳು ಈ ಭಾಗಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದೆ.

ಪ್ರಾಣ ಹೋರದೂ ಎಚ್ಚರಿಕೆ ಫಲಕ ಹಾಕದ ಅಧಿಕಾರಿಗಳು: ಅಮಾಯಕನ ಪ್ರಾಣ ಹೋಗುವ ಮೊದಲೇ ಅರಣ್ಯಾಧಿಕಾರಿಗಳು ಸೂಕ್ತ ಎಚ್ಚರಿಕೆ ಫಲಕಗಳನ್ನು ಅಳವಡಿಸಿದ್ದರೆ, ಪ್ರಾಣ ಉಳಿಸಬಹುದಿತ್ತೇನೊ. ಆದರೇ, ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್‌ ಅವರು ಇಲ್ಲಿ ಇಂತಹ ಘಟನೆ ಮೊದಲ ಬಾರಿಗೆ ನಡೆದಿದ್ದು, ಇನ್ನೂ ಒಂದೆರಡು ದಿನದಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸುತ್ತೇವೆ ಎಂದು ಹೇಳಿ ಒಂದು ವಾರ ಕಳೆದರೂ ಇನ್ನೂ ಫಲಕ ಅಳವಡಿಸಿಲ್ಲ.

Advertisement

ಪೊಲೀಸರು, ಆರ್‌ಎಫ್‌ಓ ವರದಿ ಪ್ರಕಾರ ನೀರು ಕುಡಿಸಲು ತೆರಳಿದಾಗ ಘಟನೆ ನಡೆದಿರುವುದು ಗೊತ್ತಾಗಿದೆ. ನೀರಿನ ಹತ್ತಿರ ಹೋದಾಗ ಮೊಸಳೆ ದಾಳಿಯಾಗಿದೆ. ನೀರಿನಿಂದ ಆಚೆ ಬಂದು ದಾಳಿ ಮಾಡಿಲ್ಲ. ಇದು ಆಕಸ್ಮಿಕ ಅಪಘಾತ. ಎಲ್ಲರೂ ನೀರಿರುವ ಕಡೆ ಎಚ್ಚರಿಕೆಯಿಂದ ಇರಬೇಕು. ಅಗತ್ಯ ಕ್ರಮ ವಹಿಸಲು ನಿರ್ದೇಶಿಸಲಾಗಿದೆ ಎಂದು ಹೇಳಿ ಜಾರಿಕೊಂಡು, ಜಾಗೃತಿ ಮೂಡಿಸುವುದು ನಮ್ಮ ಇಲಾಖೆ ಕರ್ತವ್ಯವಾಗಿದೆ ಎಂದಿದ್ದರು.

5ಕ್ಕೂ ಹೆಚ್ಚು ಮೊಸಳೆಗಳಿರುವ ಭೀತಿ: ಗೂಡುರು ನದಿದಡದಲ್ಲಿ ಸುಮಾರು 5ಕ್ಕೂ ಹೆಚ್ಚು ಮೊಸಳೆಗಳಿವೆ ಎನ್ನಲಾಗಿದ್ದು, ಸುತ್ತಲಿನ ಗ್ರಾಮಸ್ಥರಲ್ಲಿ ಭೀತಿ ಎದುರಾಗಿದೆ. ಗ್ರಾಮಸ್ಥರು ದನ-ಕರು, ಕುರಿಗಳಿಗೆ ನೀರು ಕುಡಿಸುವುದಕ್ಕೂ ಭಯದ ವಾತಾವರಣ ನಿರ್ಮಾಣವಾಗಿದೆ. ಮೊಸಳೆಗಳ ಆತಂಕದಿಂದ ಗ್ರಾಮಸ್ಥರು ತಮ್ಮ ಕುರಿಗಳನ್ನು ಮೇಯಿಸಿಲು ತೆರಳದೇ ಮನೆ ಮುಂದೆ ಮೇಯಿಸುತ್ತಿದ್ದಾರೆ.

ಮೊಸಳೆ ಸೆರೆ ಹಿಡಿಯಲು ಆಗ್ರಹ: ನದಿ ದಡದಲ್ಲಿ ಮೊಸಳೆಗಳಿರುವುದು ನಿತ್ಯ ಕಣ್ಣಾರೆ ನೋಡುತ್ತಿದ್ದು, ಆತಂಕ ಸೃಷ್ಟಿಸಿದೆ. ಅನಾಹುತದಿಂದ ಈಗಾಗಲೇ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಇನ್ನು ಅಧಿಕಾರಿಗಳು ಹೆಚ್ಚಿನ ಅನಾಹುತಗಳಿಗೆ ಎಡೆ ಮಾಡದೇ ಮೊಸಳೆಗಳನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮೊಸಳೆ ದಾಳಿಗೆ ಬಲಿಯಾದ ಕುರಿಗಾಯಿ ಬಸಲಿಂಗಪ್ಪ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಮೃತ ಬಸಲಿಂಗಪ್ಪನ ಕುರಿಗಳೊಂದಿಗೆ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಹೋರಾಟ ನಡೆಸಲಾಗುವುದು.
•ಉಮೇಶ ಮುದ್ನಾಳ,
ಟೋಕ್ರೆ ಕೋಲಿ ಸಮಾಜದ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next