Advertisement

ಜ. 17ರಿಂದ ಮಕ್ಕಳ ಚಲನಚಿತ್ರೋತ್ಸವ

07:40 PM Dec 28, 2019 | |

ಯಾದಗಿರಿ: ಜಿಲ್ಲೆಯ ನಾಲ್ಕು ಚಿತ್ರಮಂದಿರಗಳಲ್ಲಿ ಜನವರಿ 17ರಿಂದ 30ರ ವರೆಗೆ ರವಿವಾರ ಹೊರತುಪಡಿಸಿ ಬೆಳಗ್ಗೆ 8ರಿಂದ 10 ಗಂಟೆ ವರೆಗೆ ಎರಡು ವಾರಗಳ ಕಾಲ ಮಕ್ಕಳ ಚಲನಚಿತ್ರೋತ್ಸವ ಹಮ್ಮಿಕೊಳ್ಳಲಾಗಿದೆ.

Advertisement

ಈ ಚಲನಚಿತ್ರೋತ್ಸವದಲ್ಲಿ 1ರಿಂದ 9ನೇ ತರಗತಿ ಮಕ್ಕಳು ಭಾಗವಹಿಸಲು ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಪ್ರಕಾಶ್‌ ಜಿ. ರಜಪೂತ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಶಾಲಾ ಮಕ್ಕಳಿಗೆ 2019-20ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯಾದ್ಯಂತ ಚಿತ್ರಮಂದಿರಗಳಲ್ಲಿ ಮಕ್ಕಳ ಚಲನಚಿತ್ರೋತ್ಸವ ಆಯೋಜನೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಾದಗಿರಿ ನಗರದ ಭಾಗ್ಯಲಕ್ಷ್ಮೀ, ಶಹಾಪುರ ತಾಲೂಕಿನ ಜಯಶ್ರೀ, ಭವಾನಿ ಚಿತ್ರಮಂದಿರಗಳಲ್ಲಿ ಪುಟಾಣಿ ಸಫಾರಿ ಕನ್ನಡ ಚಲನಚಿತ್ರ ಹಾಗೂ ಸುರಪುರ ತಾಲೂಕಿನ ಹುಣಸಗಿಯ ತ್ರೀಶೂಲ ಚಿತ್ರಮಂದಿರದಲ್ಲಿ ನಾವು ಗೆಳೆಯರು ಕನ್ನಡ ಚಲನಚಿತ್ರ ಪ್ರದರ್ಶಿಸಲಾಗುವುದು. ಚಿತ್ರ ಪ್ರದರ್ಶನ ಮಾಡಲು ಆಯ್ಕೆಯಾಗಿರುವ ಆಯಾ ತಾಲೂಕಿನ ಚಿತ್ರಮಂದಿರಗಳಲ್ಲಿ
ಹಾಗೂ ಯಾದಗಿರಿ ನಗರದ ಭಾಗ್ಯಲಕ್ಷ್ಮೀ ಚಿತ್ರಮಂದಿರದಲ್ಲಿ ಜನವರಿ 17ರಂದು ಅಥಿತಿಗಳಿಂದ ಉದ್ಘಾಟನಾ ಕಾರ್ಯಕ್ರಮ
ನೆರವೇರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾ ಧಿಕಾರಿಗಳಿಗೆ ನಿರ್ದೇಶಿಸಿದರು.

ಚಿಕ್ಕಬಳ್ಳಾಪುರದ ಕರ್ನಾಟಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮಕ್ಕಳ ಚಿತ್ರ ಸಂಸ್ಥೆಯ ವ್ಯವಸ್ಥಾಪಕರಾದ ಎಸ್‌. ರಮೇಶ ಮಾತನಾಡಿ, ಸರಕಾರದ ನಿರ್ದೇಶನದಂತೆ ಪ್ರತಿ ವಿದ್ಯಾರ್ಥಿಯಿಂದ ಚಲನಚಿತ್ರ ಪ್ರದರ್ಶನ ಟಿಕೆಟ್‌ ದರ 15 ರೂ. ಇದ್ದು, ಸಂಗ್ರಹವಾಗುವ ಒಟ್ಟು ಹಣದಲ್ಲಿ ಮಕ್ಕಳ ಚಿತ್ರ ಸಂಸ್ಥೆಗೆ ಶೇ. 45ರಷ್ಟು, ಚಿತ್ರಮಂದಿರದ ಬಾಡಿಗೆಗೆ ಶೇ. 25ರಷ್ಟು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಶೇ. 10ರಷ್ಟು, ಕ್ಷೇತ್ರ ಶಿಕ್ಷಣಾ ಧಿಕಾರಿಗಳಿಗೆ
ಶೇ. 10 ಹಾಗೂ ಯುಎಫ್‌ಓ ಮತ್ತು ಕ್ಯೂಬ್‌ ಸ್ಯಾಟ್‌ಲೆçಟ್‌ ಶುಲ್ಕ ಭರಿಸಲು ಶೇ. 10ರಷ್ಟು ಖರ್ಚು ಮಾಡಬಹುದು ಎಂದು ತಿಳಿಸಿದರು.

ಅಪರ ಜಿಲ್ಲಾ ಧಿಕಾರಿ ಮಾತನಾಡಿ, ಮಕ್ಕಳ ಪಾಲಕರಿಗೆ ಚಿತ್ರಮಂದಿರದ ಒಳಗಡೆ ಪ್ರವೇಶವಿಲ್ಲ. ಎಲ್ಲಾ ಚಿತ್ರಮಂದಿರಗಳಲ್ಲಿ ಆಸನಗಳ ಸಂಖ್ಯೆಗೆ ಅನುಗುಣವಾಗಿ
ಶಾಲೆಯ ಮಕ್ಕಳು ಚಿತ್ರವೀಕ್ಷಣೆಗೆ ಬರಲು ವಾಹನದ ವ್ಯವಸ್ಥೆ ಮಾಡಿಕೊಳ್ಳಬೇಕು.

Advertisement

ಜೊತೆಗೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸೂಕ್ತ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಚಿತ್ರಮಂದಿರಗಳಲ್ಲಿ ಬೆಳಕಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ ಹಾಗೂ ಬೆಂಕಿ ಅನಾಹುತ ಮುಂಜಾಗ್ರತಾ ಕ್ರಮವಾಗಿ ಅಗ್ನಿನಂದಕಗಳನ್ನು
ಅಳವಡಿಸಿಕೊಂಡಿರಬೇಕು. ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕವಾಗಿ ಆಸನಗಳಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡುಬೇಕು ಎಂದು ಚಿತ್ರಮಂದಿರಗಳ ವ್ಯವಸ್ಥಾಪಕರಿಗೆ ಸೂಚಿಸಿದ ಅವರು, ಚಿತ್ರಮಂದಿರಗಳಲ್ಲಿ ಹೆಣ್ಣುಮಕ್ಕಳ ಮೇಲ್ವಿಚಾರಣೆಗೆ ಪ್ರತ್ಯೇಕವಾಗಿ ಶಿಕ್ಷಕಿಯರನ್ನು ನೇಮಿಸಬೇಕು.

ಅಂದು ಬೆಳಗ್ಗೆ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಕೆ. ವಿಶ್ವನಾಥ, ಯಾದಗಿರಿ ತಾಲೂಕು ದೈಹಿಕ
ಶಿಕ್ಷಣಾ ಧಿಕಾರಿ ಮನೋಹರ ವಡಿಗೇರಿ, ಶಹಾಪುರ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ ವೈದ್ಯ, ಸುರಪುರ ಶಿಕ್ಷಣ ಸಂಯೋಜಕರಾದ ಸುಭಾಷ ಕೊಂಡಗೂಳ, ಕರ್ನಾಟಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮಕ್ಕಳ ಚಿತ್ರ ಸಂಸ್ಥೆಯ ಮ್ಯಾನೇಜರ್‌ ಅವಿನಾಶ್‌, ಯಾದಗಿರಿ ಭಾಗ್ಯಲಕ್ಷ್ಮೀ ಚಿತ್ರಮಂದಿರದ ಗೋಪಾಲ್‌, ಶಹಾಪುರ ಭವಾನಿ ಚಿತ್ರಮಂದಿರದ ಮ್ಯಾನೇಜರ್‌ ಮಲ್ಲಿಕಾರ್ಜುನ ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next