Advertisement

ಸಿಎಂ ಗ್ರಾಮ ವಾಸ್ತವ್ಯ ಮಾದರಿಯಾಗಲಿ

11:12 AM Jun 16, 2019 | Naveen |

ಯಾದಗಿರಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜಿಲ್ಲೆಯ ಗುರುಮಠಕಲ್ ತಾಲೂಕು ಚಂಡರಕಿಯಲ್ಲಿ ಜೂನ್‌ 21ರಂದು ಹಮ್ಮಿಕೊಂಡಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಾದರಿಯಾಗುವಂತೆ ಶ್ರಮಿಸಬೇಕು. ಎಲ್ಲ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಯಶಸ್ವಿಗೊಳಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ರಾಜಶೇಖರ ಬಿ. ಪಾಟೀಲ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯದ ಕುರಿತು ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 10:00ರಿಂದ ಸಂಜೆ 6:00ರ ವರೆಗೆ ಮುಖ್ಯಮಂತ್ರಿಗಳ ಜನತಾ ದರ್ಶನ ಕಾರ್ಯಕ್ರಮ ಇರುತ್ತದೆ. ಜಿಲ್ಲೆಯ ರೈತರು, ಸಾರ್ವಜನಿಕರು ತಮ್ಮ ಕುಂದು-ಕೊರತೆಗಳೊಂದಿಗೆ ಬರುತ್ತಾರೆ. ಆದ್ದರಿಂದ ಜಿಲ್ಲೆಯ ಪ್ರತಿ ಇಲಾಖಾವಾರು ಪ್ರಗತಿ ವರದಿ ಸಿದ್ಧಪಡಿಸಿಕೊಂಡಿರಬೇಕು ಎಂದು ಹೇಳಿದರು.

ಮುಖ್ಯವಾಗಿ ಕಂದಾಯ, ಕೃಷಿ, ಸಮಾಜ ಕಲ್ಯಾಣ ಇಲಾಖೆ ಯೋಜನೆಗಳು ಹಾಗೂ ಪ್ರಗತಿ ಬಗ್ಗೆ ಗಮನಹರಿಸಬೇಕು. ಇನ್ನು ಕಾರ್ಯಕ್ರಮದ ವೇದಿಕೆ, ಕುಡಿ ಯುವ ನೀರು, ಊಟ, ವಿದ್ಯುತ್‌ ಸೇರಿದಂತೆ ಯಾವುದೇ ರೀತಿಯ ಅನಾಕೂಲವಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅವರು ನಿರ್ದೇಶನ ನೀಡಿದರು.

ಮುಖ್ಯಮಂತ್ರಿಗಳ ಪ್ರವಾಸದ ಹಿನ್ನೆಲೆಯಲ್ಲಿ ಯಾವುದೇ ಅಧಿಕಾರಿ-ಸಿಬ್ಬಂದಿ ರಜೆ ಮೇಲೆ ತೆರಳುವಂತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಿಂದ ಆದೇಶ ಹೊರಡಿಸುವಂತೆ ಸೂಚಿಸಿದರು.

ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಶಾಸಕ ನಾಗನಗೌಡ ಕಂದಕೂರ ಮಾತನಾಡಿ, ಜನತಾದರ್ಶನ ಪೂರ್ವದಲ್ಲಿ ಮುಖ್ಯಮಂತ್ರಿಗಳಿಂದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಾಗುವುದು. ಗುರುಮಠಕಲ್-ಚಂಡ್ರಕಿಗೆ ಸಾರ್ವಜನಿಕರು ಉಚಿತವಾಗಿ ಪ್ರಯಾಣಿಸಲು ಬಸ್‌ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು. ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಹಾಗೂ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ಜನತಾದರ್ಶನದಲ್ಲಿ ರೈತರ ಬೆಳೆ ಸಾಲಮನ್ನಾ ಕುರಿತಂತೆ ಅಹವಾಲು ಹಾಗೂ ದೂರುಗಳು ಬರಬಹುದು. ಹಾಗಾಗಿ, ಸಂಬಂಧಪಟ್ಟ ಅಧಿಕಾ ರಿಗಳು ಸಮಗ್ರ ವರದಿಯೊಂದಿಗೆ ಹಾಜರಿರುವಂತೆ ಸಲಹೆ ನೀಡಿದರು.

Advertisement

ಕಲಬುರಗಿ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ಮಾತನಾಡಿ, ಜನತಾದರ್ಶನಕ್ಕೆ ಆಗಮಿಸುವ ಜನರಿಗೆ ಮುಖ್ಯವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಪ್ರತಿಯೊಂದು ಬ್ಲಾಕ್‌ಗಳಲ್ಲಿ ನೀರಿನ ಕ್ಯಾನ್‌ ಇಟ್ಟಿರಬೇಕು. ಜನರೇಟರ್‌ ವ್ಯವಸ್ಥೆ ಹಾಗೂ ಅಂದು ಮಳೆ ಬಂದರೆ ಕಾರ್ಯಕ್ರಮಕ್ಕೆ ತೊಂದರೆಯಾಗದ ರೀತಿಯಲ್ಲಿ ಕ್ರಮ ವಹಿಸುವಂತೆ ಸೂಚಿಸಿದರು. ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಅಪರ ಕಾರ್ಯದರ್ಶಿ ಬಿ.ಎನ್‌.ಕೃಷ್ಣಯ್ಯ ಮಾತನಾಡಿ, ಸಿಎಂ ಗ್ರಾಮೀಣ ಮಟ್ಟ ದಲ್ಲಿನ ಸಮಸ್ಯೆಗಳನ್ನು ಜನರಿಂದಲೇ ನೇರವಾಗಿ ಪಡೆದು ಅವುಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ 2006ರಲ್ಲಿ ಜಿಲ್ಲೆಯ ಕನ್ನೆಳ್ಳಿ ಸೇರಿದಂತೆ 38 ಊರು ಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಈ ಗ್ರಾಮ ವಾಸ್ತವ್ಯಗಳು ರಾಜ್ಯಮಟ್ಟದಲ್ಲಿ ವಿಶೇಷ ಕ್ರಮ ತೆಗೆದುಕೊಳ್ಳಲು-ಯೋಜನೆ ಜಾರಿಗೆ ಪ್ರೇರಣೆ ನೀಡಿವೆ. ಹಾಗಾಗಿ, ಮುಖ್ಯಮಂತ್ರಿಗಳು ಯಾದಗಿರಿ ಜಿಲ್ಲೆಯಿ ಂದ ಮತ್ತೆ ಗ್ರಾಮ ವಾಸ್ತವ್ಯ ಆರಂಭಿಸುತ್ತಿದ್ದು, ಈ ಬಾರಿಯ ಮೊದಲ ಗ್ರಾಮ ವಾಸ್ತವ್ಯ ಮುಂದಿನ ಜಿಲ್ಲೆಗಳಿಗೆ ಮಾದರಿಯಾಗಲು ಪರಸ್ಪರ ಸಹಕಾರ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಅರ್ಜಿ ಜೊತೆಗೆ ಆಧಾರ್‌ ನೀಡಿ: ಸಾರ್ವಜನಿಕರು, ಸಂಘ-ಸಂಸ್ಥೆಗಳ ಸದಸ್ಯರು, ಅಂಗವಿಕಲರು ಸಿಎಂ ಭೇಟಿಯಾಗಲು ಬರುತ್ತಾರೆ. ಈ ಹಿನ್ನೆಲೆಯಲ್ಲಿ ಅಹವಾಲು ಸಲ್ಲಿಕೆ ವ್ಯವಸ್ಥೆ, ಸಾರ್ವಜನಿಕರಿಗೆ ಆಸನಗಳ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಬೇಕು. ಅಹವಾಲುಗಳಿಗೆ ಸ್ವೀಕೃತಿ ನೀಡಬೇಕು. ಅರ್ಜಿಗಳಿಗೆ ಪರಿಹಾರ ಕಲ್ಪಿಸಲು ಮತ್ತು ಫಾಲೊಅಪ್‌ ಮಾಡಲು ಬಿಪಿಎಲ್ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ನೆರವಾಗುವುದರಿಂದ ಅರ್ಜಿ ಜತೆಗೆ ಈ ದಾಖಲೆಗಳನ್ನು ಲಗತ್ತಿಸಲು ಮತ್ತು ಮೊಬೈಲ್ ಸಂಖ್ಯೆ ನೀಡಲು ತಿಳಿಸಬೇಕು ಎಂದು ಸಲಹೆ ನೀಡಿದರು.

ಜನತಾದರ್ಶನ ಸಂದರ್ಭದಲ್ಲಿ ಸಾಮಾನ್ಯವಾಗಿ ಸಾರ್ವಜನಿಕರಿಂದ ಅಹವಾಲು-ದೂರು ಸಲ್ಲಿಕೆಯ ಮಹಾಪೂರವೇ ಇರುತ್ತದೆ. ಹಾಗಾಗಿ, ಜಿಲ್ಲೆಗೆ ಸಂಬಂಧಿಸಿದಂತೆ ಇಲಾಖಾವಾರು ಪ್ರಮುಖ ಯೋಜನೆಗಳಡಿ ಸಲ್ಲಿಕೆಯಾದ ಅರ್ಜಿಗಳು, ವಿಲೇವಾರಿ ಬಗ್ಗೆ ಮಾಹಿತಿ ಹೊಂದಿರಬೇಕು. ಪ್ರಮುಖವಾಗಿ ಪಿಂಚಣಿ, ನಿಗಮಗಳ ಯೋಜನೆಗಳು, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರು ಅರ್ಜಿ ಸಲ್ಲಿಸಿದರೆ ಶೀಘ್ರ ವಿಲೇವಾರಿ ಮಾಡಬೇಕು. ಅರ್ಜಿಗೆ ಪರಿಹಾರ ಇಲ್ಲವಾದಲ್ಲಿ ಸೂಕ್ತ ಕಾರಣ ನೀಡಬೇಕು. ಇದರ ಜತೆಗೆ ಸಾಲಮನ್ನಾ, ವಿದ್ಯಾರ್ಥಿ ವೇತನ, ಶೈಕ್ಷಣಿಕ ಸಾಲ ಕುರಿತಂತೆ ಮಾಹಿತಿ ಸಿದ್ಧಪಡಿಸಿಕೊಂಡಿರತಕ್ಕದ್ದು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಮಾತನಾಡಿ, ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಮಾಡಲಿರುವ ಚಂಡ್ರಕಿ ಗ್ರಾಮ ರಾಜ್ಯ ಗಡಿ ಭಾಗಕ್ಕೆ ಹೊಂದಿಕೊಂಡಿದೆ. ಜಿಲ್ಲಾ ಕೇಂದ್ರದಿಂದ 46 ಕಿಮೀ ದೂರದಲ್ಲಿದೆ. ಗುರುಮಠಕಲ್ನಿಂದ 6 ಕಿಮೀ ಅಂತರವಿದೆ. ಸಚಿವರು ಹಾಗೂ ಸ್ಥಳೀಯ ಶಾಸಕರ ಅಭಿಪ್ರಾಯ ಪಡೆದು ಗ್ರಾಮ ವಾಸ್ತವ್ಯದ ಶಾಲೆ ಗುರುತಿಸಲಾಗಿದೆ. ಒಂದೇ ಆವರಣದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ, ಉರ್ದು ಶಾಲೆ, ವಸತಿ ನಿಲಯ, ಅಂಗನವಾಡಿ, ಪಶು ಆಸ್ಪತ್ರೆ ಕಟ್ಟಡಗಳಿವೆ. ಇವುಗಳ ಮಧ್ಯದಲ್ಲಿರುವ ವಿಶಾಲ ಮೈದಾನವನ್ನು ಜನತಾದರ್ಶನಕ್ಕೆ ಸೂಕ್ತವಾಗಿದೆ ಎಂದು ಹೇಳಿದರು. ಜನತಾದರ್ಶನದಲ್ಲಿ ಅರ್ಜಿ ಸಲ್ಲಿಕೆಗೆ ಟೋಕನ್‌ ನೀಡಿ, ಸರತಿಸಾಲಿನಲ್ಲಿ ನಿಂತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲಾಗುವುದು. ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ನಮೂದಿಸಿ, ಸ್ವೀಕೃತಿ ನೀಡಲಾಗುತ್ತದೆ. ಆನ್‌ಲೈನ್‌ ಸಮಸ್ಯೆಯಾದಲ್ಲಿ ಪರ್ಯಾಯವಾಗಿ ಆಫ್‌ಲೈನ್‌ ವ್ಯವಸ್ಥೆ ಇರುತ್ತದೆ. ಸರ್ಕಾರದ ಯೋಜನೆಗಳ ಮಾಹಿತಿ ನೀಡಲು ಸ್ಟಾಲ್ಗಳನ್ನು ತೆರೆಯಲಾಗುವುದು. ವೃದ್ಧರಿಗೆ ನೆರವಾಗಲು ಸ್ವಯಂಸೇವಕರನ್ನು ನೇಮಿಸಿ ಕೊಳ್ಳಲಾಗುತ್ತಿದೆ. ಇವರಿಗೆ ಗುರುತಿನ ಚೀಟಿ ಮತ್ತು ಟಿ-ಶರ್ಟ್‌ ವಿತರಿಸಲಾಗುವುದು ಎಂದು ವಿವರಿಸಿದರು.

ಸಂಜೆ 6:00ರ ನಂತರ ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನದ ಮಾಹಿತಿ ನೀಡುವಂತಹ ನುರಿತ ತಂತ್ರಜ್ಞರನ್ನು ಆಹ್ವಾನ ಹಾಗೂ ಸ್ಥಳೀಯ ವಿದ್ಯಾರ್ಥಿಗಳು- ಕಲಾವಿದರ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಜಿಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ, ಜಿಪಂ ಉಪಾಧ್ಯಕ್ಷೆ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ ಸೋನವಣೆ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್‌.ಮನ್ನಿಕೇರಿ, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಕಂಬಿ, ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ಅಶ್ವಿ‌ನ ಜಿ.ಗೌಡ, ಮುಖ್ಯಮಂತ್ರಿಯವರ ವಿಶೇಷ ಅಧಿಕಾರಿ (ಜನತಾ ದರ್ಶನ) ಶ್ರೀನಿವಾಸ ಎಂ., ಜಿಪಂ ಉಪ ಕಾರ್ಯದರ್ಶಿ ಡಾ| ವಿ. ಮುನಿರಾಜು, ಎಸಿ ಶಂಕರಗೌಡ ಸೋಮನಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next